- ಶ್ರೀಧರ್ ಎಸ್
ರಾಜ್ಯದಲ್ಲಿ ಮೋಜು ಮಸ್ತಿ, ಪ್ರವಾಸದ ಹೆಸರಿನಲ್ಲಿ ಇನ್ನಿಲ್ಲದ ಸಾಹಸಗಳಿಗೆ ಕೈ ಹಾಕುವ ಯುವ ವಿದ್ಯಾರ್ಥಿಗಳು, ಮೊಬೈಲ್ ಗೀಳಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೇಸಿಗೆಯ ಕಾರಣಕ್ಕೆ ನೀರಾಟ ಆಡಲು ಹೋಗಿ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ ಕಳೆದೆರೆಡು ತಿಂಗಳ ಅವಧಿಯಲ್ಲಿ 80 ಕ್ಕೂ ಹೆಚ್ಚಿದೆ. ಅದರಲ್ಲೂ ರಾಮನಗರ ಜಿಲ್ಲೆಯಲ್ಲಿ 9 ಪ್ರಕರಣ ದಾಟಿದೆ.
ಏನಾಗುತ್ತಿದೆ?
ನಿತ್ಯ ಬೆಳಗ್ಗೆ ಶಾಲಾ, ಕಾಲೇಜುಗಳಿಗೆ ತೆರಳುತ್ತಿದ್ದ ಮಕ್ಕಳು, ಸಂಜೆ ಮನೆ ಸೇರುತ್ತಿದ್ದರು. ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಬೆಳಗ್ಗೆಯಿಂದ ಸಂಜೆವರೆಗೂ ಮಕ್ಕಳ ಮೇಲೆ ಕಣ್ಣಿಟ್ಟಿರುತ್ತಿದ್ದರು. ಆದರೀಗ, ಬೇಸಿಗೆ ರಜೆ ನೆಪದಲ್ಲಿಮಕ್ಕಳೆಲ್ಲರು ಮೋಜು-ಮಸ್ತಿಗಾಧಿಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪ್ರವಾಸಕ್ಕೆಂದು ಸಂಗಮಕ್ಕೆ ಬಂದಿದ್ದ ಯುವಕ-ಯುವತಿಯರ ಗುಂಪಿನಲ್ಲಿಒಟ್ಟು 5 ಮಂದಿ ನೀರು ಪಾಲಾಗಿ ಧಾರುಣವಾಗಿ ಮೃತಪಟ್ಟಿದ್ದರು.2 ದಿನದ ಹಿಂದಷ್ಟೆ ನೀರಾಟವಾಡಲು ಹೋಗಿದ್ದ ರಾಮನಗರದ ಮೂವರು ವಿದ್ಯಾರ್ಥಿಗಳು ನೀರಿನ ಹೊಂಡದಲ್ಲಿ ಬಿದ್ದು ಕೊನೆ ಉಸಿರೆಳೆದಿದ್ದರು. ಮಂಡ್ಯದಲ್ಲಿಯೂ ಇದೇ ಮಾದರಿಯ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಸ್ನಾನಕ್ಕೆಂದು ಕಲ್ಯಾಣಿಗೆ ಇಳಿದಿದ್ದ ಯುವಕನೊಬ್ಬ ಹೆಣವಾಗಿ ಹೊರಬಂದಿದ್ದ. ಈಜುಕೊಳದಲ್ಲಿಯೇ ಯುವಕನೊಬ್ಬ ಮೃತಪಟ್ಟಿದ್ದ. ಹೀಗೆ ಯುವ ಜನತೆಯ ಸಾವುಗಳ ಸಂಖ್ಯೆಗೆ ಕಡಿವಾಣವಿಲ್ಲ.
ಯುಡಿಆರ್ಗಳ ಸಂಖ್ಯೆ ಲೆಕ್ಕಕ್ಕೆ ಇಲ್ಲ:
ಅನಾಥ ಶವಗಳು, ಆತ್ಮಹತ್ಯೆಯೊಂದಿಗೆ ಕಾಲುಜಾರಿ ನೀರಿನಲ್ಲಿ ಬಿದ್ದು ಮೃತ ಪಡುವುದು, ಮೋಜು, ಮಸ್ತಿ ಹೆಸರಿನಲ್ಲಿಅಕಾಲಿಕ ಮರಣ ಹೊಂದುವ ಎಲ್ಲ ಕೇಸ್ಗಳನ್ನು ಪೊಲೀಸರು ಯುಡಿಆರ್ ಅಡಿ ಪ್ರಕರಣವೆಂದು ದಾಖಲಿಸುತ್ತಾರೆ. ಕಳೆದ 2 ತಿಂಗಳ(ಬೇಸಿಗೆ ರಜೆ)ಅವಧಿಯಲ್ಲಿಈ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ರಾಜ್ಯದಲ್ಲಿಸಾಮಾನ್ಯವಾಗಿ ಒಂದು ತಿಂಗಳ ಅವಧಿಯಲ್ಲಿಸರಾಸರಿ 250ರಿಂದ 300 ಆಸುಪಾಸಿನಲ್ಲಿಯೇ ಇರುತ್ತಿದ್ದವು. ಆದರೆ, ಬೇಸಿಗೆ ರಜೆ ಅವಧಿಯಲ್ಲಿ ಈ ಸಂಖ್ಯೆ 500ರಿಂದ 700ಕ್ಕೆ ಏರಿಕೆಯಾಗಿದೆ ಎಂಬುದು ಪೊಲೀಸರ ವರದಿಗಳೇ ಹೇಳುತ್ತಿವೆ.ವಿಕ ಕಾಳಜಿ
