ನರೇಗಲ್ಲ:ಗ್ರಾಮೀಣ ಭಾಗದಲ್ಲಿ ಮಕ್ಕಳ ಪ್ರತಿಭೆಗೇನು ಕೊರತೆ ಇಲ್ಲ ಎಂಬಂತೆ ಇತ್ತೀಚೆಗೆ ಜ.20 ರಿಂದ 23 ರ ವರೆಗೆ ಭೂತಾನದಲ್ಲಿ ನಡೆದ ಮೂರನೇ ದಕ್ಷಿಣ ಏಶಿಯಾ ಅಟ್ಯಾಪಟ್ಯಾ ಚಾಂಪಿಯನ್ ಶಿಪ್ನಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಕರ್ನಾಟಕದ ಪುರುಷರ ವಿಭಾಗದಿಂದ ಇಬ್ಬರು ಮತ್ತು ಮಹಿಳೆಯರ ವಿಭಾಗದಲ್ಲಿ ಮೂರು ಮಕ್ಕಳು ಭಾಗವಹಿಸಿ ಬಂಗಾರದ ಪದಕದೊಂದಿಗೆ ಮರಳಿ ತಾಯ್ನಾಡಿಗೆ ಆಗಮಿಸಿದ್ದು ಪಟ್ಟಣದಲ್ಲಿ ಮುಗಿಲು ಮುಟ್ಟುವಂತಹ ಸಂಭ್ರಮ ಆಚರಣೆ ಜರುಗಿತು.
ಕ್ರೀಡಾಪಟುಗಳು ಶುಕ್ರವಾರ ಮಧ್ಯಾಹ್ನ ನರೇಗಲ್ಲ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸ್ಥಳೀಯ ಕ್ರೀಡಾಪಟುಗಳು ಶಾಲಾ ಸಿಬ್ಬಂದಿ ಮುಖ್ಯಸ್ಥರು ಹಾಗೂ ಕ್ರೀಡಾ ಪ್ರೇಮಿಗಳು ಮಕ್ಕಳಿಗೆ ಹೂಗುಚ್ಚ ನೀಡಿ, ಸಿಹಿ ತಿನಿಸಿ ಕ್ರೀಡಾ ಪ್ರೇಮ ಮೆರೆದರು.
ಮಹಿಳೆಯರ ವಿಭಾಗದಿಂದ ಭಾರತ ತಂಡವನ್ನು ಪ್ರತಿನಿಧಿಸಿದ್ದ ವರ್ಷಾ ಅವರಡ್ಡಿ ಸ್ಥಳೀಯ ಪಿಎಸ್ಎಸ್ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದು, ಈ ಹಿಂದೆ ಹತ್ತುಬಾರಿ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾಳೆ, ಸ್ಥಳೀಯ ನಿವಾಸಿ ನೇತ್ರಾವತಿ ರೋಣದ ಧಾರವಾಡದ ಸಿಎಸ್ಐ ಕಾಮರ್ಸ್ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದು ಈ ಕ್ರೀಡಾಪಪ್ರತಿಭೆ ಒಂಬತ್ತು ಬಾರಿ ರಾಷ್ಟ್ರಮಟ್ಟದ ಅಟ್ಯಾಪಟ್ಯಾದಲ್ಲಿ ಭಾಗವಹಿಸಿ, ಈ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿ ಚಿನ್ನದ ಬೇಟೆಯೊಂದಿಗೆ ಮರಳಿದ್ದಾರೆ.
ಸಮೀಪದ ಯಾವಗಲ್ಲ ಗ್ರಾಮದ ಪೂಜಾ ಘಾಳಿ ನರಗುಂದದ ಎಲ್ಐಪಿಯು ಕಾಲೇಜನಲ್ಲಿ ಪ್ರಥಮ ಪಿಯುದಲ್ಲಿ ಅಧ್ಯಯನ ಮಾಡುತ್ತಿದ್ದು ಇವಳು ಈ ಹಿಂದೆ ಎಂಟು ಬಾರಿ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಇತ್ತೀಚೆಗೆ ಭಾರತ ತಂಡದ ಪ್ರತಿನಿಧಿಯಾಗಿ ಭಾಗವಹಿಸಿ ಬಂಗಾರದ ಬೇಟೆಯೊಂದಿಗೆ ಮರಳಿದ್ದಾರೆ. ಪುರುಷರ ವಿಭಾಗದಿಂದ ಇಬ್ಬರು ಕ್ರೀಡಾಪಟುಗಳು ಕರ್ನಾಟಕದಿಂದ ಭಾಗವಹಿಸಿದ್ದು ಈ ಮಕ್ಕಳು ಕೂಡ ಪ್ರಥಮಸ್ಥಾನ ಪಡೆಯುವುದರೊಂದಿಗೆ ಬಂಗಾರದ ಪದಕವನ್ನು ಭಾರತಕ್ಕೆ ತಂದು ಕೊಡಲು ಶ್ರಮಿಸಿದ್ದಾರೆ.
ಮಹಿಳೆಯರ ವಿಭಾಗದಿಂದ ಸ್ಪರ್ಧಿಸಿದ್ದ ಮೂರು ಮಕ್ಕಳು, ಹತ್ತು ವರ್ಷಗಳಿಂದ ಕ್ರೀಡೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಕ್ರೀಡೆಯಲ್ಲಿ ನಿರಂತರ ಸಾಧನೆ ಮೂಲಕ ತಮ್ಮ ಕ್ರೀಡಾ ಸ್ಫೂರ್ತಿಯನ್ನು ಇಮ್ಮುಡಿಗೊಳಿಸಿಕೊಳ್ಳುತ್ತಿದ್ದು ಈ ಮಕ್ಕಳಿಗೆ ಸರಕಾರದ ಸಹಾಯ ಹಸ್ತದ ಅವಶ್ಯಕತೆ ಇದೆ.