ಆ್ಯಪ್ನಗರ

ನೀರಾವರಿ ಯೋಜನೆಗಳಲ್ಲಿ ಸಿಎಂ, ಸಚಿವರಿಗೆ ಕಮಿಶನ್‌

ವಿಕ ಸುದ್ದಿಲೋಕ 6 Jun 2017, 2:00 am

ಚಿಕ್ಕೋಡಿ: ರಾಜ್ಯದಲ್ಲಿ ಸಣ್ಣ ಮತ್ತು ಬೃಹತ್‌ ನೀರಾವರಿ ಯೋಜನೆಗಳನ್ನು ಆರಂಭಿಸುವ ಮುನ್ನವೇ ಗುತ್ತಿಗೆದಾರರಿಗೆ ಮುಂಗಡ ಹಣ ಕೊಟ್ಟಂತೆ ಮಾಡಿ ಅದನ್ನು ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ಕಮಿಶನ್‌ ರೂಪದಲ್ಲಿ ಪಡೆಯುತ್ತಿದ್ದಾರೆ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥಣಿ ತಾಲೂಕಿನ ಬಸವೇಶ್ವರ ಏತ ನೀರಾವರಿ ಯೋಜನೆಗೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಮಂಜೂರಾತಿ ಕೊಡಲಾಗಿತ್ತು. ಆದರೆ, ಕಾಂಗ್ರೆಸ್‌ ಸರಕಾರ ಇದುವರೆಗೂ ಕಾಮಗಾರಿ ಕೈಗೊಂಡಿಲ್ಲ. ಬದಲಾಗಿ ಇಂಥ ಯೋಜನೆಗಳ ನೆಪದಲ್ಲಿ ಕಮಿಶನ್‌ ಹಣ ಪಡೆಯುತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಈ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿಯೂ ಪ್ರಸ್ತಾಪ ಮಾಡಲಾಗುವುದು ಎಂದರು.

ನೀರಾವರಿ ಯೋಜನೆಗಳಿಗೆ 66 ಸಾವಿರ ಕೋಟಿ ರೂ. ಕೊಟ್ಟಿರುವುದಾಗಿ ರಾಜ್ಯ ಸರಕಾರ ಹೇಳುತ್ತಿದೆ. ಆದರೆ, ಏಪ್ರಿಲ್‌ ಕೊನೆಯವರೆಗೆ 36 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಚುನಾವಣೆ ವೇಳೆ ಪ್ರತಿ ವರ್ಷ ಕೃಷ್ಣಾ ಯೋಜನೆಗೆ 10 ಸಾವಿರ ಕೋಟಿ ಖರ್ಚು ಮಾಡುತ್ತೇನೆಂದು ಕೃಷ್ಣೆಯ ಮೇಲೆ ಪ್ರಮಾಣ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಪ್ರಕಾರ ನಡೆದುಕೊಂಡಿದ್ದರೆ ಈವರೆಗೆ 40 ಸಾವಿರ ಕೋಟಿ ರೂ. ಖರ್ಚು ಮಾಡಬೇಕಿತ್ತು. ಆದರೆ ಇನ್ನೂ 6 ಸಾವಿರ ಕೋಟಿ ದಾಟಿಲ್ಲ. ಈ ಸರಕಾರ ನುಡಿದಂತೆ ನಡೆದುಕೊಂಡಿಲ್ಲ ಎಂದು ಹರಿಹಾಯ್ದರು.

ಕಾಂಗ್ರೆಸ್‌ ಸರಕಾರ ಜಲಾನಯನ ಯೋಜನೆಯಡಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ರಾಯಬಾಗ ತಾಲೂಕಿನ ದೇವನಕಟ್ಟಿ, ಮಾವಿನಹೊಂಡ ಮುಂತಾದ ಗ್ರಾಮಗಳಿಗೆ ನೀರಾವರಿ ಸೌಲಭ್ಯಕ್ಕಾಗಿರುವ ಜೆಎಲ್‌ಬಿಸಿ ಕಾಲುವೆ ನಿರ್ಮಾಣವಾಗಿಲ್ಲ ಎಂದ ಅವರು, ರಾಯಬಾಗ ತಾಲೂಕಿಗೆ ಮಂಜೂರಾದ ಏತ ನೀರಾವರಿ ಯೋಜನೆಯನ್ನು ತಕ್ಷ ಣ ಆರಂಭಿಸುವಂತೆ ಸರಕಾರಕ್ಕೆ ಆಗ್ರಹಿಸಿದರು.

ಮಾಜಿ ಸಂಸದ ಅಮರಸಿಂಹ ಪಾಟೀಲ, ಶಾಸಕರಾದ ಶಶಿಕಲಾ ಜೊಲ್ಲೆ, ಡಿ.ಎಂ.ಐಹೊಳೆ, ಲಕ್ಷ ್ಮಣ ಸವದಿ, ರಾಜು ಕಾಗೆ, ಬಾಲಚಂದ್ರ ಜಾರಕಿಹೊಳಿ, ಮಹಾಂತೇಶ ಕವಟಗಿಮಠ, ಪಕ್ಷದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಶಶಿಕಾಂತ ನಾಯಿಕ, ಮಾಜಿ ಸಂಸದ ರಮೇಶ ಕತ್ತಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