Please enable javascript.ಪ್ರಕೃತಿಯಲ್ಲಿದೆ ಸೌಂದರ‌್ಯ, ಆರೋಗ್ಯ - ಪ್ರಕೃತಿಯಲ್ಲಿದೆ ಸೌಂದರ‌್ಯ, ಆರೋಗ್ಯ - Vijay Karnataka

ಪ್ರಕೃತಿಯಲ್ಲಿದೆ ಸೌಂದರ‌್ಯ, ಆರೋಗ್ಯ

Vijaya Karnataka Web 20 Dec 2012, 4:36 am
Subscribe

ಬಾಹ್ಯ ಹಾಗೂ ಆಂತರಿಕ ಸೌಂದರ‌್ಯ ವೃದ್ಧಿಸುವ ಶಕ್ತಿ ಪ್ರಕೃತಿಗೆ ಇದೆ. ಅದರ ಪ್ರಯೋಜನವನ್ನು ಪಡೆದುಕೊಂಡರೆ ಮಾತ್ರ ಉತ್ತಮ ವ್ಯಕ್ತಿತ್ವ ಪಡೆಯಲು ಸಾಧ್ಯ.

ಪ್ರಕೃತಿಯಲ್ಲಿದೆ ಸೌಂದರ‌್ಯ, ಆರೋಗ್ಯ

* ಡಾ. ವೆಂಕಟ್ರಮಣ ಹೆಗಡೆ
ಸೌಂದರ‌್ಯ ಜಗತ್ತನ್ನೇ ಆಳುತ್ತದೆ ಅನ್ನೋ ಭ್ರಮೆಗೆ ಬಿದ್ದವರು ಸೌಂದರ‌್ಯದ ಹಿಂದೆ ಸುತ್ತುತ್ತಲೇ ಇರುತ್ತಾರೆ. ಸುಂದರ ವದನಕ್ಕಾಗಿ ಅಥವಾ ಅದರ ಪೋಷಣೆಗಾಗಿ ಸದಾ ಹಾತೊರೆಯುತ್ತಾರೆ. ಆದರೆ ಸೌಂದರ‌್ಯ ಅಂದರೆ ಬಣ್ಣ, ಎತ್ತರ, ಗಾತ್ರ, ಕೂದಲು, ಹುಬ್ಬು, ಕಣ್ಣು, ಮೂಗಿನಲ್ಲಿ ಅಡಗಿಲ್ಲ. ಇದರಿಂದಲೇ ಒಂದಿಡೀ ವ್ಯಕ್ತಿತ್ವವನ್ನು ಅಳೆಯಲಿಕ್ಕೆ ಆಗುವುದೂ ಇಲ್ಲ.

ಬಾಹ್ಯದ ಜತೆ ಆಂತರಿಕ ಸೌಂದರ್ಯವೂ ಮುಖ್ಯ. ಆಂತರಿಕ ಸೌಂದರ‌್ಯಕ್ಕೆ ನಡೆನುಡಿಯಷ್ಟೆ ಅಲ್ಲ, ಆರೋಗ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕ, ಮಾನಸಿಕ, ಭಾವನಾತ್ಮಕವಾಗಿ ಒಬ್ಬ ವ್ಯಕ್ತಿ ಸಮತೋಲನ ಹೊಂದಿದ್ದರೆ ಮಾತ್ರ ಆತನನ್ನು ಸಂಪೂರ್ಣ ಆರೋಗ್ಯವಂತ ಎನ್ನಬಹುದು.

ಅಷ್ಟೆ ಅಲ್ಲ, ಇಂದು ಪ್ರಪಂಚದಲ್ಲಿ ಕಾಡುತ್ತಿರುವ ಅರ್ಧಕ್ಕಿಂತಲೂ ಹೆಚ್ಚು ರೋಗಗಳು ಮನೋದೈಹಿಕ ರೋಗಗಳು ಎಂದು ಸಂಶೋಧನೆಗಳು ಹೇಳುತ್ತಿವೆ. ಹೆಚ್ಚಿದ ಮಾನಸಿಕ ಒತ್ತಡದಿಂದ ಕೆಲವು ಕಾಯಿಲೆಗಳು ಪ್ರಾರಂಭವಾದರೆ ಇನ್ನು ಕೆಲವು ಟೆನ್ಶನ್‌ನಿಂದ ಉಲ್ಬಣಗೊಳ್ಳುತ್ತವೆ. ಅನಗತ್ಯ ಚಿಂತೆ, ನಕಾರಾತ್ಮಕ ಯೋಚನೆ, ಆತ್ಮ ವಿಶ್ವಾಸ ಕೊರತೆ ನಿಮ್ಮ ಆರೋಗ್ಯಕ್ಕವಷ್ಟೆ ಅಲ್ಲ, ಸೌಂದರ‌್ಯದ ಮೇಲೂ ಪ್ರಭಾವ ಬೀರುತ್ತದೆ. ದೈನಂದಿನ ಜೀವನದಲ್ಲಿ ಪ್ರಕತಿ ಚಿಕಿತ್ಸೆಯಲ್ಲಿ ಕೆಲವು ಸರಳ ಉಪಾಯ ಮತ್ತು ನೈಸರ್ಗಿಕ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡರೆ ಆರೋಗ್ಯ-ಸೌಂದರ್ಯ ಎರಡನ್ನೂ ಕಾಪಾಡಿಕೊಳ್ಳಲು ಸಾಧ್ಯ.

