ಗೋಕಾಕ: ಹಣ ಮತ್ತು ತೋಳ್ಬಲದ ಕಪಿಮುಷ್ಟಿಯಿಂದ ಗೋಕಾಕ ವಿಧಾನಸಭೆ ಕ್ಷೇತ್ರವನ್ನು ಮುಕ್ತಗೊಳಿಸುವ ಸಂಕಲ್ಪದೊಂದಿಗೆ ಮುಂಬರುವ ಚುನಾವಣೆ ಎದುರಿಸುವುದಾಗಿ ಬಿಜೆಪಿ ಮುಖಂಡ ಮತ್ತು ಗೋಕಾಕ ವಿಧಾನಸಭೆ ಕ್ಷೇತ್ರದ ಚುನಾವಣೆ ಸಹ-ಉಸ್ತುವಾರಿ ನ್ಯಾಯವಾದಿ ಆರ್.ಎಸ್. ಮುತಾಲಿಕ್ ಹೇಳಿದರು.
ನಗರದ ಜ್ಞಾನಮಂದಿರ ಅಧ್ಯಾತ್ಮ ಕೇಂದ್ರದಲ್ಲಿ ನಡೆದ ಗೋಕಾಕ ವಿಧಾನಸಭೆ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಚಿವ ಅನಂತಕುಮಾರ ಹೆಗಡೆಯವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಗೋಕಾಕ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರಕ್ಕೆ ಮುಖಂಡರು ಕಾರ್ಯಪ್ರವೃತ್ತರಾಗಲಿದ್ದು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಚುನಾವಣಾ ಸಂಘಟನೆಯನ್ನು ಸಜ್ಜುಗೊಳಿಸಲು ನವಶಕ್ತಿ ಸಂಘಟನೆಯನ್ನು ಸಬಲಗೊಳಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಪಕ್ಷದ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಗೋಕಾಕ ಮತಕ್ಷೇತ್ರವನ್ನು ಅತಿಸೂಕ್ಷ ್ಮ ಮತಕ್ಷೇತ್ರವೆಂದು ಪರಿಗಣಿಸಿ ಚುನಾವಣೆಯನ್ನು ವೆಬ್ ಕ್ಯಾಮರಾ ಅಳವಡಿಕೆಯ ಜೊತೆಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಪೂರಕ ಕ್ರಮ ಕೈಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಬಿಜೆಪಿಯ ಉನ್ನತ ನಿಯೋಗದಿಂದ ಈಗಾಗಲೇ ಎರಡು ಸಲ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಎಲ್. ಮುತ್ತೆನ್ನವರ, ವಿರುಪಾಕ್ಷ ಯಲಿಗಾರ, ಶಶಿಧರ ದೇಮಶೆಟ್ಟಿ, ಉಮೇಶ ನಿರ್ವಾಣಿ, ನಾಗಲಿಂಗ ಪೋತದಾರ, ಶ್ರೀದೇವಿ ತಡಕೋಡ, ವಂದನಾ ಕತ್ತಿ ಮುಂತಾದವರು ಮಾತನಾಡಿದರು. ಶಾಮಾನಂದ ಪೂಜೇರಿ, ಲಕ್ಕಪ್ಪ ತಹಶೀಲ್ದಾರ, ಪ್ರಕಾಶ ಬಾಗೋಜಿ, ಬಸವರಾಜ ಹಿರೇಮಠ, ಜ್ಯೋತಿ ಕೋಲಾರ, ಬಸವರಾಜ ಇಟ್ನಾಳ ಮುಂತಾದವರು ಉಪಸ್ಥಿತರಿದ್ದರು.