undefined

ಶಶಿ ತರೂರ್

ತಿರುವನಂತಪುರಂ|ಕೇರಳ|CONG|AWAITED

Shashi Tharoor: ಕೇರಳದ ತಿರುವನಂತಪುರಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ತಮ್ಮ ಅಪಾರ ಜ್ಞಾನ ಹಾಗೂ ಓದಿನಿಂದ ಪರಿಚಿತರಾದವರು, ಅವರಿಗೆ ಇಂಗ್ಲಿಷ್ ಭಾಷೆ ಮೇಲಿರುವ ಹಿಡಿತ, ತಿಳಿವಳಿಕೆ ವಿಸ್ಮಯ ಮೂಡಿಸುತ್ತದೆ. ರಾಜಕೀಯ ರಂಗದಲ್ಲಿ ಅವರು ಸಿದ್ಧಾಂತಕ್ಕೆ ಬದ್ಧರಾಗಿದ್ದರೂ, ತಮ್ಮದೇ ಪಕ್ಷದ ಲೋಪ ದೋಷಗಳನ್ನು ನೇರವಾಗಿ ಟೀಕಿಸುವುದರಲ್ಲಿ ಅವರು ಹಿಂದೆ ಬಿದ್ದಿಲ್ಲ. ತರೂರ್ ಅವರನ್ನು ಕೇವಲ ರಾಜಕಾರಣಿ ಅಥವಾ ಸಾಹಿತಿ ಎಂದರೆ ತಪ್ಪಾಗುತ್ತದೆ. ರಾಜತಾಂತ್ರಿಕ ರಂಗದಲ್ಲಿ ಅವರ ಕೊಡುಗೆ ಗಮನಾರ್ಹ.

ರಾಜಕೀಯ ವಿವರ
ಪಕ್ಷCONG
ಕ್ಷೇತ್ರತಿರುವನಂತಪುರಂ
ರಾಜ್ಯದ ಹೆಸರುಕೇರಳ
ಕ್ರಿಮಿನಲ್‌ ಮೊಕದ್ದಮೆ ವಿವರYes (12)
ಉದ್ಯೋಗSocial Worker
ವೈಯಕ್ತಿಕ ವಿವರ
ಹೆಸರುಶಶಿ ತರೂರ್
ಶಿಕ್ಷಣDoctorate
ಒಟ್ಟು ಆಸ್ತಿ56.1Crore
ಸಾಲ0
ವಯಸ್ಸು68
Disclaimer: This Data is as according as the publicly available affidavit information, submitted by the candidates to the Election Commission of India.
ಶಶಿ ತರೂರ್ ಬಗ್ಗೆ

ಶಶಿ ತರೂರ್
ಭಾರತದ ರಾಜಕಾರಣದಲ್ಲಿನ ವರ್ಣರಂಜಿತ ವ್ಯಕ್ತಿಗಳಲ್ಲಿ ಕೇರಳದ ತಿರುವನಂತಪುರಂ ಕ್ಷೇತ್ರದ ಸಂಸದ ಶಶಿ ತರೂರ್ ಒಬ್ಬರು. ತಮ್ಮ ಅಸ್ಖಲಿತ ಇಂಗ್ಲಿಷ್ ಪಾಂಡಿತ್ಯದಿಂದ ಜನಪ್ರಿಯರಾಗಿರುವ ತರೂರ್, ಬಹುಮುಖಿ ವ್ಯಕ್ತಿತ್ವವುಳ್ಳವರು. ಕಾಂಗ್ರೆಸ್ ಪಕ್ಷದ ಒಳಗಿದ್ದು, ಅದರ ಲೋಪಗಳ ಬಗ್ಗೆ ನೇರ ಹಾಗೂ ದಿಟ್ಟವಾಗಿ ಮಾತನಾಡುವ ಕೆಲವೇ ಮಂದಿಯಲ್ಲಿ ಒಬ್ಬರು. ಸಾಕಷ್ಟು ವಿವಾದಗಳು ಕೂಡ ಅವರನ್ನು ಸುತ್ತಿಕೊಂಡಿವೆ.