ಮಾನಸಿಕ ಒತ್ತಡ ನಿವಾರಣೆಗೆ
ಮಾನಸಿಕ ಒತ್ತಡ ನಿವಾರಿಸಿಕೊಳ್ಳಬೇಕೆಂದರೆ ವೈದ್ಯರನ್ನು ಸಂಪರ್ಕಿಸಿ ಯಾವುದೋ ಔಷಧದ ಮೊರೆ ಹೋಗಬೇಕಿಲ್ಲ. ಸ್ವತಃ ನೀವೆ ಮಾನಸಿಕ ಸಮಸ್ಯೆಯಿಂದ ಹೊರಬರಬಹುದು. ಪ್ರತಿದಿನ ಕನಿಷ್ಠ ಅರ್ಧ ಘಂಟೆ ಯೋಗಾಸನ, ಪ್ರಾಣಾಯಾಮ ಮಾಡಿ. ನೇರವಾಗಿ ಕುಳಿತು ಉಸಿರನ್ನು ಗಮನಿಸುವ ಪ್ರಯತ್ನ ಮಾಡಿ. ದೀರ್ಘವಾಗಿ ಉಸಿರಾಡುತ್ತಾ ಉಸಿರಿನೊಂದಿಗೆ ಹೊಟ್ಟೆಯ ಭಾಗದ ಚಲನೆಯನ್ನು ಹೋಲಿಸಿ ನೋಡಿ. ಇದನ್ನು 10ರಿಂದ 15 ನಿಮಿಷಗಳ ವರೆಗೆ ಮಾಡಿ. ಗಾಳಿಯನ್ನು ಒಳಗೆ ತೆಗೆದುಕೊಳ್ಳುವಾಗ ಶುದ್ಧ ಆಮ್ಲಜನಕ ತೆಗೆದುಕೊಳ್ಳುತ್ತಿರುವಂತೆ ಆನಂದವನ್ನು, ತೇಜಸ್ಸನ್ನು ಹೊಂದುತ್ತಿರುವಂತೆ ಗಾಢ ಅನುಭೂತಿಗೆ ಒಳಗಾಗಿ, ಗಾಳಿಯನ್ನು ಬಿಟ್ಟುಬಿಡುವಾಗ ನಿಮ್ಮಲ್ಲಿನ ವಥಾ ಶಕ್ತಿ, ನಕಾರಾತ್ಮಕ ಭಾವೋದ್ವೇಗಗಳು ಎಲ್ಲವೂ ಹೊರಹೋಗುತ್ತಿರುವಂತೆ ಭಾವಿಸಿ. ಆತ್ಮ ವಿಶ್ವಾಸ ವದ್ಧಿಸಿಕೊಳ್ಳಿ. ಆತ್ಮೀಯರೊಂದಿಗೆ ಸಮಯ ಕಳೆಯಿರಿ. ಒಳ್ಳೆಯ ಸಿನಿಮಾ ನೋಡಿ.

ಸೌಂದರ‌್ಯ ವೃದ್ಧಿಗೆ
ಎ ಜೀವಸತ್ವ: ಕಣ್ಣು ಹಾಗೂ ಚರ್ಮದ ಆರೋಗ್ಯ ಕಾಪಾಡಲು ಸಹಾಯಕ. ಇದರ ಕೊರತೆಯಿಂದ ಮೊಡವೆಗಳು ಇಮ್ಮಡಿಯಾಗುತ್ತವೆ. ಕೂದಲು ಕಳಾಹೀನವಾಗುತ್ತದೆ. ದಷ್ಟಿ ಮಂದವಾಗುತ್ತದೆ. ಎ ಜೀವಸತ್ವದ ನೈಸರ್ಗಿಕ ಮೂಲ-ಕ್ಯಾರೆಟ್, ಪಪ್ಪಾಯ, ತಾಜಾ ಸೊಪ್ಮ್ಪಗಳು, ಮಾವಿನಹಣ್ಣು.

ಬಿ ಜೀವಸತ್ವ: ಈ ಗುಂಪಿನಲ್ಲಿರುವ ಎಲ್ಲ ಜೀವಸತ್ವಗಳು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಪೂರಕ. ಇವು ಯೌವನ ಹಾಗೂ ಕೂದಲು ಬಿಳಿಯಾಗುವುದನ್ನು ಕಾಪಾಡಲು ಸಹಾಯಕ. ಇವುಗಳ ನೈಸರ್ಗಿಕ ಮೂಲ-ಗೋಧಿ, ದ್ವಿದಳ ಧಾನ್ಯಗಳು, ಏಕದಳ ಧಾನ್ಯಗಳು, ಎಣ್ಣೆ ಬೀಜಗಳು, ಹಸಿರು ಸೊಪ್ಪುಗಳು.

