Please enable javascript.ಯುದ್ಧ ಸೃಷ್ಟಿಸುವ ತಳಮಳಗಳ ಕುರಿತು... - ಯುದ್ಧ ಸೃಷ್ಟಿಸುವ ತಳಮಳಗಳ ಕುರಿತು... - Vijay Karnataka

ಯುದ್ಧ ಸೃಷ್ಟಿಸುವ ತಳಮಳಗಳ ಕುರಿತು...

Vijaya Karnataka Web 2 Feb 2013, 3:47 am
Subscribe

ಯುದ್ಧದ ಪರಿಣಾಮಗಳು ಯಾವಾಗಲೂ ಕಲ್ಪನಾತೀತ. ಆದ್ದರಿಂದಲೇ ಅದರ ಅರಿವಿಲ್ಲದೇ ಮಾತನಾಡುವುದು ಸುಲಭ

ಯುದ್ಧ ಸೃಷ್ಟಿಸುವ ತಳಮಳಗಳ ಕುರಿತು...
ಭಾರತ-ಪಾಕಿಸ್ತಾನ ಮುಖಾಮುಖಿಯನ್ನು ಕುರಿತು ಸಮಾಚಾರ ಪತ್ರಿಕೆಗಳಲ್ಲಿ ಬರುವ ಓದುಗರ ಪತ್ರಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಇದರ ಬಗ್ಗೆ ವ್ಯಕ್ತವಾಗುವ ಅಭಿಪ್ರಾಯಗಳು ಮತ್ತು ಬ್ಲಾಗ್ ಬರವಣಿಗೆಗಳನ್ನು ನೋಡಿದರೆ ನನಗೆ ನಗು ಬರುತ್ತದೆ. ಹೆಚ್ಚು ಮಂದಿ ದಕ್ಷಿಣ ಭಾರತೀಯರು ಪಾಕಿಸ್ತಾನದ ಬಗ್ಗೆ, ಯುದ್ಧದ ಅವಶ್ಯಕತೆಯ ಬಗ್ಗೆ ತೀವ್ರ ಕಟು ನಿಲುವನ್ನು ತಳೆಯುತ್ತಾರೆ. ಭಾರತ-ಪಾಕ್ ಯುದ್ಧ ಭೂಮಿಯಿಂದ ದೂರ ಇರುವವರಿಗೆ ಯುದ್ಧದ ಅನುಭವ ಇಲ್ಲದೆ ಇರುವುದರಿಂದ ಈ ಕಠಿಣ ನಿಲುವು ತಳೆಯಲು ಸಾಧ್ಯವಾಗುತ್ತದೆ. ಭಾರತ-ಪಾಕ್ ಸಮರಗಳ ಮುಖ್ಯ ರಂಗಸ್ಥಳ ಪಂಜಾಬ್ ಆಗಿರುವುದರಿಂದ ಅಲ್ಲಿಯ ಜನರಿಗೆ ಯುದ್ಧ ಅಂದರೆ ಏನು ಎಂಬುದು ತಿಳಿದಿದೆ. ಹಾಗಾಗಿ ಈ ರೀತಿ ಮಾತನಾಡಲು ಹೋಗುವುದಿಲ್ಲ. ಈಗಿನ ಸೇನಾಧ್ಯಕ್ಷರಾಗಿರುವ ಜನರಲ್ ಬಿಕ್ರಂ ಸಿಂಗ್ “(War) is the last thing we should talk about” (ನಾವು ಮಾತನಾಡಬೇಕಾಗಿರುವ ಕೊನೆಯ ವಿಷಯ ಯುದ್ಧ) ಎಂದು ಹೇಳಿದ್ದಾರೆ. 1947, 1948, 1962, ಮತ್ತು 1971ರ ಯುದ್ಧಗಳೆಲ್ಲವನ್ನು ಪಂಜಾಬಿನ ಜನರು ಅನುಭವಿಸಿದ್ದಾರೆ.

