ಆ್ಯಪ್ನಗರ

700 ರೂ ಇದ್ದ ರೇಷ್ಮೆಗೂಡಿನ ಬೆಲೆ 300 ರೂ.ಗೆ ಕುಸಿತ; 2 ವರ್ಷಗಳ ನಂತರ ಎದ್ದುಕೂತ ಪೆಬ್ರಿನ್‌ ಪೆಡಂಭೂತ

ಗಂಟುರೋಗ ಸೋಂಕಿನಿಂದ ಇಟಲಿ ಮತ್ತು ಫ್ರಾನ್ಸ್‌ನಲ್ಲಿ ರೇಷ್ಮೆ ಉದ್ಯಮ ಸರ್ವನಾಶವಾಗಿದೆ. ರಾಜ್ಯ ಸರಕಾರ ಪೆಬ್ರಿನ್‌ ರೋಗದ ಬಗ್ಗೆ ನಿರ್ಲಕ್ಷ್ಯ ತೋರಿದರೆ ರೇಷ್ಮೆ ಉದ್ಯಮ ನಶಿಸಿ ಹೋಗಲಿದೆ. 2021-22ನೇ ಸಾಲಿನಲ್ಲಿ ಪೆಬ್ರಿನ್‌ ಕಾಣಿಸಿಕೊಂಡಿತ್ತು. ವಿಜಯ ಕರ್ನಾಟಕ ಪತ್ರಿಕೆ ಆಗ ವರದಿ ಮಾಡಿತ್ತು. ಇದಾದ ನಂತರ ಬಿತ್ತನೆ ವಲಯಗಳಲ್ಲಿ ಬಿಗಿ ಕ್ರಮ ತೆಗೆದುಕೊಂಡಿದ್ದರಿಂದ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಪೆಬ್ರಿನ್‌ ಉಲ್ಬಣಗೊಂಡಿದ್ದು ರೇಷ್ಮೆ ಬೆಳೆಗಾರರ ಜತೆ ರೇಷ್ಮೆ ಮೊಟ್ಟೆ ಉತ್ಪಾದಕರಿಗೂ ಸಂಕಷ್ಟ ಎದುರಾಗಿದೆ.

Edited byಶ್ರೀಲಕ್ಷ್ಮೀ ಎಚ್ಎಲ್ | Vijaya Karnataka Web 26 Feb 2024, 8:17 am

ಹೈಲೈಟ್ಸ್‌:

