Please enable javascript.ಕೆಪಿಎಸ್‌ಸಿ ನೇಮಕಾತಿ ಅಕ್ರಮ ನಡೆಯೋದು ಹೇಗೆ ಗೊತ್ತಾ? ಕಡಿವಾಣಕ್ಕೆ ಮಾಜಿ ಕಾರ್ಯದರ್ಶಿಯಿಂದ ಸರ್ಕಾರಕ್ಕೆ 3 ಶಿಫಾರಸು ವರದಿ - do you know how kpsc recruitment is illegal 3 recommendation report to govt by ex secretary vikas kishore suralkar - Vijay Karnataka

ಕೆಪಿಎಸ್‌ಸಿ ನೇಮಕಾತಿ ಅಕ್ರಮ ನಡೆಯೋದು ಹೇಗೆ ಗೊತ್ತಾ? ಕಡಿವಾಣಕ್ಕೆ ಮಾಜಿ ಕಾರ್ಯದರ್ಶಿಯಿಂದ ಸರ್ಕಾರಕ್ಕೆ 3 ಶಿಫಾರಸು ವರದಿ

Edited by ಜಯಪ್ರಕಾಶ್‌ ಬಿರಾದಾರ್‌ | Vijaya Karnataka 7 Oct 2023, 7:14 am
Subscribe

KPSC Recruitment Illegal: ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ಯಾವ ರೀತಿ ನಡೆಯುತ್ತಿತ್ತು ಎಂಬುದನ್ನು ಉದಾಹರಣೆ ಸಮೇತ ವಿವರಿಸಿರುವ ಮಾಜಿ ಕಾರ್ಯದರ್ಶಿ ಸದ್ಯ ಆ ಬಗ್ಗೆ ಕ್ರಮಕ್ಕೆ ಶಿಫಾರಸು ವರದಿ ನೀಡಿದ್ದಾರೆ. ಏನೆಲ್ಲಾ ಶಿಫಾರಸು ನೀಡಿದ್ದಾರೆ? ಇಲ್ಲಿದೆ ಮಾಹಿತಿ.

ಹೈಲೈಟ್ಸ್‌:

  • ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿ ನಡೆಸುವ ಅಕ್ರಮಗಳಿಗೆ 'ಬ್ರೇಕ್‌' ಹಾಕುವಂತೆ ಮಾಜಿ ಕಾರ್ಯದರ್ಶಿ ವರದಿ.
  • ಸಂದರ್ಶನ ಸಮಯದಲ್ಲಿ ನಡೆಯುತ್ತಿದ್ದ ಗೋಲ್‌ಮಾಲ್‌ ಬಿಚ್ಚಿಟ್ಟ ವಿಕಾಸ್‌ ಕಿಶೋರ್‌ ಸುರಳ್ಕರ್‌.
  • ಸಂದರ್ಶನಕ್ಕೆ 'ಆಟೋಮ್ಯಾಟಿಕ್‌' ವಿಧಾನ ಅಳವಡಿಕೆಗೆ ಶಿಫಾರಸು.
ಕೆಪಿಎಸ್‌ಸಿ
ಕೆಪಿಎಸ್‌ಸಿ ಕಚೇರಿ (ಸಾಂದರ್ಭಿಕ ಚಿತ್ರ)
ಶ್ರೀಕಾಂತ್‌ ಹುಣಸವಾಡಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿ ನಡೆಸುವ ಅಕ್ರಮಗಳಿಗೆ 'ಬ್ರೇಕ್‌' ಹಾಕುವಂತೆ ಆಯೋಗದ ಕಾರ್ಯದರ್ಶಿಯಾಗಿದ್ದ ವಿಕಾಸ್‌ ಕಿಶೋರ್‌ ಸುರಳ್ಕರ್‌ ಸರಕಾರಕ್ಕೆ ವರದಿ ನೀಡಿದ್ದಾರೆ.
ವರ್ಗಾವಣೆಗೂ ಮುನ್ನ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ (ಡಿಪಿಎಆರ್‌) ವಿಸ್ತೃತವಾದ ವರದಿಯನ್ನು ಸಲ್ಲಿಸಿದ್ದಾರೆ. ಅದರ ಪ್ರತಿ ಅಧಿಕೃತ ಮೂಲಗಳಿಂದ 'ವಿಜಯಕರ್ನಾಟಕ'ಕ್ಕೆ ಲಭ್ಯವಾಗಿದೆ.

