ಆ್ಯಪ್ನಗರ

ತುಳಸಿ ಕಷಾಯ ಮಾಡಿ ಕುಡಿದರೆ, ಸೋಂಕುಗಳೆಲ್ಲವೂ ಮಾಯ!

ತುಳಸಿ ತುಂಬಾ ಪವಿತ್ರವೆಂದು ಭಾವಿಸಿರುವಂತಹ ಭಾರತದಲ್ಲಿ ಅದನ್ನು ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ಮಳೆಗಾಲದಲ್ಲಂತೂ ಇದು ತುಂಬಾ ಲಾಭಕಾರಿ.

Vijaya Karnataka Web 29 Jul 2020, 8:28 pm
ಎಲ್ಲೆಲ್ಲೋ ಹಚ್ಚ ಹಸಿರು, ಕಣ್ಣು ಹಾಯಿಸಿದಷ್ಟು ಹಸಿರು. ಇದು ಮಳೆಗಾಲದಲ್ಲಿ ಮಲೆನಾಡಭಾಗದಲ್ಲಿ ಕಂಡುಬರುವಂತಹ ದೃಶ್ಯಗಳು. ಅಲ್ಲೊಂದು ಸುಂದರ ಲೋಕವೇ ಸೃಷ್ಟಿಯಾಗಿ ಬಿಡುತ್ತದೆ.
Vijaya Karnataka Web holy tulsi to boost immunity during this monsoon season
ತುಳಸಿ ಕಷಾಯ ಮಾಡಿ ಕುಡಿದರೆ, ಸೋಂಕುಗಳೆಲ್ಲವೂ ಮಾಯ!


ಇಂತಹ ಮಳೆಗಾಲವು ಪ್ರಕೃತಿಗೆ ಸೌಂದರ್ಯ ನೀಡುವ ಜತೆಗೆ ಕೆಲವೊಂದು ಕಾಯಿಲೆಗಳನ್ನು ಕೂಡ ತನ್ನೊಂದಿಗೆ ತರುವುದು. ಹೀಗಾಗಿ ಮಳೆಗಾಲದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು ಮತ್ತು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಮಲೆನಾಡು ಮಾತ್ರವಲ್ಲದೆ, ಪ್ರತಿಯೊಂದು ಕಡೆಯಲ್ಲೂ ಹೆಚ್ಚಾಗಿ ತುಳಸಿ ಬಳಸಿಕೊಂಡು ಮಳೆಗಾಲದಲ್ಲಿ ಕಾಡುವಂತಹ ಶೀತ, ಜ್ವರ, ಕೆಮ್ಮು, ನೆಗಡಿಯನ್ನು ದೂರವಿಡುವರು. ಅದರಲ್ಲೂ ಮಕ್ಕಳಿಗೆ ಇಂತಹ ಸೋಂಕು ಕಾಡುವುದು ಅತಿಯಾಗಿರುವ ಕಾರಣದಿಂದಾಗಿ ತುಳಸಿಯು ತುಂಬಾ ಪರಿಣಾಮಕಾರಿ ಆಗಿರುವುದು.

ತುಳಸಿಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ ಎನ್ನುವುದು ನಮಗೆಲ್ಲರಿಗೂ ತಿಳಿದೇ ಇದೆ. ಇದು ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಸುವ ಜತೆಗೆ ಮಳೆಗಾಲದಲ್ಲಿ ಕಾಡುವಂತಹ ಸಾಮಾನ್ಯ ಕಾಯಿಲೆಗಳನ್ನು ದೂರವಿಡುವುದು.

​ತುಳಸಿಯ ಆರೋಗ್ಯ ಲಾಭಗಳು

ಭಾರತೀಯರು ತುಂಬಾ ಪವಿತ್ರವೆಂದು ಪರಿಗಣಿಸಲಾಗಿರುವಂತಹ ತುಳಸಿಯಲ್ಲಿ ಇರುವಂತಹ ಸಾರಭೂತ ತೈಲ ಮತ್ತು ಪೈಥೋನ್ಯೂಟ್ರಿಯೆಂಟ್ಸ್ ಗಳು ಅದ್ಭುತವಾದ ಶಮನಕಾರಿ ಗುಣ ಹೊಂದಿದೆ.