ತರೂರ್ ಆರಂಭಿಕ ಜೀವನ ಮತ್ತು ಶಿಕ್ಷಣ
ಶಶಿ ತರೂರ್ ಅವರ ಪೋಷಕರಾದ ಚಂದ್ರನ್ ತರೂರ್ ಮತ್ತು ಸುಲೇಖಾ ಮೆನನ್ ಅವರ ಊರು ಕೇರಳದ ಪಾಲಕ್ಕಾಡ್. ಆದರೆ ಶಶಿ ತರೂರ್ ಜನಿಸಿದ್ದು ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌ನಲ್ಲಿ. 1956ರ ಮಾರ್ಚ್ 9ರಂದು ಜನಿಸಿದ ತರೂರ್ ಅವರಿಗೆ ಶೋಭಾ ಮತ್ತು ಸ್ಮಿತಾ ಎಂಬ ಇಬ್ಬರು ಸಹೋದರಿಯರು. ತರೂರ್ ಅವರ ದೊಡ್ಡಪ್ಪ ಪರಮೇಶ್ವರನ್ ತರೂರ್, ಭಾರತದಲ್ಲಿ 'ರೀಡರ್ಸ್ ಡೈಜೆಸ್ಟ್' ಅನ್ನು ಸ್ಥಾಪಿಸಿದವರು. ತರೂರ್ ಅವರ ತಂದೆ ದಿ ಸ್ಟೇಟ್ಸ್‌ಮನ್‌ ಪತ್ರಿಕೆಯಲ್ಲಿ ಜಾಹೀರಾತು ವಿಭಾಗದಲ್ಲಿ 25 ವರ್ಷ ಕೆಲಸ ಮಾಡಿದವರು. ಲಂಡನ್, ಬಾಂಬೆ, ಕಲ್ಕತ್ತಾ ಮತ್ತು ದಿಲ್ಲಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಶಶಿ ತರೂರ್ ಅವರಿಗೆ 2 ವರ್ಷವಿದ್ದಾಗ, ಅವರ ಪೋಷಕರು ಭಾರತಕ್ಕೆ ಮರಳಿದರು. ಯೆರಕಾಡ್, ಮುಂಬೈಗಳಲ್ಲಿ ಶಶಿ ತರೂರ್ ಪ್ರಾಥಮಿಕ ಶಿಕ್ಷಣ ಪಡೆದರು. 1975ರಲ್ಲಿ ದಿಲ್ಲಿ ವಿವಿಯಲ್ಲಿ ಇತಿಹಾಸದಲ್ಲಿ ಬಿಎ ಪದವಿ ಪೂರೈಸಿದ ತರೂರ್, ಅಲ್ಲಿನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದರು. ಸೇಂಟ್ ಸ್ಟೀಫನ್ಸ್ ಕ್ವಿಜ್ ಕ್ಲಬ್ ಹುಟ್ಟುಹಾಕಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅದೇ ವರ್ಷ ಅಮೆರಿಕಕ್ಕೆ ತೆರಳಿ, ಅಲ್ಲಿ ಅಂತರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಎಂಎ ಪದವಿ ಪಡೆದರು. 1977ರಲ್ಲಿ ಕಾನೂನು ಹಾಗೂ ರಾಜತಾಂತ್ರಿಕತೆಯಲ್ಲಿ ಎಂಎ ಪದವಿ ಪಡೆದು, 1978ರಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಹಾರಗಳ ವಿಷಯದಲ್ಲಿ ಪಿಎಚ್‌ಡಿ ಮಾಡಿದರು. ಡಾಕ್ಟರೇಟ್ ಮಾಡುವಾಗ ಅತ್ಯುತ್ತಮ ವಿದ್ಯಾರ್ಥಿ ಎಂಬ ರಾಬರ್ಟ್ ಬಿ. ಸ್ಟೀವರ್ಟ್ ಪ್ರೈಜ್ ಗಳಿಸಿದರು. ಫ್ಲೆಚರ್ ಫೋರಮ್ ಆಫ್ ಇಂಟರ್‌ನ್ಯಾಷನಲ್ ಅಫೇರ್ಸ್‌ನ ಮೊದಲ ಸಂಪಾದಕರಾದರು. ಫ್ಲೆಚರ್ ಸ್ಕೂಲ್‌ನಲ್ಲಿ ಪಿಎಚ್‌ಡಿ ಮುಗಿಸುವ ಮೂಲಕ 22ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪಡೆದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿದರು.

