ಆ್ಯಪ್ನಗರ

ಸೂಳೆಕೆರೆಯಲ್ಲಿ ನೀರು 18 ಅಡಿಗೆ ಹೆಚ್ಚಳ; ಕೆರೆ-ಗುಡ್ಡದ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ!

Sulekere Water Level Increase : ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಪಡೆದಿರುವ ದಾವಣಗೆರೆಯ ಸೂಳೆಕೆರೆಯಲ್ಲಿ (ಶಾಂತಿಸಾಗರ) ನೀರಿನ ಮಟ್ಟ ಹೆಚ್ಚಳವಾಗಿದೆ. ಇತ್ತ ಜಿಟಿಜಿಟಿ ಮಳೆಯಿಂದಾಗಿ ಕೆರೆ, ಸುತ್ತಲಿನ ಗುಡ್ಡ, ಸೇತುವೆ, ದೇವಸ್ಥಾನ ಸೇರಿದಂತೆ ಸುತ್ತಲಿನ ವಾತಾವರಣದ ಮೆರಗು ಹೆಚ್ಚಿದೆ.

Edited by ಜಯಪ್ರಕಾಶ್‌ ಬಿರಾದಾರ್‌ | Vijaya Karnataka Web 29 Jul 2023, 6:48 pm

ಹೈಲೈಟ್ಸ್‌:

  • ಸೂಳೆಕೆರೆಗೆ ಕಳೆದ 15 ದಿನದ ಮಳೆಗೆ ಹರಿದು ಬಂದ ನೀರು, ಕುಡಿವ ನೀರಿಗೆ ಸಮಸ್ಯೆ ಆಗದು ಉತ್ತರೆ ಮಳೆಯಲ್ಲಿಇನ್ನಷ್ಟು ನೀರು ಸಂಗ್ರಹ ನಿರೀಕ್ಷೆ.
  • ಸೂಳೆಕೆರೆಗೆ 4 ಅಡಿ ನೀರು ಒಟ್ಟಾರೆ ನೀರಿನ ಸಂಗ್ರಹ 18 ಅಡಿಗೆ ಹೆಚ್ಚಳ. ನೀಗಿದ ಆತಂಕ
  • ಕೆರೆ, ಸುತ್ತಲಿನ ಗುಡ್ಡ, ಸೇತುವೆ, ದೇವಸ್ಥಾನ ಸೇರಿದಂತೆ ಸುತ್ತಲಿನ ವಾತಾವರಣಕ್ಕೆ ಪ್ರವಾಸಿಗರು ಫಿದಾ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಸೂಳೆಕೆರೆ
ಸೂಳೆಕೆರೆ
ಎಚ್‌.ಕುಮಾರ್‌ ಹಿರೇಕೋಗಲೂರು
ದಾವಣಗೆರೆ : ಏಷ್ಯಾ ಖಂಡದಲ್ಲಿಯೇ ಎರಡನೇ ಅತಿದೊಡ್ಡ ಕೆರೆಯಾದ ಚನ್ನಗಿರಿ ತಾಲೂಕು ಸೂಳೆಕೆರೆ (ಶಾಂತಿಸಾಗರ) ಹಲವು ನಗರ, ಪಟ್ಟಣಗಳು ಮತ್ತು ಹತ್ತಾರು ಹಳ್ಳಿಗಳ ಜನರ ನೀರಿನ ದಾಹ ತೀರಿಸುತ್ತದೆ. 15 ದಿನದ ಹಿಂದೆ ಕೆರೆಯಲ್ಲಿ ನೀರು ಕಡಿಮೆಯಾಗಿ ಆತಂಕ ತಲೆದೋರಿತ್ತು. ಆದರೀಗ ಕಳೆದ 15 ದಿನದ ನಿರಂತರ ಸುರಿದ ಮಳೆಯಿಂದ 4 ಅಡಿ ನೀರು ಹರಿದು ಬಂದು, ನೀರಿನಮಟ್ಟ 18 ಅಡಿ ಮುಟ್ಟಿರುವುದು ಸಮಾಧಾನ ತಂದಿದೆ.
ಹೌದು, ಗುಡ್ಡಗಳ ನಡುವಿನ ಸುಂದರ ಪರಿಸರದ ಕೆರೆ ತನ್ನ ಸೌಂದರ್ಯದಿಂದ ಮಾತ್ರವಲ್ಲದೆ, ಜನರ ಕುಡಿವ ನೀರಿನ ದಾಹ ಮತ್ತು ಕೃಷಿಗೂ ನೀರು ಒದಗಿಸಿ ಈ ಭಾಗದ ಜನರ ಜೀವನಾಡಿಯಾಗಿದೆ. ಪ್ರಮುಖವಾಗಿ ಈ ಕೆರೆ ಚನ್ನಗಿರಿ ಪಟ್ಟಣ, ನೆರೆಯ ಹೊಳಲ್ಕೆರೆ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಜಗಳೂರು ಸೇರಿ ಹತ್ತಾರು ಹಳ್ಳಿಗಳ ಜನರಿಗೆ ಕುಡಿವ ನೀರಿನ ಆಸರೆಯಾಗಿದೆ. ಜತೆಗೆ ಎಡ ಮತ್ತು ಬಲನಾಲೆಯಲ್ಲಿ ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ.

