Please enable javascript.ಹುಕ್ಕೇರಿ ರೈತ ಆತ್ಮಹತ್ಯೆ ಪ್ರಕರಣ,ಸಾಲದ ಶೂಲಕ್ಕೆ ಸಿಲುಕಿದ ಹುಕ್ಕೇರಿಯ ರೈತ ಆತ್ಮಹತ್ಯೆ; ಮನಕಲಕುವ ಘಟನೆಗೆ `ಕೈ' ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಜಯೇಂದ್ರ - by vijayendra slams congress government for hukkeri farmer suicide case - Vijay Karnataka

ಸಾಲದ ಶೂಲಕ್ಕೆ ಸಿಲುಕಿದ ಹುಕ್ಕೇರಿಯ ರೈತ ಆತ್ಮಹತ್ಯೆ; ಮನಕಲಕುವ ಘಟನೆಗೆ `ಕೈ' ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಜಯೇಂದ್ರ

Authored byಗಣೇಶ್ ಪ್ರಸಾದ್ ಕುಂಬ್ಳೆ | Vijaya Karnataka Web 21 May 2024, 1:02 pm
Subscribe

ಬರಗಾಲದಿಂದ ಸಾಲದ ಶೂಲಕ್ಕೆ ಸಿಲುಕಿ ಮನನೊಂದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡು ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಿಂದ ವರದಿಯಾಗಿದೆ. ಇಸ್ಲಾಂಪುರದ ರಾಜು ರಾಮಪ್ಪ ಖೋತಗಿ(51) ಆತ್ಮಹತ್ಯೆಗೆ ಶರಣಾದ ರೈತ. ಮಹಿಳೆಯೊಬ್ಬರಿಂದ ಅಧಿಕ ಬಡ್ಡಿಗೆ 1.5 ಲಕ್ಷ ಸಾಲ ಪಡೆದಿದ್ದರು.2 ದಿನದ ಸಾಲವನ್ನು ಸಂಪೂರ್ಣವಾಗಿ ತೀರಿಸಲು ಹೇಳಿದ ಮಹಿಳೆ ರಾಜು ಅವರ ಪತ್ನಿ ಮತ್ತು ಪುತ್ರನನ್ನು ಒತ್ತಯಾಳಾಗಿ ಇರಿಸಿಕೊಂಡಿದ್ದರು. ಇದರಿಂದ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ಖಂಡಿಸಿ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

hukkeri raitha
ಆತ್ಮಹತ್ಯೆಗೆ ಶರಣಾಗಿರುವ ಹುಕ್ಕೇರಿಯ ರೈತ ರಾಜು
ಬೆಂಗಳೂರು/ಬೆಳಗಾವಿ: ಸಾಲ ತೀರಿಸಿಲ್ಲ ಎಂದು ಪತ್ನಿ- ಪುತ್ರನ ಗೃಹಬಂಧನಕ್ಕೆ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ. ಇಸ್ಲಾಂ ಪುರದ ರಾಜು ರಾಮಪ್ಪ ಖೋತಗಿ ( 51) ಆತ್ಮಹತ್ಯೆ ಮಾಡಿಕೊಂಡವರು. ದುರ್ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತ ಶೋಷಣೆ ಮಿತಿ ಮೀರುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಧ್ಯಮ ವರದಿಯನ್ನು ಲಗತ್ತಿಸಿ ಪೋಸ್ಟ್ ಮಾಡಿರುವ ಅವರು ಇದು ನಾಗರಿಕ ಸಮಾಜದಲ್ಲಿ ತಲೆ ತಗ್ಗಿಸುವ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರ ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಿ ಎಂದು ಆಗ್ರಹಿಸಿದ್ದಾರೆ.

ಹಾಸನ, ಚಿತ್ರದುರ್ಗ, ಕೊಪ್ಪಳ: 3 ದಿನಗಳ ಅಂತರದಲ್ಲಿ ಮೂವರು ರೈತರ ಆತ್ಮಹತ್ಯೆ! ಕಾರಣ..

