Please enable javascript.ಕರ್ನಾಟಕ ನಮಗೆ 2ನೇ ರಾಜ್ಯ: ಅಸ್ಸಾಂ ಸಚಿವ - ಕರ್ನಾಟಕ ನಮಗೆ 2ನೇ ರಾಜ್ಯ: ಅಸ್ಸಾಂ ಸಚಿವ - Vijay Karnataka

ಕರ್ನಾಟಕ ನಮಗೆ 2ನೇ ರಾಜ್ಯ: ಅಸ್ಸಾಂ ಸಚಿವ

ವಿಕ ಸುದ್ದಿಲೋಕ 18 Aug 2012, 4:54 am
Subscribe

'ಅಸ್ಸಾಂ ಸೇರಿದಂತೆ ಈಶಾನ್ಯ ಭಾಗದ ಮಂದಿಗೆ ಕರ್ನಾಟಕ ಸರಕಾರ ತಕ್ಕ ರಕ್ಷಣೆ ನೀಡುತ್ತಿದೆ. ಕರ್ನಾಟಕ ಸರಕಾರ- ನಮ್ಮ ಭಾಗದ ಮಂದಿಗೆ ಒದಗಿಸಿರುವ ರಕ್ಷಣೆಗೆ ಧನ್ಯವಾದ ಅರ್ಪಿಸುತ್ತೇವೆ' ಎಂದು ಅಸ್ಸಾಂನ ಸಾರಿಗೆ ಸಚಿವ ಚಂದನ್ ಬ್ರಹ್ಮ ಹೇಳಿದರು.

 2
ಕರ್ನಾಟಕ ನಮಗೆ 2ನೇ ರಾಜ್ಯ: ಅಸ್ಸಾಂ ಸಚಿವ
ಬೆಂಗಳೂರು: 'ಅಸ್ಸಾಂ ಸೇರಿದಂತೆ ಈಶಾನ್ಯ ಭಾಗದ ಮಂದಿಗೆ ಕರ್ನಾಟಕ ಸರಕಾರ ತಕ್ಕ ರಕ್ಷಣೆ ನೀಡುತ್ತಿದೆ. ಕರ್ನಾಟಕ ಸರಕಾರ- ನಮ್ಮ ಭಾಗದ ಮಂದಿಗೆ ಒದಗಿಸಿರುವ ರಕ್ಷಣೆಗೆ ಧನ್ಯವಾದ ಅರ್ಪಿಸುತ್ತೇವೆ' ಎಂದು ಅಸ್ಸಾಂನ ಸಾರಿಗೆ ಸಚಿವ ಚಂದನ್ ಬ್ರಹ್ಮ ಹೇಳಿದರು.

'ಈ ನಡುವೆಯೂ ನಮ್ಮ ಜನ ಗಾಬರಿ ಆಗಿದ್ದಾರೆ. ಇವರಿಗೆ ಕರ್ನಾಟಕ ಬಿಟ್ಟು ತೆರಳದಂತೆ ಮನವಿ ಮಾಡಿದ್ದೇವೆ. ಶುಕ್ರವಾರದಿಂದ ಪರಿಸ್ಥಿತಿ ಸುಧಾರಿಸುವ ನಂಬಿಕೆ ಇದೆ' ಎಂದು ಅವರು ಹೇಳಿದರು.

'ಈಶಾನ್ಯ ಭಾಗದ ಮಂದಿಗೆ ಕರ್ನಾಟಕ ಎರಡನೇ ರಾಜ್ಯ ಇದ್ದಂತೆ. ಶಾಂತಿ- ಸುವ್ಯವಸ್ಥೆಯ ಈ ಸುಂದರ ನಾಡಿಗೆ, ವಲಸೆ ಹೋಗಿರುವ ನಮ್ಮ ಮಂದಿ- ಸದ್ಯದಲ್ಲೇ ವಾಪಸ್ ಬರಲಿದ್ದಾರೆ' ಎಂದು ಅಸ್ಸಾಂ ಸರಕಾರದ ಕೃಷಿ ಸಚಿವ ನಿಲೊಮಣಿ ಸೇನ್ ದೇಕಾ ತಿಳಿಸಿದರು. ಇದಕ್ಕೂ ಮೊದಲು ಆರ್.ಅಶೋಕ್, ಕಾನೂನು ಸಚಿವ ಸುರೇಶ್ ಕುಮಾರ್ ಮತ್ತು ಅಸ್ಸಾಂ ಸಚಿವರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದರು.