ವಿಶ್ವಸಂಸ್ಥೆಯಲ್ಲಿ ವೃತ್ತಿ
ಶಶಿ ತರೂರ್ ಅವರ ವೃತ್ತಿ ಬದುಕು ಆರಂಭವಾಗಿದ್ದು, 1978ರಲ್ಲಿ ಜಿನವಾದಲ್ಲಿನ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (ಯುಎನ್‌ಎಚ್‌ಸಿಆರ್) ಸಿಬ್ಬಂದಿ ಸದಸ್ಯನಾಗಿ. 1981ರಿಂದ 1984ರವರೆಗೆ ಸಿಂಗಪುರದ ಯುಎನ್‌ಎಚ್‌ಸಿಆರ್ ಕಚೇರಿಯ ಮುಖ್ಯಸ್ಥರಾಗಿದ್ದರು. ವಿಶ್ವದಾದ್ಯಂತ ಯುಎನ್‌ಎಚ್‌ಸಿಆರ್‌ನ ಮೊದಲ ಸಿಬ್ಬಂದಿ ಅಧ್ಯಕ್ಷರಾಗಿ 1989ರಲ್ಲಿ ನೇಮಕವಾದರು. 1996ರವರೆಗೂ ಅವರು ಯುಗೋಸ್ಲಾವಿಯಾದಲ್ಲಿನ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ತಂಡವನ್ನು ಮುನ್ನಡೆಸಿದ್ದರು. 1996ರಲ್ಲಿ ವಿಶ್ವಸಂಸ್ಥೆಯ ಆಗಿನ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರ ಕಾರ್ಯಕಾರಿ ಸಹಾಯಕರಾಗಿ ಮತ್ತು ಸಂವಹನ ಹಾಗೂ ವಿಶೇಷ ಯೋಜನೆಗಳ ನಿರ್ದೇಶಕರಾಗಿ ನೇಮಕವಾದರು. 2001ರಲ್ಲಿ ಸಹ ಪ್ರಧಾನ ಕಾರ್ಯದರ್ಶಿ ಮಟ್ಟದಲ್ಲಿ ಸಾರ್ವಜನಿಕ ಮಾಹಿತಿ ಇಲಾಖೆಯ ಮಧ್ಯಂತರ ಮುಖ್ಯಸ್ಥರಾದರು. 2002ರಲ್ಲಿ ಅವರ ಹುದ್ದೆ ಕಾಯಂ ಆಯಿತು. ವಿಶ್ವಸಂಸ್ಥೆಯ ಸಂವಹನ ಕಾರ್ಯತಂತ್ರ, ಸಂಘಟನೆಯ ವರ್ಚಸ್ಸು ಮತ್ತು ಪರಿಣಾಮಕಾರಿತ್ವವನ್ನು ವೃದ್ಧಿಸುವ ಹೊಣೆ ಅವರಿಗಿತ್ತು. 2003ರಲ್ಲಿ ಬಹುಭಾಷೆಯ ಸಮನ್ವಯಕಾರನ ಹೆಚ್ಚುವರಿ ಜವಾಬ್ದಾರಿ ವಹಿಸಲಾಯಿತು. ಯುಎನ್‌ಡಿಪಿ ಇಲಾಖೆಯನ್ನು ಸುಧಾರಣೆ ಮಾಡಿದ ಅವರು, ಅನೇಕ ಹೊಸ ಯೋಜನೆಗಳನ್ನು ಆರಂಭಿಸಿದರು. ಆಂಟಿಸೆಮಿಟಿಸಂ ಕುರಿತಾದ ವಿಶ್ವಸಂಸ್ಥೆಯ ಮೊದಲ ಸೆಮಿನಾರ್, ಇಸ್ಲಾಮೋಫೋಬಿಯಾ ಕುರಿತು ಮೊದಲ ಸೆಮಿನಾರ್ ನಡೆಸಿದರು. 2007ರ ಫೆ. 9ರಂದು ಅಧೀನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪೈಪೋಟಿ
2006ರಲ್ಲಿ ಭಾರತ ಸರ್ಕಾರವು ತರೂರ್ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಮನಿರ್ದೇಶನ ಮಾಡಿತ್ತು. ಆಗ ಗೆದ್ದಿದ್ದರೆ 50 ವರ್ಷದ ತರೂರ್ ಅವರು ಎರಡನೇ ಕಿರಿಯ ಪ್ರಧಾನ ಕಾರ್ಯದರ್ಶಿ ಎನಿಸುತ್ತಿದ್ದರು. ಆದರೆ ದಕ್ಷಿಣ ಕೊರಿಯಾದ ಬಾನ್ ಕಿ ಮೂನ್ ಎದುರು ಹಿನ್ನಡೆ ಅನುಭವಿಸಿದರು. ಕಾಯಂ ಸದಸ್ಯ ದೇಶಗಳಲ್ಲಿ ತರೂರ್ ವಿರುದ್ಧ ಅಮೆರಿಕ ವಿಟೋ ಚಲಾಯಿಸಿತ್ತು. "ನಮಗೆ ಪ್ರಬಲ ಪ್ರಧಾನ ಕಾರ್ಯದರ್ಶಿ ಬೇಡ" ಎಂಬ ಸೂಚನೆಯಂತೆ ಅಮೆರಿಕ ಈ ನಡೆ ಅನುಸರಿಸಿದ್ದಾಗಿ ರಾಯಭಾರಿ ಜಾನ್ ಬೋಲ್ಟನ್ ತಿಳಿಸಿದ್ದರು. ಮತದಾದನ ಬಳಿಕ ತರೂರ್ ಅವರು ತಮ್ಮ ಉಮೇದುವಾರಿಕೆ ಹಿಂಪಡೆದರು. ಅಧೀನ ಕಾರ್ಯದರ್ಶಿಯಾಗಿ ಮುಂದುವರಿಯುವಂತೆ ಬಾನ್ ಕಿ ಮೂನ್ ಮಾಡಿದ ಮನವಿಯನ್ನು ತಿರಸ್ಕರಿಸಿದರು.

