ಹುಬ್ಬಳ್ಳಿ : ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯಲ್ಲಿ ಮೀಸಲಾತಿ ಪದ್ಧತಿ ಜಾರಿಗೆ ತರಬೇಕು ಎಂದು ಹುಬ್ಬಳ್ಳಿ ಚಿಂತನ ವೇದಿಕೆ ಸರಕಾರವನ್ನು ಒತ್ತಾಯಿಸಿದೆ.
ಈ ಕುರಿತು ಮುಖ್ಯಮಂತ್ರಿಗೆ ಇಮೇಲ್ ಕಳಿಸಿರುವ ವೇದಿಕೆ ಪದಾಧಿಕಾರಿಗಳು ಹಾಗೂ ಸಾಹಿತಿಗಳು, ಪರಿಷತ್ಗೆ ರಾಜ್ಯ ಸರಕಾರ ಮತ್ತಿತರೆ ಸಂಸ್ಥೆಗಳಿಂದ ಕೋಟ್ಯಂತರ ರೂ. ಅನುದಾನ ಬರುತ್ತದೆ. ಅದು ಕೇವಲ ಒಂದು ವರ್ಗದ ಜನರ ಜಾತ್ರೆಯಾಗುತ್ತಿದೆ. ಇದೇ ಕಾರಣಕ್ಕಾಗಿ ಸಾಹಿತ್ಯ ವಲಯದಲ್ಲಿ ಶರಣ ಸಾಹಿತ್ಯ, ದಲಿತ ಸಾಹಿತ್ಯ, ವಚನ ಸಾಹಿತ್ಯ, ಜಾನಪದ ಸಾಹಿತ್ಯ ಎಂದು ಗುಂಪುಗಳಿವೆ. ಅವುಗಳು ಸರಕಾರದ ಅನುದಾನದಿಂದ ವಂಚಿತವಾಗಿವೆ ಎಂದು ಅವರು ಹೇಳಿದ್ದಾರೆ.
ಸಾಹಿತಿಗಳಲ್ಲದವರು ಅಡಳಿತ ಪಕ್ಷ ದ ಹಿಂಬಾಲಕರಾಗಿ ಜಿಲ್ಲಾ ಅಧ್ಯಕ್ಷ ರಾಗಿ ರಾಜ್ಯದ ತುಂಬೆಲ್ಲ ಆಯ್ಕೆಯಾಗಿದ್ದಾರೆ. ಪ್ರತಿಯೊಂದು ಕಸಾಪ ಜಿಲ್ಲಾ ಸಮ್ಮೇಳನಕ್ಕೆ 6-7ಲಕ್ಷ ರೂ. ತಾಲೂಕು ಸಮ್ಮೇಳನಕ್ಕೆ 2-3 ಲಕ್ಷ ರೂ. ಅನುದಾನ ಹರಿದು ಬರುವಾಗ. ಸಾಲದಕ್ಕೆ ಸ್ಥಳೀಯ ಸಂಸ್ಥೆಗಳು. ಜನ ಪ್ರತಿನಿಧಿ ಗಳಿಂದ ಆರ್ಥಿಕ ನೆರವು ಸಿಗಲಿದೆ. ಕನ್ನಡದ ಅಭಿಮಾನದ ಹೆಸರಿನಲ್ಲಿ ವ್ಯವಸ್ಥಿತವಾಗಿ ಹಣ ದೋಚುವ ದೊಂಬರಾಟ ನಡೆದಿದೆ. ಇವೆಲ್ಲವುಗಳಿಗೆ ಕಡಿವಾಣ ಹಾಕಲು ಕನ್ನಡ ಸಾಹಿತ್ಯ ಪರಿಷತ್ತು ಮೀಸಲಾತಿ ಷರತ್ತಿಗೆ ಒಳಪಡುವುದು ಅಗತ್ಯವಾಗಿದೆ ಎಂದು ಹುಬ್ಬಳ್ಳಿ ಚಿಂತನ ವೇದಿಕೆ ಅಧ್ಯಕ್ಷ ಕ್ರಷ್ಣಮೂರ್ತಿ ಕುಲಕರ್ಣಿ ಹಾಗೂ ಪ್ರಧಾನ ಕಾರ್ಯದರ್ಶಿ ಪೊ›. ಡಿ.ಡಿ.ಮುತಾಲಿಕದೇಸಾಯಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಚನ್ನಬಸಪ್ಪ ಧಾರವಾಡಶೆಟ್ರು. ಅನಂತ ಕುಲಕರ್ಣಿ. ವಾದಿರಾಜ ಕುಡೇಕರ. ಪದ್ಮಜಾ ಉಮರ್ಜಿ ಮುಂತಾದವರು ಒತ್ತಾಯಿಸಿದ್ದಾರೆ.