Please enable javascript.ಅಭಿಮಾನಿಗಳ ಮುಂದೆ ಕಣ್ಣೀರಿಟ್ಟ ಎಚ್‌ಡಿ ರೇವಣ್ಣ,ಅಭಿಮಾನಿಗಳ ಎದುರೇ ಗಳಗಳನೇ ಅತ್ತ ಎಚ್‌ಡಿ ರೇವಣ್ಣ; ಅಳಬೇಡಿ ಅಣ್ಣಾ, ನಾವಿದ್ದೇವೆ ಎಂದ ಫ್ಯಾನ್ಸ್‌! - jds mla hd revanna sheds tears before fans in basavanagudi house prajwal revanna case - Vijay Karnataka

ಅಭಿಮಾನಿಗಳ ಎದುರೇ ಗಳಗಳನೇ ಅತ್ತ ಎಚ್‌ಡಿ ರೇವಣ್ಣ; ಅಳಬೇಡಿ ಅಣ್ಣಾ, ನಾವಿದ್ದೇವೆ ಎಂದ ಫ್ಯಾನ್ಸ್‌!

Authored byಅವಿನಾಶ ವಗರನಾಳ | Vijaya Karnataka Web 15 May 2024, 4:40 pm
Subscribe

HD Revanna Tears Before Fans : ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್‌ಡಿ ರೇವಣ್ಣ ಮಂಗಳವಾರವಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಹಿನ್ನೆಲೆ ಅವರನ್ನು ಭೇಟಿ ಮಾಡಲು ಅವರ ಅಭಿಮಾನಿಗಳು ಆಗಮಿಸುತ್ತಿದ್ದು, ಅಭಿಮಾನಿಗಳ ಮುಂದೆ ಎಚ್‌ಡಿ ರೇವಣ್ಣ ಕಣ್ಣೀರಿಟ್ಟ ಪ್ರಸಂಗ ಬುಧವಾರ ನಡೆದಿದೆ. ರೇವಣ್ಣ ಅವರ ಬಸವನಗುಡಿ ನಿವಾಸದ ಬಳಿ ನೆರೆದಿದ್ದ ಅಭಿಮಾನಿಗಳನ್ನು ಮಾತನಾಡಿಸುವ ವೇಳೆ ಭಾವುಕರಾದ ರೇವಣ್ಣ ಅತ್ತರು. ಈ ವೇಳೆ ನೀವು ಅಳಬಾರದು, ಅಣ್ಣಾ ನಾವಿದ್ದೇವೆ, ಧೈರ್ಯವಾಗಿರಿ ಎಂದು ಅಭಿಮಾನಿಗಳು ಸಮಾಧಾನ ಮಾಡಿದರು.

ಹೈಲೈಟ್ಸ್‌:

  • ಅಭಿಮಾನಿಗಳ ಎದುರೇ ಗಳಗಳನೇ ಅತ್ತ ಶಾಸಕ ಎಚ್‌ಡಿ ರೇವಣ್ಣ
  • ಅಳಬೇಡಿ ಅಣ್ಣಾ, ನಾವಿದ್ದೇವೆ ಎಂದು ಅಭಿಮಾನಿಗಳ ಸಮಾಧಾನ
  • ಬಸವನಗುಡಿಯ ಎಚ್‌ಡಿ ರೇವಣ್ಣ ನಿವಾಸದ ಬಳಿ ಘಟನೆ
HD Revanna 01
ಬೆಂಗಳೂರು : ಮಂಗಳವಾರವಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಜೆಡಿಎಸ್‌ ಶಾಸಕ ಎಚ್‌ಡಿ ರೇವಣ್ಣ ಅಭಿಮಾನಿಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಬುಧವಾರ ಬೆಂಗಳೂರಿನ ಬಸವನಗುಡಿಯಲ್ಲಿರುವ ತಮ್ಮ ನಿವಾಸದ ಮುಂದೆ ಅಭಿಮಾನಿಗಳ ಜೊತೆ ಮಾತನಾಡುವಾಗ ಭಾವುಕರಾದ ಎಚ್‌ಡಿ ರೇವಣ್ಣ ಅತ್ತಿದ್ದು ಕಂಡುಬಂತು.

ಕೆಆರ್‌ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಎಚ್‌ಡಿ ರೇವಣ್ಣ ಅವರು ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಹಿನ್ನೆಲೆ ಹೊಳೆನರಸೀಪುರ ಶಾಸಕ ರೇವಣ್ಣ ಅವರನ್ನು ಭೇಟಿಯಾಗಲು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಮಂಗಳವಾರ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ನಿವಾಸದ ಎದುರು ನೂರಾರು ಅಭಿಮಾನಿಗಳು ಸೇರಿದ್ದರು.