ರಾಜೀನಾಮೆ ನಂತರ
2007ರ ಫೆಬ್ರವರಿಯಲ್ಲಿ ವಿಶ್ವಸಂಸ್ಥೆಯಲ್ಲಿನ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ಹರಿದಾಡಿದವು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಅವರಿಗೆ ವಿದೇಶಾಂಗ ವ್ಯವಹಾರಗಳ ಖಾತೆ ಸಿಗಲಿದೆ ಎಂದು ವರದಿಯಾಯಿತು. ಅಮೆರಿಕದಲ್ಲಿ ಯುಎಸ್‌ಸಿ ಆನ್ನೆನ್‌ಬರ್ಗ್ ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ಡೀನ್ ಹುದ್ದೆಗೆ ಅವರನ್ನು ಪರಿಗಣಿಸಲಾಗಿತ್ತು. ಆದರೆ ಕೊನೆ ಹಂತದಲ್ಲಿ ಅವರು ಹಿಂದೆ ಸರಿದರು. ದುಬೈ ಮೂಲದ ಅಫ್ರಾಸ್ ಸಂಸ್ಥೆಯ ಅಧ್ಯಕ್ಷರಾದರು. ಇದರ ಜತೆಗೆ ಇನ್ನೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರು.

ರಾಜಕೀಯ ಜೀವನ
ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಬಿಜೆಪಿ ಕೂಡ ತರೂರ್ ಅವರ ಮನೆಬಾಗಿಲಿಗೆ ಹೋಗಿದ್ದವು. ಆದರೆ ತಮಗೆ ಸೈದ್ಧಾಂತಿಕವಾಗಿ ಹೆಚ್ಚು ಸೂಕ್ತ ಎನಿಸಿದ ಕಾಂಗ್ರೆಸ್ ಅನ್ನು ಅವರು ಆಯ್ದುಕೊಂಡರು. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಸ್ಪರ್ಧಿಸಿದರು. 'ಹೊರಗಿನಿಂದ ಬಂದ ಉತ್ಕೃಷ್ಟ ವರ್ಗ'ದ ವ್ಯಕ್ತಿ ಎಂಬ ಟೀಕೆಗಳ ನಡುವೆ ಅವರು 99,989 ಮತಗಳಿಂದ ಗೆಲುವು ಸಾಧಿಸಿದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದರು. ಆಫ್ರಿಕಾ ದೇಶಗಳೊಂದಿಗಿನ ಸಂಪರ್ಕವನ್ನು ಬಲಗೊಳಿಸಿದರು. ಸಾಮಾಜಿಕ ಜಾಲತಾಣದಲ್ಲಿ ತರೂರ್ ಸಕ್ರಿಯರಾಗಿದ್ದರು. 2013ರವರೆಗೂ ಅತಿ ಹೆಚ್ಚು ಹಿಂಬಾಲಕರಿರುವ ರಾಜಕಾರಣ ಎಂಬ ಖ್ಯಾತಿ ಅವರದ್ದಾಗಿತ್ತು. 2010ರಲ್ಲಿ ಐಪಿಎಲ್ ಕ್ರಿಕೆಟ್ ಫ್ರಾಂಚೈಸಿಯಲ್ಲಿ ಷೇರುಗಳನ್ನು ಪಡೆಯಲು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪ ಕೇಳಿ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 2012ರಲ್ಲಿ ಮತ್ತೆ ಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಸೇರಿಕೊಂಡರು. ಮಾನವ ಸಂಪನ್ಮೂಲ ರಾಜ್ಯ ಖಾತ ಸಚಿವರಾಗಿ ವಯಸ್ಕರ ಶಿಕ್ಷಣ, ದೂರ ಶಿಕ್ಷಣದಂತಹ ಅಂಶಗಳಿಗೆ ಆದ್ಯತೆ ನೀಡಿದರು. ಸಂಸದರಾಗಿ ತಮ್ಮ ವಾರ್ಷಿಕ ಕೆಲಸದ ವರದಿಗಳನ್ನು ನೀಡಿದ ದೇಶದ ಮೊದಲ ಸಂಸದ ಎನಿಸಿಕೊಂಡರು. 2014ರ ಚುನಾವಣೆಯಲ್ಲಿ ಬಿಜೆಪಿಯ ರಾಜಗೋಪಾಲ್ ವಿರುದ್ಧ 15 ಸಾವಿರ ಮತಗಳ ಅಂತರದಿಂದ ಗೆಲುವು ಕಂಡರು. ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳನ್ನು ಶ್ಲಾಘಿಸಿದ ಕಾರಣಕ್ಕೆ ಕಾಂಗ್ರೆಸ್ ವಕ್ತಾರ ಹುದ್ದೆಯಿಂದ ಅವರನ್ನು ಕೈಬಿಡಲಾಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ತರೂರ್ 99 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದರು.