ಘಟನೆಯ ವಿವರ

ಭೀಕರ ಬರಕ್ಕೆ ಬೆಳೆನಷ್ಟವಾಗಿದ್ದ ಹಿನ್ನಲೆಯೆಲ್ಲಿ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ರೈತ ರಾಜು ಖೊತಗಿ ಎಂಬವರು ಇಸ್ಲಾಂಪುರ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಮಹಿಳೆಯ ಬಳಿ 5 ತಿಂಗಳ ಹಿಂದೆ ಬ್ಯಾಂಕ್ ಆಫ್ ಬರೋಡಾದ ಚೆಕ್ ಅನ್ನು ಗ್ಯಾರಂಟಿಯಾಗಿ ನೀಡಿ ಒಂದೂವರೆ ಲಕ್ಷ ಸಾಲ ಪಡೆದಿದ್ದರು. ಈ ಸಾಲಕ್ಕೆ ಪ್ರತಿ ತಿಂಗಳು ಶೇ.100ರಷ್ಟು ಬಡ್ಡಿಯನ್ನೂ ನೀಡುತ್ತಿದ್ದರು.

ಎರಡು ದಿನಗಳ ಹಿಂದೆ ಏಕಾಏಕಿ ಸಿದ್ದವ್ವ ಅವರು ಹಣ ಹಿಂದಿರುಗಿಸುವಂತೆ ರಾಜುಗೆ ತಿಳಿಸಿದ್ದಾರೆ. ಮಾತ್ರವಲ್ಲದೆ ಸಾಲ ವಾಪಸ್ ಕೊಡುವವರೆಗೂ ಪುತ್ರನನ್ನು ಮನೆಯಲ್ಲಿ ಬಿಟ್ಟು ಹೋಗಲು ತಿಳಿಸಿದ್ದರು. ಅದರಂತೆ ರಾಜು ಅವರು ತಮ್ಮ ಪುತ್ರ ಬಸವರಾಜ್ ನನ್ನು ಮಹಿಳೆಯ ಮನೆಯಲ್ಲಿ ಬಿಟ್ಟು ಬಂದಿದ್ದರು. ಇನ್ನು ಮಾರನೇ ದಿನ ಪುತ್ರನನ್ನು ಕರೆದುಕೊಂಡು ಬರಲು ಹೋಗಿದ್ದ ರಾಜು ಪತ್ನಿ ದುರ್ಗವ್ವನನ್ನೂ ಮಹಿಳೆ ಗೃಹ ಬಂಧನದಲ್ಲಿರಿಸಿದ್ದಾಳೆ. ಮಾತ್ರವಲ್ಲದೆ ನಿಮಗೆ ಸಾಲ ತುಂಬಲಿಕ್ಕೆ ಆಗದಿದ್ದರೆ ಏನಾದರೂ ಮಾಡಿಕೊಂಡು ಸತ್ತು ಹೋಗಿರಿ" ಎಂದು ನಿಂದಿಸಿದ್ದಾಳೆ.

ಎರಡನೇ ಬಾರಿ ರೈತರ ಬಗ್ಗೆ ನಾಲಿಗೆ ಹರಿಬಿಟ್ಟು ವಿವಾದಕ್ಕೆ ಸಿಲುಕಿದ ಶಿವಾನಂದ ಪಾಟೀಲ್‌

ಘಟನೆಯಿಂದ ಅವಮಾನ ಆಗಿದ್ದರಿಂದ ಮನನೊಂದು ವಿಷ ಸೇವಿಸಿದ್ದ ರೈತ ರಾಜು ಖೋತಗಿ ಅವರನ್ನು ಯಮಕನಮರಡಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಈ ರೈತ ಆತ್ಮಹತ್ಯೆ ರಾಜ್ಯಾದ್ಯಂತ ಸದ್ದು ಮಾಡಿದ್ದು ಇದೀಗ ವಿಜಯೇಂದ್ರ ಅವರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ ಪೋಸ್ಟ್ ನಲ್ಲಿರುವುದೇನು?