  • ರೇಷ್ಮೆ ಕೃಷಿ ಈಗ ಪತ್ತೆ ಪೆಬ್ರಿನ್‌(ಗಂಟುರೋಗ) ಹಾಗೂ ಬೆಲೆ ಕುಸಿತದ ಹೊಡೆತಕ್ಕೆ ಸಿಲುಕಿದ್ದು, ರೇಷ್ಮೆ ಬೆಳೆಗಾರರು ಕಂಗಾಲು
  • 700 ರೂ ಇದ್ದ ರೇಷ್ಮೆಗೂಡಿನ ಬೆಲೆ 300 ರೂ.ಗೆ ಕುಸಿತ, ಹಾಕಿದ ಬಂಡವಾಳ ವಾಪಸ್‌ ಪಡೆಯುವ ಚಿಂತೆಯಲ್ಲಿ ಬೆಳೆಗಾರರು
  • ರೈತರು ಈಗ ಬೇರೆ ಬೆಳೆಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ರೇಷ್ಮೆ ಮಾರುಕಟ್ಟೆ (ಸಾಂದರ್ಭಿಕ ಚಿತ್ರ)
ರೇಷ್ಮೆ ಮಾರುಕಟ್ಟೆ (ಸಾಂದರ್ಭಿಕ ಚಿತ್ರ)
  • ಕಣಿತಹಳ್ಳಿ ಎನ್‌.ಚಂದ್ರೇಗೌಡ
ಚಿಕ್ಕಬಳ್ಳಾಪುರ: ಕೊರೊನಾ ಮತ್ತು ಕೊರೊನಾ ನಂತರ ಕೆಲ ವರ್ಷ ಭಾರೀ ಬೆಲೆಯಿಂದ ಭರ್ಜರಿ ಸದ್ದು ಮಾಡಿದ್ದ ರೇಷ್ಮೆ ಕೃಷಿ ಈಗ ಪತ್ತೆ ಪೆಬ್ರಿನ್‌(ಗಂಟುರೋಗ) ಹಾಗೂ ಬೆಲೆ ಕುಸಿತದ ಹೊಡೆತಕ್ಕೆ ಸಿಲುಕಿದ್ದು, ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ. ನಾನಾ ರೋಗಗಳ ಹಾವಳಿಯಿಂದ ಒಂದೆಡೆ ಗೂಡಿನ ಇಳುವರಿ ಕಡಿಮೆಯಾಗಿರುವುದರ ಜತೆಗೆ ಗೂಡಿನ ಬೆಲೆ ಕೂಡಾ ಕೆ.ಜಿ.ಗೆ 300ರೂ. ಇಳಿದಿದೆ. ಹೀಗಾಗಿ ಹಾಕಿದ್ದ ಬಂಡವಾಳ ವಾಪಸ್‌ ಆಗದೇ ಕಂಗಾಲಾಗಿದ್ದಾರೆ.
ಭರ್ಜರಿ ಬೆಲೆಗೆ ಮಾರುಹೋಗಿ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡಿದ್ದ ರೈತರು ಈಗ ಬೇರೆ ಬೆಳೆಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಕೆ.ಜಿ. ರೇಷ್ಮೆಗೂಡಿನ ಬೆಲೆ 700 ರೂ. ನಿಂದ ಈಗ ಕೇವಲ 300-400 ರೂ.ಗೆ ಕುಸಿದಿದ್ದು, ರೇಷ್ಮೆ ಕೃಷಿಕರಿಗೆ ದಿಕ್ಕೇ ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. 2022 ರಲ್ಲಿ ಕಾಣಿಸಿಕೊಂಡಿದ್ದ ಮಾರಕ ಪೆಬ್ರಿನ್‌ ರೋಗ ಮತ್ತೆ ಕಾಣಿಸಿಕೊಂಡಿರುವುದರಿಂದ ರೇಷ್ಮೆ ಬೆಳೆ ಹಾಳಾಗುತ್ತಿದ್ದು, ರೈತರಿಗೆ ಸಾವಿರಾರು ರೂ. ನಷ್ಟ ಸಂಭವಿಸುತ್ತಿದೆ.

ಶೀಘ್ರ ತಲೆ ಎತ್ತಲಿದೆ ಚಾಮುಂಡೇಶ್ವರಿ ಮೆಗಾ ಸಿಲ್ಕ್ ಕ್ಲಸ್ಟರ್‌!: ಇದರಿಂದ ಮೈಸೂರಿಗೇನು ಲಾಭ?

ಪೆಬ್ರಿನ್‌ ಪೆಡಂಭೂತ:

ರಾಜ್ಯದಲ್ಲಿರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಜಿಲ್ಲೆಗಳಲ್ಲಿ ಅತಿಹೆಚ್ಚು ರೇಷ್ಮೆ ಬೆಳೆಯಲಾಗುತ್ತಿದೆ. ಕೊರೊನಾ ಕಾಲದಲ್ಲಿರೇಷ್ಮೆಗೂಡಿನ ದರದಲ್ಲಿ ಭಾರೀ ಏರಿಕೆಯಾಗಿತ್ತು. ಸಾಕಷ್ಟು ರೈತರು ರೇಷ್ಮೆ ಕೃಷಿ ಕಡೆಗೆ ವಾಲಿದ್ದರು. ಆದರೆ, ಈಗ ಬೆಲೆ ಕುಸಿತ ಹಾಗೂ ಪೆಬ್ರಿನ್‌ ಹೊಡೆತಕ್ಕೆ ರೇಷ್ಮೆಕೃಷಿಗೆ ವಿದಾಯ ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಕೆ.ಜಿ. ರೇಷ್ಮೆಗೂಡು 1000 ರೂ.ವರೆಗೂ ಮಾರಾಟವಾಗಿತ್ತು. ಆದರೆ, ಈಗ ಪ್ರತಿ ಕೆ.ಜಿ. ಗೂಡಿನ ಬೆಲೆ ಕೇವಲ 300ರೂ.ಗೆ ಕುಸಿದಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ತೀವ್ರ ಬರ ಹಿನ್ನೆಲೆ ಹಿಪ್ಪುನೇರಳೆ ಸೊಪ್ಪಿನ ಕೊರತೆಯಿಂದ ಬೆಲೆ ಏರಿಕೆಯಾಗಿದೆ. ಹೀಗಾಗಿ ರೇಷ್ಮೆಗೂಡಿನ ಬೆಲೆಗಿಂತ ಉತ್ಪಾದನಾ ವೆಚ್ಚವೇ ಹೆಚ್ಚಾಗಿದೆ.