ಸಂದರ್ಶನ ಬೋರ್ಡ್‌ಗೆ ಅಭ್ಯರ್ಥಿಗಳ ಹಂಚಿಕೆಗೆ ಲಾಟರಿ ಬದಲು ಆಟೋಮ್ಯಾಟಿಕ್‌ ಜನರೇಷನ್‌ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಒಮ್ಮೆ ಸಂದರ್ಶನಕ್ಕೆ ಆಯ್ಕೆಯಾದ ವಿಷಯ ತಜ್ಞರನ್ನು ಮತ್ತೆ 2-3 ವರ್ಷ ಆಯ್ಕೆ ಮಾಡಬಾರದು. ಆಯೋಗ ನೇಮಕ ಪಟ್ಟಿಗಳಿಗೆ ಅನುಮೋದನೆ ನೀಡಲು ಕಾಲಮಿತಿ ನಿಗದಿ ಮಾಡುವುದೂ ಸೇರಿದಂತೆ ಮೂರು ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲದೆ, ಅದಕ್ಕೆ ಪೂರಕ ದಾಖಲೆಗಳನ್ನೂ ಒದಗಿಸಿದ್ದಾರೆ.

ಕೆಪಿಎಸ್‌ಸಿ ಇಂದ ಕಾರ್ಮಿಕ ಇಲಾಖೆ, ಆರ್ಥಿಕ ಸಾಂಖ್ಯಿಕ ಇಲಾಖೆ ಹುದ್ದೆಗಳಿಗೆ ಆಯ್ಕೆಪಟ್ಟಿ ಪ್ರಕಟ

ಸರಕಾರದ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳದೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧ್ಯಕ್ಷರ ಕಾರ್ಯವೈಖರಿಯಿಂದ ಅಭ್ಯರ್ಥಿಗಳು, ಆಯೋಗ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಆಡಳಿತ ಅನುಭವ ಹೊಂದಿರುವವರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಸೂಕ್ತ ಎಂದು ಹಿಂದಿನ ಕಾರ್ಯದರ್ಶಿ ಶಿಫಾರಸು ಮಾಡಿದ್ದಾರೆ.

ಲಾಟರಿ ನಂತರ ಗೋಲ್‌ಮಾಲ್‌

ಹೋಟಾ ಸಮಿತಿಯ ಶಿಫಾರಸಿನಂತೆ ಸಂದರ್ಶನ ಪ್ರಕ್ರಿಯೆಯನ್ನು ನ್ಯಾಯಯುತ ಮತ್ತು ಪಾರರ್ದಶಕವಾಗಿ ನಡೆಸಲು ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳನ್ನು ಸಂದರ್ಶನ ಬೋರ್ಡ್‌ಗೆ ಹಂಚಿಕೆ ಮಾಡಲು ಸಂದರ್ಶನದ ದಿನದಂದು ಬೆಳಿಗ್ಗೆ 9 ಗಂಟೆಗೆ ಲಾಟರಿ ಪ್ರಕ್ರಿಯೆ ನಡೆಸಲಾಗುವುದು. ಆ ಪ್ರಕ್ರಿಯೆ ಆಯೋಗದ ಅಧ್ಯಕ್ಷರು ಹಾಗೂ ಪರೀಕ್ಷಾ ನಿಯಂತ್ರಕರ ಉಪಸ್ಥಿತಿಯಲ್ಲಿಅಧ್ಯಕ್ಷರ ಕೊಠಡಿಯಲ್ಲಿ ನಡೆಯುತ್ತದೆ. ಇದರ ಉದ್ದೇಶ ಯಾವ ಬೋರ್ಡ್‌ಗೆ ಯಾವ ಅಭ್ಯರ್ಥಿಯನ್ನು ಹಂಚಿಕೆ ಮಾಡಲಾಗುತ್ತದೆ ಮತ್ತು ಯಾವ ಯಾವ ಸದಸ್ಯರು ಯಾವ ಬೋರ್ಡ್‌ನಲ್ಲಿರಲಿದ್ದಾರೆಂಬ ಮಾಹಿತಿ ಗೌಪ್ಯತೆ ಕಾಯ್ದುಕೊಳ್ಳಲು. ಅಲ್ಲದೆ, ಬೋರ್ಡ್‌ನ ಸದಸ್ಯರಿಗೂ ಯಾವ ಅಭ್ಯರ್ಥಿ ಯಾವ ಬೋರ್ಡ್‌ಗೆ ಹಾಜರಾಗುತ್ತಾರೆಂಬ ಮಾಹಿತಿ ಇರುವುದಿಲ್ಲ.

