ಆ್ಯಪ್ನಗರ

ಕೊರೊನಾ ನಿಯಂತ್ರಣಕ್ಕೆ ಖಾಕಿ ಮದ್ದು! ಲಾಠಿ ಕೈಬಿಟ್ಟ ಬೆಂಗಳೂರು ಪೊಲೀಸರು ಏನ್ಮಾಡ್ತಿದ್ದಾರೆ ?

ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿದೆ. ಈ ಲಾಕ್‌ಡೌನ್‌ ಪಾಲನೆ ಮಾಡಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ವಿಭಿನ್ನ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅವುಗಳು ಹೀಗಿವೆ.

Vijaya Karnataka Web 3 Apr 2020, 4:40 pm
ರಾಜ್ಯದಲ್ಲಿ ಕೊರೊನಾ ಮಹಾಮಾರಿ ಜನರಲ್ಲಿ ಆತಂಕ ಮೂಡಿಸುತ್ತಿದೆ. ಕೊರೊನಾ ಸೋಂಕನ್ನು ನಿಯಂತ್ರಣ ಮಾಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳತ್ತಿದೆ. ಕಟ್ಟುನಿಟ್ಟಿನ ಸಾಮಾಜಿಕ ಆಂತರ ಕಾಯ್ದುಕೊಳ್ಳಲು ಸೂಚನೆ ನೀಡಿದೆ. ಸರ್ಕಾರದ ಆದೇಶ ಪಾಲನೆಯಾಗುವಂತೆ ಮಾಡಬೇಕಾದವರು ಪೊಲೀಸರು. ಹೌದು, ಅದಕ್ಕಾಗಿ ಬೆಂಗಳೂರು ಪೊಲೀಸರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಪೊಲೀಸರು ಜನರನ್ನು ಮನೆಯಿಂದ ಹೊರಬರದಂತೆ ಲಾಠಿ ಮೂಲಕ ನಿಯಂತ್ರಣ ಮಾಡುತ್ತಿದ್ದರು. ಆದರೆ ಪೊಲೀಸರ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪರಿಣಾಮ ಲಾಠಿ ಕೈಬಿಟ್ಟ ಪೊಲೀಸರು ಕೊರೊನಾ ಕುರಿತಾಗಿ ಜನರಲ್ಲಿ ಅರಿವು ಮೂಡಿಸಲು ವಿಭಿನ್ನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗಾದರೆ ಪೊಲೀಸರು ಹೇಗೆಲ್ಲಾ ಜನರಿಗೆ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸುತ್ತಿದ್ದಾರೆ ಎಂಬುವುದರ ಕುರಿತಾಗಿ ಇಲ್ಲಿದೆ ಪೂರ್ಣ ವಿವರ.
Vijaya Karnataka Web bengaluru police controlling coronavirus with different style
ಕೊರೊನಾ ನಿಯಂತ್ರಣಕ್ಕೆ ಖಾಕಿ ಮದ್ದು! ಲಾಠಿ ಕೈಬಿಟ್ಟ ಬೆಂಗಳೂರು ಪೊಲೀಸರು ಏನ್ಮಾಡ್ತಿದ್ದಾರೆ ?



​ರಸ್ತೆಗೆ ನೀನು ಬಂದರೆ, ನಾನು ಬರುವೆನು ನಿನ್ನ ಮನೆಗೆ !

ಬೆಂಗಳೂರಿನ ರಸ್ತೆಗಳಿಗೆ ಅನಗತ್ಯವಾಗಿ ಜನರು ಬಾರದಂತೆ ಪೊಲೀಸರು ಕೆಲವೊಂದು ವಿಭಿನ್ನ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಕೊರೊನಾ ಕುರಿತಾಗಿ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ನಗರದ ಹಲವು ರಸ್ತೆಗಳಲ್ಲಿ ಕೊರೊನಾ ಕುರಿತಾಗಿ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಕೊರೊನಾ ಸೋಂಕು ಎಷ್ಟು ಭಯಾನಕವಾಗಿದೆ ಎಂಬವುದನ್ನು ಚಿತ್ರದ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಪೊಲೀಸರದ್ದು. ಮನೆಯಿಂದ ಹೊರ ಬಂದವರು ಈ ಭಯಾನಕ ಚಿತ್ರವನ್ನಾದರೂ ನೋಡಿ ಎಚ್ಚೆತ್ತುಕೊಳ್ಳಲಿ ಎಂಬುವುದು ಪೊಲೀಸರ ಉದ್ದೇಶ.

​ಕೊರೊನಾ ಭಯವನ್ನು ಹುಟ್ಟಿಸಲು ಬಂತು ವಿಚಿತ್ರ ಹೆಲ್ಮೆಟ್‌

ಜನರಲ್ಲಿ ಲಾಠಿಯ ಭಯದ ಹೊರತಾಗಿ ವಿಭಿನ್ನವಾಗಿ ಅರಿವು ಮೂಡಿಸಲು ಬೆಂಗಳೂರು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಅದಕ್ಕಾಗಿ ಕೊರೊನಾ ಸೋಂಕಿನ ಹೆಲ್ಮೆಟ್‌ ಒಂದನ್ನು ತಯಾರಿಸಿದ್ದಾರೆ. ಈ ಹೆಲ್ಮೆಟ್‌ ಧರಿಸಿದ ಪೊಲೀಸ್‌ ಸಿಬ್ಬಂದಿ ಮನೆಯಿಂದ ಹೊರಬಂದ ಜನರಿಗೆ ಅರಿವು ಮೂಡಿಸುತ್ತಾರೆ. ಯಾರಾದರೂ ಒಮ್ಮೆ ಆ ಹೆಲ್ಮೆಟ್‌ ನೋಡಿದರೆ ಬೆಚ್ಚಿ ಬೀಳುವುದು ಖಂಡಿತ. ನಗರದ ರಸ್ತೆಗಳಲ್ಲಿ ವಿನಾ ಕಾರಣ ಹೊರಗಡೆ ಬಂದರೆ ಅಂತವರನ್ನು ವಿಚಿತ್ರ ಕೊರೊನಾ ಹೆಲ್ಮೆಟ್‌ ಧರಿಸಿದ ಪೊಲೀಸರು ಮುತ್ತಿಕೊಂಡು ಭಯ ಹುಟ್ಟಿಸುತ್ತಾರೆ.