ತುಳಸಿಯು ರೋಗನಿರೋಧಕ, ಕೀಟಾಣು ನಾಶಕ, ಶಿಲೀಂಧ್ರ ವಿರೋಧಿ ಮತ್ತು ಸೋಂಕು ನಾಶಕ ಗುಣವನ್ನು ಹೊಂಧಿದೆ. ಈ ಎಲ್ಲಾ ಗುಣಗಳನ್ನು ಹೊಂದಿರುವ ತುಳಿಸಯು ನಮ್ಮ ದೇಹದಲ್ಲಿ ಇರುವ ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರ ಸೋಂಕಿನ ವಿರುದ್ಧ ಹೋರಾಡುವುದು.

ರೋಗಕಾರಕಗಳಾಗಿರುವಂತಹ ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರಗಳಿಂದಾಗಿ ಜ್ವರ ಕಾಡುವುದು. ತುಳಸಿಯು ಈ ಎಲ್ಲಾ ರೋಗಕಾರಕಗಳನ್ನು ನಾಶ ಮಾಡುವುದು ಮತ್ತು ಜ್ವರದಿಂದ ಶಮನ ನೀಡುವುದು. ತುಳಸಿ ಎಲೆಗಳು ಮತ್ತು ಹೂವಿನ ಕಷಾಯವು ಜ್ವರ ನಿವಾರಣೆಗೆ ತುಂಬಾ ಪರಿಣಾಮಕಾರಿ.

ಶುಂಠಿ, ತುಳಸಿ ಹಾಕಿದ ಟೀ ಕುಡಿದ್ರೆ, ರೋಗನಿರೋಧಕ ಶಕ್ತಿ ಹೆಚ್ಚುತ್ತೆ

​ಉಸಿರಾಟದ ಕಾಯಿಲೆಗಳಿಗೆ ಮದ್ದು

  • ದೇಹದ ಪ್ರತಿರೋಧಕ ಶಕ್ತಿ ವೃದ್ಧಿಸಲು ತುಳಸಿಯು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಇದರಲ್ಲಿ ಪೈಥೊಕೆಮಿಕಲ್, ಬಯೋಫ್ಲಾವನಾಯ್ಡ್ ಮತ್ತು ರೊಸ್ಮರಿನಿಕ್ ಆಮ್ಲದಂತಹ ಆಂಟಿಆಕ್ಸಿಡೆಂಟ್ ಅಂಶಗಳು ಇವೆ.
  • ಇವು ಸೂಕ್ಷ್ಮಾಣು ವಿರೋಧಿಯಾಗಿದ್ದು, ಶ್ವಾಸಕೋಶದ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸೋಂಕನ್ನು ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು.
  • ಮಳೆಗಾಲದಲ್ಲಿ ಕಾಡುವಂತಹ ಕೆಮ್ಮು, ಗಂಟಲಿನ ಊತ, ಎದೆಯಲ್ಲಿನ ಉರಿಯೂತ ಮತ್ತು ಕಫ ಕಡಿಮೆ ಮಾಡಲು ತುಳಸಿಯು ತುಂಬಾ ಪರಿಣಾಮಕಾರಿ ಆಗಿರುವುದು.
  • ಇದು ಪ್ರತಿರೋಧಕ ಶಕ್ತಿ ವೃದ್ಧಿಸಲು ತುಂಬಾ ಸರಳ ವಿಧಾನವಾಗಿದೆ. ದಿನಕ್ಕೆ 1-2 ಕಪ್ ತುಳಸಿ ಚಾ ಕುಡಿದರೆ ಅದು ಮಳೆಗಾಲದಲ್ಲಿ ಅದ್ಭುತವಾಗಿ ಕೆಲಸ ಮಾಡುವುದು.

