ಹುಬ್ಬಳ್ಳಿ : ಇಲ್ಲಿನ ದೇಶಪಾಂಡೆನಗರದ ಜಿಮ್ಖಾನ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದಿದ್ದರೆ ಧರಣಿ ಕೂರುವುದಾಗಿ ಹುಬ್ಬಳ್ಳಿ ಗ್ರೌಂಡ್ ಬಚಾವೋ ಸಮಿತಿ ಗೌರವಾಧ್ಯಕ್ಷ, ನಾಡೋಜ ಪಾಟೀಲ ಪುಟ್ಟಪ್ಪ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ತಮ್ಮ ನಿವಾಸದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರಕಾರದ ಮಟ್ಟದಲ್ಲಿ ನಂಬಿಕೆ ಉಳಿದಿಲ್ಲ. ಕಳೆದ ಎರಡೂವರೆ ವರ್ಷದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆಗೆ ಭೇಟಿ ಕೊಟ್ಟಾಗ ನೀಡಿದ್ದ ಭರವಸೆ ಉಳಿಸಿಕೊಂಡಿಲ್ಲ. ಆದ್ದರಿಂದ ಮೈದಾನದ ಉಳಿವಿಗಾಗಿ ಧರಣಿ ನಡೆಸಲು ನಿರ್ಧರಿಸಿದ್ದು, ಯಾರು ತಡೆಯುತ್ತಾರೆಯೋ ನೋಡುತ್ತೇನೆ ಎಂದು ಸವಾಲು ಹಾಕಿದರು.
ಮೈದಾನವನ್ನು ಸಾರ್ವಜನಿಕರಿಗೆ ಕೊಡಿಸಲು ಮೂರುವರೆ ವರ್ಷದಿಂದ ಹೋರಾಟ ನಡೆಸುತ್ತಲೇ ಬಂದಿದ್ದೇನೆ. ಆದ್ದರಿಂದ ಹೋರಾಟಕ್ಕೆ ಯಾರು ಕೈಜೋಡಿಸುತ್ತಾರೆ ಅಥವಾ ಇಲ್ಲವೋ ಎಂಬುದನ್ನು ನೋಡುವುದಿಲ್ಲ. ತಾರ್ಕಿಕ ಅಂತ್ಯ ಕಾಣುವವರೆಗೆ ಏಕಾಂಗಿಯಾಗಿದರೂ ಧರಣಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದರು.
ಸಾರ್ವಜನಿಕ ಮೈದಾನ ಉಳಿಸಬೇಕು. ಹುಬ್ಬಳ್ಳಿಯಲ್ಲಿ ನೆಹರು ಮೈದಾನ ಬಿಟ್ಟರೆ ಸಾರ್ವಜನಿಕರಿಗೆ ಮತ್ತೊಂದು ಮೈದಾನವಿಲ್ಲ. ಜಿಮ್ಖಾನ ಮೈದಾನ ಸಾರ್ವಜನಿಕರಿಗೆ ಸೇರಿದ್ದು, ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಈಗಾಗಲೇ ಕಾಲಾವಕಾಶ ನೀಡಿದ್ದರೂ ಪ್ರಯೋಜನ ಆಗಿಲ್ಲ. ಹಾಗಾಗಿ ಮತ್ತೊಮ್ಮೆ ಕಾಲಮಿತಿ ನೀಡುವ ಪ್ರಶ್ನೆಯೇ ಇಲ್ಲ. ಹೋರಾಟವನ್ನು ಇನ್ಮುಂದೆ ಮೈದಾನದಲ್ಲೇ ಮುಂದುವರಿಸುವುದಾಗಿ ಎಚ್ಚರಿಸಿದರು.