ಅದೇ ರೀತಿ ಬುಧವಾರ ಕೂಡ ಎಚ್‌ಡಿ ರೇವಣ್ಣ ಅವರ ಬಸವನಗುಡಿಯಲ್ಲಿನ ನಿವಾಸದ ಬಳಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಅವರೊಡನೆ ಮಾತನಾಡಲು ಎಚ್‌ಡಿ ರೇವಣ್ಣ ಮನೆಯಿಂದ ಹೊರಗಡೆ ಆಗಮಿಸಿದರು. ಆ ವೇಳೆ ಅಭಿಮಾನಿಗಳಿಗೆ ಕೈ ಮುಗಿದ ಅವರು, ಅಭಿಮಾನಿಗಳ ಪ್ರೀತಿ ಗೌರವ ಕಂಡು ಭಾವುಕರಾದರು. ನಿಮ್ಮೊಂದಿಗೆ ನಾವಿದ್ದೇವೆ, ನೀವು ಯಾವುದಕ್ಕೂ ಹೆದರಬಾರದು ಎಂದು ಅಭಿಮಾನಿಗಳು ಹೇಳಿದ ತಕ್ಷಣ ರೇವಣ್ಣ ಅವರ ಕಣ್ಣಂಚಿನಿಂದ ನೀರು ಜಾರಿದವು.

ಕಾನೂನಿನ ಮೇಲೆ ಗೌರವ ಇದೆ, ಆರೋಪ ಮುಕ್ತನಾಗುತ್ತೇನೆ: ಎಚ್‌ಡಿ ರೇವಣ್ಣ ಮೊದಲ ಪ್ರತಿಕ್ರಿಯೆ
ರೇವಣ್ಣ ಅವರು ಕಣ್ಣಿರು ಸುರಿಸಿದಾಗ ಅಭಿಮಾನಿಗಳು, ಅಣ್ಣಾ ನೀವು ಅಳಬೇಡಿ, ನಿಮ್ಮೊಂದಿಗೆ ನಾವಿದ್ದೇವೆ, ನೀವು ಧೈರ್ಯವಾಗಿರಿ, ಯಾವುದೇ ಕಾರಣಕ್ಕೂ ನೀವು ಹೆದರಬಾರದು, ನಮ್ಮ ಜೀವ ಹೋಗೋವರೆಗೂ ನಾವಿರುತ್ತೇವೆ ಎಂದು ರೇವಣ್ಣ ಅವರಿಗೆ ಧೈರ್ಯ ತುಂಬಿದರು. ಅಭಿಮಾನಿಗಳೆಲ್ಲರಿಗೂ ಹಸ್ತ ಲಾಘವ ಮಾಡಿ ಎಚ್‌ಡಿ ರೇವಣ್ಣ ಮತ್ತೆ ಮನೆಯೊಳಗೆ ಹೋದರು. ತಮ್ಮ ಮುಂದೆ ಎಚ್‌ಡಿ ರೇವಣ್ಣ ಕಣ್ಣೀರಿಟ್ಟಿದ್ದು ಅಭಿಮಾನಿಗಳಿಗೂ ಬೇಸರ ತಂದಿತು.

ಎಚ್‌ಡಿ ರೇವಣ್ಣಗೆ ಬಿಗ್‌ ರಿಲೀಫ್‌, ಮಹಿಳೆಯ ಕಿಡ್ನಾಪ್‌ ಪ್ರಕರಣದಲ್ಲಿ ಕೊನೆಗೂ ಜಾಮೀನು ಮಂಜೂರು!

ಏನಿದು ಪ್ರಕರಣ?

ರಾಜ್ಯದಲ್ಲಿ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಚಲನ ಸೃಷ್ಟಿಸಿದೆ. ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಸುಮಾರು 2976 ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್‌ ಭಾರೀ ಬಿರುಗಾಳಿ ಎಬ್ಬಿಸಿದೆ. ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಅವರ ವಿರುದ್ಧ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರ ನಡುವೆ ಪ್ರಜ್ವಲ್‌ ರೇವಣ್ಣ ಪ್ರಕರಣದ ಕೆಆರ್‌ ನಗರದಲ್ಲಿ ಸಂತ್ರಸ್ತೆಯೊಬ್ಬರನ್ನು ಅಪಹರಣ ಮಾಡಲಾಗಿದೆ ಎಂದು ಎಚ್‌ಡಿ ರೇವಣ್ಣ ಅವರ ಮೇಲೆ ದೂರು ನೀಡಲಾಗಿತ್ತು. ದೂರಿನ ಅನ್ವಯ ಎಸ್‌ಐಟಿ ಪೊಲೀಸರು ಎಚ್‌ಡಿ ರೇವಣ್ಣ ಅವರನ್ನು ಮೇ 4ರಂದು ಬಂಧಿಸಿದ್ದರು. ಮೇ 13ರಂದು ಅವರಿಗೆ ಜಾಮೀನು ಸಿಕ್ಕಿದ್ದು, ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು.
ಅವಿನಾಶ ವಗರನಾಳ
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