ಆ್ಯಪ್ನಗರ

ತ್ರಿಭಾಷಾ ಸೂತ್ರ: ಭಾಷಾ ಹೇರಿಕೆ ಇಲ್ಲ

ಸಿಬಿಎಸ್‌ಇ ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ ಜಾರಿಯಿಂದ ಯಾವುದೇ ಒಂದು ನಿರ್ದಿಷ್ಟ ಭಾಷೆಯ ಹೇರಿಕೆಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

Vijaya Karnataka Web 23 Dec 2016, 9:59 am

ಸದ್ಯದಲ್ಲೇ ಸಿಬಿಎಸ್‌ಇ ಶಾಲೆಗಳಲ್ಲಿ ಕಟ್ಟುನಿಟ್ಟು ಜಾರಿ | 10ನೇ ತರಗತಿವರೆಗೂ ನಿಯಮ ವಿಸ್ತರಣೆ

ಹೊಸದಿಲ್ಲಿ: ಸಿಬಿಎಸ್‌ಇ ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ ಜಾರಿಯಿಂದ ಯಾವುದೇ ಒಂದು ನಿರ್ದಿಷ್ಟ ಭಾಷೆಯ ಹೇರಿಕೆಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

ತ್ರಿಭಾಷಾ ನೀತಿಯನ್ನು 10ನೇ ತರಗತಿವರೆಗೂ ಜಾರಿಗೆ ತರಲು ಮುಂದಾಗಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ನಿರ್ಧಾರದಿಂದ ಶಾಲೆಗಳಲ್ಲಿ ನಿರ್ದಿಷ್ಟ ಭಾಷೆಯನ್ನು ಹೇರಿದಂತಾಗುತ್ತದೆ ಎಂಬ ಆತಂಕ ಬೇಡ. ಹಾಗೇನೂ ಆಗುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೇಳಿದೆ. ತೃತೀಯ ಭಾಷೆಯಾಗಿ ಸಂಸ್ಕೃತವನ್ನು ಹೇರುವ ಹುನ್ನಾರ ಇದರ ಹಿಂದೆ ಅಡಗಿದೆ ಎಂಬ ಒಂದು ವರ್ಗದ ಆರೋಪಗಳನ್ನೂ ಅದು ಸಾರಾಸಗಟಾಗಿ ತಳ್ಳಿ ಹಾಕಿದೆ.

ಸ್ಮೃತಿ ಇರಾನಿ ಎಚ್‌ಆರ್‌ಡಿ ಸಚಿವೆಯಾಗಿದ್ದ ಅವಧಿಯಲ್ಲಿ ಕೇಂದ್ರೀಯ ವಿವಿಗಳಲ್ಲಿ 6-8ನೇ ತರಗತಿಯ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ಜರ್ಮನ್‌ ಕಲಿಸಲಾಗುತ್ತಿದ್ದು, ಇದು ತ್ರಿಭಾಷಾ ನೀತಿಯ ಉಲ್ಲಂಘನೆಯಾಗಿದೆ. ಹಾಗಾಗಿ ಜರ್ಮನ್‌ ಬದಲು ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಕಲಿಸಬೇಕು ಎಂದು ಸಚಿವಾಲಯ ಹೊರಡಿಸಿದ್ದ ನಿರ್ದೇಶನ ಸಾಕಷ್ಟು ವಿವಾದ ಸೃಷ್ಟಿಸಿದ ಎರಡು ವರ್ಷಗಳ ತರುವಾಯ, ತ್ರಿಭಾಷಾ ನೀತಿ ಜಾರಿಗೆ ಸಿಬಿಎಸ್‌ಇ ಮುಂದಾಗಿದೆ.

