ಆ್ಯಪ್ನಗರ

ಪುಲ್ವಾಮ ಉಗ್ರದಾಳಿ: ಪ್ರತಿಕಾರಕ್ಕೆ ದೇಶದ ಕಾತರ

ನಾವು ಇದನ್ನು ಮರೆಯುವುದೂ ಇಲ್ಲ, ಅವರನ್ನು ಕ್ಷಮಿಸುವುದೂ ಇಲ್ಲ. ಈ ಹೀನಾಯ ಕೃತ್ಯಕ್ಕೆ ಪ್ರತಿಕಾರ ತೀರಿಸಿಕೊಳ್ಳದೆ ವಿರಮಿಸೆವು. ಪುಲ್ವಾಮಾದಲ್ಲಿ ಮಡಿದ ಹುತಾತ್ಮರ ಕುಟುಂಬಗಳ ಬೆಂಬಲಕ್ಕೆ ನಾವಿದ್ದೇವೆ ಎಂದು ಉಗ್ರರಿಗೆ ಸಿಆರ್‌ಪಿಎಫ್‌ ಕಟು ಸಂದೇಶ ರವಾನಿಸಿದೆ.

Vijaya Karnataka Web 16 Feb 2019, 8:00 am
ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ 40ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾದ ಭೀಕರ ಉಗ್ರ ದಾಳಿ ವಿರುದ್ಧ ಸೇಡಿಗಾಗಿ ದೇಶಾದ್ಯಂತ ಭುಗಿಲೆದ್ದಿರುವ ಜನಾಗ್ರಹದ ನಡುವೆಯೇ ಸಿಆರ್‌ಪಿಎಫ್‌ ಪ್ರತಿಕಾರದ ಸಂಕಲ್ಪ ತೊಟ್ಟಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರೂ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದು, ಸೇಡು ತೀರಿಸಿಕೊಳ್ಳಲು ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿರುವುದಾಗಿ ಘೋಷಿಸಿದ್ದಾರೆ.
Vijaya Karnataka Web Terror1


ನಾವು ಇದನ್ನು ಮರೆಯುವುದೂ ಇಲ್ಲ, ಅವರನ್ನು ಕ್ಷಮಿಸುವುದೂ ಇಲ್ಲ. ಈ ಹೀನಾಯ ಕೃತ್ಯಕ್ಕೆ ಪ್ರತಿಕಾರ ತೀರಿಸಿಕೊಳ್ಳದೆ ವಿರಮಿಸೆವು. ಪುಲ್ವಾಮಾದಲ್ಲಿ ಮಡಿದ ಹುತಾತ್ಮರ ಕುಟುಂಬಗಳ ಬೆಂಬಲಕ್ಕೆ ನಾವಿದ್ದೇವೆ,'' ಎಂದು ಉಗ್ರರಿಗೆ ಸಿಆರ್‌ಪಿಎಫ್‌ ಕಟು ಸಂದೇಶ ರವಾನಿಸಿದೆ. ಹುತಾತ್ಮ ಯೋಧರಿಗೆ ಗೌರವಾರ್ಥವಾಗಿ ಎರಡು ನಿಮಿಷಗಳ ಮೌನಾಚರಣೆ ಮಾಡಿರುವ ಸಿಆರ್‌ಪಿಎಫ್‌, ದಾಳಿಕೋರರಿಗೆ ತಕ್ಕ ಪಾಠ ಕಲಿಸುವುದಾಗಿ ಟ್ವಿಟರ್‌ ಮೂಲಕ ಪ್ರಕಟಿಸಿದೆ.

ಪಾಕ್‌ಗೆ ಮೋದಿ ಎಚ್ಚರಿಕೆ
ಉಗ್ರ ದಾಳಿ ಯೋಜಿಸುವ ಮೂಲಕ ಭಾರತವನ್ನು ದುರ್ಬಲಗೊಳಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದು. ಉಗ್ರ ಸಂಘಟನೆಗಳಿಗೆ ಮತ್ತು ಅವರಿಗೆ ಬೆಂಬಲಿಸಿ ಪ್ರಚೋದನೆ ನೀಡುತ್ತಿರುವವರಿಗೆ (ಪಾಕ್‌ ಸರಕಾರ) ಒಂದು ಸಂದೇಶ ನೀಡಲು ಬಯಸುತ್ತೇನೆ. ಅವರು ದೊಡ್ಡ ತಪ್ಪು ಮಾಡಿದ್ದಾರೆ. ಇದಕ್ಕೆ ಅವರು 'ಅತ್ಯಂತ ದುಬಾರಿ ಬೆಲೆ' ತೆರುತ್ತಾರೆ ಎಂದು ಹೇಳಿದ್ದಾರೆ.