ಕುಡಿವ ನೀರಿನ ಅಕ್ಷಯಪಾತ್ರೆ

ಕೆರೆಯಲ್ಲಿ ನೀರು ಕಡಿಮೆಯಾದರೆ ಈ ನಗರ, ಪಟ್ಟಣಗಳ ಜನರಿಗೆ ಕುಡಿವ ನೀರಿನ ತತ್ವಾರ ಎದುರಾಗುತ್ತದೆ, ಕಳೆದ ವರ್ಷ ತುಂಬಿದ್ದ ಕೆರೆ, ಈ ವರ್ಷ ಮುಂಗಾರು ವಿಳಂಬದಿಂದ ಕಳೆದ ಹದಿನೈದು ದಿನದ ಹಿಂದೆ ನೀರು ಕಡಿಮೆಯಾಗಿ 14.6 ಅಡಿಗೆ ಇಳಿದು ಆತಂಕ ಸೃಷ್ಟಿಸಿತ್ತು. ಆದರೆ ಮಳೆಯಿಂದ ಈಗ ನೀರು ಹರಿದು ಬಂದಿರುವುದು ಈ ಊರುಗಳ ಜನರು ನಿಟ್ಟುಸಿರು ಬಿಡುವಂತಾಗಿದೆ.

ಕೆರೆಗೆ ಚಾನಲ್‌ ನೀರು

ಸೂಳೆಕೆರೆಗೆ ಮಳೆ ನೀರು ಅಷ್ಟೇ ಅಲ್ಲ, ಕುಡಿವ ನೀರು ಮತ್ತು ಕೃಷಿ ಚಟುವಟಿಕೆ ಉದ್ದೇಶದಿಂದ ಭದ್ರಾ ಚಾನಲ್‌ ನೀರನ್ನು ತುಂಬಿಸಿಕೊಳ್ಳುವ ವ್ಯವಸ್ಥೆಯಿದೆ. ಹಾಗಾಗಿ ನೀರಿಗೆ ತೊಂದರೆ ಆಗುವುದು ಕಡಿಮೆ. ಈಗ ಡ್ಯಾಂ ನೀರಿನಮಟ್ಟ ಕೂಡ ಏರುತ್ತಿದ್ದು ಇನ್ನೊಂದು 5 ಅಡಿ ನೀರು ಬಂದರೆ ಚಾನಲ್‌ನಲ್ಲಿನೀರು ಹರಿಸುವ ಸಾಧ್ಯತೆಯಿದೆ. ಹಾಗಾಗಿ ಈಗ ಸೇರಿ ಹರಿದು ಬಂದಿರುವ ಮಳೆ ನೀರಿನ ಜತೆ ಚಾನಲ್‌ ನೀರು ಸೇರಿದರೆ ಕುಡಿಯುವ ನೀರಿಗೆ ಸಮಸ್ಯೆ ಆಗುವುದಿಲ್ಲಎಂಬ ಭರವಸೆ ಮೂಡಿದೆ.

ಕೈ ಬೀಸಿ ಕರೆಯುವ ಪರಿಸರ; ಪ್ರವಾಸಿಗರು ಫಿದಾ

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಗುಡ್ಡಗಳು ಅರಳಿ ಹಸಿರಾಗಿದೆ, ಈ ಸುಂದರ ಪರಿಸರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಜತೆಗೆ ಸೂಳೆಕೆರೆಯಲ್ಲಿಬೋಟಿಂಗ್‌ ವ್ಯವಸ್ಥೆ ಇರುವುದರಿಂದ ಬೋಟ್‌ನಲ್ಲಿಕೆರೆಯ ಮಧ್ಯ ಭಾಗಕ್ಕೆ ಹೋಗಿ ಅಲ್ಲಿನಿಂತು ಸುತ್ತಲಿನ ಪರಿಸರ ಕಣ್ಮನ ತುಂಬಿಕೊಳ್ಳುವುದೇ ಅಪೂರ್ವ ಅನುಭೂತಿ ನೀಡುತ್ತದೆ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ.

