ಆ್ಯಪ್ನಗರ

ಮನೆ ಮರಳಿ ಪಡೆದ ವೃದ್ಧೆ

ಗದಗ : ಸಾಲಗಾರನ ಕಾಟಕ್ಕೆ ಸೂರು ಕಳೆದುಕೊಂಡಿದ್ದ ವೃದ್ಧೆ ಹಾಗೂ ಮೊಮ್ಮಗಳ ನೆರವಿಗೆ ಪೊಲೀಸ್‌ ಇಲಾಖೆ ಧಾವಿಸಿದ್ದು, ನಾಲ್ಕು ವರ್ಷಗಳ ಬಳಿಕ ತಮ್ಮದೇ ಆಶ್ರಯ ಮನೆಯನ್ನು ಅವರು ಸುಪರ್ದಿಗೆ ಪಡೆದುಕೊಂಡಿದ್ದಾರೆ.

ವಿಕ ಸುದ್ದಿಲೋಕ 27 Jan 2017, 4:30 am

ಗದಗ : ಸಾಲಗಾರನ ಕಾಟಕ್ಕೆ ಸೂರು ಕಳೆದುಕೊಂಡಿದ್ದ ವೃದ್ಧೆ ಹಾಗೂ ಮೊಮ್ಮಗಳ ನೆರವಿಗೆ ಪೊಲೀಸ್‌ ಇಲಾಖೆ ಧಾವಿಸಿದ್ದು, ನಾಲ್ಕು ವರ್ಷಗಳ ಬಳಿಕ ತಮ್ಮದೇ ಆಶ್ರಯ ಮನೆಯನ್ನು ಅವರು ಸುಪರ್ದಿಗೆ ಪಡೆದುಕೊಂಡಿದ್ದಾರೆ.

105 ವರ್ಷದ ವೃದ್ಧೆ ಜೈತುನಬಿ ಧಾರವಾಡ ಹಾಗೂ ಮೊಮ್ಮಗಳು ಅಮೀನಾ ಗಣರಾಜ್ಯೋತ್ಸವ ಶುಭ ಸಂದರ್ಭದಲ್ಲಿ ತಮ್ಮ ಮನೆ ಮರಳಿ ಪಡೆದಿದ್ದಾರೆ. ಪೊಲೀಸರ ನೆರವಿನಿಂದ ಸುಪರ್ದಿಗೆ ಬಂದಿರುವ ನಗರದ ಗಂಗಿಮಡಿಯ ಆಶ್ರಯ ಕಾಲೋನಿಯಲ್ಲಿ ನೆಮ್ಮದಿ ಜೀವನ ನಡೆಸಲು ಅಣಿಯಾಗಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಗದಗ ಗ್ರಾಮೀಣ ವೃತ್ತದ ಸಿಪಿಐ ಸೋಮಶೇಖರ ಜೂಲಿಕಟ್ಟಿ ನೇತೃತ್ವದಲ್ಲಿ ಪೊಲೀಸರು ಬೀಗ ಮುರಿದು, ಅಜ್ಜಿ-ಮೊಮ್ಮಗಳಿಗೆ ಮನೆ ಕೊಡಿಸಿದ್ದಾರೆ. ಅಲ್ಲದೆ, ಆರ್ಥಿಕ ಸಹಾಯ ಒದಗಿಸಿ ಕರ್ತವ್ಯದೊಂದಿಗೆ ಮಾನವೀಯತೆಯನ್ನೂ ಮೆರೆದಿದ್ದಾರೆ.

ಏನಿದು ಪ್ರಕರಣ?:

ನಗರದ ಗಂಗಿಮಡಿ ಆಶ್ರಯ ಕಾಲೋನಿ ನಿವಾಸಿ ಮಾಬುಬ್ಬಿ ಧಾರವಾಡ ಎಂಬವರು 2011ರಲ್ಲಿ ಅಕಾಲಿಕ ಮರಣ ಹೊಂದಿದ್ದರು. ಸಾವಿಗೂ ಮುನ್ನ ಸೈಯದ ಬಾದಾಮಿ ಎಂಬವರಿಂದ 2,500 ರೂ. ಸಾಲ ಪಡೆದಿದ್ದರು. ಮಗಳ ಸಾವಿನ ನಂತರ ವೃದ್ಧೆ ಜೈತುನಬಿ ಮೊಮ್ಮಗಳೊಂದಿಗೆ ಅದೇ ಮನೆಯಲ್ಲಿದ್ದರು.

ಸಾಲದ ಹಣ ಮರಳಿಸಿಲ್ಲವೆಂದು ಸೈಯದ್‌ ದಾಖಲಾತಿ ಕಸಿದುಕೊಂಡು, ಅಜ್ಜಿ-ಮೊಮ್ಮಗಳನ್ನು ಹೊರ ಹಾಕಿ ಮನೆ ವಶಪಡಿಸಿಕೊಂಡಿದ್ದರು. ಸಂಬಂಧಿಕರ ಮನೆಯಲ್ಲಿ ಕಾಲ ತಳ್ಳುತ್ತಿದ್ದ ಅಜ್ಜಿ-ಮೊಮ್ಮಗಳು, ನಾಲ್ಕೈದು ವರ್ಷಗಳಿಂದ ನ್ಯಾಯಕ್ಕಾಗಿ ಪರದಾಡುತ್ತಿದ್ದರು. ಬುಧವಾರವಷ್ಟೇ ನ್ಯಾಯಕ್ಕಾಗಿ ಜಿಲ್ಲಾಡಳಿತ ಭವನ ಮುಂಭಾಗ ಧರಣಿ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