ಬಂಡಾಯ
ಕಾಂಗ್ರೆಸ್‌ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು ಎಂದು ಆಗ್ರಹಿಸಿ ಪಕ್ಷದ 23 ಹಿರಿಯ ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುವ ಮೂಲಕ ಬಂಡಾಯದ ಕಹಳೆ ಮೊಳಗಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಬೆಂಬಲಿತ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಕಣಕ್ಕಿಳಿದಿದ್ದರು. ಅವರಿಗೆ ಎದುರಾಳಿಯಾಗಿ ಶಶಿ ತರೂರ್ ಸ್ಪರ್ಧಿಸಿ ಸೋತಿದ್ದರು.

ಬರಹಗಾರ
ಉತ್ತಮ ವಾಗ್ಮಿಯಾಗಿ, ಸಾಹಿತಿಯಾಗಿ ತರೂರ್ ಸಾಕಷ್ಟು ಜನಪ್ರಿಯರು. ಅವರ ಇಂಗ್ಲಿಷ್ ಭಾಷೆಯ ಮೇಲಿನ ಪಾಂಡಿತ್ಯ ಯಾವ ರಾಜಕಾರಣಿಗಳಲ್ಲಿಯೂ ಇಲ್ಲ. ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿರುವ ಅವರು, ಇಂಗ್ಲಿಷ್‌ನಲ್ಲಿ 23 ಪುಸ್ತಕಗಳನ್ನು ಬರೆದಿದ್ದಾರೆ. 6ನೇ ವಯಸ್ಸಿನಲ್ಲಿ ಬರವಣಿಗೆ ಆರಂಭಿಸಿದ್ದ ಅವರು, 10ನೇ ವಯಸ್ಸಿನಲ್ಲಿದ್ದಾಗ ಮೊದಲ ಪತ್ರಿಕಾ ಬರಹ ಪ್ರಕಟಿಸಿದ್ದರು.