ಏನಿದು ತ್ರಿಭಾಷಾ ಸೂತ್ರ: ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ, ಹಿಂದಿ ಭಾಷೆಯ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಹಿಂದಿ, ಇಂಗ್ಲಿಷ್‌ ಜತೆಗೆ ಯಾವುದಾದರೂ ಒಂದು ಆಧುನಿಕ ಭಾರತೀಯ ಭಾಷೆಯನ್ನು ಕಲಿಯಬೇಕು. ಹಾಗೆಯೇ ಹಿಂದಿಯೇತರ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಹಿಂದಿ, ಇಂಗ್ಲಿಷ್‌ ಜತೆಗೆ ಆಯಾ ರಾಜ್ಯದ ಅಧಿಕೃತ ಭಾಷೆಯನ್ನು ಕಲಿಯಬೇಕು. ಇದೇ ತ್ರಿಭಾಷಾ ಸೂತ್ರವಾಗಿದ್ದು, ತಮಿಳುನಾಡು ಮತ್ತು ಪುದುಚೇರಿ ಹೊರತುಪಡಿಸಿ ದೇಶಾದ್ಯಂತ ಜಾರಿಗೆ ಬರಲಿದೆ.

ಸದ್ಯ ಸಿಬಿಎಸ್‌ಇ ಮಾನ್ಯತೆ ಹೊಂದಿರುವ ಸರಿಸುಮಾರು 18 ಸಾವಿರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ (8ನೇ ತರಗತಿವರೆಗೂ) ಹಿಂದಿ ಇಲ್ಲವೇ ಮಾತೃಭಾಷೆ, ಇಂಗ್ಲಿಷ್‌ ಮತ್ತು ಜರ್ಮನ್‌ ಇಲ್ಲವೇ ಮ್ಯಾಂಡರಿನ್‌ನಂತಹ ಒಂದು ವಿದೇಶಿ ಭಾಷೆಯ ಕಲಿಕೆಗೆ ಅವಕಾಶ ಕಲ್ಪಿಸುತ್ತಿವೆ. ಆದರೆ ಇನ್ಮುಂದೆ ಸಿಬಿಎಸ್‌ಇ ಶಾಲೆಗಳು ತ್ರಿಭಾಷಾ ಸೂತ್ರವನ್ನು ಕೇವಲ ಲಿಖಿತವಾಗಷ್ಟೇ ಅಲ್ಲದೇ ಕೃತಿಯಲ್ಲೂ ಜಾರಿಗೆ ತರುವುದರ ಜತೆಗೆ ಅದನ್ನು 10ನೇ ತರಗತಿವರೆಗೂ ವಿಸ್ತರಿಸುವುದು ಕಡ್ಡಾಯವಾಗಲಿದೆ. ಈ ಸಂಬಂಧ ಸರಕಾರ, ಪ್ರಕ್ರಿಯೆಗಳನ್ನು ಅಂತಿಮಗೊಳಿಸಿದ ನಂತರ ಶಾಲೆಗಳಿಗೆ ಸುತ್ತೋಲೆ ಹೊರಡಿಸಲಿದೆ.

ಸಂಸ್ಕೃತ ಹೇರಿಕೆ ಇಲ್ಲ: ಜಾವಡೇಕರ್‌

ತ್ರಿಭಾಷಾ ನೀತಿಯಿಂದ ಸಿಬಿಎಸ್‌ಇ ಶಾಲೆಗಳಲ್ಲಿ ಸಂಸ್ಕೃತ ಮೂರನೇ ಭಾಷೆಯಾಗಿ ಕಡ್ಡಾಯವಾಗಲಿದೆಯೇ ಎಂಬ ಪ್ರಶ್ನೆಗೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌, ಹಾಗೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 'ಅನಗತ್ಯ ಗೊಂದಲ ಸೃಷ್ಟಿಸುವ ಇರಾದೆ ಸರಕಾರಕ್ಕಿಲ್ಲ. ಸಿಬಿಐಎಸ್‌ಇ ನಿರ್ಧಾರದಿಂದ ಶಾಲೆಗಳಲ್ಲಿ ಯಾವುದೇ ಒಂದು ನಿರ್ದಿಷ್ಟ ಭಾಷೆಯ ಹೇರಿಕೆಯಾಗುವುದಿಲ್ಲ ,' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