Please enable javascript.kantara movie reviewKantara Review: ಕಾನನದೊಳಗೆ ರಣ ರೋಚಕತೆ; ಕಾಂತಾರದಲ್ಲಿ ಬೆರಗುಗೊಳಿಸುವ ಕರಾವಳಿಯ ಅಸ್ಮಿತೆ, Rating:{3.5/5} , rishab shetty kishore sapthami gowda starrer kantara movie review rating in kannada, Rating:{3.5/5} : ರಿಷಬ್ ಶೆಟ್ಟಿ,ಕಿಶೋರ್,ಅಚ್ಯುತ್ ಕುಮಾರ್,ಸಪ್ತಮಿ ಗೌಡ,ಪ್ರಕಾಶ್ ತುಮ್ಮಿನಾಡು,ಮಾನಸಿ ಸುಧೀರ್,ಪ್ರಮೋದ್ ಶೆಟ್ಟಿ Star | Vijay Karnataka

ಸಿನಿಮಾ ವಿಮರ್ಶೆ

Kantara Review: ಕಾನನದೊಳಗೆ ರಣ ರೋಚಕತೆ; ಕಾಂತಾರದಲ್ಲಿ ಬೆರಗುಗೊಳಿಸುವ ಕರಾವಳಿಯ ಅಸ್ಮಿತೆ

Authored byಅವಿನಾಶ್ ಜಿ. ರಾಮ್ | Vijaya Karnataka Web 30 Sep 2022, 9:25 am
ನಟ:
ರಿಷಬ್ ಶೆಟ್ಟಿ,ಕಿಶೋರ್,ಅಚ್ಯುತ್ ಕುಮಾರ್,ಸಪ್ತಮಿ ಗೌಡ,ಪ್ರಕಾಶ್ ತುಮ್ಮಿನಾಡು,ಮಾನಸಿ ಸುಧೀರ್,ಪ್ರಮೋದ್ ಶೆಟ್ಟಿ
ನಿರ್ದೇಶಕ :ರಿಷಬ್ ಶೆಟ್ಟಿಚಿತ್ರದ ವಿಧ:Kannada, Adventure, Drama, Thrillerಅವಧಿ:2 Hrs 29 Minವಿಮರ್ಶೆ

ಕ್ರಿಟಿಕ್‌ ರೇಟಿಂಗ್

3.5/5

ನಿಮ್ಮ ರೇಟಿಂಗ್‌

4.5/5

ಚಿತ್ರಕ್ಕೆ ರೇಟಿಂಗ್ ನೀಡಲು ಸ್ಲೈಡ್ ಮಾಡಿ

0.5 1 1.5 2 2.5 3 3.5 4 4.5 5
2.5/5
ರಿಷಬ್ ಶೆಟ್ಟಿ ಕರಾವಳಿ ಕಡೆಯವರು. ಅಲ್ಲಿನ ಭಾಷೆ, ಸೊಗಡು, ಆಚರಣೆಗಳು, ನಂಬಿಕೆ ಎಲ್ಲದರ ಬಗ್ಗೆಯೂ ತಿಳಿದುಕೊಂಡವರು. ಅದು ಅವರ ಸಿನಿಮಾಗಳಲ್ಲಿಯೂ ಪ್ರತಿಬಿಂಬಿತವಾಗುತ್ತಲೇ ಇರುತ್ತದೆ. ಅವರ ಮೊದಲ ಸಿನಿಮಾ 'ರಿಕ್ಕಿ'ಗೆ ಕರಾವಳಿಯಲ್ಲೇ ನಡೆದ ನೈಜ ಘಟನೆಯೊಂದು ಸ್ಫೂರ್ತಿ ಆಗಿತ್ತು. 'ಸ.ಹಿ.ಪ್ರಾ.ಶಾಲೆ..' ಸಿನಿಮಾಕ್ಕೂ ಕರಾವಳಿ ನಂಟು ಇದೆ. ಇದೀಗ ಅವರು 'ಕಾಂತಾರ' (Kantara Movie Review) ಮೂಲಕ ಕರಾವಳಿ ಸೊಗಡಿನ ಆಳಕ್ಕಿಳಿದು ಸಿನಿಮಾ ಮಾಡಿದ್ದಾರೆ.