ಕೊರೊನಾ ಅರಿವು ಮೂಡಿಸಲು ಪೊಲೀಸ್ ಹಾಡು

ಕೊರೊನಾ ಕುರಿತಾಗಿ ಜನರಲ್ಲಿ ಅರಿವು ಮೂಡಿಸಲು ಪೊಲೀಸರು ಹಾಡನ್ನು ರಚಿಸಿದ್ದಾರೆ. ಕೊರೊನಾ ಸೋಂಕು ಎಷ್ಟೊಂದು ಅಪಾಯಕಾರಿಯಾಗಿದೆ, ಹಾಗೂ ಇದನ್ನು ಯಾವ ರೀತಿಯಲ್ಲಿ ನಿಯಂತ್ರಣ ಮಾಡಬೇಕು ಎಂಬುವುದನ್ನು ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಪೊಲೀಸರದ್ದು. ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಸಾಕಷ್ಟು ವೈರಲ್ ಆಗುತ್ತಿದೆ. ಸ್ವತಃ ಪೊಲೀಸರೇ ಹಾಡು ರಚಿಸಿ ತಾವೇ ಹಾಡಿದ್ದಾರೆ. ಪೊಲೀಸರ ಇಂತಹ ಪ್ರಯತ್ನಕ್ಕೆ ಜನರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಾಠಿಯ ಬದಲಾಗಿ ಇಂತಹ ವಿಭಿನ್ನ ಪ್ರಯತ್ನದ ಮೂಲಕ ಜನರಲ್ಲಿ ಅರಿವು ಮೂಡಿಸುವ ನಡೆ ಶ್ಲಾಘನೀಯ.

​ಪೊಲೀಸರ ಕಾರ್ಯಕ್ಕೆ ಕಲಾವಿದನ ಮೆಚ್ಚುಗೆ

ಕೊರೊನಾ ಸೋಂಕು ಭಯದ ನಡುವೆಯೂ ಪೊಲೀಸರು ಮನೆಯಿಂದ ಹೊರಬಂದು ಕೆಲಸ ನಿರ್ವಹಿಸುತ್ತಿದ್ದಾರೆ. ಮನೆ, ಹೆಂಡತಿ, ಗಂಡ ಹಾಗೂ ಮಕ್ಕಳಿಂದ ದೂರವಾಗಿ ಬೀದಿಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟಿಗೆ ವಿರೋಧ ಬಂದರೂ ಬಳಿಕ ಪೊಲೀಸರ ಇತರ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಕಲಾವಿದರೊಬ್ಬರು ಪೊಲೀಸ್‌ ಒಬ್ಬ ಎಲ್ಲೋ ಒಂದು ಕಡೆ ನೆಲದಲ್ಲಿ ಕುಳಿತುಕೊಂಡು ಊಟ ಮಾಡುವ ಫೋಟೋವನ್ನು ಚಿತ್ರ ಬಿಡಿಸಿದ್ದಾರೆ. ಈ ಚಿತ್ರ ವೈರಲ್ ಆಗಿದೆ. ಜನರಿಂದಲೂ ಪೊಲೀಸರ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ರಾತ್ರಿ ಹಗಲೂ ಕಷ್ಟಪಟ್ಟು ಕೊರೊನಾ ಲಾಕ್‌ಡೌನ್ ಪಾಲನೆಯಾಗುವಂತೆ ನೋಡುತ್ತಿರುವ ಪೊಲೀಸರ ಕಾರ್ಯವನ್ನು ನೆಟ್ಟಿಗರೂ ಕೊಂಡಾಡುತ್ತಿದ್ದಾರೆ.

​ಪೊಲೀಸರೊಂದಿಗೆ ನಾವೂ ಕೈಜೋಡಿಸೋಣ ಕೊರೊನಾ ನಿಯಂತ್ರಿಸೋಣ

ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪೊಲೀಸರ ಜೊತೆಗೆ ನಾವೂ ಕೈಜೋಡಿಸಬೇಕಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ವಿನಾ ಕಾರಣ ಮನೆಯಿಂದ ಹೊರಬರುವುದು ಸರಿಯಲ್ಲ. ಸಾಮಾಜಿಕ ಅಂತರವನ್ನು ಪಾಲಿಸಿ ಎಂದು ಸೂಚನೆ ನೀಡಿದಾಗ ಅದನ್ನು ಪಾಲನೆ ಮಾಡಬೇಕಾಗಿದೆ. ಅನಗತ್ಯವಾಗಿ ಪೊಲೀಸರ ಜೊತೆಗೆ ವಾಗ್ದಾದ ನಡೆಸುವುದು ಹಾಗೂ ಅವರಿಗೆ ಸಹಕಾರ ನೀಡದೇ ಇರುವುದು ಸರಿಯಲ್ಲ. ಅದರ ಜೊತೆಗೆ ಪೊಲೀಸರು ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