1952ರಲ್ಲಿ ಯುದ್ಧದ ವಾತಾವರಣ ಉಂಟಾಗಿತ್ತು. ಭಾರತ-ಪಾಕ್ ಗಡಿಯಲ್ಲಿ ಸೇನೆಯ ಸಂಚಲನೆ ಶುರುವಾಗಿತ್ತು. ನಮ್ಮ ಮನೆ ಆಗ ಗ್ರ್ಯಾಂಡ್ ಟ್ರಂಕ್ ರೋಡ್ (ಈಗಿನ ಶೇರ್ ಷಾ ಸೂರಿ ಮಾರ್ಗ, ರಾಷ್ಟ್ರೀಯ ಹೆದ್ದಾರಿ ಸಂ.1) ನಲ್ಲಿ ಇತ್ತು. ಹಗಲು, ರಾತ್ರಿ ಎಡೆಬಿಡದೆ ಸೇನಾ ವಾಹನಗಳು, ಟ್ಯಾಂಕ್‌ಗಳು ಸಂಚರಿಸುತ್ತಿದ್ದವು. ಮಕ್ಕಳಾದ ನಮಗೆ ಎಷ್ಟು ವಾಹನಗಳು ಹಾದು ಹೋಗುತ್ತವೆ ಎಂದು ಲೆಕ್ಕ ಹಾಕುವುದು ಒಂದು ಆಟವಾಗಿತ್ತು. ಆದರೆ ಸಮರಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಆ ವಯಸ್ಸಿನಲ್ಲಿ ಮಾತ್ರ ಆಟವಾಗಿ ಕಾಣಲು ಸಾಧ್ಯ. ಆ ವರುಷ ಮೈ ಕರಗಿಸಿ ಬಿಡುವಂತಹ ಸೆಖೆ ಇತ್ತು. ನಮ್ಮ ಮನೆಯ ಮುಂದೆ ಕೆಲವು ಸೈನಿಕರು ನಿಂತುಕೊಂಡು ಹಾದು ಹೋಗುತ್ತಿರುವ ಸೇನಾ ವಾಹನಗಳಿಗೆ ದಾರಿ ನಿರ್ದೇಶಿಸುತ್ತಿದ್ದರು. ಬಿಸಿಲ ಜಳದಲ್ಲಿ ಸುಡುತ್ತಿದ್ದ ಅವರ ಪರಿಸ್ಥಿತಿಯನ್ನು ನೋಡಿ ನನ್ನ ತಂದೆಯವರು ನನ್ನ ತಾಯಿಗೆ ಅವರಿಗೆ ಶಿಕಂಜುವಿ (ನಿಂಬೆ ಹಣ್ಣಿನ ಪಾನಕ) ಮಾಡಿ ಕೊಡಲು ಹೇಳಿದರು. ನನ್ನ ತಾಯಿ ಶಿಕಂಜುವಿ ತಯಾರಿಸಿ, ಅದನ್ನು ಸೈನಿಕರಿಗೆ ಕೊಡಲು ನನ್ನನ್ನು ಕಳುಹಿಸುತ್ತಿದ್ದರು. ಅವರು ಅದನ್ನು ತೆಗೆದುಕೊಳ್ಳುವಾಗ ಅವರ ಮುಖದಲ್ಲಿ ಕಂಡ ಸಂತಪ್ತಿ ಮತ್ತು ಸಂತೋಷದ ಭಾವವನ್ನು ನಾನಿನ್ನೂ ಮರೆತಿಲ್ಲ. ಆ ಸೈನಿಕರ ಪೈಕಿ ಒಬ್ಬರು ನನ್ನ ಭಾವಚಿತ್ರವನ್ನು ಕೇಳಿದರು. ನನಗೆ ಆಗ ಎಂಟು ವರ್ಷ ವಯಸ್ಸು. ನಾನು ಮೂರು ವರ್ಷದವನಿದ್ದಾಗ ತೆಗೆದ ಚಿತ್ರವೊಂದು ಮನೆಯಲ್ಲಿತ್ತು. ಅದನ್ನು ನಾನು ಅವರಿಗೆ ಕೊಟ್ಟೆ. ಬಹುಶಃ ಅವರಿಗೆ ಊರಿನಲ್ಲಿ ಬಿಟ್ಟು ಬಂದ ತನ್ನ ಮಗುವಿನ ನೆನಪಾಗಿರಬೇಕೇನೋ ಅಥವ ಯುದ್ಧದ ಆ ಮನಸ್ಥಿತಿಯಲ್ಲಿ ಸಹಾನುಭೂತಿಯ ಒಂದು ಎಳೆ ಕೂಡ ಅವರನ್ನು ಆರ್ದ್ರಗೊಳಿಸಿರಬೇಕು. ಆ ಕಾರಣದಿಂದಾಗಿ ಅವರು ನನ್ನ ಭಾವಚಿತ್ರ ಕೇಳಿದ್ದಿರಬೇಕು. ಈ ಘಟನೆ ನೆನಪಾದಗಲ್ಲೆಲ್ಲಾ ಯೋಚಿಸುತ್ತೇನೆ, 'ಎಲ್ಲಿಯ ಆ ಸೈನಿಕ, ಎಲ್ಲಿ ನನ್ನ ಆ ಭಾವ ಚಿತ್ರ'.

ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದ ನನ್ನ ಸೋದರಮಾವ 1962ರ ಯುದ್ಧದ ಸಂದರ್ಭದಲ್ಲಿ ಯುದ್ಧಭೂಮಿಗೆ ಹೋಗುವ ಮುಂಚೆ ನಮ್ಮನ್ನು ನೊಡಲು ಬಂದರು. ಅವರಷ್ಟು ಸ್ಫುರದ್ರೂಪಿ ಜಗತ್ತಿನಲ್ಲಿ ವಿರಳ. ಹಾಗೆಯೆ ನಾನು ಜೊತೆಯಾಗಿ ಬೆಳೆದಿದ್ದ, ನನಗಿಂತ ಹಿರಿಯನಾದ ನನ್ನ ದೊಡ್ಡಮ್ಮನ ಮಗ ವಾಯುಸೇನೆಯಲ್ಲಿದ್ದರು. ಅವರು ಕೂಡ ನಮ್ಮನ್ನು ನೋಡಿ ಹೋಗಲು ಬಂದಿದ್ದರು. ಯುದ್ಧ ಮುಗಿಯುವ ತನಕ ದಿನಾ ರಾತ್ರಿ ನಮಗೆ ಅವರದೆ ಚಿಂತೆ. ಸಾವಿರಾರು ಕುಟುಂಬಗಳ ಪರಿಸ್ಥಿತಿಯೂ ಇದೇ. 1965ರಲ್ಲಿ ಭಾರತ-ಪಾಕ್ ಯುದ್ಧ ಶುರುವಾದಾಗ ನನ್ನ ದೊಡ್ಡಮ್ಮ ಫಿರೋಜ್‌ಪುರ್‌ನಲ್ಲಿದ್ದರು. ಫಿರೋಜ್‌ಪುರ್ ಒಂದು ಗಡಿ ಪಟ್ಟಣ ಮತ್ತು ಸೇನಾ ಠಾಣೆ. ಯುದ್ಧ ಶುರುವಾಗುವ ಸಮಯಕ್ಕೆ ಕಂದಕಗಳನ್ನು ಅಗೆದು ಮನೆಗಳನ್ನು ಬ್ಲ್ಯಾಕ್ ಔಟ್ ಮಾಡಬೇಕು ಎಂಬ ಸೂಚನೆ ಜಾರಿಯಾಗಿತ್ತು. ನನ್ನ ದೊಡ್ಡಮ್ಮನ ಬಂಗಲೆಯ ದೊಡ್ಡ ಅಂಗಳದಲ್ಲಿ ಕೂಡ ಕಂದಕ ಅಗೆದಿದ್ದರು. ವಾಯುಸೇನೆಯ ಆಕ್ರಮಣದ ಸೈರನ್ ಶಬ್ದ ಕೇಳುತ್ತಿದ್ದಂತೆ ಅವರು ಕಂದಕದಲ್ಲಿಳಿದು ಅಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದರು. ಯುದ್ಧ ಶುರುವಾದ ಎರಡನೆ ದಿನ ಅವರ ಬಂಗಲೆಯ ಆವರಣದೊಳಗೆ ಬಾಂಬ್ ಬಿತ್ತು. ಅವರು ಕಂದಕದಲ್ಲಿದ್ದ ಕಾರಣ ಬದುಕುಳಿದರು. ಮನೆಯಲ್ಲಿದ್ದ ದಿಂಬು, ಹಾಸಿಗೆಗಳಿಂದ ಹತ್ತಿ ಚಿಂದಿಚಿಂದಿಯಾಗಿ ಎಲ್ಲಾ ಕಡೆ ಹಾರಾಡುತ್ತಿತ್ತು. ಮನೆಯ ಗಾಜೆಲ್ಲ ಪುಡಿಪುಡಿಯಾಗಿತ್ತು. ಸ್ಫೋಟ ಅಷ್ಟು ಶಕ್ತಿಶಾಲಿಯಾಗಿತ್ತು. ಮಾರನೆ ದಿವಸ ದೊಡ್ಡಮ್ಮ ಫಿರೋಜ್‌ಪುರ್‌ನಿಂದ ಚಂಡಿಗಢದ ನಮ್ಮ ಮನೆಗೆ ಬಂ
ದರು. ಆದರೆ ದೊಡ್ಡಪ್ಪ ಸರಕಾರಿ ಸೇವೆಯಲ್ಲಿ ಇದ್ದ ಕಾರಣಕ್ಕಾಗಿ ಫಿರೋಜ್‌ಪುರ್‌ನಲ್ಲಿಯೇ ಉಳಿಯಬೇಕಾಯಿತು. ಆನಂತರ ಅಂಬಾಲಾ ಮತ್ತು ಚಂಡಿಗಢ್ ಮೇಲೆ ವಾಯುದಾಳಿಗಳು ಶುರುವಾದವು.