​ಚರ್ಮದ ಆರೋಗ್ಯ

ಮಳೆಗಾಲ ಬಂದಾಗ ಸೊಳ್ಳೆಗಳು, ಕೀಟಗಳು ಹೆಚ್ಚಾಗುವುದು. ಇಂತಹ ಸಂದರ್ಭದಲ್ಲಿ ನೀವು ತುಳಸಿ ಎಳೆ ಅಥವಾ ಅದರಿಂದ ತಯಾರಿಸಿದ ಎಣ್ಣೆಯನ್ನು ಮೈಗೆ ಹಚ್ಚಿಕೊಂಡರೆ ಆಗ ನೀವು ಸೊಳ್ಳೆ ಅಥವಾ ಇತರ ಕೀಟಗಳ ಕಡಿತದಿಂದ ದೂರವಿರಬಹುದು.

ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡದೆ ಇದು ಚರ್ಮಕ್ಕೆ ಆಂತರಿಕ ಮತ್ತು ಬಾಹ್ಯವಾಗಿ ಶಮನ ನೀಡುವುದು, ದಿನಕ್ಕೆ 5-6 ತುಳಸಿ ಎಲೆಗಳನ್ನು ತಿಂದರೆ ಆಗ ಚರ್ಮವನ್ನು ಸೋಂಕು ಮುಕ್ತವಾಗಿಡಬಹುದು.

​ಪ್ರತಿರೋಧಕ ಶಕ್ತಿ ವೃದ್ಧಿ

ಇಂದಿನ ದಿನಗಳಲ್ಲಿ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಬಲಿಷ್ಠವಾಗಿ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿರುವುದು.

ಪ್ರತಿರೋಧಕ ಶಕ್ತಿಯು ಪ್ರಬಲವಾಗಿದ್ದರೆ ಆಗ ವೈರಸ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದಿಂದ ಬರುವಂತಹ ಸೋಂಕುಗಳನ್ನು ತಡೆಯಬಹುದು. ತುಳಸಿಯು ಅಂಗಾಂಶಗಳಿಗೆ ನೆರವಾಗುವುದು ಮತ್ತು ಪ್ರತಿರೋಧಕ ಶಕ್ತಿ ವೃದ್ಧಿಸುವುದು.

​ಸೊಳ್ಳೆ ನಿರೋಧಕ

ತುಳಸಿಯಲ್ಲಿ ಇರುವಂತಹ ಘಾಟು ಸೊಳ್ಳೆ, ಕೀಟ, ಜಿರಳೆಗಳನ್ನು ಓಡಿಸುವಲ್ಲಿ ಪರಿಣಾಮಕಾರಿ. ಇದನ್ನು ನೀವು ಸೊಳ್ಳೆ ನಾಶಕವಾಗಿ ಬಳಸಬಹುದು ಮತ್ತು ಇದರಿಂದ ಯಾವುದೇ ರೀತಿಯ ಹಾನಿ ಆಗದು. ಮನೆಯ ಸುತ್ತಲು ತುಳಸಿ ಗಿಡಗಳನ್ನು ಬೆಳೆಸಿ. ಇದರಿಂದ ಕೀಟಗಳು ದೂರವಿರುವುದು.

​ತುಳಸಿ ಕಷಾಯ

ಕಷಾಯವೆಂದರೆ ಅದು ಬಾಯಿಗೆ ರುಚಿಸದೆ ಇದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ಹಿರಿಯರು ಹಿಂದೆ ಯಾವುದೇ ಆಸ್ಪತ್ರೆಗಳು ಇಲ್ಲದ ಸಮಯದಲ್ಲೂ ಕೆಲವೊಂದು ಗಿಡಮೂಲಿಕೆ ಕಷಾಯಗಳನ್ನು ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು.

ಗಿಡಮೂಲಿಕೆ ಮತ್ತು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಈ ಕಷಾಯ ತಯಾರಿಸಬಹುದು. ತುಳಸಿ, ಶುಂಠಿ, ಅರಶಿನ, ಕರಿಮೆಣಸು ಮತ್ತು ಲವಂಗ ಹಾಕಿಕೊಂಡು ನೀವು ಕಷಾಯ ತಯಾರಿಸಬಹುದು. ಇವುಗಳಲ್ಲಿ ಅದ್ಭುತವಾದ ಪೋಷಕಾಂಶಗಳು ಇವೆ ಮತ್ತು ಆರೋಗ್ಯಕ್ಕೆ ತುಂಬಾ ಲಾಭಕಾರಿ.