ಕೆಪಿಎಸ್‌ಸಿಯಲ್ಲಿ ಪಾರದರ್ಶಕತೆ ತಂದಿದ್ದ ಕಾರ್ಯದರ್ಶಿ ಸುರಳ್ಕರ್‌ ಎತ್ತಂಗಡಿ! ಹುದ್ದೆ ಆಕಾಂಕ್ಷಿಗಳಿಂದ ತೀವ್ರ ವಿರೋಧ

ಅನ್ಯಾಯವಾಗುತ್ತಿದ್ದು ಎಲ್ಲಿ?

ಅಭ್ಯರ್ಥಿಗಳ ಲಾಟರಿ ಆಯ್ಕೆಯ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಲಾಟರಿ ಪ್ರಕ್ರಿಯೆ ಮುಗಿದ ಕೂಡಲೇ ಸಂದರ್ಶನ ಆರಂಭಕ್ಕೂ ಮುನ್ನ ಆಯೋಗದ ಅಧ್ಯಕ್ಷರು, ಇತರೆ ಸದಸ್ಯರೊಂದಿಗೆ ಸಮಾಲೋಚನೆ ನಡೆಸುತ್ತಾರೆ ಹಾಗೂ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾದ ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ತಜ್ಞರೊಂದಿಗೂ ಪ್ರತ್ಯೇಕ ಸಮಾಲೋಚನೆ ನಡೆಸುತ್ತಾರೆ. ಆಗ ಅಭ್ಯರ್ಥಿಗಳ ವಿವರಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆ ಹಾಗೂ ಅಕ್ರಮವಾಗಿದೆ. ಇದಕ್ಕೆ ಕಡಿವಾಣ ಹಾಕಲು ಲಾಟರಿ ಪ್ರಕ್ರಿಯೆ ಬದಲು ಆಟೋಮ್ಯಾಟಿಕ್‌ ಜನರೇಷನ್‌ ತಾಂತ್ರಿಕತೆ ಅಳವಡಿಸಿಕೊಂಡು, ಸಂದರ್ಶನ ಆರಂಭವಾಗುವ ಮುನ್ನ ಪರೀಕ್ಷಾ ನಿಯಂತ್ರಕರು ನೇರವಾಗಿ ಬೋರ್ಡ್‌ನ ಸದಸ್ಯರು, ತಜ್ಞರಿಗೆ ಮಾಹಿತಿ ನೀಡಬಹುದೆಂದು ಕಾರ್ಯದರ್ಶಿ ಶಿಫಾರಸು ಮಾಡಿದ್ದಾರೆ.

ವಿಷಯ ತಜ್ಞರ ಜತೆಯೂ ಅಡ್ಜಸ್ಟ್‌ಮೆಂಟ್‌

ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ವಿಷಯ ತಜ್ಞರ ಜತೆಯೂ 'ಅಡ್ಜಸ್ಟ್‌ಮೆಂಟ್‌' ಮಾಡಿಕೊಳ್ಳುತ್ತಾರೆ ಎಂಬ ಅಂಶವನ್ನೂ ಕಾರ್ಯದರ್ಶಿ ಉಲ್ಲೇಖಿಸಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳ ಸಾಕಷ್ಟು ತಜ್ಞರ ಪಟ್ಟಿ ಲಭ್ಯವಿದ್ದರೂ ಕೆಲವೇ ತಜ್ಞರನ್ನು ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಅಧ್ಯಕ್ಷರು, ಸದಸ್ಯರು ಮತ್ತು ತಜ್ಞರ ನಡುವೆ ಬಾಂಧವ್ಯ ಹೆಚ್ಚಾಗಿ ಸಂದರ್ಶನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಆದ್ದರಿಂದ ಒಂದು ಬಾರಿ ಸಂದರ್ಶನಕ್ಕೆ ಆಯ್ಕೆ ಮಾಡಿದ ತಜ್ಞರನ್ನು ಮತ್ತೆ 2-3 ವರ್ಷಗಳ ಕಾಲ ಆಯ್ಕೆ ಮಾಡದಿರುವುದು ಸೂಕ್ತ ಎಂದು ಶಿಫಾರಸು ಮಾಡಿದ್ದಾರೆ.