ಕಠಿಣ ಕ್ರಮ
'ರಾಜ್ಯದಲ್ಲಿ ನೆಲೆಸಿರುವ ಈಶಾನ್ಯ ಭಾಗದ ಮಂದಿಗೆ ಎಸ್‌ಎಂಎಸ್, ಎಂಎಂಎಸ್ ಮೂಲಕ ಬೆದರಿಕೆ ಹಾಕಿರುವ, ಹಲ್ಲೆ ನಡೆಸಲು ಯತ್ನಿಸುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದ' ಎಂದು ಉಪ ಮುಖ್ಯಮಂತ್ರಿ ಆರ್.ಅಶೋಕ್ ನುಡಿದರು.

ವಿಧಾನಸೌಧದಲ್ಲಿ ಗುರುವಾರ ಅಸ್ಸಾಂ ಸಚಿವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ, 'ಈ ಕೃತ್ಯದ ಹಿಂದಿರುವ ಜಾಲದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನೆರಡು ದಿನಗಳಲ್ಲಿ ಇನ್ನಷ್ಟು ಕಿಡಿಗೇಡಿಗಳನ್ನು ಬಂಧಿಸಲಾಗುವುದು' ಎಂದ ಸಚಿವರು, ನಮ್ಮ ರಾಜ್ಯದಲ್ಲಿರುವ ಈಶಾನ್ಯ ಭಾಗದ ಮಂದಿಗೆ ಯಾರೇ ಬೆದರಿಕೆ ಹಾಕಿದರೂ, ಅವರಲ್ಲಿ ಭೀತಿ ಹುಟ್ಟಿಸುವಂತೆ ನಡೆದುಕೊಂಡರೂ, ಅವರ ಎಷ್ಟೇ ಪ್ರಭಾವಿಗಳಾದರೂ- ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದೂ ಎಚ್ಚರಿಕೆ ನೀಡಿದರು.

ರಕ್ಷಣೆ ಒದಗಿಸಿದ್ದೇವೆ
ಎರಡು ದಿನಗಳಿಗೆ ಹೋಲಿಸಿದರೆ, ಗುರುವಾರ ವಲಸೆ ಹೋಗುವವರ ಸಂಖ್ಯೆ ಕಡಿಮೆ ಆಗಿದೆ. ರೈಲ್ವೆ ನಿಲ್ದಾಣದಲ್ಲಿ ಈಶಾನ್ಯ ಭಾಗದ ಮಂದಿಯನ್ನು ಖುದ್ದು ಭೇಟಿ- ರಕ್ಷಣೆ ನೀಡುವ ಆಶ್ವಾಸನೆ ನೀಡಿ, ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಜತೆಗೆ, ಪೊಲೀಸ್ ಸಿಬ್ಬಂದಿಗೂ ಇವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸೂಚನೆ ನೀಡಿದ್ದೇನೆ ಎಂದೂ ಅಶೋಕ್ ವಿವರಣೆ ನೀಡಿದರು.

