ಆ್ಯಪ್ನಗರ

ಆದೇಶಕ್ಕೆ ಕಿಮ್ಮತ್ತಿಲ್ಲ: ಅಗ್ರಿಗೇಟರ್‌ಗಳ ಧನದಾಹಕ್ಕೆ ಅಂಕುಶವಿಲ್ಲ, ಏಕರೂಪ ಪ್ರಯಾಣ ದರ ಪಾಲನೆಗೆ ಹಿಂದೇಟು

ಅಗ್ರಿಗೇಟರ್‌ ಕಂಪನಿಗಳಿಗೆ ಅಥವಾ ಇತರೆ ಟ್ಯಾಕ್ಸಿ ಚಾಲಕರಿಗೆ ಪರ್ಮಿಟ್‌ ಕೊಡುವ ಸಂದರ್ಭದಲ್ಲೇ ಸರಕಾರದ ಆದೇಶಗಳು ಹಾಗೂ ನಿಗದಿತ ಪ್ರಯಾಣ ದರವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಷರತ್ತು ವಿಧಿಸಲಾಗಿರುತ್ತದೆ. ಪ್ರಯಾಣ ದರದ ಆದೇಶ ಉಲ್ಲಂಘಿಸಿದರೆ ಸಂಬಂಧಪಟ್ಟ ಅಗ್ರಿಗೇಟರ್‌ ಕಂಪನಿಗಳ ಅಥವಾ ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೆ ದಂಡ ವಿಧಿಸಲು ಕಾನೂನಿನಲ್ಲಿಅವಕಾಶವಿದೆ. ​​​ಅಲ್ಲದೆ, ಪರ್ಮಿಟ್‌ (ರಹದಾರಿ ಪತ್ರ) ಸಹ ರದ್ದುಪಡಿಸಬಹುದು.

Edited byಶ್ರೀಲಕ್ಷ್ಮೀ ಎಚ್ಎಲ್ | Vijaya Karnataka Web 24 Feb 2024, 6:31 am

ಹೈಲೈಟ್ಸ್‌:

  • ಏಕರೂಪ ಪ್ರಯಾಣ ದರ ಪಾಲನೆಗೆ ಅಗ್ರಿಗೇಟರ್ ಹಿಂದೇಟು, ಸಾರಿಗೆ ಇಲಾಖೆ ಮೌನ
  • ಸಮಯ, ಬೇಡಿಕೆ ಅನುಸಾರ ಪ್ರಯಾಣ ದರ ನಿಗದಿ
  • -ಸರ್ಜ್‌ ಪ್ರೈಸಿಂಗ್‌ ಹೆಸರಿನಲ್ಲಿ ಪ್ರಯಾಣಿಕರ ಸುಲಿಗೆ
  • ಹತ್ತುವಾಗ ಒಂದು ದರ, ಇಳಿಯುವಾಗ ಮತ್ತೊಂದು ದರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಏಕರೂಪ ಪ್ರಯಾಣ ದರ ಪಾಲನೆಗೆ ಅಗ್ರಿಗೇಟರ್ ಹಿಂದೇಟು
ಏಕರೂಪ ಪ್ರಯಾಣ ದರ ಪಾಲನೆಗೆ ಅಗ್ರಿಗೇಟರ್ ಹಿಂದೇಟು
  • ಜೆ.ಆರ್‌.ಗಿರೀಶ್‌
ಬೆಂಗಳೂರು: ರಾಜಧಾನಿಯಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಯ ಅಗ್ರಿಗೇಟರ್‌ ಕಂಪನಿಗಳು ಹಾಗೂ ಇತರೆ ಟ್ಯಾಕ್ಸಿ ಚಾಲಕರ ಧನದಾಹಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಜಾರಿಗೊಳಿಸಿರುವ ಏಕರೂಪ ಪ್ರಯಾಣ ದರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅಗ್ರಿಗೇಟರ್‌ ಕಂಪನಿಗಳು ಹಾಗೂ ಇತರೆ ಟ್ಯಾಕ್ಸಿ ಚಾಲಕರು ಈ ಆದೇಶ ಲೆಕ್ಕಿಸದೆ ಹಿಂದಿನಂತೆಯೇ ಪ್ರಯಾಣಿಕರ ಸುಲಿಗೆಯ ಚಾಳಿ ಮುಂದುವರಿಸಿದ್ದಾರೆ.
ನಗರದಲ್ಲಿಸುಮಾರು 2.22 ಲಕ್ಷ ಸಿಟಿ ಟ್ಯಾಕ್ಸಿಗಳಿದ್ದು, ನಿತ್ಯ 80 ಸಾವಿರಕ್ಕೂ ಹೆಚ್ಚು ಟ್ರಿಪ್‌ ಸಂಚಾರವಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆಯು ರಾಜಧಾನಿ ಸೇರಿದಂತೆ ರಾಜ್ಯದೆಲ್ಲೆಡೆ ಸಿಟಿ ಟ್ಯಾಕ್ಸಿಗಳಿಗೆ ಏಕರೂಪ ಪ್ರಯಾಣ ದರ ನಿಗದಿಪಡಿಸಿ ಫೆ.3ರಂದು ಆದೇಶ ಹೊರಡಿಸಿತ್ತು. ಜತೆಗೆ, ತಕ್ಷಣದಿಂದಲೇ ಈ ಆದೇಶ ಪಾಲಿಸುವಂತೆ ಸೂಚಿಸಿತ್ತು.

ಬೆಂಗಳೂರಿನಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಸಾರಿಗೆ ಅಧಿಕಾರಿಗಳು; 1 ಲಕ್ಷಕ್ಕೂ ದಂಡ!
ಆದರೆ, ಈ ಆದೇಶ ಪಾಲನೆಗೆ ಹಿಂದೇಟು ಹಾಕುತ್ತಿರುವ ಅಗ್ರಿಗೇಟರ್‌ ಕಂಪನಿಗಳು ಪ್ರಯಾಣಿಕರಿಂದ ಮನಬಂದಂತೆ ದರ ವಸೂಲಿ ಮಾಡುತ್ತಿವೆ. ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಪ್ರಯಾಣ ದರವು ದಿನದ 24 ತಾಸೂ ಒಂದೇ ರೀತಿ ಇಲ್ಲ. ಹಿಂದಿನಂತೆಯೇ ಈಗಲೂ ಬೇಡಿಕೆಗೆ ಅನುಗುಣವಾಗಿ ದರ ನಿಗದಿಪಡಿಸಲಾಗುತ್ತಿದೆ. ಬುಕ್ಕಿಂಗ್‌ ಹೆಚ್ಚಿರುವಾಗ ಮತ್ತು ಬುಕ್ಕಿಂಗ್‌ ಕಡಿಮೆ ಇರುವ ಸಂದರ್ಭದಲ್ಲಿ ಬೇರೆ ಬೇರೆ ದರ ವಸೂಲಿ ಮಾಡಲಾಗುತ್ತಿದೆ.

ಬುಕ್ಕಿಂಗ್‌ ಬೇಡಿಕೆ, ತಲುಪಬೇಕಾದ ಸ್ಥಳ ಮತ್ತು ಸಮಯದ ಆಧಾರದಲ್ಲಿ ದರ ನಿಗದಿಪಡಿಸಬಾರದೆಂಬ ನಿಯಮವಿದ್ದರೂ ಅದನ್ನು ಲೆಕ್ಕಿಸದೆ ಗ್ರಾಹಕರಿಂದ ದುಪ್ಪಟ್ಟು ಹಣ ಪಡೆಯಲಾಗುತ್ತಿದೆ. ಮತ್ತೊಂದೆಡೆ ಒಂದೇ ಸ್ಥಳಕ್ಕೆ ಬೇರೆ ಬೇರೆ ಅಗ್ರಿಗೇಟರ್‌ ಕಂಪನಿಗಳು ಬೇರೆ ಬೇರೆ ದರ ಪಡೆಯುತ್ತಿವೆ. ಸರ್ಜ್ ಪ್ರೈಸಿಂಗ್‌ (ಬೇಡಿಕೆ ದರ ಏರಿಕೆ) ಹೆಸರಿನಲ್ಲಿ ಗ್ರಾಹಕರನ್ನು ಸುಲಿಗೆ ಮಾಡುತ್ತಿವೆ. ಇತರೆ ಸಿಟಿ ಟ್ಯಾಕ್ಸಿ ಚಾಲಕರು ಸಹ ಅಗ್ರಿಗೇಟರ್‌ ಕಂಪನಿಗಳಂತೆಯೇ ಪ್ರಯಾಣಿಕರಿಂದ ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ.