``ಪಾಳೇಗಾರಿಕೆ ರಾಜಕಾರಣದ ಪೋಷಣೆಗೆ ಹೆಸರಾದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತ ಶೋಷಣೆ ಮಿತಿಮೀರುತ್ತಿದೆ, ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದ ರೈತ ತನ್ನ ಕೃಷಿ ಚಟುವಟಿಕೆಯ ಸಲುವಾಗಿ ಮಾಡಿಕೊಂಡಿದ್ದ ಖಾಸಗಿ ಸಾಲ ತೀರಿಸಲಾಗದೇ ಸಾಲಕೊಟ್ಟವರಿಂದ ಪತ್ನಿ, ಪುತ್ರನನ್ನು ನಿಷೇಧಿತ ಜೀತ ಪದ್ಧತಿ ಹಾಗೂ ಅಕ್ರಮ ಗೃಹ ಬಂಧನದ ಶಿಕ್ಷೆ ಅನುಭವಿಸುವ, ಅಪಮಾನ ಹಾಗೂ ಅಸಹಾಯಕ ಪರಿಸ್ಥಿತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ''



``ಕಾಂಗ್ರೆಸ್ ಸರ್ಕಾರದ ಆಡಳಿತ ಕಾಲದಲ್ಲಿ ಈ ರಾಜ್ಯದ ಜನತೆ ಇನ್ನೂ ಏನೇನು ಅನುಭವಿಸಬೇಕೋ? ತಿಳಿಯದಾಗಿದೆ. ಗೂಂಡಾಗಳು, ಮೀಟರ್ ಬಡ್ಡಿ ದಂಧೆಕೋರರು, ಕೊಲೆಗಡುಕರಿಗೆ ಈ ಸರ್ಕಾರದ ಆಡಳಿತ ವ್ಯವಸ್ಥೆ ‘ನೆರಳಿನ ಭಾಗ್ಯ’ ಕಲ್ಪಿಸಿಕೊಡುತ್ತಿದೆ. ಈ ಸರ್ಕಾರಕ್ಕೆ ನೈತಿಕತೆಯಿದ್ದರೆ ಕೂಡಲೇ ಯಮಕನಮರಡಿ ರೈತನ ಆತ್ಮಹತ್ಯೆ ಪ್ರಕರಣದ ಕುರಿತು ಕಠಿಣ ಕ್ರಮ ಜರುಗಿಸಿ ಮುಂದೆಂದೂ ಇಂಥಾ ಹೀನ ಘಟನೆಗಳು ರಾಜ್ಯದಲ್ಲಿ ತಲೆ ಎತ್ತದಂತೆ ಎಚ್ಚರಿಕೆ ವಹಿಸಲಿ, ರೈತ ಸಮೂಹಕ್ಕೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ರೂಪಿಸಲಿ, ಮೃತ ರೈತನ ಕುಟುಂಬಕ್ಕೆ ಸೂಕ್ತ ಆರ್ಥಿಕ ನೆರವು ಹಾಗೂ ಭದ್ರತೆ ಒದಗಿಸಲಿ. '' ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ. ಈ ಪೋಸ್ಟ್ ಅನ್ನು ಕರ್ನಾಟಕ ಬಿಜೆಪಿ ಸಹ ರಿಪೋಸ್ಚ್ ಮಾಡಿದೆ.
ಗಣೇಶ್ ಪ್ರಸಾದ್ ಕುಂಬ್ಳೆ
ಲೇಖಕರ ಬಗ್ಗೆ
ಗಣೇಶ್ ಪ್ರಸಾದ್ ಕುಂಬ್ಳೆ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತ. ಪತ್ರಿಕೋದ್ಯಮದಲ್ಲಿ 15 ವರ್ಷಗಳ ಅನುಭವ. ಓದುವಿಕೆ, ಬರೆಯುವಿಕೆ, ಯಕ್ಷಗಾನದಲ್ಲಿ ಆಸಕ್ತಿ. ಸಮಯ ಸಿಕ್ಕಾಗ ಚೆಸ್, ಕ್ರಿಕೆಟ್, ಶಟಲ್ ಆಡುವುದು, ಪ್ರವಾಸ, ಚಾರಣ ಮಾಡುವುದು ನೆಚ್ಚಿನ ಹವ್ಯಾಸಗಳು. ಶಿವರಾಮ ಕಾರಂತ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಬರಹಳೆಂದರೆ ಅಚ್ಚಮೆಚ್ಚು. ರಾಜಕೀಯ, ಕ್ರೀಡೆ, ಮಾನವೀಯ ಸಂವೇದಿ ಲೇಖನಗಳು, ವ್ಯಕ್ತಿಚಿತ್ರ, ನುಡಿಚಿತ್ರ, ಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ಆಸಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