ಹಗರಿಬೊಮ್ಮನಹಳ್ಳಿ: ಗ್ರಾ.ಪಂ.ನೌಕರರ 20 ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ರಾಜ್ಯ ಗ್ರಾ.ಪಂ.ನೌಕರರ ಸಂಘದ ಪದಾಧಿಕಾರಿಗಳು ತಾ.ಪಂ.ಕಚೇರಿ ಎದುರು ಧರಣಿ ಮಂಗಳವಾರ ನಡೆಸಿದರು. ತಾಲೂಕು ಸಂಘದ ಉಪಾಧ್ಯಕ್ಷ ಮಾಲವಿ ಕೊಟ್ರೇಶ್ ಮಾತನಾಡಿ, ಕಳೆದ 20 ತಿಂಗಳ ಬಾಕಿ ವೇತನ ಪಾವತಿಯಾಗದೆ ನೌಕರರು ಬದುಕು ಸಂಕಷ್ಟದಲ್ಲಿದೆ. ಸರಕಾರ ನೌರರ ವೇತನ ಹೆಚ್ಚಿಸುವಂತೆ ಆದೇಶ ಹೊರಡಿಸಿ 6 ತಿಂಗಳಾದರೂ ಪ್ರಯೋಜನವಾಗಿಲ್ಲ. ತೆರಿಗೆ ಸಂಗ್ರಹಣೆಯ ಒಟ್ಟು ಮೊತ್ತದ ಪೈಕಿ ಶೇ.40 ರಷ್ಟನ್ನು ಸಿಬ್ಬಂದಿ ವೇತನಕ್ಕೆ ಬಳಕೆ ಮಾಡಿಕೊಳ್ಳುವ ಆದೇಶವಿದೆ. ಆದರೆ, ಸಿಬ್ಬಂದಿ ವೇತನ ಪಾವತಿಸದೆ ಅಭಿವೃದ್ಧಿ ಕಾಮಗಾರಿಗೆ ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ಮಹೇಶ್ವರ ಮಾತನಾಡಿ, ನಿವೃತ್ತಿ ಮತ್ತು ಮರಣ ಹೊಂದಿದ ನೌಕರರ ಕುಟುಂಬದವರಿಗೆ ಉಪದಾನವಾಗಿ 15 ತಿಂಗಳ ವೇತನ ನೀಡಬೇಕು. ರಾಜ್ಯದ್ಯಂತ ಖಾಲಿ ಇರುವ 3522 ಲೆಕ್ಕ ಸಹಾಯಕರು, ಗ್ರೇಡ್ 2 ಕಾರ್ಯದರ್ಶಿ ಹುದ್ದೆ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ತೆರಿಗೆ ಸಂಗ್ರಹಕಾರರಿಗೆ ಶೇ.70 ಬದಲು ಶೇ.100 ರಷ್ಟು ಪ್ರಮಾಣದಲ್ಲಿ ಗ್ರೇಡ್ 2 ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಬೇಕು. ಪಂಪ್ಆಪರೇಟರ್ಗೆ ತೆರಿಗೆ ಸಂಗ್ರಹಕಾರರ ಹುದ್ದೆಗೆ ಭರ್ತಿ ನೀಡಬೇಕು ಎಂದು ಒತ್ತಾಯಿಸಿದರು. ಸಿಐಟಿಯು ಅಧ್ಯಕ್ಷ ಎಸ್.ಜಗನ್ನಾಥ್ ಮಾತನಾಡಿದರು. ತಾ.ಪಂ.ವ್ಯವಸ್ಥಾಪಕ ದಾದಾಪೀರ್ಗೆ ಮನವಿ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಕನಕಪ್ಪ, ಶಿವಕುಮಾರ್, ಬೆಣಕಲ್ ನಿಂಗಪ್ಪ, ಕೆ.ನಿಂಗಪ್ಪ, ಅಡಿವೆಪ್ಪ, ನಾಗರಾಜ, ಕೊಟ್ರೇಶ್, ಸಂಗಪ್ಪ, ಸಿದ್ದೇಶ ಇದ್ದರು.
ವೇತನ ಪಾವತಿಸಲು ಆಗ್ರಹಿಸಿ ಧರಣಿ
ವಿಕ ಸುದ್ದಿಲೋಕ 16 Nov 2016, 9:00 am
Subscribe