ಗದಗ : ಪುಟ್ಟಯ್ಯಜ್ಜ ಅವರ ಪಾತ್ರ ಮಾಡುತ್ತಿದ್ದಾಗ ಜನತೆ ತೋರುತ್ತಿದ್ದ ಭಕ್ತಿ, ಗೌರವ ಕಂಡು ನಿಬ್ಬೆರಗಾಗಿದ್ದೇನೆ. ಅಂಥ ಪುಣ್ಯಾತ್ಮರನ್ನು ಸನಿಹದಿಂದ ನೋಡಿದ ಈ ನೆಲದ ಜನರೇ ಧನ್ಯ ಎಂದು ಚಿತ್ರನಟ ವಿಜಯ ರಾಘವೇಂದ್ರ ಬಣ್ಣಿಸಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ 'ಶಿವಯೋಗಿ ಶ್ರೀ ಪುಟ್ಟಯ್ಯಜ್ಜ' ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 'ಕಣ್ಣಿರಲಿ, ಇಲ್ಲದಿರಲಿ. ಜಗತ್ತು ನೋಡಲು ಒಳ್ಳೆಯ ಮನಸ್ಸಿರಬೇಕು' ಎಂಬ ಪುಟ್ಟಯ್ಯಜ್ಜನವರ ಮಾತು ಸಿನಿಮಾದ ಪಾತ್ರ ಪೋಷಣೆಗೆ ಪ್ರೇರಣೆಯಾಯಿತು. ಪುಟ್ಟಯ್ಯಜ್ಜನವರ ಪಾತ್ರ ಮಾಡಿದ್ದರ ಫಲವಾಗಿಯೇ ನನಗೆ 2015 ರ ಸಾಲಿನ ಉತ್ತಮ ನಟ ರಾಜ್ಯ ಪ್ರಶಸ್ತಿ ಲಭಿಸಿತು ಎಂದು ಅಭಿಮಾನ ವ್ಯಕ್ತಪಡಿಸಿದರು.
ಮಂಜುನಾಥ ಅಬ್ಬಿಗೇರಿ ಮಾತನಾಡಿ, ಪುಟ್ಟರಾಜರು ಸ್ವತಃ ಅಂಧರಾಗಿದ್ದರೂ ಲಕ್ಷಾಂತರ ಅಂಧರು-ಅನಾಥರ ಬಾಳಿಗೆ ಬೆಳಕಾದರು. ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಶೇಷಚೇತನರಿಗೆ ಆಶ್ರಯ ನೀಡಿ, ಸಂಗೀತ ಕಲಿಸಿ ಅವರನ್ನು ಸ್ವಾಭಿಮಾನಿಗಳನ್ನಾಗಿಸಿದ ಅವರ ಕಾರ್ಯ ಅಭಿನಂದನೀಯ ಎಂದರು.
ಚಿತ್ರದ ನಿರ್ದೇಶಕಿ ಹಂಸವಿಜೇತ ಅಧ್ಯಕ್ಷ ತೆ ವಹಿಸಿದ್ದರು. ನಟ ವಿಜಯ ರಾಘವೇಂದ್ರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪಂಚಾಕ್ಷ ರಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಶಿವಶರಣೆ ನೀಲಮ್ಮತಾಯಿ, ಡಾ.ಶಿವಕುಮಾರ ಶ್ರೀಗಳು, ಬಸವರಾಜಸ್ವಾಮಿ ಹಿಡ್ಕಿಮಠ, ಸಾಹಿತಿ ಐ.ಕೆ. ಕಮ್ಮಾರ ಮತ್ತಿತರರು ಉಪಸ್ಥಿತರಿದ್ದರು.