Please enable javascript.40 ಪರ್ಸೆಂಟ್‌ ಸರ್ಕಾರ,ಕಾಂಗ್ರೆಸ್‌ ಸರ್ಕಾರದಲ್ಲೂ 40 ಪರ್ಸೆಂಟ್‌ ಕಮಿಷನ್‌ ! ಆಗ ಶಾಸಕರು ಕೇಳ್ತಿದ್ರು, ಈಗ ಅಧಿಕಾರಿಗಳು!; ಕೆಂಪಣ್ಣ - state contractors association president kempanna alleged 40% commission in congress government also - Vijay Karnataka

ಕಾಂಗ್ರೆಸ್‌ ಸರ್ಕಾರದಲ್ಲೂ 40 ಪರ್ಸೆಂಟ್‌ ಕಮಿಷನ್‌ ! ಆಗ ಶಾಸಕರು ಕೇಳ್ತಿದ್ರು, ಈಗ ಅಧಿಕಾರಿಗಳು!; ಕೆಂಪಣ್ಣ

Edited byಗಣೇಶ್ ಪ್ರಸಾದ್ ಕುಂಬ್ಳೆ | Vijaya Karnataka 9 Feb 2024, 5:45 am
Subscribe

ಕಳೆದ ಬಿಜೆಪಿ ಸರ್ಕಾರದ 40 % ಸರ್ಕಾರ ಎಂದು ಗಂಭೀರ ಆರೋಪ ಮಾಡುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಕೈಗೆ ಪ್ರಬಲ ಚುನಾವಣಾ ಅಸ್ತ್ರ ಕೊಟ್ಟಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಇದೇ ಆರೋಪ ಮಾಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಶಾಸಕರೇ ನೇರವಾಗಿ ಕಮಿಷನ್ ಕೇಳುತ್ತಿದ್ದರೆ, ಈ ಸರ್ಕಾರದಲ್ಲಿ ಅಧಿಕಾರಿಗಳ ಮೂಲಕ ಕಮಿಷನ್ ಸಂಗ್ರಹವಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಮಾಹಿತಿ ನೀಡುವೆ ಎಂದಿದ್ದಾರೆ.

ಹೈಲೈಟ್ಸ್‌:

  • ಹಿಂದಿನ ಬಿಜೆಪಿ ಸರ್ಕಾರದಂತೆ ಕಾಂಗ್ರೆಸ್ ಸರ್ಕಾರದಲ್ಲೂ 40 ಪರ್ಸೆಂಟ್ ಕಮಿಷನ್ ಎಂದು ಡಿ ಕೆಂಪಣ್ಣ ಆರೋಪ
  • ಬಿಜೆಪಿ ಸರ್ಕಾರದಲ್ಲಿ ಶಾಸಕರು ಹಣ ಕೇಳುತ್ತಿದ್ದರೆ, ಈ ಸರ್ಕಾರದಲ್ಲಿ ಅಧಿಕಾರಿಗಳ ಮೂಲಕ ಕಮಿಷನ್‌ ಸಂಗ್ರಹ
  • ಈ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ ಅವರನ್ನು ಭೇಟಿ ಮಾಡಿ ಮಾಹಿತಿ ನೀಡುವೆ
Kempanna
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ.
ಬೆಂಗಳೂರು: ''ಕಾಂಗ್ರೆಸ್‌ ಸರಕಾರದಲ್ಲೂ40 ಪರ್ಸೆಂಟ್‌ ಕಮಿಷನ್‌ ಮುಂದುವರಿದಿದೆ. ಬಿಜೆಪಿ ಸರಕಾರದಲ್ಲಿ ಶಾಸಕರೇ ನೇರವಾಗಿ ಕಮಿಷನ್‌ ಕೇಳುತ್ತಿದ್ದರು. ಈಗ ಅಧಿಕಾರಿಗಳ ಮೂಲಕ ಕಮಿಷನ್‌ ಸಂಗ್ರಹವಾಗುತ್ತಿದೆ,'' ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸರಕಾರದ ವಿರುದ್ಧ ಕಮಿಷನ್‌ ದಂಧೆಯ ಬಾಂಬ್‌ ಸಿಡಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ''ರಾಜ್ಯದಲ್ಲಿ ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಬೇರೂರಿದೆ. ಸರಕಾರದ ಎಲ್ಲಇಲಾಖೆಗಳಲ್ಲೂ ಮಿತಿ ಮೀರಿದ ಭ್ರಷ್ಟ ಅಧಿಕಾರಿಗಳಿದ್ದಾರೆ. ಸಚಿವರು, ಶಾಸಕರಿಗೆ ಕೊಡಬೇಕೆಂದು ಅಧಿಕಾರಿಗಳೇ ಗುತ್ತಿಗೆದಾರರಿಂದ ನೇರವಾಗಿ ಕಮಿಷನ್‌ ವಸೂಲಿ ಮಾಡುತ್ತಿದ್ದಾರೆ,'' ಎಂದು ಗಂಭೀರ ಆರೋಪ ಮಾಡಿದರು.

