ಬೆಂಗಳೂರು: ಬಾಲಬ್ರೂಯಿ ಅತಿಥಿ ಗೃಹದಲ್ಲಿ ರಾಜಕೀಯ ಉದ್ದೇಶದ ಸಭೆ ನಡೆಸಿದ ಆಡಳಿತಾರೂಢ ಕಾಂಗ್ರೆಸ್ ಪೇಚಿಗೆ ಸಿಲುಕಿದೆ. ಆದರೆ, ಇಂತಹ ಯಾವ ಸಭೆಯನ್ನೂ ನಡೆಸಿಲ್ಲವೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಉಲ್ಟಾ ಹೊಡೆದಿದ್ದಾರೆ.
ಚುನಾವಣೆ ಸಿದ್ಧತೆಗೆ ಆಗಮಿಸಿರುವ ವೇಣು, ಬುದ್ಧಿಜೀವಿಗಳು, ಪ್ರಗತಿಪರರೊಂದಿಗೆ ಚರ್ಚಿಸಲು ಇಚ್ಛಿಸಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಕೃಪಾ ಅತಿಥಿ ಗೃಹದಲ್ಲಿ ಬುಧವಾರ ಬೆಳಗ್ಗೆ ಸಭೆ ಏರ್ಪಾಡಾಗಿತ್ತು. ಆದರೆ, ಕಡೆ ಕ್ಷಣದಲ್ಲಿ ಈ ಸಭೆಯನ್ನು ಬಾಲಬ್ರೂಯಿ ಅತಿಥಿ ಗೃಹಕ್ಕೆ ಸ್ಥಳಾಂತರಿಸಲಾಯಿತು.
ಪ್ರಗತಿಪರ ಚಿಂತಕರ ಪೈಕಿ ಯಾರಾರಯರು ಈ ಸಭೆಯಲ್ಲಿ ಭಾಗಿಯಾಗಬೇಕೆಂಬ ಪಟ್ಟಿಯನ್ನು ಕಾಂಗ್ರೆಸ್ನ ಸಂಸದ ಶಶಿ ತರೂರ್ ಸಿದ್ಧಪಡಿಸಿದ್ದರು. ಅದರಂತೆ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಚಿಂತಕ ಕೆ.ಎಲ್. ಅಶೋಕ್, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಅನೀಸ್, ದಲಿತ ಸಂಘರ್ಷ ಸಮಿತಿಯ ವೆಂಕಟಪ್ಪ, ಸೌತ್ ಇಂಡಿಯನ್ ಅಸೊಸಿಯೇಷನ್ ಅಧ್ಯಕ್ಷ ಸೆಬಾಸ್ಟಿಯನ್ ಮತ್ತಿತರರು ಪಾಲ್ಗೊಂಡಿದ್ದರು.
ಚುನಾವಣೆಗೆ ಯಾವ ರಣನೀತಿ ರೂಪಿಸಿಕೊಳ್ಳಬೇಕು. ಸಾಫ್ಟ್ ಹಿಂದುತ್ವದ ನಿಲುವು ತಳೆದರೆ ಅದರಿಂದ ಪಕ್ಷಕ್ಕೆ ಅನುಕೂಲ ಆಗುವುದಾ ಅಥವಾ ಹಿನ್ನಡೆಯಾಗುವುದಾ ಎಂಬುದೂ ಸೇರಿ ಹಲವು ವಿಚಾರಗಳ ಬಗ್ಗೆ ಪ್ರಗತಿಪರರ ಮಾರ್ಗದರ್ಶನ ಪಡೆಯುವುದು ಈ ಸಭೆಯ ಉದ್ದೇಶವಾಗಿತ್ತು. ರಾಜಕೀಯದ ಲೇಪನವಿರುವ ಇಂತಹ ಸಭೆಗಳನ್ನು ಸರಕಾರಿ ಅತಿಥಿ ಗೃಹದಲ್ಲಿ ನಡೆಸುವುದು ಶಿಷ್ಟಾಚಾರವಲ್ಲ. ಮಂತ್ರಿಗಳು, ಸಂಸದರು, ಶಾಸಕರು ಸರಕಾರಿ ನಿವಾಸದಲ್ಲಿ ವಾಸ್ತವ್ಯ ಮಾಡಿದಾಗ ರಾಜಕಾರಣಿಗಳೂ ಸೇರಿದಂತೆ ಬೆಂಬಲಿಗರು ಭೇಟಿ ಮಾಡಿ ಹೋಗುವುದು ಸಾಮಾನ್ಯ. ಆದರೆ, ರಾಜಕೀಯ ಲಾಭದ ಸಭೆ ನಡೆದ ನಿದರ್ಶನ ವಿರಳ.
