ಕಲಬುರಗಿ: ನಗರದ ಟೌನ್ ಹಾಲ್ನಲ್ಲಿ ಮೇ 27ರಂದು ಮಧ್ಯಾಹ್ನ 2ಕ್ಕೆ ನಡೆಯಲಿರುವ ವಿದ್ಯುಕ್ತ ಕಾರ್ಯಕ್ರಮದಲ್ಲಿ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ ಎಂದು ಡಾ. ಬಾಬು ಜಗಜೀವನರಾಮ್ ಪ್ರತಿಮೆ ಅನಾವರಣ ಸಮಿತಿ ಅಧ್ಯಕ್ಷ ಶ್ಯಾಮ್ ನಾಟಿಕಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜಗಜೀವನರಾಮ್ ಅವರ ಪುತ್ರಿ ಮೀರಾಕುಮಾರ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಎಂದರು.
ಕುಡಿಯುವ ನೀರು ಮತ್ತು ನೈರ್ಮಲೀಕರಣ ಕೇಂದ್ರ ರಾಜ್ಯ ಸಚಿವ ರಮೇಶ್ ಜಿಗಜಿಣಗಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಸಚಿವರಾ ಎಚ್. ಆಂಜನೇಯ, ಡಿ.ಕೆ. ಶಿವಕುಮಾರ, ಪ್ರಿಯಾಂಕ್ ಖರ್ಗೆ, ಸಂಸದ ಮಲ್ಲಿಕಾರ್ಜುನ್ ಖರ್ಗೆ, ಕೆ.ಎಚ್. ಮುನಿಯಪ್ಪ ಮತ್ತಿತರು ಪಾಲ್ಗೊಳ್ಳಲಿದ್ದಾರೆ. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
* ಸಾರ್ವಜನಿಕ ಸಭೆ: ಅದೇ ದಿನ ಮಧ್ಯಾಹ್ನ 2.30ಕ್ಕೆ ವೀರಶೈವ ಕಲ್ಯಾಣ ಮಂಟಪದಲ್ಲಿ 'ಸಾರ್ವಜನಿಕ ಸಭೆ' ಆಯೋಜಿಸಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಸೇರಿ ಸಮಾಜದ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವಂತೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.
ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಿಂದ ಸುಮಾರು 25-30 ಸಾವಿರ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪರಮೇಶ್ವರ ಖಾನಾಪುರ, ಅಂಬಾರಾಯ ಚಲಗೇರಾ, ಲಿಂಗರಾಜ್ ತಾರ್ಫೈಲ್, ಸತೀಶ್ ಅಳ್ಳೊಳ್ಳಿ, ಮಂಜುನಾಥ ನಾಲವಾರಕರ್, ಶರಣು ಸಗರಕರ್ ಇತರರಿದ್ದರು.
ಕಲಬುರಗಿಯ ಟೌನ್ ಹಾಲ್ನಲ್ಲಿ ಸುಂದರ ಪರಿಸರದ ಮಧ್ಯೆ ಬಾಬುಜಿ ಅವರ 10.6 ಅಡಿ ಎತ್ತರ ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದೆ. ಸುಮಾರು ವರ್ಷಗಳ ಬೇಡಿಕೆ ಈಡೇರಿದ್ದು, ಸಮಸ್ತ ಸಮಾಜ ಬಾಂಧವರಲ್ಲಿ ಖುಷಿ ತಂದಿದೆ.
- ರಾಜು ವಾಡೇಕರ್, ಸ್ವಾಗತ ಸಮಿತಿ ಅಧ್ಯಕ್ಷ,
ಡಾ.ಬಾಬು ಜಗಜೀವರಾಮ್ ಪ್ರತಿಮೆ ಅನಾವರಣ ಸಮಿತಿ