ಬಿಡದಿವರೆಗೂ ಮೆಟ್ರೋ ವಿಸ್ತರಣೆಗೆ ತಯಾರಿ: ನಗರದಾಚೆಯ ಸಪ್ತಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು ಅಧ್ಯಯನಕ್ಕೆ ಟೆಂಡರ್

ರೇಷ್ಮೆಕೃಷಿಗೆ ಗಂಡಾಂತರ

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರವಾಗಿ ಹರಡುತ್ತಿರುವ ಗಂಟುರೋಗದ ಸೋಂಕು ಮತ್ತೆ ಉಲ್ಬಣಗೊಂಡಿದೆ. ತಕ್ಷಣವೇ ನಿಯಂತ್ರಿಸದಿದ್ದರೆ ವರ್ಷದೊಳಗೆ ರೇಷ್ಮೆ ಉದ್ಯಮ ಪೂರ್ತಿ ನಶಿಸಿ ಹೋಗುವ ಸಾಧ್ಯತೆಯಿದೆ. ರೋಗವು ತೀವ್ರಗೊಂಡರೆ ರೇಷ್ಮೆ ಬೆಳೆಗಾರರು ಬೀದಿ ಪಾಲಾಗಲಿದ್ದಾರೆ. ವರ್ಷದ ಆರಂಭದಲ್ಲಿ ತಾಯಿ ಚಿಟ್ಟೆಯಿಂದ ಬರುವ ಈ ಗಂಟುರೋಗವನ್ನು ನಿಯಂತ್ರಿಸದೇ ಹೋದರೆ ಉಲ್ಬಣವಾಗಲಿದೆ.

ಬಿತ್ತನೆ ಪ್ರದೇಶಗಳಲ್ಲಿ ಚಿಟ್ಟೆ ಪರೀಕ್ಷೆ, ಸೋಂಕು ನಿವಾರಣೆ, ಬಿತ್ತನೆ ಮಾರುಕಟ್ಟೆಯಲ್ಲಿ ನೂಲು ಬಿಚ್ಚಾಣಿಕೆಗೆ ಹೋಗುವ ಗೂಡಿಗೆ ಹಬೆ ನೀಡುವ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ರೇಷ್ಮೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಹೀಗಾಗಿ ಮತ್ತೆ ಪೆಬ್ರಿನ್‌ ಉಲ್ಬಣಗೊಂಡಿದೆ.

ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ:

ಸೋಂಕಿತ ರೇಷ್ಮೆ ಮೊಟ್ಟೆ ಹಾಗೂ ಹುಳುಗಳನ್ನು ಸುಟ್ಟು ಹಾಕಬೇಕು. ವಿಜ್ಞಾನಿಗಳು ಹಾಗೂ ತಜ್ಞ ಸಿಬ್ಬಂದಿಯನ್ನು ಈ ಕೂಡಲೇ ಗಂಟುರೋಗ ಸೋಂಕಿತ ಪ್ರದೇಶಗಳಿಗೆ ನಿಯೋಜಿಸಿ, ಗುಣಮಟ್ಟ ಪರೀಕ್ಷೆ ಮಾಡಿಸಿ ಪೆಬ್ರಿನ್‌ ರೋಗವನ್ನು ನಿಯಂತ್ರಣಕ್ಕೆ ತರಬೇಕು. ಈ ಪೆಬ್ರಿನ್‌ ರೋಗಾಣು ಸೋಂಕಿತ ಸಂತತಿಯನ್ನು ಸಂಪೂರ್ಣ ನಾಶಪಡಿಸಬೇಕು. ರೈತರ ರೇಷ್ಮೆ ಹುಳು ಸಾಕಣೆ ಮನೆಗಳಲ್ಲಿ ಸೋಂಕು ನಿವಾರಣೆ ಮಾಡಬೇಕು. ಇಲ್ಲವಾದಲ್ಲಿ ಸೋಂಕು ಉಲ್ಬಣಗೊಂಡು ಇಡೀ ರೇಷ್ಮೆ ಬೆಳೆಯೇ ಅವಸಾನಗೊಳ್ಳಲಿದೆ.

