ಗದಗ: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಳೆಯ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಪರಿವರ್ತಿಸುವ ಯೋಜನೆ ಶೀಘ್ರ ಆರಂಭಿಸಬೇಕು ಎಂದು ಬಸವಣ್ಣೆಯ್ಯ ಹಿರೇಮಠ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಹಲವಾರು ಬಾರಿ ವಾಯವ್ಯ ಸಾರಿಗೆ ರಸ್ತೆ ಸಾರಿಗೆ ನಿಗಮದ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಈಗಾಗಲೇ ಮನವಿ ಮಾಡಿದ್ದು, ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಗದಗ ಬಸ್ ನಿಲ್ದಾಣ ಕಟ್ಟಡ ಬಹಳಷ್ಟು ಶಿಥಿಲಗೊಂಡಿದ್ದು, ನಿಲ್ದಾಣದ ಆವರಣ ಸಂಪೂರ್ಣ ತಗ್ಗು ಗುಂಡಿಗಳಿಂದ ಕೂಡಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ.
ಜಿಲ್ಲಾ ಕೇಂದ್ರಕ್ಕೆ ಸುತ್ತಲಿನ ಲಕ್ಕುಂಡಿ, ಬದಾಮಿ, ಬನಶಂಕರಿ, ಐಹೊಳಿ, ಪಟ್ಟದಕಲ್ಲು, ಮಹಾಕೂಟ, ಹಂಪಿ ಸೇರಿದಂತೆ ಸ್ಥಳೀಯವಾಗಿರುವ ವೀರನಾರಾಯಣ, ತ್ರಿಕೂಟೇಶ್ವರ, ವೀರೇಶ್ವರ ಪುಣ್ಯಾಶ್ರಮಗಳಿಗೆ ನಿತ್ಯ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡುವ ಸ್ಥಳ ಇದಾಗಿದೆ. ಆದ್ದರಿಂದ ಸಾರಿಗೆ ಸಚಿವರು ಕೂಡಲೇ ಗದಗ ಬಸ್ ನಿಲ್ದಾಣದ ಆಧುನೀಕರಣ ಕಾಮಗಾರಿಯನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ರಾಜ್ಯದ ಹಲವಾರು ಜಿಲ್ಲಾ ಕೇಂದ್ರ ಸ್ಥಳಗಳಿಗೆ ಕೇಂದ್ರ ಸರಕಾರದ ನರ್ಮ ಯೋಜನೆಯಡಿ ನೂತನ ಮಿನಿ ಬಸ್ಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬಿಡಲಾಗಿದೆ. ಆದರೆ ಜಿಲ್ಲೆಗೆ ನೂತನ ಬಸ್ಗಳನ್ನು ನೀಡುವಲ್ಲಿ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಕೈಬಿಡಬೇಕು. ಕೂಡಲೇ ಗದಗ ಹಳೆಯ ಬಸ್ ನಿಲ್ದಾಣದ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಆರಂಭಿಸದಿದ್ದರೆ ಗದಗ ಬಸ್ ನಿಲ್ದಾಣದ ಎದುರು ಶೀಘ್ರದಲ್ಲಿಯೇ ಧರಣಿ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.