Karnataka assembly elections 2023: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯುವುದು ಖಚಿತ: ಕೆಸಿ ವೇಣುಗೋಪಾಲ್‌

ದಕ್ಷಿಣಕನ್ನಡ: ಕಾಂಗ್ರೆಸ್ ಈ ಬಾರಿ ಸ್ಪಷ್ಟ ಬಹುಮತ ಪಡೆಯಲಿದೆ, ದಕ್ಷಿಣ ಕನ್ನಡದಲ್ಲಿ 8 ಸ್ಥಾನಗಳ ಗೆಲುವಿನ ಜತೆಗೆ 2013ರ ಫಲಿತಾಂಶ ಮರುಕಳಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 8 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಬಾರಿ ಚುನಾವಣೆಯಲ್ಲಿ ಈ ಫಲಿತಾಂಶ ಮರುಕಳಿಸುವುದರೊಂದಿಗೆ 8ರಲ್ಲಿ 8 ಸ್ಧಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಸ್ಪಷ್ಟ ಜನಾದೇಶ ದೊರೆಯಲಿದೆ. ಪಕ್ಷಕ್ಕೆ ರಾಜ್ಯದಲ್ಲಿ ವ್ಯಕ್ತವಾಗುತ್ತಿರುವ ಭಾರಿ ಜನಸ್ಪಂದನೆಯಿಂದ ಬಿಜೆಪಿ ಹತಾಶಗೊಂಡಿದೆ. ಅವರಲ್ಲಿ ಹೇಳಿಕೊಳ್ಳುವಂತ ಯಾವುದೇ ಸಾಧನೆ ಕಾರ್ಯಕ್ರಮಗಳಿಲ್ಲ. ಶೇ.40 ಕಮಿಷನ್ ಸರಕಾರ ಎಂಬುದು ಅವರಿಗೆ ಬ್ರಾಂಡ್ ಆಗಿದೆ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಬಿಜೆಪಿಯ ಸಾಧನೆ ಎಂದರೆ ಭ್ರಷ್ಟಾಚಾರ ಮತ್ತು ಜನವಿರೋಧಿ ಆಡಳಿತ ಎಂದು ಹೇಳಿದರು.

ಕಾಂಗ್ರೆಸ್‌ನ ಹಿಂದಿನ ಸಿದ್ದರಾಮಯ್ಯ ಸರಕಾರ ನೀಡಿದ್ದ ಭರವಸೆಗಳಲ್ಲಿ ಶೇ.90ರಷ್ಟನ್ನು ಈಡೇರಿಸಿತ್ತು. ಆದರೆ ಬಿಜೆಪಿ ನೀಡಿದ್ದ ಭರವಸೆಗಳಲ್ಲಿ ಕೇವಲ ಶೇ.25 ಮಾತ್ರ ಈಡೇರಿಸಿದೆ. ಕಾಂಗ್ರೆಸ್ ಈ ಬಾರಿ ಆಡಳಿತಕ್ಕೆ ಬರಲಿದೆ ಮತ್ತು ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ. ಪಕ್ಷ ನೀಡಿರುವ 4 ಗ್ಯಾರಂಟಿಗಳನ್ನು ಅಧಿಕಾರ ಬಂದ ಪ್ರಥಮ ಸಚಿವ ಸಂಪುಟ ಸಭೆಯಲ್ಲೇ ಅನುಮೋದಿಸಿ ಜಾರಿಗೊಳಿಸಲಿದೆ ಎಂದರು.

Vijaya Karnataka Web 27 Apr 2023, 9:46 pm
Loading ...