ರಾಜ್ಯದಲ್ಲಿ ಯಾವುದೇ ಜನಾಂಗಕ್ಕೆ ಸೇರಿದ ಜನರಿಗೆ ಭೀತಿ ಎದುರಾಗಿಲ್ಲ. ಸುಳ್ಳು ವದಂತಿ ಹಬ್ಬಿಸಿ ಅಶಾಂತಿ ಎಬ್ಬಿಸಲು ಕಾರಣರಾದವರನ್ನು ಬಂಧಿಸಲು ಗುಪ್ತಚರ ವಿಭಾಗ ಕೆಲಸ ಮಾಡುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ಮಾಲ್‌ಗಳ ಮುಖ್ಯಸ್ಥರು, ಹೋಟೆಲ್ ಪ್ರತಿನಿಧಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಈಶಾನ್ಯ ರಾಜ್ಯಗಳ ಜನ ವಾಸಿಸುತ್ತಿರುವ ಪ್ರದೇಶಗಳಲ್ಲಿ ಭದ್ರತೆ ಒದಗಿಸಲಾಗಿದೆ. ತವರಿಗೆ ತೆರಳುವವರಿಗೆ ರಕ್ಷಣೆ, ಆಹಾರ ಒದಗಿಸಲಾಗಿದೆ. ರಾಜ್ಯದಲ್ಲೇ ಉಳಿದುಕೊಳ್ಳುವಂತೆ ಮನವೊಲಿಸಲಾಗುತ್ತಿದೆ. ರಾಜ್ಯದಲ್ಲಿ 3-4 ಲಕ್ಷ ಈಶಾನ್ಯಿಗರಿದ್ದು, ಆ ಪೈಕಿ 2.5 ಲಕ್ಷ ಮಂದಿ ಬೆಂಗಳೂರಿನಲ್ಲಿ ಇದ್ದಾರೆ. ಈವರೆಗೆ 16 ಸಾವಿರ ಮಂದಿ ರೈಲಿನಲ್ಲಿ ತೆರಳಿದ್ದಾರೆ ಎಂದರು.

ಸಚಿವ ಸುರೇಶ್‌ಕುಮಾರ್ ಮಾತನಾಡಿ, 'ವದಂತಿಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ತವರಿಗೆ ತೆರಳಿರುವವರ ಪೈಕಿ ಶೇ.60ರಷ್ಟು ಮಂದಿ ಪೋಷಕರೊಂದಿಗೆ ಇರಬೇಕು ಎಂಬ ಉದ್ದೇಶದಿಂದ ವಾಪಸಾಗಿದ್ದಾರೆ. ಸರಕಾರ ಕೈಗೊಂಡ ಕ್ರಮದ ಬಗ್ಗೆ ಕೇಂದ್ರ ಮೆಚ್ಚುಗೆ ಸೂಚಿಸಿದೆ' ಎಂದರು.

ಅಸ್ಸಾಂ ಸಚಿವರ ವಿರುದ್ಧ ಘೋಷಣೆ
ಆಸ್ಸಾಂನ ಸಚಿವರು ರೈಲು ನಿಲ್ದಾಣಕ್ಕೆ ಭೇಟಿ ನೀಡಿದಾಗ ಅವರ ವಿರುದ್ಧ ಘೋಷಣೆ ಕೂಗಿದ 'ಭ್ರಷ್ಟಾಚಾರ ವಿರೋಧಿ ಭಾರತ' ಸಂಘಟನೆಯ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಈಶಾನ್ಯ ರಾಜ್ಯಗಳ ಜನ ಬೆಂಗಳೂರು ತೊರೆಯುತ್ತಿರುವುದರಿಂದ ಅವರ ಮನವೊಲಿಸಲು ಅಸ್ಸಾಂ ಸಚಿವರಾದ ಚಂದನ್ ಬ್ರಹ್ಮ ಮತ್ತು ನಿಲೋಮಣಿ ಸೆನ್ ದೇಕಾ ಶುಕ್ರವಾರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಆಗ, ಅಸ್ಸಾಂನಲ್ಲಿ ಅಕ್ರಮ ವಲಸೆ ಪ್ರಮಾಣ ಹೆಚ್ಚುತ್ತಿದೆ. ಇದನ್ನು ತಡೆಗಟ್ಟದೆ ಕಾಂಗ್ರೆಸ್ ಓಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಘೋಷಣೆ ಕೂಗಲಾಯಿತು. ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