Please enable javascript.ನೆನಪೊಂದೋ ಕೊನೆತನಕ - ನೆನಪೊಂದೋ ಕೊನೆತನಕ - Vijay Karnataka

ನೆನಪೊಂದೋ ಕೊನೆತನಕ

Vijaya Karnataka Web 16 Jul 2014, 4:59 am
Subscribe

ಆತ ಪುನಃ ಬರುತ್ತಾನೆ ಅನ್ನುವ ಒಂದಿನಿತೂ ಭರವಸೆಯ ನೆರಿಗೆ ನನ್ನ ಹಣೆಯ ಮೇಲೆ ಏಳುವುದಿಲ್ಲ. ತೊರೆದು ಹೋದ ಅನ್ನುವ ನೋವು ನನ್ನನ್ನು ಮತ್ತಷ್ಟು ವಿಚಲಿತಳನ್ನಾಗಿಸುವುದಿಲ್ಲ. ಇಷ್ಟು ಕಾಲ ಜತೆಗಿದ್ದ ಅನ್ನುವ ನೆನಪುಗಳೇ ಬದುಕಿನುದ್ದಕ್ಕೂ ಸಾಕಾಗುವಷ್ಟಿವೆ.

ನೆನಪೊಂದೋ ಕೊನೆತನಕ
* ರಾಜೇಶ್ವರಿ
ಆತ ಪುನಃ ಬರುತ್ತಾನೆ ಅನ್ನುವ ಒಂದಿನಿತೂ ಭರವಸೆಯ ನೆರಿಗೆ ನನ್ನ ಹಣೆಯ ಮೇಲೆ ಏಳುವುದಿಲ್ಲ. ತೊರೆದು ಹೋದ ಅನ್ನುವ ನೋವು ನನ್ನನ್ನು ಮತ್ತಷ್ಟು ವಿಚಲಿತಳನ್ನಾಗಿಸುವುದಿಲ್ಲ. ಇಷ್ಟು ಕಾಲ ಜತೆಗಿದ್ದ ಅನ್ನುವ ನೆನಪುಗಳೇ ಬದುಕಿನುದ್ದಕ್ಕೂ ಸಾಕಾಗುವಷ್ಟಿವೆ.

ಮತ್ತೆ ಬದುಕಲ್ಲಿ ಬಾರದ ಇನಿಯನಿಗೆ ಕೆಲ ನಿಮಿಷ, ಒಂದಿಷ್ಟು ತಾಸು, ಅದೆಷ್ಟೋ ದಿನ, ತಿಂಗಳು, ವರ್ಷಗಳೇ ಕಾದರೂ ಪ್ರಯೋಜನವಿಲ್ಲ ಅನ್ನುವುದು ಸತ್ಯ. ನಾನು ಪ್ರೇಯಸಿಯೋ, ಪರಿತ್ಯಕ್ತೆ ಅಥವಾ ಭಕ್ತೆಯೋ ನನ್ನಳಗೊಬ್ಬಳು ರಾಧೆ ಇದ್ದಾಳೋ ಗೊತ್ತಿಲ್ಲ. ಆದರೆ ಅವನ ನೆನಪು ಒಮ್ಮೊಮ್ಮೆ ನಿರ್ಭಾವುಕಳನ್ನಾಗಿ ಮಾಡುತ್ತದೆ. ರೆಪ್ಪೆ ಮುಚ್ಚಿದರೆ ಕಣ್ಣೀರಿನಲ್ಲಿ ಎಲ್ಲವೂ ಜಾರಿ ಹೋಗುವುದೇನೋ ಅನ್ನುವ ಮಟ್ಟಿಗೆ ಅವನೊಂದಿಗೆ ಕಳೆದ ಕ್ಷಣಗಳನ್ನೆಲ್ಲ ರೆಪ್ಪೆಯಲ್ಲೇ ಮುಚ್ಚಿಡುವ ಪ್ರಯತ್ನ ಮಾಡುತ್ತೇನೆ.

ನಾನು ಪ್ರೀತಿ ಕೊಟ್ಟೆ. ಅವನು ನೆನಪು ಬಿಟ್ಟು ಹೊರಟು ಹೋದ. ಆದರೆ ಅವನು ನನ್ನವನಲ್ಲ ಅನ್ನುವ ಮಾತೇ ನನ್ನ ಒಂದಿಡೀ ದೇಹವನ್ನೇ ಹಿಂಡಿ ಹಿಪ್ಪೆ ಮಾಡಿದಂತಹ ಯಮಯಾತನೆ ನೀಡುತ್ತದೆ.

