ಲಕ್ಷ್ಮೇಶ್ವರ:ತಾಲೂಕಿನ ಸೂರಣಗಿ ಗ್ರಾಮದ 33 ಎಕರೆ ವಿಸ್ತಾರದ ಕೆರೆಯಲ್ಲಿ ಹೂಳು ತುಂಬಿದ್ದು, ತೆಗೆಸಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ ಎಂದು ರೈತರು ಆಗ್ರಹಿಸಿದ್ದಾರೆ.
ಕೆರೆಗೆ ನಿರ್ಮಿಸಿರುವ ಬ್ಯಾರೇಜ್ನ ಕ್ರಸ್ಟ್ಗೇಟ್ಗಳು ದುರಸ್ತಿಯಾಗಿದ್ದು, ನೀರು ಪೋಲಾಗದಂತೆ ಎಚ್ಚರ ವಹಿಸಲಾಗಿದೆ. ಆದರೆ 33 ಎಕರೆ ವಿಸ್ತಾರದ ಕೆರೆಯಂಗಳದಲ್ಲಿ ಜಾಲಿ ಗಿಡ, ಕಸ ಕಡ್ಡಿಗಳು ಬೆಳೆದಿದ್ದು, ಮಳೆಯಾದರೆ ನೀರು ಸಂಗ್ರಹ ಪ್ರಮಾಣ ಕಡಿಮೆಯಾಗುತ್ತದೆ.
ಈ ಕೆರೆ ಹೂಳೆತ್ತಿಸಿ ಸುತ್ತಲೂ ಒಡ್ಡು ಹಾಕಿದರೆ ಸಾರ್ಥಕ ಆಗುತ್ತದೆ. ಶಾಸಕರು ಇತ್ತ ಗಮನಹರಿಸಬೇಕು ಎಂದು ರೈತ ಫಕ್ಕಿರಪ್ಪ ಹೇಳಿದರು.
ಕೆರೆ ಹೂಳು ಸಂಬಂಧ ಶಾಸಕ ರಾಮಕೃಷ್ಣ ದೊಡ್ಡಮನಿ ಅವರನ್ನು ಸಂಪರ್ಕಿಸಿದಾಗ, ಕೆರೆ ಬ್ಯಾರೇಜ್, ಹೂಳೆತ್ತಲು 1 ಕೋಟಿ ರೂ. ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಪ್ರಯತ್ನ ಮಾಡಿ ಹಣ ಬಿಡುಗಡೆಗೆ ಪ್ರಯತ್ನಿಸುವುದಾಗಿ ಹೇಳಿದರಲ್ಲದೇ, ಕೆರೆ ಹೂಳಿನ ಮಣ್ಣನ್ನು ತೆಗೆದುಕೊಂಡು ಹೋಗಲು ರೈತರು ಹಿಂದೇಟು ಹಾಕುತ್ತಿರುವದರಿಂದ ಬೇರೆ ಅನುದಾನ ಅವಶ್ಯವಾಗಿದೆ ಎಂದು ಹೇಳಿದರು.