ನನ್ನ ಇನ್ನೊಬ್ಬ ದೊಡ್ಡಪ್ಪನ ಮಗ ಖೇಮ್‌ಕರಣ್‌ನಲ್ಲಿದ್ದರು. ಪಾಕಿಸ್ತಾನದಿಂದ ರೆಫ್ಯೂಜಿಯಾಗಿ ಬಂದ ಅವರು ಖೇಮ್‌ಕರಣ್‌ನಲ್ಲಿ ನೆಲೆ ನಿಂತಿದ್ದರು. ಪಾಕಿಸ್ತಾನದಿಂದ ಎಲ್ಲ ಕಳೆದುಕೊಂಡು ಬಂದವರು ಬದುಕನ್ನು ಮತ್ತೆ ಮೊದಲಿನಿಂದಲೇ ಕಟ್ಟಬೇಕಾಗಿತ್ತು. 1965ರಲ್ಲಿ ಖೇಮ್‌ಕರಣ್ ಪಾಕಿಸ್ತಾನಿ ಸೇನೆಯ ಕೈ ಸೇರಿತು. ಅವರು ಇನೊಮ್ಮೆ ರೆಫ್ಯೂಜಿಯಾದರು. ಯುದ್ಧ ಮುಗಿದ ನಂತರ ಅವರು ಖೇಮ್‌ಕರಣ್‌ಗೆ ವಾಪಸ್ ಹೋಗಿ ನೋಡಿದರೆ ಮನೆಯ ಬಾಗಿಲಿನ ಚೌಕಟ್ಟು ಕೂಡ ಇರಲಿಲ್ಲ. ಪಾಕಿಸ್ತಾನಿ ಜನರು ಅವುಗಳನ್ನೂ ಬಿಚ್ಚಿ ತೆಗೆದುಕೊಂಡು ಹೋಗಿದ್ದರು. ಇದೇ ರೀತಿಯಾಗಿ ಭಾರತೀಯ ಸೈನ್ಯದ ಹತೋಟಿಯಲ್ಲಿದ್ದ ಪಾಕಿಸ್ತಾನಿ ಹಳ್ಳಿಗಳಿಂದ ನಮ್ಮ ಗಡಿಪ್ರದೇಶದ ನಿವಾಸಿಗಳು ಸಿಕ್ಕಿದೆಲ್ಲವನ್ನು ತಂದಿದ್ದರು. ಯುದ್ಧಗಳಲ್ಲಿ ದೇವತೆಗಳು ಇರುವುದಿಲ್ಲ.