ಬೇಡಿಕೆ ಬರುವ ಸಮಯದಲ್ಲಿ ಬೆಲೆ ಕುಸಿತದ ಆತಂಕದಲ್ಲಿ ದ್ರಾಕ್ಷಿ ಬೆಳೆಗಾರರು

ಪೆಬ್ರಿನ್‌ ಕಂಟಕ:

ಪೆಬ್ರಿನ್‌ಪೂರಿತ ರೇಷ್ಮೆ ಗೂಡಿನಿಂದ ಶುರುವಾಗುವ ಪ್ರಕ್ರಿಯೆ ಇಡೀ ರೇಷ್ಮೆ ಬೆಳೆಯನ್ನು ಆಹುತಿ ತೆಗೆದುಕೊಳ್ಳುತ್ತದೆ. ರೇಷ್ಮೆ ಕೃಷಿಯ 3ನೇ ಹಂತದಲ್ಲಿ ಹುಳಗಳು ಸರಿಯಾಗಿ ಬೆಳವಣಿಗೆ ಹೊಂದುವುದಿಲ್ಲ. ಆಗಲೇ ಎಚ್ಚೆತ್ತುಕೊಂಡು ನಾಶಪಡಿಸಿದರೆ ಹೆಚ್ಚಿನ ನಷ್ಟದಿಂದ ಪಾರಾಗಬಹುದು. ಇಲ್ಲವಾದಲ್ಲಿಅಸಮತೋಲನವಾಗಿ ಬೆಳೆದ ಹುಳುಗಳು ಕೊನೆಗೆ ಸರಿಯಾಗಿ ಗೂಡನ್ನು ಕಟ್ಟುವುದಿಲ್ಲ. ಇದರಿಂದ ಸಾವಿರಾರು ರೂ. ಬಂಡವಾಳ ಹಾಕುವ ರೈತರಿಗೆ ಬಂಡವಾಳವೂ ವಾಪಸ್‌ ಆಗದೇ ನಷ್ಟವಾಗಲಿದೆ.

ರೇಷ್ಮೆ ಇಲಾಖೆ ಅಸಹಾಯಕತೆ:

ರೇಷ್ಮೆ ಇಲಾಖೆಗೂ ವಿಲೀನ ಭೀತಿ ಎದುರಾದಾಗಿನಿಂದ ಸಿಬ್ಬಂದಿ ನೇಮಕವಾಗಿಲ್ಲ. ಇರುವ ಸಿಬ್ಬಂದಿ ಸದ್ಯದ ರೇಷ್ಮೆ ಕೃಷಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಿಂದೆಲ್ಲಾರೇಷ್ಮೆ ಕೃಷಿಕರಿಗೆ ಇಲಾಖೆ ವತಿಯಿಂದ ಉಚಿತವಾಗಿ ಸೋಂಕು ನಿವಾರಕಗಳು ಸೇರಿದಂತೆ ರೇಷ್ಮೆ ಕೃಷಿಗೆ ಅವಶ್ಯವಿರುವ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿತ್ತು. ಆದರೆ, ವ್ಯವಸ್ಥೆ ನಿಂತು ವರ್ಷಗಳೇ ಕಳೆದಿವೆ.

ಇನ್ನು ಆಗಾಗ್ಗೆ ಮೊಟ್ಟೆ ಬಿತ್ತನೆ ಕೋಠಿ ಮತ್ತು ಚಾಕಿ ಸಾಕಣೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿತ್ತು. ಆದರೆ, ಸಿಬ್ಬಂದಿ ಕೊರತೆಯಿಂದ ಇದು ಸರಿಯಾಗಿ ನಡೆಯುತ್ತಿಲ್ಲ. ಇನ್ನು ಬಿತ್ತನೆ ವಲಯದಲ್ಲೂ ಕಟ್ಟೆಚ್ಚರ ವಹಿಸಬೇಕಿತ್ತು. ಅಲ್ಲಿಯೂ ಸಿಬ್ಬಂದಿ ಕೊರತೆಯಿಂದ ಪರಿಶೀಲನೆ ನಡೆಯದೇ ಈ ಅವಾಂತರ ಸಂಭವಿಸಿದೆ ಎಂದು ರೇಷ್ಮೆ ಮೊಟ್ಟೆ ತಯಾರಕರು ಆರೋಪಿಸುತ್ತಾರೆ.