​ತುಳಸಿ ಎಲೆಗಳ ಕಷಾಯ ತಯಾರಿ ಹೇಗೆ?

  • 10-15 ತುಳಸಿ ಎಲೆಗಳು
  • 1 ತುಂಡು ಶುಂಠಿ
  • ಒಂದು ತುಂಡು ಅರಶಿನ
  • 4 ಮಲೇಟಿ ಕಡ್ಡಿ
  • 10 ಕರಿಮೆಣಸಿನ ಕಾಳು
  • 10 ಲವಂಗ
  • 3-4 ದಾಲ್ಚಿನಿ ಚಕ್ಕೆ
  • 8 ಕಪ್ ನೀರು

ವಿಧಾನ

  • ಒಂದು ಆಳ ತಳದ ಪಾತ್ರೆಗೆ ನೀರು ಹಾಕಿ ಮತ್ತು ಅದಕ್ಕೆ ಎಲ್ಲಾ ಸಾಮಗ್ರಿಗಳನ್ನು ಹಾಕಿ.
  • ಮಧ್ಯಮ ಬೆಂಕಿಯಲ್ಲಿ ನೀರನ್ನು ಅರ್ಧ ಗಂಟೆ ಕಾಲ ಕುದಿಸಿ.
  • ಗ್ಯಾಸ್ ನಿಂದ ಕೆಳಗಿಟ್ಟ ಬಳಿಕ ನೀವು ಇದನ್ನು ತಣ್ಣಗಾಗಲು ಬಿಡಿ ಮತ್ತು ಇದರ ಬಳಿಕ ಪ್ರತಿರೋಧಕ ಶಕ್ತಿ ವೃದ್ಧಿಸುವ ಕಷಾಯ ಕುಡಿಯಿರಿ.
  • ಬಿಗಿಯಾದ ಮುಚ್ಚಳ ಹಾಕಿದ ಬಾಟಲಿಗೆ ಹಾಕಿ ಇದನ್ನು ಎರಡು ದಿನಗಳ ಕಾಲ ಫ್ರಿಡ್ಜ್ ನಲ್ಲಿ ಇಡಬಹುದು. ಬಳಿಕ ಬಿಸಿ ಮಾಡಿ ಕುಡಿಯಿರಿ.

​ಪೋಷಕಾಂಶ ಲಾಭಗಳು

ಈ ಕಷಾಯದಲ್ಲಿ ಇರುವಂತಹ ಪೋಷಕಾಂಶಗಳು ಪ್ರತಿರೋಧಕ ಶಕ್ತ ವೃದ್ಧಿಸುವ ಜತೆಗೆ ಸೋಂಕನ್ನು ಕೂಡ ದೂರವಿಡುವುದು.

ಜ್ವರ, ಶೀತದಂತಹ ಸಮಸ್ಯೆಗಳಿಗೆ ತುಳಸಿಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಮತ್ತು ಆಂಟಿಆಕ್ಸಿಡೆಂಟ್ ಗುಣಗಳು ಪರಿಣಾಮಕಾರಿ. ಶುಂಠಿಯಲ್ಲಿ ಇರುವ ಕೆಲವೊಂದು ರಾಸಾಯನಿಕ ಅಂಶಗಳು ಕೀಟಾಣು ಮತ್ತು ಬ್ಯಾಕ್ಟೀರಿಯಾ ನಾಶ ಮಾಡುವುದು.

ಅರಶಿನದಲ್ಲಿನ ಕರ್ಕ್ಯೂಮಿನ್ ಅಂಶವು ಉರಿಯೂತ ಶಮನ ಮಾಡುವುದು. ಕರಿಮೆಣಸಿನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಅಂಶವಿದೆ. ಅದೇ ಲವಂಗ ಮತ್ತು ದಾಲ್ಚಿನಿಯಲ್ಲಿ ಪರಿಣಾಮಕಾರಿ ಕಫಹಾರಿ ಗುಣಗಳು ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