ಆ್ಯಪ್ನಗರ

ಮೈಸೂರು ದಸರಾ 2019: ನಾಡಹಬ್ಬದ ಆಕರ್ಷಣೆ ಅದ್ದೂರಿ ಜಂಬೂ ಸವಾರಿ ಕಣ್ತುಂಬಿಕೊಂಡ ಜನ

ಇಂದು ಮೈಸೂರು ದಸರೆಯ ಕೊನೆ ದಿನ. ಐತಿಹಾಸಿಕ ಜಂಬೂ ಸವಾರಿಯೊಂದಿಗೆ ಮೈಸೂರು ದಸರಾ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. ನಾಡಹಬ್ಬ ದಸರೆಯ ಐತಿಹಾಸಿಕ ಜಂಬೂಸವಾರಿಯನ್ನು ಜನರು ಕಣ್ತುಂಬಿಕೊಂಡರು.

Vijaya Karnataka Web 8 Oct 2019, 6:38 pm
ಮೈಸೂರು: ಐತಿಹಾಸಿಕ ಜಂಬೂ ಸವಾರಿ ಮೈಸೂರು ದಸರಾ 2019 ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ. ಮೈಸೂರು ಅರಮನೆಯಿಂದ ಹೊರಟ ಅಂಬಾರಿ ಹೊತ್ತ ಆನೆಗಳು, ಬನ್ನಿ ಮಂಟಪ ತಲುಪುವ ಮೂಲಕ ಸಾಂಪ್ರದಾಯಿಕ ದಸರಾ ಕಾರ್ಯಕ್ರಮ ಸಂಪನ್ನವಾಯ್ತು.
Vijaya Karnataka Web header


750 ಕೆಜಿ ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆ, ಮೈಸೂರು ನಗರದಲ್ಲಿ ರಾಜಗಾಂಭೀರ್ಯದಿಂದ ಸಾಗಿತು. ಅಂಬಾರಿಯೊಳಗಿರುವ ತಾಯಿ ಚಾಮುಂಡೇಶ್ವರಿಯನ್ನು ಜನ ಕಣ್ತುಂಬಿಕೊಂಡರು. ಅರ್ಜುನನ ಬಲ ಭಾಗದಲ್ಲಿ ಕಾವೇರಿ, ಎಡಭಾಗದಲ್ಲಿ ವಿಜಯ್ ಆನೆಗಳು ಅಂಬಾರಿಯ ರಕ್ಷಣೆಗೆ ನಿಂತಿದ್ದವು. ಅರಮನೆಯಿಂದ ಹೊರಟ ಅಂಬಾರಿ, ಸಂಪ್ರದಾಯದಂತೆ ಸಯ್ಯಾಜಿರಾವ್ ವೃತ್ತ, ಬಂಬೂ ಬಜಾರ್ ಮಾರ್ಗವಾಗಿ ಬನ್ನಿ ಮಂಟಪ ತಲುಪಿತು.


ಇದಕ್ಕೂ ಮುನ್ನ ಅರಮನೆ ಆವರಣದಿಂದ ಹೊರಬಂದಜಂಬೂ ಸವಾರಿಗೆ, ಸಿಎಂ ಯಡಿಯೂರಪ್ಪ ಪುಷ್ಪಾರ್ಚನೆ ಸಲ್ಲಿಸಿದರು. ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ, ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್, ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಕೂಡಾ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಪುಷ್ಪಾರ್ಚನೆ ವೇದಿಕೆಯಿಂದ ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆ ಮೆರವಣಿಗೆ ಹೊರಟಿತು.


ಅರಮನೆಯಿಂದ ಹೊರಬಂದ ಸಂದರ್ಭದಲ್ಲಿ ಅಂಬಾರಿ ಬಲಕ್ಕೆ ಒಂದಷ್ಟು ಆತಂಕ ಸೃಷ್ಟಿಸಿತು. ಕೂಡಲೇ ವಿಶೇಷ ಮಾವುತರು ಹಗ್ಗ ಕಟ್ಟಿ ಹಿಡಿದು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದರು.


ಅರಮನೆಯಿಂದ ಅಂಬಾರಿ ಹೊರಡುವ ಮುನ್ನ, ವಾದ್ಯ ಮೇಳದ ನಡುವೆ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯಧುವೀರ್ ಕುಟುಂಬಕ್ಕೆ ಅರ್ಜುನ ಆನೆ ನಮಿಸಿತು.



ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ತಂಡಗಳು, 30 ಜಿಲ್ಲೆಗಳ 39 ಸ್ತಬ್ಧಚಿತ್ರಗಳು ಅಂಬಾರಿಗೆ ಸಾಥ್ ನೀಡಿದವು. 8ನೇ ಬಾರಿ ಅಂಬಾರಿ ಹೊತ್ತ 59 ವರ್ಷದ ಅರ್ಜುನ, ಕಳೆದ 19 ವರ್ಷಗಳಿಂದ ದಸರಾ ಅಂಬಾರಿ ಆನೆಗಳ ಪಡೆಯಲ್ಲಿದ್ದಾನೆ.


ಸಾಂಸ್ಕೃತಿಕ ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳು ಹೊರಡುವ ಮುನ್ನ ಸಂಪ್ರದಾಯದಂತೆ ನಂದಿ ಧ್ವಜಕ್ಕೆ ಸಿಎಂ ಯಡಿಯೂರಪ್ಪ ಪೂಜೆ ಸಲ್ಲಿಸಿದರು. ಮಧ್ಯಾಹ್ನ 2 ಗಂಟೆಗೆ ಅರಮನೆ ಆವರಣದಲ್ಲಿ ನಡೆದ ಕಾರ್ಯಕ್ರದಲ್ಲಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಡಿಸಿಎಂ ಕಾರಜೋಳ ಕೂಡಾ ಭಾಗಿಯಾಗಿದ್ದರು. ಶುಭ ಮಕರ ಲಗ್ನದಲ್ಲಿ ಯಡಿಯೂರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಪೂಜೆ ಬಳಿಕ 2 ತಂಡಗಳು ನಂದಿಧ್ವಜ ಹೊತ್ತು ಕುಣಿದವು. ಮಲ್ಲೇಶಯ್ಯ ಹಾಗೂ ಮಹದೇವಪ್ಪ ಉಡಿಗಾಲ ನೇತೃತ್ವದ 2 ತಂಡಗಳು ನಂದಿಧ್ವಜ ಹೊತ್ತು ಕುಣಿದವು.


ಕೊನೆಯ ಬಾರಿ ಅಂಬಾರಿ ಹೊರಲಿರುವ ಅರ್ಜುನ, ಯಾರಾಗಲಿದ್ದಾರೆ ಮುಂದಿನ ಕ್ಯಾಪ್ಟನ್?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