ಇತ್ತೀಚೆಗೆ ನಡೆಸಿದ ಗೆಜೆಟೆಡ್‌ ಪ್ರೊಬೇಷನರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಸಂದರ್ಶನಕ್ಕೆ ನೀಡಲಾದ ಅಂಕಗಳ ಬಗ್ಗೆ ವಿಶ್ಲೇಷಣೆ ನಡೆಸಿದಾಗ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಜ್ಞರು ಹೆಚ್ಚು ಅಂಕ ನೀಡಿದ್ದರೂ, ಆಯೋಗದ ಅಧ್ಯಕ್ಷರು/ಸದಸ್ಯರು ಕಡಿಮೆ ಅಂಕ ನೀಡಿರುವುದು, ಕೆಲ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಅಂಕ ನೀಡಿರುವುದು ಮತ್ತಿತರ ಅಂಶಗಳನ್ನು ಅವರು ಉದಾಹರಣೆ ಸಮೇತ ವಿವರಿಸಿದ್ದಾರೆ.

ಕಾಲಮಿತಿ ನಿಗದಿಪಡಿಸಿ

ಸದ್ಯ ಲೋಕಸೇವಾ ಆಯೋಗಕ್ಕೆ ನೇಮಕ ಪ್ರಸ್ತಾವನೆಗಳನ್ನು ಅಂತಿಮಗೊಳಿಸಲು ಹಾಗೂ ಪಟ್ಟಿಗಳ ಪ್ರಕಟಣೆಗೆ ಅನುಮೋದನೆ ನೀಡಲು ಯಾವುದೇ ಕಾಲಮಿತಿ ಇಲ್ಲ. ವಿವಿಧ ಹುದ್ದೆಗಳ ಆಯ್ಕೆ ಪಟ್ಟಿ, ಹೆಚ್ಚುವರಿ ಆಯ್ಕೆಪಟ್ಟಿಗಳನ್ನು ಅಭ್ಯರ್ಥಿಗಳ ಹಿತದೃಷ್ಟಿಯಿಂದ ವಿಳಂಬ ತಪ್ಪಿಸಲು ಶಾಖೆಗಳಿಂದ ತ್ವರಿತವಾಗಿ ಪಟ್ಟಿಗಳನ್ನು ಸಿದ್ಧಪಡಿಸಿ ಆಯೋಗಕ್ಕೆ ಮಂಡಿಸಲಾಗುತ್ತಿದ್ದರೂ ಅಧ್ಯಕ್ಷರು ಇತರೆ ಸದಸ್ಯರ ಜತೆ ಹಂಚಿಕೊಳ್ಳದೆ ಮಾಡದೆ ತಮ್ಮ ಬಳಿಯೇ ಇಟ್ಟುಕೊಂಡಿರುವುದು ಕಂಡುಬಂದಿದೆ. ಹಾಗಾಗಿ, ಕಾರಣವಿಲ್ಲದೆ ಆಗುವ ಈ ವಿಳಂಬ ತಪ್ಪಿಸಲು ಸರಕಾರವೇ ಕಾಲಮಿತಿ ನಿಗದಿಪಡಿಸುವುದು ಸೂಕ್ತ ಎಂದು ಹಿಂದಿನ ಕಾರ್ಯದರ್ಶಿ ತಮ್ಮ ವರದಿಯಲ್ಲಿಸರಕಾರಕ್ಕೆ ಶಿಫಾರಸು ಮಾಡಿದ್ದಾರೆ.
 ಜಯಪ್ರಕಾಶ್‌ ಬಿರಾದಾರ್‌
ಲೇಖಕರ ಬಗ್ಗೆ
ಜಯಪ್ರಕಾಶ್‌ ಬಿರಾದಾರ್‌
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ಆರೋಗ್ಯ, ಅರಣ್ಯ, ಸಾರಿಗೆ, ರಾಜಕೀಯ, ಕೊರೊನಾ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು ಒಂದು ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೊಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