ಪರಿಸರ ಪ್ರೇಮಿಗಳ ಸ್ವರ್ಗ

ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಸುತ್ತಲಿನ ಗುಡ್ಡಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು ಪರಿಸರ ಪ್ರೇಮಿಗಳ ಪಾಲಿನ ಸ್ವರ್ಗವಾಗಿದೆ. ಇಲ್ಲಿರುವ ಸಿದ್ದೇಶ್ವರ ಸ್ವಾಮಿಯ ಗೋಪುರ ಬಂಗಾರದ ಲೇಪನದಿಂದ ಮನಮೋಹಕವಾಗಿ ಸಿದ್ಧಗೊಂಡಿದ್ದು, ಇಲ್ಲಿಂದ ಹಸಿರು ಹೊದ್ದ ಗುಡ್ಡಗಳನ್ನು ಕಣ್ಮನ ತುಂಬಿಕೊಳ್ಳುವುದೇ ಒಂದು ಹಬ್ಬ. ಜಿಟಿಜಿಟಿ ಮಳೆಯೆಂದು ಶಾಲೆಗೆ ರಜೆ ನೀಡಿದ್ದರಿಂದ ಸುತ್ತಲಿನ ಕೆಲ ಶಾಲೆಗಳ ಮಕ್ಕಳು, ಪೋಷಕರು ಪ್ರಕೃತಿ ಮಡಿಲಿಗೆ ಬಂದು ಸಂಭ್ರಮಿಸುವುದು ಎರಡು ದಿನದಿಂದ ಕಂಡು ಬಂತು.

15 ದಿನಗಳ ಹಿಂದೆ ಸೂಳೆಕೆರೆ ನೀರಿನ ಮಟ್ಟ 14.6 ಅಡಿ ಇತ್ತು. ಇತ್ತೀಚಿಗೆ ಸುರಿದ ಮಳೆಯಂದಾಗಿ 18 ಅಡಿಯಷ್ಟು ನೀರಿನ ಮಟ್ಟ ಇದೆ. ಪ್ರತಿದಿನ 5ರಿಂದ 6 ಕ್ಯೂಸೆಕ್‌ ನೀರು ಸೂಳೆಕೆರೆಗೆ ಹರಿದು ಬರುತ್ತಿದೆ. ನೀರು ಸರಾಗವಾಗಿ ಹರಿಯಲು ಭದ್ರನಾಲೆಗಳಲ್ಲಿಸಾಕಷ್ಟು ಹೂಳು ತುಂಬಿಕೊಂಡಿದ್ದು, ನೀರಾವರಿ ನಿಗಮ ನಾಲೆಯ ಹೂಳು ತೆಗೆಸಲು ಕ್ರಮವಹಿಸಬೇಕಿದೆ.
- ತಿಪ್ಪೇಸ್ವಾಮಿ ಸಹಾಯಕ ಕಾರ್ಯಾಪಾಲಕ, ನೀರಾವರಿ ಇಲಾಖೆ, ತ್ಯಾವಣಿಗೆ.


ಕೆರೆಗೆ ನೀರೇನೋ ಬರುತ್ತಿದೆ. ಸುಮಾರು 2 ಸಾವಿರ ಮೀನು ಬೇಟೆಗಾರರ ಕುಟುಂಬಗಳು ಕೆರೆಯನ್ನು ನಂಬಿವೆ. ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮೀನು ಬೇಟೆಗಾರರ ಜೀವನ ಅಸ್ಥವ್ಯಸ್ಥವಾಗಿದೆ. ಗಾಳಿ ಮಳೆಯಿಂದ ಬಲೆಗೆ ಮೀನುಗಳು ಬೀಳುವುದಿಲ್ಲ. ಹಾಗಾಗಿ ಮೀನು ಶಿಕಾರಿ ನಿಲ್ಲಿಸಿದ್ದು ಜೀವನ ಕಷ್ಟವಾಗಿದೆ.
ಎಸ್‌ ಶೇಖರಪ್ಪ ಮೋರಿ ಅಧ್ಯಕ್ಷರು, ಶಾಂತಿಸಾಗರ ಮೀನುಗಾರರ ಸಹಕಾರ ಸಂಘ.
ಲೇಖಕರ ಬಗ್ಗೆ
ಜಯಪ್ರಕಾಶ್‌ ಬಿರಾದಾರ್‌
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ಆರೋಗ್ಯ, ಅರಣ್ಯ, ಸಾರಿಗೆ, ರಾಜಕೀಯ, ಕೊರೊನಾ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು ಒಂದು ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೊಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