ಪೋಷಕರೇ ಎಚ್ಚರ: ಶಾಲಾ-ಕಾಲೇಜು ಶುರುವಾಗುವವರೆಗೂ ತಮ್ಮ ಮಕ್ಕಳ ಮೇಲೆ ಪೋಷಕರು ಹೆಚ್ಚಿನ ನಿಗಾವಹಿಸಬೇಕಿದೆ. ಮನೆಯಲ್ಲಿಯೇ ಇರುವ ಮಕ್ಕಳು ನೀರಾಟ, ಮೊಬೈಲ್ ಗೀಳುಗಳಿಂದಾಗಿ ಪ್ರಾಣ ಕಳೆದುಕೊಳ್ಳುವ ಅಪಾಯಗಳು ಹೆಚ್ಚಿವೆ. ಇತ್ತೀಚೆಗೆ ಬೇಸಿಗೆ ರಜೆಯಲ್ಲಿ ಮೊಬೈಲ್ ಗೇಮ್ಸ್ಗಾಗಿ ತಂದೆಯ ಖಾತೆಯಲ್ಲಿದ್ದ ಹಣ ಖಾಲಿ ಮಾಡಿ, ಪೋಷಕರ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕೂಡ ವರದಿಯಾಗಿದೆ.ಬೇಸಿಗೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿಊಟ ಸೇವಿಸಿದ ನೂರಾರು ಮಕ್ಕಳು ವಾಂತಿ, ಭೇಧಿದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅನೇಕ ಉದಾಹರಣೆಗಳಿವೆ. ಅಪಾಘತದಲ್ಲಿಮೃತಪಟ್ಟ ಮಕ್ಕಳ ಸಂಖ್ಯೆ ನೂರರ ಗಡಿ ದಾಟಿವೆ. ಮಕ್ಕಳ ಮೇಲೆ ಪೋಷಕರ ಕಣ್ಗಾವಲು ಸದಾ ಇರಲಿ. ಇಲ್ಲದಿದ್ದರೆ ಸೂತ್ರವಿಲ್ಲದ ಗಾಳಿಪಟದಂತೆ ಮಕ್ಕಳ ಜೀವನವಾಗಲಿದೆ.
ಮುಖ್ಯಾಂಶಗಳು
ಸಾವಿಗೆ ಕಾರಣಗಳೇನು?
* ನದಿ, ಕೆರೆ, ಕಾಲುವೆ, ಫಾಲ್ಸ್, ಹೊಂಡಗಳಲ್ಲಿ ನೀರಿನ ಆಳ ಅರಿಯದೇ ನೀರಿಗಿಳಿಯುವುದು
*ರೀಲ್ಸ್, ಫೋಟೊ ಶೂಟ್ಗಾಗಿ ಅಪಾಯಕಾರಿ ಸ್ಥಳಗಳಲ್ಲಿಪ್ರಾಣ ಕಳೆದುಕೊಳ್ಳುವುದು
*ರೀಲ್ಸ್ ಚಟಕ್ಕೆ ಓವರ್ ಸ್ಪೀಡ್, ವೀಲಿಂಗ್ನಂತ ದುಸ್ಸಾಹಸಗಳು
ಏನೆಲ್ಲ ಮಾಡಬೇಕು?
*ಶಾಲಾ-ಕಾಲೇಜು ಆರಂಭವಾಗುವವರೆಗೂ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸುವುದು
* ನೀರಾಟ ಬದಲಿಗೆ ಮೈದಾನದಲ್ಲಿಆಟ ಆಡಿಸುವುದು
* ಮೊಬೈಲ್ ಬದಲು ಪುಸ್ತಕ ಇಲ್ಲವೇ ಪೋಷಕರು ಮಕ್ಕಳೊಂದಿಗೆ ಕಾಲ ಕಳೆಯುವುದು ಉತ್ತಮ
*ಪ್ರವಾಸದ ವೇಳೆ ಆದಷ್ಟು ಮಕ್ಕಳ ಜಾಗೃತಿ ವಹಿಸುವುದು
ಈಗ ಶಾಲಾ-ಕಾಲೇಜುಗಳಿಲ್ಲ. ಮಕ್ಕಳ ಜವಾಬ್ದಾರಿ ಪೋಷಕರದ್ದೇ ಆಗಿರುತ್ತದೆ. ನಿಮ್ಮ ಮಕ್ಕಳು ನೀರಿನಲ್ಲಿಇಳಿಯುವುದು, ಇನ್ನಿಲ್ಲದ ಸಾಹಸ ಮಾಡುವುದನ್ನು ಮೊದಲು ನಿಲ್ಲಿಸಿ. ಎಷ್ಟು ಎಚ್ಚರಿಕೆಯಿಂದ ಮಕ್ಕಳನ್ನು ನೋಡಿಕೊಳ್ಳುತ್ತೇವೋ ಅಷ್ಟು ಉತ್ತಮ.
-ಡಾ.ನಿರಂಜನ್ | ಜಿಲ್ಲಾಆರೋಗ್ಯಾಧಿಕಾರಿ, ರಾಮನಗರ