ನಮ್ಮ ಮಾವನವರಿದ್ದ ಹಳ್ಳಿ ಗಡಿಗೆ ಹತ್ತಿರವಾಗಿತ್ತು. ಯುದ್ಧ ಶುರುವಾದಾಗ ಆ ಪ್ರದೇಶದ ಜನ ಬೇರೆ ಕಡೆ ವಲಸೆ ಹೋಗುತ್ತಿದ್ದರು. ನನ್ನ ಮಾವನವರಿಗೆ ಹೈನುಗಾರಿಕೆಯಲ್ಲಿ ಆಸಕ್ತಿ ಇತ್ತು. ಇರುವ ಅಷ್ಟೂ ದನಕರು ಬಿಟ್ಟು ಎಲ್ಲಿಗೆ ಹೋಗುವುದು? ಅವರು ಹೋದರೆ ಆ ಪ್ರಾಣಿಗಳಿಗೆ ಮೇವು, ನೀರು ಕೊಡುವವರು ಯಾರೂ ಇರುವುದಿಲ್ಲ. ಹಾಗಾಗಿ ಅವರು ಊರು ಬಿಡಲಿಲ್ಲ. ತಮ್ಮ ಮನೆಯವರನ್ನು ಬಿಟ್ಟು ಅತ್ತೆಯೂ ಕದಲಲಿಲ್ಲ. ದಿನಾ ರಾತ್ರಿ ತೋಪುಗಳ ಗರ್ಜನೆ ಮತ್ತು ವಿಮಾನ ಪ್ರತಿರೋಧಕ ಕೋವಿಗಳ ಶಬ್ದ ಕೇಳಬೇಕಾಯಿತು.

ಗಡಿಯಾಚೆಗೂ ಇದೇ ಕಥೆ. ನಾವು ಲಿಬಿಯಾದಲ್ಲಿದ್ದಾಗ ನನ್ನ ತಂದೆ ತಾಯಿಗೆ ಆತ್ಮೀಯರಾಗಿದ್ದ ಪಾಕಿಸ್ತಾನಿ ಸ್ನೇಹಿತರೊಬ್ಬರು ನಮಗೆ ಅವರ ಕಥೆಯನ್ನು ಹೇಳಿದರು. ಯುದ್ಧ ಶುರುವಾದಾಗ ಅವರು ತಮ್ಮ ಊರು ಬಿಟ್ಟು ಲಾಹೋರ್‌ಗೆ ಹೋದರು. ಭಾರತೀಯ ಸೇನೆ ಲಾಹೋರ್ ಅನ್ನು ಸಮೀಪಿಸಿದಾಗ ಅವರು ಲಾಹೋರ್ ಬಿಟ್ಟು ರಾವಲಪಿಂಡಿ ಕಡೆ ಹೋಗಬೇಕಾಯಿತು. ಆ ದಿವಸಗಳಲ್ಲಿ ನಾವು ನಾಳೆ ಇರುತ್ತೇವೆಯೋ, ಇಲ್ಲವೋ ಎಂದು ಹೇಳುವಂಥ ಸ್ಥಿತಿಯಲ್ಲಿರಲಿಲ್ಲ. ಗುರುನಾನಕ್ ದೇವ್ ಹೇಳಿದ್ದಾರೆ, *ಹ್ಞೌಂ ಆದಮಿ ಹ್ಞಾಂ ಯಕದಮಿ (ನಾವು ಒಂದು ಉಸಿರಿನ ಮನುಷ್ಯರು.) ಅಂದರೆ, ನಮ್ಮ ಮುಂದಿನ ಉಸಿರು ಬರುತ್ತದೋ, ಇಲ್ಲವೋ ಎಂದು ನಮಗೆ ಗೊತ್ತಿರುವುದಿಲ್ಲ. ಈ ಸತ್ಯದ ಅರ್ಥ ಯುದ್ಧಕಾಲದಲ್ಲಿ ಗೊತ್ತಾಗುತ್ತದೆ.

