ಹಾಸನ: ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ತಲಾ 50 ಲಕ್ಷ ರೂ. ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದ ರಾಜ್ಯ ಸರಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಎಚ್.ಎಸ್.ಪ್ರಕಾಶ್ ಆರೋಪಿಸಿ, ಯಾವ ಜಿಲ್ಲೆಗೆ ಹಣ ಬಿಡುಗಡೆ ಮಾಡಿದೆ ಎಂಬುದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.
''ಮಳೆಕೈಕೊಟ್ಟು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬರ ತಾಂಡವವಾಡುತ್ತಿದ್ದರೂ, ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಸಮಸ್ಯೆ ನಿವಾರಣೆಗೆ ಮುಂದಾಗದೆ ಜನಪ್ರತಿನಿಧಿಗಳು ಜನತೆಗೆ ಉತ್ತರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ'' ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ''ರಾಜ್ಯ ಸರಕಾರ ಹಣ ಬಿಡುಗಡೆ ಮಾಡಿರುವುದಾಗಿ ಘೋಷಣೆ ಮಾಡುತ್ತಲೇ, ಕ್ಷೇತ್ರದ ಕೆಲ ಸ್ಥಳದಲ್ಲಿ ಕೊಳವೆಬಾವಿ ಕೊರೆಸಿದ್ದು, ಗುತ್ತಿಗೆದಾರರಿಗೆ ಹಣ ಕೈ ಸೇರದೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಜಿಪಂನಲ್ಲಿ ನೂರಡಿ ಪೈಪ್ ಹಾಕಿಸಲು ಹಣವಿಲ್ಲ ಎನ್ನುತ್ತಿದ್ದಾರೆ. ಜಿಲ್ಲಾಡಳಿತವೊಂತು ಸಂಪೂರ್ಣ ನಿಷ್ಕ್ರೀಯವಾಗಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
''ಗ್ರಾಮೀಣ ಪ್ರದೇಶದ ಜನರು ಬಿಂದಿಗೆ ಹಿಡಿದು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದಾರೆ. ಅಂತರ್ಜಲಮಟ್ಟ ಕುಸಿದು ಹೋಗುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಚನ್ನರಾಯಪಟ್ಟಣ ತಾಲೂಕಿನ ಹತ್ತು ಕೆರೆಗಳಿಗೆ ನೀರು ತುಂಬಿಸುತ್ತೇವೆ ಎಂದು ಘೋಷಿಸಿದ್ದಾರೆ. ಸರಕಾರದ ಆದೇಶ ಆದ್ರೆ ಸಾಕೆ ನೀರು ಬೇಡವೇ'' ಎಂದು ಪ್ರಶ್ನಿಸಿದರು.
''ಕುಡಿಯುವ ನೀರಿನ ಯೋಜನೆ ಬಿಟ್ಟು ಇನ್ನಿತರ ಯೋಜನೆಗೆ ಹಣ ಬಳಸುವ ಜಿಪಂನ ಅಧಿಕಾರಿಗಳ ರಕ್ಷಣೆಗೆ ಹಿರಿಯ ಅಧಿಕಾರಿಗಳು ನಿಂತಿದ್ದಾರೆ. ಹೇಮಾವತಿ ಜಲಾಶಯದಲ್ಲಿ ಜಾಕ್ವೆಲ್ನಿಂದ ಕೆಳಮಟ್ಟಕ್ಕೆ ನೀರು ಇಳಿಕೆ ಕಂಡಿದೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡುವ ಬದಲು ಭರವಸೆಯಲ್ಲೇ ಕಾಲಕಳೆದರೆ ಇದನ್ನು ಖಂಡಿಸಿ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ'' ಎಂದು ಎಚ್ಚರಿಸಿದರು. ಜೆಡಿಎಸ್ ವಕ್ತಾರ ರಘು ಹಾಜರಿದ್ದರು.
ಲಿಕ್ಕರ್ಲಾಬಿ: ಜಿಲ್ಲಾಡಳಿತ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುವ ಬದಲು ಲಿಕ್ಕರ್ಶಾಪ್ಗೆ ಪರವಾನಗಿ ನೀಡುವಲ್ಲಿ ತಲ್ಲೀನವಾಗಿದೆ. ಹೀಗಾಗಿ ಕಾನೂನು ಉಲ್ಲಂಘಿಸಿ ಲಾಡ್ಜ್ನಲ್ಲಿ ಹತ್ತು ಕೊಠಡಿ ಇದ್ದಡೆಯೆಲ್ಲ ಒಂದು ಲಿಕ್ಕರ್ಶಾಪ್ ತಲೆ ಎತ್ತುತ್ತಿದೆ ಎಂದು ಶಾಸಕ ಎಚ್.ಎಸ್.ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಉಚ್ಛ ನ್ಯಾಯಾಲಯ ಕೆ.ವಿ.ವೆಂಕಟೇಶ್ ಎಂಬವರಿಗೆ ಮಾ.11 ರಂದು ನೀಡಿದ ಅಬಕಾರಿ ಪರವಾನಗಿ ಪೂರ್ವಾನುಮತಿ ಹಿಂಪಡೆಯುವಂತೆ ನ್ಯಾಯಾಲಯ ನೀಡಿದ ತಡೆಯಾಜ್ಞೆ ಗೆ ಅಸಿಸ್ಟೆಂಟ್ ರಿಜಿಸ್ಟಾರ್ ಮಾ.14 ರಂದು ಸಹಿ ಮಾಡಿದ್ದಾರೆ. ಮಾ.16 ರಂದು ಸ್ವೀಕರಿಸಿರುವ ಅಬಕಾರಿ ಆಯುಕ್ತರು ಮಾ.17 ರಂದು ಸನ್ನದು ಮಂಜೂರು ನೀಡಿದ್ದಾರೆ ಎಂದು ದಾಖಲೆ ಸಹಿತ ಆರೋಪಿಸಿದರು. ಹೀಗೆ ನಗರದಲ್ಲಿ ಅಕ್ರಮ ಮದ್ಯದ ಅಂಗಡಿಗಳು ತಲೆ ಎತ್ತಲು ಜಿಲ್ಲಾಡಳಿತ, ಅಧಿಕಾರಿಗಳು ಸಹಕರಿಸುತ್ತಿದ್ದಾರೆ. ಜನತೆ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.