ಜಯಾಲಲಿತಾ ಚಿನ್ನಾಭರಣ ಒಯ್ಯಲು 6 ಪೆಟ್ಟಿಗೆ ತನ್ನಿ - ತಮಿಳುನಾಡು ಸರ್ಕಾರಕ್ಕೆ ಬೆಂಗಳೂರು ಕೋರ್ಟ್‌ ದಿನಾಂಕ ನಿಗದಿ
ಎರಡು ವರ್ಷಗಳ ಹಿಂದೆ ಪೆಬ್ರಿನ್‌ ಕಾಣಿಸಿಕೊಂಡಿತ್ತು. ಆಗ ಬಿತ್ತನೆ ಏರಿಯಾದಲ್ಲಿಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರಿಂದ ನಿಯಂತ್ರಣಕ್ಕೆ ಬಂದಿತ್ತು. ಈಗ ಮತ್ತೆ ಪೆಬ್ರಿನ್‌ ರೋಗ ಆವರಿಸಿದ್ದು, ಸರಿಯಾಗಿ ಬೆಳೆಗಳು ಆಗುತ್ತಿಲ್ಲ. ಇದರಿಂದ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ನಷ್ಟವಾಗುತ್ತಿದೆ. ರೇಷ್ಮೆಗೂಡಿನ ಬೆಲೆ ಕೂಡಾ ಕುಸಿದಿರುವುದರಿಂದ ರೇಷ್ಮೆ ಕೃಷಿಗೆ ಭಾರೀ ಸಮಸ್ಯೆ ಎದುರಾಗಿದೆ. ಸರಕಾರ ಮಧ್ಯಪ್ರವೇಶಿಸಿ ಇದನ್ನು ತಡೆಯದಿದ್ದರೆ ರೇಷ್ಮೆ ಉದ್ಯಮವೇ ಹಾಳಾಗಲಿದೆ.

- ಕೃಷ್ಣಮೂರ್ತಿ, ರೇಷ್ಮೆ ಮೊಟ್ಟೆ ಉತ್ಪಾದಕರು

ಮಾರುಕಟ್ಟೆಯಲ್ಲಿರೇಷ್ಮೆಗೂಡಿಗೆ ಬೆಲೆಯೇ ಇಲ್ಲ. ಇನ್ನೊಂದೆಡೆ ಪೆಬ್ರಿನ್‌ ರೋಗದಿಂದ ಸರಿಯಾದ ಇಳುವರಿಯೂ ಬರುತ್ತಿಲ್ಲ. ಹೀಗಾಗಿ ರೇಷ್ಮೆಕೃಷಿ ಈಗ ಅವಸಾನದತ್ತ ಹೋಗುತ್ತಿದೆ. ರೈತರು ಸಾಲ ಮಾಡಿ ಬಂಡವಾಳ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷ್ಮೆ ಇಲಾಖೆ ಸಿಬ್ಬಂದಿ ಕೊರತೆ ಹಾಗೂ ಅನುದಾನ ಕೊರತೆ ಎಂದು ಹೇಳಿಕೊಂಡು ಅಸಹಾಯಕವಾಗಿ ಕೂತಿದೆ. ಹೀಗಾಗಿ ಸರಕಾರವೇ ರೇಷ್ಮೆ ಬೆಳೆಗಾರರನ್ನು ರಕ್ಷಿಸಬೇಕಿದೆ.

- ಮಂಜುನಾಥ್‌, ರೇಷ್ಮೆ ಚಾಕಿ ಸಾಕಣೆದಾರರು
ಲೇಖಕರ ಬಗ್ಗೆ
ಶ್ರೀಲಕ್ಷ್ಮೀ ಎಚ್ಎಲ್
ಶ್ರೀಲಕ್ಷ್ಮೀ ಅವರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯವರು. ಕಳೆದ 5 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ ಕರ್ನಾಟಕ ಆನ್‌ಲೈನ್‌ ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶೀಯ ಸುದ್ದಿಗಳು, ಲೈಫ್‌ಸ್ಟೈಲ್ ಸುದ್ದಿಗಳನ್ನು ಬರೆಯುವುದು ಅಚ್ಚುಮೆಚ್ಚು. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವುದು, ಕಲಿಯುವುದು, ಹೊಸ ಜಾಗಗಳಿಗೆ ಭೇಟಿ ನೀಡುವುದು ಇಷ್ಟದ ವಿಚಾರ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