ಈ ವಿಚಾರ ಗೊತ್ತಾಗುತ್ತಿದ್ದಂತೆ ನಿಲುವು ಬದಲಿಸಿದ ಕಾಂಗ್ರೆಸ್, ಪ್ರಗತಿಪರರನ್ನು ಸಭೆಗೆ ಆಹ್ವಾನಿಸಿರಲಿಲ್ಲ. ಅವರೇ ಖುದ್ದಾಗಿ ಬಂದು ಹೋಗಿದ್ದಾರೆ ಎಂದು ಹೇಳಿಕೊಳ್ಳುತ್ತಿದೆ. ಈ ಸಭೆ ಬಳಿಕ ಇದೇ ಅಭಿಪ್ರಾಯ ವ್ಯಕ್ತಪಡಿಸಿದ ವೇಣುಗೋಪಾಲ್, ''ಪ್ರಗತಿಪರರೊಂದಿಗೆ ನಾವು ಯಾವುದೇ ಸಭೆ ಮಾಡಿಲ್ಲ. ಅವರೇ ಬಂದು ಕೆಲ ವಿಚಾರದ ಬಗ್ಗೆ ಚರ್ಚಿಸಿ ಹೋಗಿದ್ದಾರೆ,'' ಎಂದು ಹೇಳಿದರು.
ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ
ಈ ಸಭೆ ಬಳಿಕ ಮಾತನಾಡಿದ ಪ್ರಗತಿಪರ ಚಿಂತಕರು ಹಾಗೂ ಕಾಂಗ್ರೆಸ್ ಮುಖಂಡರು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದರು.
''ಸಚಿವ ಅನಂತಕುಮಾರ್ ಹೆಗಡೆ ನೀಡಿದ್ದ ಅಸಂಬದ್ಧ ಹೇಳಿಕೆಗೆ ಸಂಸತ್ನಲ್ಲಿ ಕ್ಷಮಾಪಣೆ ಕೇಳಿದ್ದರು. ಪುನಃ ವಿವಾದಾತ್ಮಕ ಹೇಳಿಕೆ ನೀಡಿರುವುದು ಸರಿಯಲ್ಲ. ಇಂಥವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ,'' ಎಂದು ವೇಣುಗೋಪಾಲ್ ಹೇಳಿದರು.
''ಅನಂತಕುಮಾರ್ ಹೆಗಡೆ ಬಾಯಿ ಮತ್ತು ಮನಸು ಕೊಳಕು. ಇಂತಹ ಮನುಷ್ಯ ದೇಶದ ಮಂತ್ರಿಯಾಗಿದ್ದೇ ದೊಡ್ಡ ದುರಂತ,'' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತರಾಟೆಗೆ ತೆಗೆದುಕೊಂಡರು.
ನಾಲಾಯಕ್
''ಹೆಗಡೆ ಕೇಂದ್ರ ಸಚಿವರಾಗಲು ನಾಲಾಯಕ್. ಈತ ಬಚ್ಚಲು ಮನೆಯ ವಾಸನೆ ಇದ್ದಂತೆ. ಇವರನ್ನು ರಾಜ್ಯದಿಂದಲೇ ಒದ್ದು ಓಡಿಸಬೇಕು,'' ಎಂದು ಚಿಂತಕ ಕೆ.ಎಲ್. ಅಶೋಕ್ ವಾಗ್ದಾಳಿ ನಡೆಸಿದರು.