ಅವನು ನನ್ನ ಪ್ರೀತಿ ನೆನೆದು ಕೊರಗುತ್ತಿರಬಹುದಾ? ನನ್ನ ಸನಿಹಕ್ಕಾಗಿ ಹಂಬಲಿಸುತ್ತಿರಬಹುದು. ಒಂದೇಒಂದು ಸಲ ಭೇಟಿಯಾಗಿ ಕಣ್ತುಂಬಿಸಿಕೊಳ್ಳಬೇಕು ಅಂತೆಲ್ಲ ಅವನಿಗೂ ಅನಿಸಬಹುದು. ಆದರೆ ವಿಧಿ ಬರಹವೇ ಹಾಗಿದ್ದ ಮೇಲೆ ನನ್ನ ಪ್ರೀತಿಸಿ ದೂರವಾದವನನ್ನು ಶಪಿಸಿ ಪ್ರಯೋಜವಿಲ್ಲ. ಇವತ್ತು ಅವನು ನನ್ನೊಂದಿಗಿಲ್ಲ. ಇನ್ಯಾರದ್ದೋ ಮಡಿಲಲ್ಲಿ ಮಗುವಾಗಿ ಮಲಗಿರಬಹುದು. ಅವಳ ಪ್ರೀತಿಯ ಇಬ್ಬನಿಯಲ್ಲಿ ನಾನು ಅವನ ಪಾಲಿಗೆ ಬರೀ ಮಬ್ಬುಮಬ್ಬಾಗಿ ಕಾಣಬಹುದು. ಆದರೆ ನನಗೆ ಹಾಗಲ್ಲ. ಆತನ ನೆನಪುಗಳ ಜತೆ ಬದುಕುವ ಅನಿವಾರ‌್ಯ ಅನ್ನುವುದಕ್ಕಿಂತ ಇಷ್ಟಪಟ್ಟೆ ಆರಿಸಿಕೊಂಡ ಮಾರ್ಗ ಅದು.

ಪ್ರೀತಿ ಅಂದರೇನು ಅಂತಲೇ ಗೊತ್ತಿಲ್ಲದೆ ಬೆಳೆದವಳು ನಾನು. ನನ್ನ ಹುಟ್ಟು ಅಪ್ಪನ ಪಾಲಿನ ದುರದೃಷ್ಟವಾಗಿತ್ತು. ಅಮ್ಮನ ಅಸಹಾಯಕತೆ ನನ್ನನ್ನು ಅವಳಿಂದಲೂ ದೂರವೇ ಉಳಿಸಿಬಿಟ್ಟಿತು. ಬೇಡದ ಮಗಳಾಗಿ ಬೆಳೆದ ನನ್ನನ್ನು ದೂರದ ಹಾಸ್ಟೆಲ್‌ನಲ್ಲಿ ಸೇರಿಸಿ ಅಪ್ಪ ತನ್ನ ಕರ್ತವ್ಯ ಮುಗಿಸಿದ. ಓದಿನ ಜತೆಜತೆಯಲ್ಲಿ ಮೈಮನ ಅರಳಿ ನಿಂತಿತು. ಹೊಸ ಭಾವ ನನ್ನನ್ನು ಬಂಧಿಸುತ್ತಲೇ ಹೋಯಿತು. ಯೌವನದ ಸಹಜ ಬಯಕೆಯಲ್ಲಿ ನನ್ನ ಪಾಡಿಗೆ ನಾನು ತೇಲುತ್ತಿದ್ದೆ. ಅದೇ ಸಮಯದಲ್ಲಿ ಗೆಳೆಯನ ರೂಪದಲ್ಲಿ ಎದುರಾದವನಲ್ಲಿ ಅನುರಾಗ ಮೊಳಕೆಯೊಡೆದು ನಿಂತಿತು. ಆದರೆ ಈಗಾಗಲೇ ಭಗ್ನಪ್ರೇಮಿ ಅಂದೆನಿಸಿಕೊಂಡಿದ್ದ ಅವನು ನನ್ನ ಪ್ರೀತಿ ಒಪ್ಪಿಕೊಳ್ಳಲಿಲ್ಲ. ನಾನು ಬಿಡಲಿಲ್ಲ. ಅದೇ ಸಮಯಕ್ಕೆ ಅಪಘಾತವಾಗಿ ಆಸ್ಪತ್ರೆ ಸೇರಿದವನ ಸೇವೆಗೆ ನಿಂತವಳಿಗೆ ಅವನನ್ನು ಒಲಿಸಿಕೊಳ್ಳುವ ಯಾವ ಇರಾದೆಯೂ ಇರಲಿಲ್ಲ. ಆ ಕ್ಷಣಕ್ಕೆ ನನ್ನ ಎದುರಿಗಿದ್ದಿದ್ದು ಮಾನವಿಯತೆಯಷ್ಟೆ. ಆದರೆ ಅವನಿಗೆ ಏನನ್ನಿಸಿತೋ. ಅವನು ನನ್ನ ಪ್ರೀತಿಗೆ ಸೋಲುತ್ತಲೇ ಹೋದ. ಮದುವೆಯಾಗುವುದಾಗಿ ಭಾಷೆ ಕೊಟ್ಟ. ನನ್ನ ಹೊಸ ಬದುಕು ಇನ್ನೇನು ಶುರುವಾಗುತ್ತದೆ ಅನ್ನುವ ಸಂಭ್ರಮದಲ್ಲಿದ್ದವಳಿಗೆ ವಿಧಿ ಯಾವ ರೂಪದಲ್ಲಿ ಬರುತ್ತದೆ ಅನ್ನುವ ಸಣ್ಣ ಸೂಚನೆಯೂ ಇರಲಿಲ್ಲ. ಆದರೆ ಅದು ಬಂದಿದ್ದು ನನ್ನಂತಹದೇ ಇನ್ನೊಂದು ಹುಡುಗಿಯ ರೂಪದಲ್ಲಿ. ಈ ಹಿಂದೆ ಆತನಿಂದ ದೂರವಾದ ಅದೇ ಹುಡುಗಿ ಮದುವೆಯಾಗಿ ಅಂತ ಆತನನ್ನು ಪೀಡಿಸಿದಳು. ಆತ್ಮಹತ್ಯೆಗೆ ಪ್ರಯತ್ನಿಸಿದಳು. ತಿರಸ್ಕರಿಸಿ ಹೋದವಳ