ಸಿ ಜೀವಸತ್ವ: ಇದು ಹಲ್ಲು, ಕೂದಲು, ಕಣ್ಣು, ಚರ್ಮ ಇವುಗಳ ಆರೋಗ್ಯ ಕಾಪಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಗಣನೀಯವಾಗಿ ವರ್ಧಿಸುತ್ತದೆ. ಇದರ ಕೊರತೆಯಿಂದ ಒಣ ಚರ್ಮ ಕಾಣಿಸಿಕೊಳ್ಳುತ್ತದೆ. ಇದರ ನೈಸರ್ಗಿಕ ಮೂಲ:ನಿಂಬೆ, ಮೂಸಂಬಿ,ಕಿತ್ತಳೆ, ದ್ರಾಕ್ಷಿ, ನೆಲ್ಲಿಕಾಯಿ, ಹಸಿರು ತರಕಾರಿ ಮತ್ತು ಮೊಳಕೆ ಬಂದ ಹೆಸರುಕಾಳು.

ಡಿ ಜೀವಸತ್ವ: ಹಲ್ಲು, ಉಗುರು, ಎಲುಬಿನ ಆರೋಗ್ಯಕ್ಕೆ ಇದು ಅತ್ಯಗತ್ಯ. ಇದರ ಕೊರತೆಯಿಂದ ಹಲ್ಲಿನ ಹುಳುಕು ಪ್ರಾರಂಭವಾಗುತ್ತದೆ. ಇದರ ನೈಸರ್ಗಿಕ ಮೂಲ-ಸೂರ್ಯನ ಕಿರಣ, ಮೊಳಕೆಕಾಳು, ಹಾಲು,ಬೆಣ್ಣೆ.

ಪ್ರೊಟೀನ್:ಚರ್ಮ, ಹಲ್ಲು ಉಗುರುಗಳ ಆರೋಗ್ಯಕ್ಕೆ ಅಗತ್ಯ. ಇದು ಹಾಲು, ಬೀಜಗಳು, ಮೊಳಕೆ ಕಾಳುಗಳಲ್ಲಿ ಹೇರಳವಾಗಿ ದೊರೆಯುತ್ತದೆ.

ಮೇದಸ್ಸು: ಹಲವು ಜೀವಸತ್ವಗಳು ದೇಹದಲ್ಲಿ ಕರಗಲು ಇದು ಅಗತ್ಯ. ಚರ್ಮ ಹಾಗೂ ಕೂದಲಿನ ಮದುತ್ವಕ್ಕೂ ಇದು ಅಗತ್ಯ.

ಕ್ಯಾಲ್ಸಿಯಂ ಮತ್ತು ಫಾಸ್ಥರಸ್: ಈ ಲವಣಗಳು ಹಲ್ಲು, ಕೂದಲು, ಉಗುರು ಹಾಗೂ ಎಲುಬಿನ ಆರೋಗ್ಯಕ್ಕೆ ಅತ್ಯವಶ್ಯ. ಕ್ಯಾಲ್ಸಿಯಂ ಕೊರತೆಯಿಂದ ಹಲ್ಲು ಹಾಳಾಗುತ್ತದೆ. ಇದು ಹಾಲು, ಸೊಪ್ಪು, ಕಿತ್ತಳೆ, ನಿಂಬೆ, ಧಾನ್ಯ, ಕಾಳುಗಳು, ಬೀಜ, ಹಣ್ಣುಗಳಲ್ಲಿ ಲಭ್ಯ.

ನೀರು: ಪ್ರತಿನಿತ್ಯ ಕನಿಷ್ಠ ಮೂರು ಲೀ.ನೀರು ಕುಡಿಯಬೇಕು. ಇದು ದೇಹದಲ್ಲಿ ಸಂಗ್ರಹವಾಗಿರುವ ವಿಷವಸ್ತುಗಳನ್ನು ವಿಸರ್ಜನಾಂಗಗಳ ಮೂಲಕ ಹೊರಹಾಕಲು ಸಹಾಯಕ. ಮೊಡವೆಗಳ ನಿವಾರಣೆಗೂ ಸಹಕಾರಿ.

ನಿತ್ಯದ ಆಹಾರದಲ್ಲಿ ಪ್ರಕತಿದತ್ತ ಪದಾರ್ಥಗಳು ಜಾಸ್ತಿ ಇರಬೇಕು. ತಾಜಾ ತರಕಾರಿ, ಸೊಪ್ಪು, ಹಣ್ಣುಗಳು,ಮೊಳಕೆ ಬರಿಸಿದ ಕಾಳು ಮುಂತಾದವುಗಳನ್ನು ಹೆಚ್ಚೆಚ್ಚು ಉಪಯೋಗಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