ಆ್ಯಪ್ನಗರ

ಕೃಷ್ಣೆ ತುಂಬಿ ಹರಿದರೂ ಕಾಲುವೆಗಳು ಬರಿದು!

ಸಂತೋಷ ರಾ ಬಡಕಂಬಿ ಅಥಣಿ ಮಳೆಗಾಲ ಶುರುವಾಗಿ ತಿಂಗಳಾದರೂ ಅಥಣಿ ತಾಲೂಕಿನಲ್ಲಿ ಮಳೆ ಸುರಿದದ್ದು ಅತಿ ಕಡಿಮೆ...

Vijaya Karnataka 29 Jul 2019, 5:00 am
ಸಂತೋಷ ರಾ. ಬಡಕಂಬಿ ಅಥಣಿ
Vijaya Karnataka Web BEL-28 ATHANI-0001

ಮಳೆಗಾಲ ಶುರುವಾಗಿ ತಿಂಗಳಾದರೂ ಅಥಣಿ ತಾಲೂಕಿನಲ್ಲಿ ಮಳೆ ಸುರಿದದ್ದು ಅತಿ ಕಡಿಮೆ. ನೆರೆಯ ಮಹಾರಾಷ್ಟ್ರದ ಮಳೆಗೆ ಕೃಷ್ಣೆಯ ಒಡಲು ತುಂಬಿದೆ. ತಾಲೂಕಿನಲ್ಲಿ ಕೃಷ್ಣೆ ರಭಸದಲ್ಲಿ ಹರಿಯುತ್ತಿದ್ದರೂ ಕಾಲುವೆಗಳ ಮೂಲಕ ನೀರು ಹರಿಸುವ ಪ್ರಯತ್ನ ವಿಫಲವಾಗಿದೆ. ಕಾಲುವೆಗಳ ನೀರಿಗಾಗಿ ಕಾದು ಸುಸ್ತಾದ ಕೃಷಿಕರು ಅಕ್ಷರಶಃ ಕಂಗಾಲಾಗಿದ್ದಾರೆ.

ತಾಲೂಕಿನ ಪ್ರಮುಖ ನೀರಾವರಿ ಯೋಜನೆಯಾದ ಕರಿ ಮಸೂತಿ ಏತ ನೀರಾವರಿ ಕಾಲುವೆಯನ್ನು ಆಧರಿಸಿ ಅಥಣಿ ತಾಲೂಕಿನ ಪೂರ್ವ ಭಾಗ ಹಾಗೂ ಉತ್ತರ ಭಾಗದ ತಾಲೂಕಿನ ಎಲ್ಲ ರೈತರು ಭೂಮಿ ಹದಗೊಳಿಸಿ ಬಿತ್ತನೆ ಮಾಡಿದ್ದಾರೆ. ವಿಪರ್ಯಾಸವೆಂಬಂತೆ ಕೃಷ್ಣೆ ಮೈದುಂಬಿಕೊಂಡು ತಿಂಗಳುಗಳೇ ಕಳೆದುಹೋಗಿದ್ದರೂ ಕಾಲುವೆಗಳಲ್ಲಿ ಹನಿ ನೀರಿನ ಹರಿವೂ ಇಲ್ಲದಿರುವುದು ಬಿತ್ತನೆ ಮಾಡಿದ ಬೆಳೆಯ ಭವಿಷ್ಯ ಕೆಡಿಸುವಂತಾಗಿದೆ. ಕೆಲವು ಕಾಲುವೆಗಳಿಗೆ ನೀರು ಬಿಟ್ಟು 22 ದಿನಗಳು ಗತಿಸಿದರೂ ಈವರೆಗೆ ಉಪ ಕಾಲುವೆಗಳಿಗೆ ನೀರು ತಲುಪಿಲ್ಲ.

ಇತ್ತ ತಾಲೂಕಿನ ಕೊನೆಯ ಗಡಿ ಭಾಗದ ಉತ್ತರಭಾಗದ ಹಳ್ಳಿಗಳಾದ ಗುಂಡೆವಾಡಿ, ಪಾರ್ಥನಹಳ್ಳಿ, ಜಂಬಗಿ ಮತ್ತಿತರ ಕೆಲವು ಹಳ್ಳಿಗಳ ಕಾಲುವೆಗಳು ಇನ್ನೂ ಒಣಗಿವೆ. ರೈತರು ಪ್ರತಿ ದಿನ ಕಾಲುವೆಗೆ ಬಂದು ನೀರಿಗಾಗಿ ನೋಡಿ ಹೋಗುವ ಪರಿಸ್ಥಿತಿ ಬಂದಿದೆ. ಅಥಣಿಯಿಂದ ಸುಮಾರು 7 ಕಿಮೀ ಅಂತರದಲ್ಲಿ ಜತ್ತ ರಸ್ತೆಯ ಪಕ್ಕದಲ್ಲಿ ಕಾಲುವೆಗೆ ಬಿಟ್ಟ ನೀರು ಭಾಗೀರಥಿ ಹಳ್ಳಕ್ಕೆ ಬರುತ್ತದೆ. ಆದರೆ ಗುಂಡೇವಾಡಿ ಹಾಗೂ ಚಮಕೇರಿ ಗ್ರಾಮದಲ್ಲಿ ಕಾಲುವೆ ಇದ್ದರೂ ಇಲ್ಲದ ಸ್ಥಿತಿ ಉಂಟಾಗಿದೆ.