ಏನಿದು ಕಾಂತಾರ?
ಕಾಂತಾರ ಎಂದರೆ, ಒಂದು ದಟ್ಟಾರಣ್ಯ, ನಿಗೂಢವಾದ ಅರಣ್ಯ ಎಂಬ ಅರ್ಥವಿದೆ. ಈ 'ಕಾಂತಾರ' ಸಿನಿಮಾದಲ್ಲೂ ಕಾಡು ಸಾಕಷ್ಟು ಪ್ರಮುಖ ಪಾತ್ರವಹಿಸುತ್ತದೆ. ಕಾಡಿನ ಮಕ್ಕಳಾಗಿ, ಅದರ ಜೊತೆಗೆ ಬೆಸೆದುಕೊಂಡು ಬದುಕುವ ಊರಿನ ಜನ ಒಂದು ಕಡೆ. ಕಾಡಿನಿಂದ ಒಂದು ಮರದ ತುಂಡು ಆಚೆ ಹೋಗದಂತೆ, ಕಾಡಿನ ಒಂದಡಿ ಭೂಮಿಯನ್ನು ಯಾರೂ ಒತ್ತುವರಿ ಮಾಡದಂತೆ, ಅರಣ್ಯವನ್ನು ಜತನದಿಂದ ಕಾಯುವ ನಿರ್ಧಾರ ಮಾಡಿದ ಅರಣ್ಯಾಧಿಕಾರಿ ಮತ್ತೊಂದು ಕಡೆ. ಇವರ ಜೊತೆಗೆ ಲಾಲಸೆಯ ಬುದ್ಧಿಯುಳ್ಳ ರಾಜಕಾರಣಿ ದೇವೇಂದ್ರನ (ಅಚ್ಯುತ್) ಕುಕೃತ್ಯಗಳು. ಊರಿನ ಪರವಾಗಿ ಶಿವ (ರಿಷಬ್‌) ಕಾಳಗ ಮಾಡಲು ಸದಾ ಸಿದ್ಧವಾಗಿದ್ದರೆ, ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುವ ಗಂಭೀರವದನದ ಅಧಿಕಾರಿ ಮುರಳಿಧರ್ (ಕಿಶೋರ್) ಯಾರಿಗೂ ಜಗ್ಗುವವನಲ್ಲ. 'ಕಾಂತಾರ'ದಲ್ಲಿ ಅರಣ್ಯ ಭೂಮಿಯ ಒತ್ತುವರಿ, ಒಕ್ಕಲೆಬ್ಬಿಸುವಿಕೆ, ಅರಣ್ಯ ಸಂಪತ್ತಿನ ಲೂಟಿ, ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವಿನ ತಿಕ್ಕಾಟ ಇಂತಹ ಅಂಶಗಳು ಹೈಲೈಟ್ ಆಗುತ್ತವೆ...

ಇದೆಲ್ಲದರ ಜತೆಗೆ ಕರಾವಳಿ ಸಂಸ್ಕೃತಿಯ ಅನಾವರಣ ಈ ಸಿನಿಮಾದ ಪ್ರಮುಖ ಹೈಲೈಟ್. ದೈವ, ಭೂತಾರಾಧನೆ, ಭೂತ ಕೋಲವನ್ನು ತೆರೆಮೇಲೆ ಅಮೋಘವಾಗಿ ತೋರಿಸುತ್ತ ಕರಾವಳಿ ಜನರ ಧಾರ್ಮಿಕ ನಂಬಿಕೆಗಳು, ಅಲ್ಲಿನ ಜನರ ಭಾವನೆಗಳನ್ನು ಅತ್ಯುತ್ತಮವಾಗಿ ತೋರಿಸುವ ಯತ್ನವನ್ನು ರಿಷಬ್ ಮಾಡಿದ್ದಾರೆ. ಈ ಆಚರಣೆಗಳಿಗೂ ಮತ್ತು ಅರಣ್ಯದ ಕಥೆಗೂ ಏನು ಕನೆಕ್ಷನ್ ಅನ್ನೋದನ್ನು ಸಿನಿಮಾದಲ್ಲಿ ನೋಡಿಯೇ ತಿಳಿಯಬೇಕು.