ಮನಮನೆ ತುಂಬಿಸಿಕೊಳ್ಳಲು ಅವನಿಗೆ ಇಷ್ಟವಿರಲಿಲ್ಲ. ಆದರೆ ಆತನ ಮನೆಯಲ್ಲಿ ಅವಳನ್ನೇ ಮದುವೆ ಆಗು ಅಂತ ಬಲವಂತ ಮಾಡಿದಾಗ ನನಗೆ ಅವರಿಬ್ಬರ ನಡುವೆ ಇನ್ನೇನು ಕೆಲಸ ಅಂದೆನಿಸತು. ಬಿಟ್ಟುಕೊಟ್ಟು ಬಿಟ್ಟೆ. ಆತ ಒಪ್ಪಲಿಲ್ಲ. ನಾನು ಕೇಳಲಿಲ್ಲ. ಮರೆತುಬಿಡು ಅಂದೆ ಅಷ್ಟೆ. ಮುಖ ತಿರುಗಿಸಿಕೊಂಡು ಅವ ನಡೆದುಬಿಟ್ಟ. ಆ ಮುಖದಲ್ಲಿ ಯಾವ ಛಾಯೆ ಇತ್ತೋ ನನಗೆ ಗೊತ್ತಿಲ್ಲ. ಆದರೆ ಆತನೊಂದಿಗೆ ಬದುಕು ಎಂದುಕೊಂಡು ಬಿಟ್ಟಿದ್ದ ಮನಸ್ಸಿಗೆ ಆಘಾತವಾಗಿದೆ. ಜೋಪಾನವಾಗಿ ಒಂದೊಂದೇ ಕನಸುಗಳನ್ನು ಹೆಕ್ಕಿ ಹೆಕ್ಕಿ ಪೋಣಿಸಿದ್ದ ಅನುರಾಗದ ಹಾರ ಹರಿದು ಹೋಗಿದೆ. ಮತ್ತೆ ಅದನ್ನು ಪೋಣಿಸುವ ಬಯಕೆ ನನಗಿಲ್ಲ. ಆತ ನನ್ನೊಂದಿಗಿಲ್ಲ ಅನ್ನುವ ಕೊರಗನ್ನೇ ಸೆರಗಿನಲ್ಲಿ ಕಟ್ಟಿಕೊಳ್ಳುವುದಕ್ಕಿಂತ ಅವನೊಂದಿಗೆ ಕಳೆದ ಸುಂದರ ನೆನಪುಗಳು ನನ್ನ ಬದುಕಿನುದ್ದಕ್ಕೂ ಹಿಂಬಾಲಿಸುತ್ತವೆ ಅನ್ನುವ ನಂಬಿಕೆಯಿಂದಲೇ ಪ್ರತಿ ಸೂರ‌್ಯೋದಯವನ್ನು ಖುಷಿಯಿಂದಲೇ ಎದುರು ನೋಡುತ್ತೇನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