ನಮ್ಮ ಮೆಟ್ರೋ ಬಿಎಂಟಿಸಿ ಫೀಡರ್‌ ಬಸ್‌ ಸೇವೆಯ ತಿಳಿಯಲು ಕ್ಯು ಆರ್‌ ಕೋಡ್‌; ಸ್ಕ್ಯಾ‌ನ್‌ ಮಾಡಿದರೆ ಬಸ್‌ಗಳ ಮಾಹಿತಿ ಲಭ್ಯ

ತಕ್ಷಣಕ್ಕೆ ಸ್ಪಂದನೆಯಿಲ್ಲ:

ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡಿದಾಗ ಪ್ರಯಾಣಿಕರು ಅಗ್ರಿಗೇಟರ್‌ ಕಂಪನಿಗಳನ್ನು ತಕ್ಷಣವೇ ಸಂಪರ್ಕಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಂಪನಿಗಳ ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿದಾಗ ಸರಿಯಾಗಿ ಸ್ಪಂದಿಸುತ್ತಿಲ್ಲ, ಹೆಚ್ಚಿನ ಬಾರಿ ಸಂಪರ್ಕಕ್ಕೆ ಸಿಗುವುದಿಲ್ಲಎಂಬ ಆರೋಪವಿದೆ.

‘‘ಟ್ಯಾಕ್ಸಿ ಬುಕ್ಕಿಂಗ್‌ ಸಂದರ್ಭದ ದರಕ್ಕೂ, ಡ್ರಾಪ್‌ ಮುಗಿದ ನಂತರ ತೋರಿಸುವ ದರಕ್ಕೂ ಸಾಕಷ್ಟು ವ್ಯತ್ಯಾಸವಾಗುತ್ತಿದೆ. ಟ್ಯಾಕ್ಸಿ ಬುಕ್ಕಿಂಗ್‌ ವೇಳೆ ದರ ಕಡಿಮೆಯಿದ್ದರೆ, ಡ್ರಾಪ್‌ನ ಬಳಿಕ ಆ್ಯಪ್‌ನಲ್ಲಿ ಹೆಚ್ಚು ದರ ತೋರಿಸುತ್ತಿದೆ. ಈ ಬಗ್ಗೆ ಟ್ಯಾಕ್ಸಿ ಚಾಲಕರನ್ನು ಪ್ರಶ್ನಿಸಿದರೆ, ತಮಗೂ ಅದಕ್ಕೂ ಸಂಬಂಧವಿಲ್ಲ. ಆ್ಯಪ್‌ನಲ್ಲಿ ತೋರಿಸಿದಷ್ಟು ಹಣ ಕೊಡಬೇಕಷ್ಟೇ ಎಂದು ರೇಗುತ್ತಾರೆ. ಪ್ರಯಾಣ ದರದಲ್ಲಿಈ ರೀತಿ ವ್ಯತ್ಯಾಸವಾದಾಗ ಅಗ್ರಿಗೇಟರ್‌ ಕಂಪನಿಗಳು ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ನೀಡುತ್ತಿಲ್ಲ,’’ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

ಧಾರವಾಡ ನಗರ ಬಸ್‌ ನಿಲ್ದಾಣ (ಸಿಬಿಟಿ) ಸ್ಥಳಾಂತರ; ಜನರಿಗೆ ಭಾರಿ ಕಿರಿಕಿರಿ

ಕಾನೂನು ಕ್ರಮಕ್ಕೆ ಮೀನಮೇಷ:

ಸಾರಿಗೆ ಇಲಾಖೆಯು ಏಕರೂಪ ದರದ ಆದೇಶ ಪಾಲಿಸದ ಅಗ್ರಿಗೇಟರ್‌ ಕಂಪನಿಗಳು ಅಥವಾ ಟ್ಯಾಕ್ಸಿ ಚಾಲಕರ ವಿರುದ್ಧ ಕಾನೂನಿನ ಅಸ್ತ್ರ ಪ್ರಯೋಗಿಸಲು ಮೀನಮೇಷ ಎಣಿಸುತ್ತಿದೆ. ಇದರಿಂದ ಅಗ್ರಿಗೇಟರ್‌ ಕಂಪನಿಗಳ ಅಥವಾ ಇತರೆ ಟ್ಯಾಕ್ಸಿ ಚಾಲಕರ ಧನದಾಹಕ್ಕೆ ಅಂಕುಶ ಇಲ್ಲದಂತಾಗಿದೆ.

ಸಾರಿಗೆ ಇಲಾಖೆಯು ಏಕರೂಪ ಪ್ರಯಾಣ ದರದ ಆದೇಶ ಜಾರಿಗೆ ನಿರ್ದಿಷ್ಟ ಗಡುವು ನಿಗದಿಪಡಿಸಿಲ್ಲ. ಮತ್ತೊಂದೆಡೆ ಆದೇಶ ಉಲ್ಲಂಘಿಸಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿಯೂ ಇಲಾಖೆ ಹೇಳಿಲ್ಲ. ಕಾನೂನು ಕ್ರಮದ ಭಯವಿಲ್ಲದ ಕಾರಣ ಅಗ್ರಿಗೇಟರ್‌ ಕಂಪನಿಗಳು ಪ್ರಯಾಣಿಕರಿಂದ ಮನಬಂದಂತೆ ದರ ವಸೂಲಿ ಮಾಡುತ್ತಿವೆ.

-ತನ್ವೀರ್‌ ಪಾಷಾ, ಅಧ್ಯಕ್ಷರು, ಓಲಾ ಮತ್ತು ಉಬರ್‌ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘ

ಏಕರೂಪ ದರದ ಆದೇಶ ಉಲ್ಲಂಘಿಸಿ ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ ಸಾರ್ವಜನಿಕರು ಸಮೀಪದ ಪೊಲೀಸ್‌ ಠಾಣೆ ಅಥವಾ ಆರ್‌ಟಿಒ ಕಚೇರಿಗೆ ದೂರು ಕೊಡಬಹುದು. ದೂರು ಪರಿಶೀಲಿಸಿ ಸಂಬಂಧಪಟ್ಟ ಅಗ್ರಿಗೇಟರ್‌ ಕಂಪನಿಗಳು ಅಥವಾ ಚಾಲಕರಿಗೆ ನೋಟಿಸ್‌ ಜಾರಿ ಮಾಡಿ ದಂಡ ವಿಧಿಸುತ್ತೇವೆ. ಆದೇಶ ಉಲ್ಲಂಘನೆ ಪ್ರವೃತ್ತಿ ಮುಂದುವರಿಸಿದರೆ ರಹದಾರಿ ಪತ್ರ ರದ್ದುಪಡಿಸುತ್ತೇವೆ.

-ಸಿ.ಮಲ್ಲಿಕಾರ್ಜುನ, ಹೆಚ್ಚುವರಿ ಆಯುಕ್ತರು, ಸಾರಿಗೆ ಇಲಾಖೆ
ಲೇಖಕರ ಬಗ್ಗೆ
ಶ್ರೀಲಕ್ಷ್ಮೀ ಎಚ್ಎಲ್
ಶ್ರೀಲಕ್ಷ್ಮೀ ಅವರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯವರು. ಕಳೆದ 5 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ ಕರ್ನಾಟಕ ಆನ್‌ಲೈನ್‌ ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶೀಯ ಸುದ್ದಿಗಳು, ಲೈಫ್‌ಸ್ಟೈಲ್ ಸುದ್ದಿಗಳನ್ನು ಬರೆಯುವುದು ಅಚ್ಚುಮೆಚ್ಚು. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವುದು, ಕಲಿಯುವುದು, ಹೊಸ ಜಾಗಗಳಿಗೆ ಭೇಟಿ ನೀಡುವುದು ಇಷ್ಟದ ವಿಚಾರ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