ಕಾಂತಾರದಲ್ಲಿ ಮೇಕಿಂಗ್ ಹೈಲೈಟ್
ನಿರ್ದೇಶಕ ರಿಷಬ್ ಈ ಬಾರಿ ಮೇಕಿಂಗ್‌ಗೆ ಜಾಸ್ತಿ ಪ್ರಾಶಸ್ತ್ಯ ನೀಡಿದ್ದಾರೆ. ಚಿತ್ರದ ಪ್ರತಿ ಫ್ರೇಮ್‌ ಸುಂದರವಾಗಿಸಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ ಕಥೆಯ ಆಶಯಕ್ಕಿಂತಲೂ ಮೇಕಿಂಗ್ ಹೈಲೈಟ್ ಎನಿಸಿಕೊಳ್ಳುತ್ತದೆ. ನಾಯಕನನ್ನು ಕಂಡರೆ ಸಿಡುಕುವ ನಾಯಕಿ, ಒಂದೇ ದೃಶ್ಯದಲ್ಲಿ ಪ್ರೀತಿಯಲ್ಲಿ ಬೀಳುವುದು ನಾಟಕೀಯ ಭಾವ ಮೂಡಿಸುತ್ತದೆ. ಮುಂದೇನಾಗಬಹುದು ಎಂದು ಕೆಲವೊಮ್ಮೆ ಊಹಿಸಬಹುದು, ಆದರೆ ಅಂಥ ದೃಶ್ಯಗಳನ್ನೂ ಕೂಡ ರಮಣೀಯವಾಗಿ ಚಿತ್ರಿಸಿ, ರಿಷಬ್ ಬೆರಗು ಮೂಡಿಸುತ್ತಾರೆ. ಜಾತಿ ಪದ್ಧತಿ ಬಗ್ಗೆಯೂ 'ಕಾಂತಾರ' ಮಾತನಾಡುತ್ತದೆ.

Rishab Shetty: ಸಿನಿಪ್ರಿಯರ ಮನಗೆದ್ದ 'ಕಾಂತಾರ' ಚಿತ್ರದ 'ಸಿಂಗಾರ ಸಿರಿಯೆ' ಹಾಡು

ತಂತ್ರಜ್ಞರಿಗೆ ವಿಶೇಷ ಮನ್ನಣೆ
ರಿಷಬ್‌ ಸಿನಿಮಾಗಳಲ್ಲಿ ಹಾಸ್ಯಕ್ಕೆ ಪ್ರತ್ಯೇಕ ಟ್ರ್ಯಾಕ್ ಇರುವುದಿಲ್ಲ. ಪಾತ್ರಗಳೇ ಹಾಸ್ಯದ ಕೊರತೆಯನ್ನು ನೀಗಿಸುತ್ತವೆ. ಇಲ್ಲಿಯೂ ಅದೇ ಮ್ಯಾಜಿಕ್ ಮರುಕಳಿಸಿದೆ. ಆರಂಭದಿಂದಲೂ ರಭಸವಾಗಿ ಹರಿಯುವ ನದಿಯಂತೆ ಸಾಗುವ ಸಿನಿಮಾದ ನಿರೂಪಣೆ ಕೊನೇ 20 ನಿಮಿಷ ಮಾತ್ರ ಜಲಪಾತದಂತೆ ಧುಮ್ಮಿಕ್ಕುತ್ತದೆ. ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಬಹಳ ಕಾಲ ತಮ್ಮ ಕೆಲಸ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ದೃಶ್ಯದ ಸಾಹಸ ನಿರ್ದೇಶನ ಕೂಡ ಅದ್ಭುತವಾಗಿದೆ.