ಒಂದಿಷ್ಟು ಕಾಲುವೆಗಳನ್ನು ರೈತರೇ ಮುಂದಾಗಿ ಸ್ವಚ್ಛ ಮಾಡಿಕೊಂಡಿದ್ದಾರೆ. ಈ ಮಧ್ಯೆಯೂ ಆಡಳಿತವನ್ನು ಎಚ್ಚರಿಸಲು ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅವು ಫಲ ನೀಡದಿದ್ದರೆ ಬೀದಿಗಿಳಿದು ಹೋರಾಟ ನಡೆಸುವ ಚಿಂತನೆಯಲ್ಲಿ ತೊಡಗಿದ್ದಾರೆ.

ಕಾಲುವೆಗಳಲ್ಲಿ ನೀರೇಕೆ ಬಾರದು?
*ಕಾಲುವೆಗಳ ನಿರ್ವಹಣೆಯಿಲ್ಲ. ಕಲ್ಲು, ಮುಳ್ಳು ಮತ್ತಿತರ ತ್ಯಾಜ್ಯ ತೆಗೆಯದೇ ಇರುವುದು.
*ರೈತರು ತಮಗೆ ಇಷ್ಟ ಬಂದ ಹಾಗೆ ಕಾಲುವೆಗಳನ್ನು ಒಡೆದು ಹಾಕಿರುವುದು.
*ಸರಿಯಾದ ಸಮಯಕ್ಕೆ ಕಾಲುವೆ ದುರಸ್ತಿ ಮಾಡದೇ ಇರುವುದು.

ಈ ಬಾರಿ ಯಾವುದೇ ಕಾಲುವೆಗಳ ಹೂಳು ತೆಗೆದಿಲ್ಲ. ಆದ್ದರಿಂದ ತಾಲೂಕಿನ ಕೊನೆಯ ಭಾಗದವರೆಗೂ ನೀರು ಸರಾಗವಾಗಿ ತಲುಪುತ್ತಿಲ್ಲ, ಇಂತಹ ನೀರಿನ ಅಭಾವದ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳಲಿ.
- ಮಹಾದೇವ ಮಡಿವಾಳ, ಅಥಣಿ ತಾಲೂಕು ರೈತ ಸಂಘದ ಅಧ್ಯಕ್ಷ

ಅಥಣಿ ತಾಲೂಕಿನ ಕೆಲವೆಡೆಗಳಲ್ಲಿ ಕಾಲುವೆ ಮೂಲಕ ನೀರು ಸೋರಿಕೆಯಾಗಿ ಕೆಲವು ಸ್ಥಳಗಳಲ್ಲಿ ರೈತರಿಗೆ ಅನಾನುಕೂಲ ಉಂಟಾಗುತ್ತಿದೆ. ಅನೇಕ ಕಡೆ ನೀರು ತಲುಪುತ್ತಿಲ್ಲ. ಹೀಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತಾರತಮ್ಯ ಮಾಡದೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
- ಪ್ರಶಾಂತ ತೋಡಕರ, ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ

ಕಾಲುವೆಗೆ ನೀರು ಬಿಟ್ಟು ಸುಮಾರು 22 ದಿನಗಳಾದರೂ ನಮ್ಮ ಗ್ರಾಮದ ಕಾಲುವೆಗೆ ನೀರು ಬಂದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನೀರು ಬಿಡದಿದ್ದರೆ ಗುಂಡೇವಾಡಿ ಗ್ರಾಮದಲ್ಲಿ ಹಾದು ಹೋಗುವ ಜತ್ತ- ಜಾಂಬೋಟಿ ರಸ್ತೆ ಬಂದ್‌ ಮಾಡಿ ಪ್ರತಿಭಟಿಸಬೇಕಾಗುತ್ತದೆ.
-ಸುರೇಶ ಕದಮ್‌, ಗುಂಡೇವಾಡಿ ಗ್ರಾಮದ ರೈತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