1971ರ ಯುದ್ಧದ ಕಾಲದಲ್ಲಿ ಒಂದು ತಿಂಗಳು ರಜೆಯ ಮೇಲೆ ನಾನು ಚಂಡಿಗಢ್‌ಗೆ ಹೋಗಿದ್ದೆ. ಯುದ್ಧ ಶುರುವಾದ ನಂತರ ನನ್ನ ರಜೆಯನ್ನು ಕಡಿತಗೊಳಿಸಿ ನಾನು ತರಿಕೆರೆಗೆ ವಾಪಸ್ ಬಂದೆ. ತರಿಕೆರೆಯಲ್ಲಿ ಸೈರನ್ ಶಬ್ದ ಮತ್ತು ವಿಮಾನ ಪ್ರತಿರೋಧಕ ಕೋವಿಗಳ ಚಕಮಕಿ ಇರಲಿಲ್ಲ. ಯಾರಿಗೂ ಯುದ್ಧದ ಬಗ್ಗೆ ಚಿಂತೆಯೂ ಇರಲಿಲ್ಲ. ಕರ್ನಾಟಕದ ಜನರ ಮೇಲೆ ಪಕತಿಯ ಮತ್ತು ದೇವರ ಅಷ್ಟು ಅನುಗ್ರಹ ಇದೆ. ಪಂಜಾಬಿನಲ್ಲಿ ಇರುವ ಹಾಗೆ ಪ್ರವಾಹಗಳ, ಪಕತಿಯ ವೈಪರೀತ್ಯಗಳ, ಯುದ್ಧ ಮತ್ತು ವಿಭಜನೆಯಂತಹ ದಾರುಣ ಘಟನೆಗಳ ಅನುಭವ ಇಲ್ಲಿ ಇಲ್ಲ.

ಈಗ ಯುದ್ಧದ ಸ್ವರೂಪ ಬದಲಾಗಿದೆ. ಮುಂದಿನ ಭಾರತ ಪಾಕಿಸ್ತಾನ ಯುದ್ಧ ಪರಮಾಣು ಬಾಂಬುಗಳ ಯುದ್ಧ ಆಗಬಹುದು. ಪರಮಾಣು ಬಾಂಬ್ ಹೊತ್ತ ಕ್ಷಿಪಣಿಗಳು ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ತಲುಪುತ್ತವೆ. ಅಮೇರಿಕದ ಪೆಂಟಗಾನ್ ಭಾರತ ಪಾಕಿಸ್ತಾನ ಪರಮಾಣು ಸಮರದ ಮುನ್ನಂದಾಜು ಮಾಡಿರುವ ಪ್ರಕಾರ, ಇಂತಹ ಒಂದು ಯುದ್ಧ ನಡೆದರೆ ಒಂದು ಕೋಟಿ ಇಪ್ಪತ್ತು ಲಕ್ಷ ಜನ ಸಾಯುತ್ತಾರೆ. ಗಾಯಗೊಳ್ಳುವವರ ಸಂಖ್ಯೆ ಮತ್ತು ಆರ್ಥಿಕತೆಗೆ ಆಗುವ ನಷ್ಟದ ಗಣನೆ ಇಲ್ಲ. ಭಾರತದಲ್ಲಿ ದಿಲ್ಲಿ ಮುಂಬೈ, ಕೊಲ್ಕತ್ತ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಈ ಆರೂ ಪಟ್ಟಣಗಳನ್ನು ಒಳಗೊಂಡು ಪೆಂಟಗಾನ್ ಈ ಅಂದಾಜು ಮಾಡಿದೆ. ಇನ್ನೊಂದು ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಜನ ಸಾಯುತ್ತಾರೆ. ಎರಡು ಲಕ್ಷ ಜನರು ಗಂಭೀರವಾಗಿ ಗಾಯಗೊಳ್ಳಬಹುದು ಮತ್ತು ಸುಮಾರು ನಾಲ್ಕು ಲಕ್ಷ ಜನರಿಗೆ ಸಾಮಾನ್ಯ ಗಾಯಗಳಾಗಬಹುದು.

1857ರ ಸಂಗ್ರಾಮದಲ್ಲಿ ಮತಪಟ್ಟ ಬ್ರಿಟಿಷರ ಪ್ರತೀಕಾರವಾಗಿ *ಬ್ರಿಟಿಷರ ಮೇಲೆ ದೌರ್ಜನ್ಯ ಮಾಡುವ ಭಾರತೀಯ ಜನಾಂಗವನ್ನೇ ನಿರ್ನಾಮ ಮಾಡಬೇಕು* ಎಂದು ಚಾರ್ಲ್ಸ್ ಡಿಕೆನ್ಸ್ ಹೇಳಿದ. ಪ್ರತೀಕಾರ ಬಯಸುವ ಇವತ್ತಿನ ಡಿಕೆನ್ಸರು ಪೆಂಟಗಾನ್ ಅಧ್ಯಯನದ ಅಂಕಿ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