ಆ್ಯಪ್ನಗರ

ಉತ್ತರ ಕರ್ನಾಟಕ ರಾಜ್ಯಕ್ಕೆ ಬಾಗಲಕೋಟ ರಾಜಧಾನಿ

ಬಾಗಲಕೋಟ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬಾಗಲಕೋಟ ರಾಜಧಾನಿಯಾಗಲಿ ಎಂಬ ನಿರ್ಣಯ ಸೇರಿದಂತೆ ಹೊಸ ರಾಜ್ಯ ಸ್ಥಾಪನೆಗಾಗಿ ಪಂಚ ನಿರ್ಣಯಗಳನ್ನು ಉತ್ತರ ಕರ್ನಾಟಕ ಹೋರಾಟ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ.

Vijaya Karnataka 24 Sep 2018, 7:49 am
ಬಾಗಲಕೋಟ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬಾಗಲಕೋಟ ರಾಜಧಾನಿಯಾಗಲಿ ಎಂಬ ನಿರ್ಣಯ ಸೇರಿದಂತೆ ಹೊಸ ರಾಜ್ಯ ಸ್ಥಾಪನೆಗಾಗಿ ಪಂಚ ನಿರ್ಣಯಗಳನ್ನು ಉತ್ತರ ಕರ್ನಾಟಕ ಹೋರಾಟ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ.
Vijaya Karnataka Web north karnataka


ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ 13 ಜಿಲ್ಲೆಗಳ ನಾನಾ ಸಂಘಟನೆಗಳ ಮುಖಂಡರು, ಸ್ವಾಮೀಜಿಗಳು ಹಾಗೂ ಸಾಮಾಜಿಕ ಹೋರಾಟಗಾರರ ನೇತೃತ್ವದಲ್ಲಿ ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬಾಗಲಕೋಟ ರಾಜಧಾನಿಯಾಗಬೇಕು, ಹೊಸ ರಾಜ್ಯದ ಹೆಸರು ಉತ್ತರ ಕರ್ನಾಟಕ ಎಂದಿರಬೇಕು. ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರ, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟ, ಬೆಳಗಾವಿ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ ಸೇರಿದಂತೆ 13 ಜಿಲ್ಲೆಗಳನ್ನೊಳಗೊಂಡ ಹೊಸ ರಾಜ್ಯ ಸ್ಥಾಪನೆಯಾಗಬೇಕು. ಕೆಂಪು, ಹಳದಿ ಹಾಗೂ ನೀಲಿ ಬಣ್ಣದ ಪಟ್ಟಿಗಳ ಮಧ್ಯೆ ಉತ್ತರ ಕರ್ನಾಟಕದ ನಕ್ಷೆಯಿರುವ ಧ್ವಜವನ್ನು ಹೊಸ ರಾಜ್ಯದ ಅಧಿಕೃತ ಧ್ವಜವಾಗಿ ಪರಿಗಣಿಸಬೇಕು. ಹೊಸ ರಾಜ್ಯದ ರಾಜ್ಯೋತ್ಸವವನ್ನು ಜ.1 ರಂದು ನಡೆಸಬೇಕು ಎಂಬ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಅಭಿಪ್ರಾಯ ಸಂಗ್ರಹಣೆ

ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಭಿಕರಿಗೆ ಐದು ಪ್ರಶ್ನೆಗಳುಳ್ಳ ಕರಪತ್ರ ನೀಡಲಾಯಿತು. ಕರಪತ್ರದಲ್ಲಿ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ನೀಡಿ ಸಭಿಕರಿಗೆ ತಮಗಿಷ್ಟವಾದ ಆಯ್ಕೆ ಮುಂದೆ ಸರಿ ಎಂದು ಬರೆಯಲು ತಿಳಿಸಲಾಯಿತು. ಉಪಸ್ಥಿತರಿದ್ದ 150ಕ್ಕೂ ಹೆಚ್ಚು ಜನ ನೀಡಿದ ಅಭಿಪ್ರಾಯ ಪರಿಗಣಿಸಿ ಹೊಸ ರಾಜ್ಯದ ರೂಪು ರೇಷೆಗಳನ್ನು ನಿರ್ಧರಿಸಲಾಗಿದೆ ಎಂದು ಸಂಘಟಕರು ಸಭೆಗೆ ತಿಳಿಸಿದರು. ಸಭೆಯಲ್ಲಿ ಪಡೆದ ಅಭಿಪ್ರಾಯಗಳನ್ನು ಆಧರಿಸಿ ಎಲ್ಲ 13 ಜಿಲ್ಲೆಗಳಲ್ಲಿ ಸಭೆ ನಡೆಸಿ ಪ್ರತ್ಯೇಕ ರಾಜ್ಯ ಹೋರಾಟ ತೀವ್ರಗೊಳಿಸಲು ಸಭೆ ನಿರ್ಧರಿಸಿತು.

ಮುಖಂಡರ ನೇತೃತ್ವ

ಹೋರಾಟ ಸಮಿತಿ ಗೌರವಾಧ್ಯಕ್ಷ ಚರಂತಿಮಠದ ಪ್ರಭು ಸ್ವಾಮೀಜಿ, ಸಿದ್ಧಲಿಂಗ ಮಠದ ಶಿವಕುಮಾರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ಉತ್ತರ ಬಳಗದ ಅಧ್ಯಕ್ಷ ಫಾಲಾಕ್ಷ ಬಾಣದ, ನ್ಯಾಯವಾದಿ ಎನ್‌.ಪಿ.ಅಮೃತೇಶ್‌, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ, ಹೋರಾಟ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ಉಪಾಧ್ಯಕ್ಷ ಎ.ಎ.ದಂಡಿಯಾ, ಮಾರುತಿ ಜಡಿಯವರ, ರೈಲ್ವೆ ಹೋರಾಟಗಾರ ಕುತುಬುದ್ದೀನ್‌ ಖಾಜಿ ಸೇರಿದಂತೆ ನಾನಾ ಜಿಲ್ಲೆಗಳ ಹೋರಾಟಗಾರರು ಸಭೆಯಲ್ಲಿದ್ದರು. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಬೇಡ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಭಾಂಗಣದ ಹೊರಗೆ ಪ್ರತಿಭಟಿಸಿದರು. ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