ದೇಶಾದ್ಯಂತ ಆಕ್ರೋಶದ ದನಿ
ಉಗ್ರರ ವಿರುದ್ಧ ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌ನಂತಹ ದಿಟ್ಟ ಕ್ರಮಕ್ಕಾಗಿ ದೇಶಾದ್ಯಂತ ತೀವ್ರ ಜನಾಗ್ರಹ ವ್ಯಕ್ತವಾಗಿದೆ. ರಾಜಕೀಯ ಪಕ್ಷಗಳು, ನಾನಾ ಸಂಘ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿ ಪಾಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಸರಕಾರ ತಕ್ಷಣ ಪ್ರತಿಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ.

ರಾಜನಾಥ್‌ ವಾರ್ನಿಂಗ್‌
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಬದ್ಗಾಮ್‌ನಲ್ಲಿನ ಸಿಆರ್‌ಪಿಎಫ್‌ ಕ್ಯಾಂಪ್‌ನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಗೌರವ ನಮನ ಸಲ್ಲಿಸಿದರು. ಯೋಧರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು. ದೇಶವು ಎಂದಿಗೂ ಯೋಧರ ತ್ಯಾಗ ಮರೆಯುವುದಿಲ್ಲ. ಅವರ ತ್ಯಾಗವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ರಾಹುಲ್‌ ಗಾಂಧಿ ಸಹಮತ
ಪುಲ್ವಾಮಾ ದಾಳಿಕೋರರ ವಿರುದ್ಧ ಕ್ರಮದ ವಿಚಾರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ಸರಕಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೇರೆಲ್ಲಾ ವಿಚಾರಗಳನ್ನು ಬದಿಗಿರಿಸಿ, ಸರಕಾರದ ಬೆನ್ನಿಗೆ ನಿಲ್ಲುವುದಾಗಿ ಅವರು ಭರವಸೆ ನೀಡಿದ್ದಾರೆ.

ಶನಿವಾರ ಸರ್ವಪಕ್ಷ ಸಭೆ
ಪುಲ್ವಾಮಾ ದಾಳಿ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಶನಿವಾರ ಸರಕಾರ ಸರ್ವ ಪಕ್ಷಗಳ ಸಭೆ ಕರೆದಿದೆ. ಸಭೆಯಲ್ಲಿ ಉಗ್ರರ ದಾಳಿ ಬಗ್ಗೆ ಪಕ್ಷಗಳಿಗೆ ಮಾಹಿತಿ ನೀಡುವುದಲ್ಲದೆ, ಪ್ರಸ್ತುತ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆಯೂ ಗೃಹ ಸಚಿವ ರಾಜನಾಥ್‌ ಸಿಂಗ್‌ ವಿವರಿಸಲಿದ್ದಾರೆ.

ಹುತಾತ್ಮ ಗುರು ಅಂತ್ಯಕ್ರಿಯೆ ಶನಿವಾರ
ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾದ ವೀರಯೋಧ ಎಚ್‌.ಗುರು ಅವರ ಅಂತ್ಯ ಸಂಸ್ಕಾರ ಶನಿವಾರ ಸಕಲ ಸರಕಾರಿ ಹಾಗೂ ಸೇನಾ ಗೌರವಗಳೊಂದಿಗೆ ಶನಿವಾರ ನೆರವೇರಲಿದೆ. ಶನಿವಾರ ಬೆಳಗ್ಗೆ ಪಾರ್ಥಿವ ಶರೀರ ಗುರು ಅವರ ಹುಟ್ಟೂರಾದ ಮದ್ದೂರು ತಾಲೂಕಿನ ಗುಡಿಗೆರೆಗೆ ತಲುಪಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