ವೈಯಕ್ತಿಕ ಜೀವನ
ಬಂಗಾಳಿ ಮತ್ತು ಕಾಶ್ಮೀರ ನಂಟಿನ ತಿಲೋತ್ತಮಾ ಮುಖರ್ಜಿ ಅವರನ್ನು ತರೂರ್ ಮದುವೆಯಾಗಿದ್ದರು. ತಿಲೋತ್ತಮಾ ಅವರು ರಾಜಕಾರಣಿ ಕೈಲಾಶ್ ನಾಥ್ ಕಟ್ಜು ಅವರ ಮೊಮ್ಮಗಳು. ಅವರಿಗೆ ಕನಿಷ್ಕ್ ಮತ್ತು ಇಶಾನ್ ಎಂಬ ಅವಳಿ ಗಂಡುಮಕ್ಕಳು. ಪ್ರಸ್ತುತ ತಿಲೋತ್ತಮಾ ಅವರು ನ್ಯೂಯಾರ್ಕ್ ವಿವಿಯಲ್ಲಿ ಪ್ರೊಫೆಸರ್ ಆಗಿದ್ದಾರೆ. 2007ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುವ ಕೆನಡಾ ರಾಯಭಾರಿ ಕ್ರಿಸ್ಟಾ ಜೈಲ್ಸ್ ಅವರನ್ನು ಮದುವೆಯಾದರು. ಇದು ಅಲ್ಪ ಕಾಲದಲ್ಲಿಯೇ ಮುರಿದುಬಿದ್ದಿತು. 2010ರ ಆಗಸ್ಟ್‌ನಲ್ಲಿ ದುಬೈ ಮೂಲದ ಉದ್ಯಮಿ ಸುನಂದಾ ಪುಷ್ಕರ್ ಅವರನ್ನು ಮದುವೆಯಾದರು. ಸುನಂದಾ ಅವರಿಗೂ ಅದು ಮೂರನೇ ವಿವಾಹ. ಅವರಿಗೆ ಶಿವ್ ಮೆನನ್ ಎಂಬ ಮಗನಿದ್ದ. 2014ರ ಜನವರಿ 17ರಂದು ಸುನಂದಾ ಅವರು ಹೊಸದಿಲ್ಲಿಯ ಹೋಟೆಲ್ ಒಂದರಲ್ಲಿ ನಿಗೂಢವಾಗಿ ಸಾವಿಗೀಡಾದರು. ತರೂರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ಬಳಿಕ ಅವರು ಖುಲಾಸೆಗೊಂಡರು.

ಶಶಿ ತರೂರ್ ಸಂಪತ್ತು
ಶಶಿ ತರೂರ್ ಅವರು 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಅವರ ಬಳಿ 35 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಆದರೆ ಯಾವುದೇ ಸಾಲ ಹೊಂದಿಲ್ಲ. 34 ಕೋಟಿ ರೂ ಚರ ಆಸ್ತಿ ಹಾಗೂ 1 ಕೋಟಿ ರೂ ಮೊತ್ತದ ಸ್ಥಿರ ಆಸ್ತಿ ಹೊಂದಿದ್ದಾರೆ. ಇದರಲ್ಲಿ 5 ಲಕ್ಷ ರೂ ಮೌಲ್ಯದ ಕೃಷಿ ಭೂಮಿ ಮತ್ತು 95 ಲಕ್ಷ ರೂ ಮೌಲ್ಯದ ಮನೆ ಸೇರಿದೆ.

ಶಶಿ ತರೂರ್ ಚುನಾವಣಾ ಫಲಿತಾಂಶ 

ವರ್ಷಚುನಾವಣೆಸ್ಥಾನಕ್ಷೇತ್ರಫಲಿತಾಂಶ
2024ಲೋಕಸಭಾ ಚುನಾವಣೆಎಂಪಿತಿರುವನಂತಪುರಂ
awaited
2019ಲೋಕಸಭಾ ಚುನಾವಣೆಎಂಪಿThiruvananthapuram
won

ಶಶಿ ತರೂರ್ ಪ್ರತಿಸ್ಫರ್ಧಿ ವಿವರ

ಕ್ಷೇತ್ರ ವ್ಯಾಪ್ತಿಯ ವಿವರ : ತಿರುವನಂತಪುರಂ (ಕೇರಳ)
ಶಶಿ ತರೂರ್
CONGawaited
ಅಭ್ಯರ್ಥಿ ಹೆಸರುಫಲಿತಾಂಶ
ಪನ್ನಿಯನ್ ರವೀಂದ್ರನ್
CPIawaited
ರಾಜೀವ್ ಚಂದ್ರಶೇಖರ್
BJPawaited
ಜೆಜೆ ರಸೆಲ್
INDawaited
ನಂದವನಂ ಸುಶೀಲನ್
INDawaited
ಎಸ್ ಮಿನಿ
SUCI(C)awaited
ಅಡ್ವೊಕೇಟ್‌ ರಾಜೇಂದ್ರನ್
BSPawaited
ಚಲೈ ಮೋಹನನ್
INDawaited
ಶಶಿ ಕೊಂಗಪಲ್ಲಿ
INDawaited
ಶಾಜು ಪಳಿಯೋಡು
INDawaited
ಅಡ್ವೊಕೇಟ್‌ ಶೈನ್ ಲಾಲ್ ಎಂಪಿ
INDawaited
ಎಂಎಸ್ ಸುಬಿ
INDawaited
NOTA
NOTAawaited