ಶೃಂಗೇರಿ:ಸರಕಾರಿ ಸೇವೆಯಲ್ಲಿದ್ದರೂ ಭದ್ರತೆ, ಪಿಂಚಣಿ ಸಹಿತ ಯಾವುದೇ ಸೌಲಭ್ಯ ಪಡೆಯದೆ ಸೇವೆಯಿಂದ ನಿವೃತ್ತರಾಗುತ್ತಿರುವ ಗ್ರಾಮ ಸಹಾಯಕರ ನೆರವಿಗೆ ಸರಕಾರ ಬರಬೇಕು ಎಂದು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಅಣ್ಣಪ್ಪ ಹೇಳಿದರು.
35 ವರ್ಷ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಎಂ.ರಾಮರವರಿಗೆ ಗ್ರಾಮ ಸಹಾಯಕರ ಸಂಘದಿಂದ ಪಟ್ಟಣದಲ್ಲಿ ಗುರುವಾರ
ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಂದಾಯ ಇಲಾಖೆಯಲ್ಲಿನ ಸಾರ್ವಜನಿಕರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದರೂ ಸೇವಾ ಭದ್ರತೆ ಇಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ. ಆದಾಗ್ಯೂ ಮೂರು ದಶಕಕ್ಕೂ ಹೆಚ್ಚು ಸೇವೆಯಲ್ಲಿ ತೊಡಗಿಸಿಕೊಂಡ ರಾಮರವರ ಸೇವೆ ಅಭಿನಂದನೀಯ ಎಂದರು.
ಸಂಘದ ಕಾರ್ಯದರ್ಶಿ ಸುರೇಶ್ ಮಾತನಾಡಿ, ಸೇವಾ ಭದ್ರತೆಗಾಗಿ ಹಲವು ವರ್ಷದಿಂದ ಸರಕಾರಕ್ಕೆ ಒತ್ತಾಯಿಸುತ್ತಾ ಬರಲಾಗಿದೆ. ಸೇವಾ ಭದ್ರತೆ ಇಲ್ಲದ ಕಾರಣ ಕನಿಷ್ಠ ಜೀವನ ನಿರ್ವಹಣೆಯೂ ಕಷ್ಟವಾಗಿದೆ. ಜನ ಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದು ನೌಕರಿ ಮಾತ್ರ ಕಾಯಂ ಆಗಿಲ್ಲ. ತಾಲೂಕಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರು ಈ ಸೇವೆಯಲ್ಲಿದ್ದು, ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ನೌಕರರ ಸ್ಥಿತಿ ಅತಂತ್ರವಾಗಿದೆ. ಸರಕಾರ ಈ ಬಗ್ಗೆ ತುರ್ತು ಗಮನ ಹರಿಸಿ ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತಿಯಾದ ಕೆ.ಎಂ.ರಾಮರವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಹಾಲಪ್ಪ ನಾಯ್ಕ್, ಶಿವಣ್ಣ, ಬಿ.ಮಂಜುನಾಥ್, ಕೆ.ಕೆ.ಸುರೇಶ್, ಮಲ್ಲಯ್ಯ, ಜಿ.ಸುರೇಶ್, ಚಂದ್ರಪ್ಪ, ತಿಮ್ಮಪ್ಪ, ವೇದಾವತಿ ಮತ್ತು ಮಂಜಪ್ಪ ಇದ್ದರು.