ಮಾಸ್ ಸಿನಿಮಾ ‘ಕಾಂತಾರ’ದಲ್ಲಿ ಡ್ಯೂಪ್ ಇಲ್ಲದೆ ಫೈಟ್ ಮಾಡಿದ್ದಾರೆ ರಿಷಬ್ ಶೆಟ್ಟಿ

ತೆರೆಮೇಲೆ ಅಬ್ಬರಿಸಿ ಬೊಬ್ಬಿರಿದ ರಿಷಬ್‌
ನಿಜಕ್ಕೂ ನಟನಾಗಿ ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಅಚ್ಚರಿಯನ್ನೇ ನೀಡಿದ್ದಾರೆ. ರಿಷಬ್‌ ನಟನೆಯ ಸಿನಿಮಾಗಳಲ್ಲಿ ಹಾಸ್ಯವೇ ಹೈಲೈಟ್ ಆಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ಆಂಗ್ರಿಯಂಗ್‌ಮ್ಯಾನ್ ಲುಕ್‌ನಲ್ಲಿ ಹೊಸ ಥರದ ಪಾತ್ರಕ್ಕೆ ಸಮರ್ಥವಾಗಿ ಜೀವ ತುಂಬಿದ್ದಾರೆ. ಹಾಗೆಯೇ, ಕೊನೆಯ 20 ನಿಮಿಷ ಯಾರೂ ಊಹಿಸಲಾರದಂತಹ ನಟನೆಯನ್ನು ಮಾಡಿದ್ದಾರೆ. ಕೊನೆಯ ಆರು ಬಾಲಿಗೆ ಆರು ಸಿಕ್ಸರ್ ಬಾರಿಸುವ ಬ್ಯಾಟ್ಸ್‌ಮನ್‌ನಂತೆ ತಮ್ಮ ನಟನೆಗೆ ನೋಡುಗರಿಂದ ಭರ್ಜರಿಯಾಗಿ ಶಿಳ್ಳೆ ಚಪ್ಪಾಳೆಯನ್ನು ಗಿಟ್ಟಿಸುತ್ತಾರೆ ರಿಷಬ್. ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಅವರದ್ದು ಸಹಜಾಭಿನಯ. ಕಿಶೋರ್‌ ಎಂದಿನಂತೆ ತಮ್ಮ ಪಾತ್ರಕ್ಕೆ ಪರಿಪೂರ್ಣತೆಯನ್ನು ತಂದುಕೊಟ್ಟಿದ್ದಾರೆ. ಹಾಗೆಯೇ ಅಚ್ಯುತ್ ಕುಮಾರ್ ಕೂಡ ಅದ್ಭುತ ನಟನೆ ಮೂಲಕ ಗುಂಗು ಹಿಡಿಸುತ್ತಾರೆ. ಕಿಶೋರ್‌ ಮತ್ತು ಅಚ್ಯುತ್ ಕುಮಾರ್ ನಟನೆಯನ್ನು ತೆರೆಮೇಲೆ ನೋಡಿ ಆಸ್ವಾದಿಸುವುದೇ ಒಂದು ಖುಷಿ. ಅಮ್ಮನಾಗಿ ಮಾನಸಿ ಸುಧೀರ್ ಇಷ್ಟವಾಗುತ್ತಾರೆ. ಆಗಾಗ ಒನ್ ಲೈನರ್ ಪಂಚಿಂಗ್ ಡೈಲಾಗ್‌ಗಳ ಮೂಲಕ ಪ್ರಕಾಶ್ ತುಮ್ಮಿನಾಡು ಸಖತ್ ಇಷ್ಟವಾಗುತ್ತಾರೆ. ದೀಪಕ್‌ ರೈ ಪಾಣಾಜೆ ನಟನೆ ಕೂಡ ಖುಷಿ ನೀಡುತ್ತದೆ.

ಕೊನೇ ದೃಶ್ಯದಲ್ಲಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಸಂದೇಶವನ್ನು ಬಹಳ ಅರ್ಥಪೂರ್ಣವಾಗಿ ತೆರೆಮೇಲೆ ಹೇಳಿದ್ದಾರೆ ರಿಷಬ್.
ಅವಿನಾಶ್ ಜಿ. ರಾಮ್
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಸಿನಿಮಾ ವಿಮರ್ಶೆ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