ಸಮಿತಿ ಅಧ್ಯಕ್ಷ ಸಿಬಿಎಲ್ ಹೆಗಡೆ ಮಾತನಾಡಿ, ಸಂತೋಷ್ ಲಾಡ್ ಮತ್ತು ದಿನೇಶ್ ಗುಂಡೂರಾವ್ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗಲೂ ಯಾವುದೇ ಕ್ರಮ ಕೈಗೊಳ್ಳದೇ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು. ಇದೀಗ ಸಚಿವ ವಿನಯ್ ಕುಲಕರ್ಣಿ ಅವರು ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಹಾಗೂ ಅವರ ಸಂಗಡಿಗರು ಕಬಳಿಕೆ ಮಾಡಿಕೊಂಡಿರುವ ಜಿಮ್ಖಾನ ಮೈದಾನದಲ್ಲಿ ರಿಕ್ರಿಯೇಶನ್ ಕ್ಲಬ್ ಮಾಡಿಕೊಂಡಿದ್ದಾರೆ. ಹಾಗಾಗಿ ಮೈದಾನವನ್ನು ಸರಕಾರ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಕ್ಲಬ್ಗಳ ಬಗ್ಗೆ ಯಾವೊಬ್ಬ ಶಾಸಕರೂ ತುಟಿ ಬಿಚ್ಚದಿರುವುದು ಸಂಶಯ ಮೂಡಿಸುತ್ತಿದೆ. ಜನಪ್ರತಿನಿಧಿಗಳ ಒಳಂತರ ತಿಳಿಯುತ್ತಿಲ್ಲ. ಮತ್ತೆ ಕ್ಲಬ್ ಸದಸ್ಯತ್ವಕ್ಕೆ 4.16 ಲಕ್ಷ ರೂ. ಪಡೆದುಕೊಳ್ಳುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.
ಜಿಮ್ಖಾನ ಮೈದಾನದಲ್ಲಿ ಮಾಲೀಕತ್ವದ ಪ್ರಶ್ನೆ ಉದ್ಬವಿಸಿದೆ. ಕ್ಲಬ್ ವಾದಿಗಳು ಜಿಮ್ಖಾನ ಅಸೋಸಿಯೇಶನ್ನ್ನು ಬ್ರಾಕೆಟ್ನಲ್ಲಿ ಹಾಕಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಆದ್ದರಿಂದ ಹಲವು ಅಕ್ರಮಗಳಿಗೆ ಸಾಕ್ಷಿಯಾಗಿರುವ ಮೈದಾನವನ್ನು ತಕ್ಷಣವೇ ರಾಜ್ಯ ಸರಕಾರ ವಶಕ್ಕೆ ತೆಗೆದುಕೊಳ್ಳಬೇಕು. ಕ್ಲಬ್ ವಾದಿಗಳು 13 ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು. ಮೈದಾನದ ಉಳಿವಿಗಾಗಿ ಕಾನೂನು ಹೋರಾಟ ಮುಂದುವರಿಸಿದ್ದು, ಸುಪ್ರೀಂಕೋರ್ಟ್ಗೆ ಹೋದರೂ ಬಿಡುವುದಿಲ್ಲ ಎಂದು ಹೇಳಿದರು.
ಸಮಿತಿ ಸದಸ್ಯ ಮನೋಜ್ ಹಾನಗಲ್ ಮಾತನಾಡಿ, ಜಿಮ್ಖಾನ ಕ್ಲಬ್ನಿಂದ ಸವಾಯಿ ಗಂಧರ್ವ ಹಾಲ್ನ 2 ಗುಂಟೆ ಜಾಗ ಅತಿಕ್ರಮಣವಾಗಿದೆ. ಕ್ಲಬ್ ಮಾಡುವ ಸಂಬಂಧ ಸವಾಯಿ ಗಂಧರ್ವ ಹಾಲ್ನ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ದೂರಿದರು. ಸದಸ್ಯರಾದ ಅಮೃತ ಇಜಾರಿ, ವೆಂಕಟೇಶ್ ಸವದತ್ತಿ ಇದ್ದರು.