ಹಿಂದಿನ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಗೆ ದಾಖಲೆ ಸಲ್ಲಿಸಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
''ತಮ್ಮ ಕೆಲಸ ಆಗಬೇಕಾದರೆ ಕಮಿಷನ್‌ ಕೊಡಬೇಕು. ತಾವು ಮೇಲಿನವರಿಗೆ ಫೀಡ್‌ ಮಾಡಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಏಕೆ ಕಮಿಷನ್‌ ಕೊಡಬೇಕೆಂದು ಮುಖ್ಯ ಎಂಜಿನಿಯರ್‌ಗಳನ್ನು ಪ್ರಶ್ನಿಸಿದರೆ ಸಚಿವರು, ಶಾಸಕರತ್ತ ಬೆಟ್ಟು ಮಾಡಿ ತೋರಿಸುತ್ತಾರೆ. ಅಧಿಕಾರಿಗಳೇ ಕಮಿಷನ್‌ ಹಣ ಸಂಗ್ರಹಿಸಿ ರಾಜಕಾರಣಿಗಳಿಗೆ ತಲುಪಿಸುತ್ತಿದ್ದಾರೆ. ಒಟ್ಟಿನಲ್ಲಿ40 ಪರ್ಸೆಂಟ್‌ ಕಮಿಷನ್‌ ಈಗಲೂ ಮುಂದುವರಿದಿದೆ,'' ಎಂದು ಆರೋಪಿಸಿದರು.

''ಯಾವೆಲ್ಲಾ ಅಧಿಕಾರಿಗಳು ಕಮಿಷನ್‌ ಕೇಳುತ್ತಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯಿದ್ದು, ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಈಗಾಗಲೇ ನನ್ನ ವಿರುದ್ಧ ಐದು ಮಾನನಷ್ಟ ಮೊಕದ್ದಮೆ ದಾಖಲಾಗಿವೆ. ಹೀಗಾಗಿ, ಭ್ರಷ್ಟ ಅಧಿಕಾರಿಗಳ ಹೆಸರನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ. ಆ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರಿಗೆ ದೂರು ನೀಡುತ್ತೇನೆ. ಬಿಜೆಪಿ ಸರಕಾರದ ಅವಧಿಯ ಕಮಿಷನ್‌ ದಂಧೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ದಾಸ್‌ ಆಯೋಗಕ್ಕೆ ಸುಮಾರು ಏಳು ಸಾವಿರ ಪುಟಗಳ ದಾಖಲೆ ಸಲ್ಲಿಸಿದ್ದೇವೆ. ಈಗಿನ ಸರಕಾರದ ಕಮಿಷನ್‌ ದಂಧೆ ಬಗ್ಗೆ ಸೂಕ್ತ ಸಂದರ್ಭದಲ್ಲಿದಾಖಲೆ ಒದಗಿಸುತ್ತೇವೆ. ಯಾರಿಗೂ ಹೆದರಲ್ಲ'' ಎಂದರು.


ಪ್ಯಾಕೇಜ್‌ ಸಂಸ್ಕೃತಿ


''ಪೊಲೀಸ್‌ ವಸತಿ ಗೃಹ ಅಭಿವೃದ್ಧಿ ನಿಗಮ, ಬಿಬಿಎಂಪಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸೇರಿದಂತೆ ಎಲ್ಲಇಲಾಖೆಗಳ ಕಾಮಗಾರಿಗಳಿಗೆ ಪ್ಯಾಕೇಜ್‌ ಟೆಂಡರ್‌ ಕರೆಯಲಾಗಿದೆ. ಬಿಬಿಎಂಪಿಯಲ್ಲಿಒಂದು ವಾರದಲ್ಲಿ300 ಕೋಟಿ ರೂ. ಪ್ಯಾಕೇಜ್‌ ಟೆಂಡರ್‌ ಆಹ್ವಾನಿಸಲಾಗಿದೆ. ಸ್ಥಳೀಯ ಗುತ್ತಿಗೆದಾರರನ್ನು ದೂರವಿಟ್ಟು ನೆರೆ ರಾಜ್ಯಗಳ ಗುತ್ತಿಗೆದಾರರ ಹಿತ ರಕ್ಷಣೆಗಾಗಿ ಹೀಗೆ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯ ಅರ್ಹ ಗುತ್ತಿಗೆದಾರರಿಗೆ ಮೋಸವಾಗಿದ್ದು, ಕಾಮಗಾರಿಗಳು ಸಿಗುತ್ತಿಲ್ಲ. ಪ್ಯಾಕೇಜ್‌ ಟೆಂಡರ್‌ ಪದ್ಧತಿ ಭ್ರಷ್ಟಾಚಾರಕ್ಕೆ ಆಸ್ಪದವಾಗಿದೆ,'' ಎಂದು ಕಿಡಿಕಾರಿದರು.

ಗುತ್ತಿಗೆದಾರರು ಊರು ಬಿಟ್ಟಿದ್ದಾರೆ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾರೆ! ಸರ್ಕಾರದ ವಿರುದ್ಧ ಕೆಂಪಣ್ಣ ಕಿಡಿ
''ವಿವಿಧ ಇಲಾಖೆಗಳಲ್ಲಿ ಪ್ಯಾಕೇಜ್‌ ಟೆಂಡರ್‌ಗಳು ನಡೆದಿವೆ. ಈ ಪ್ಯಾಕೇಜ್‌ ಟೆಂಡರ್‌ಗಳ ಮೇಲೆ ಅನುಮಾನ ಮೂಡಿದೆ. ಹೀಗಾಗಿ, ಅವುಗಳನ್ನು ರದ್ದುಪಡಿಸಬೇಕು. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಅಲ್ಲದೆ, ಮುಖ್ಯಮಂತ್ರಿಗಳಿಗೆ ಹತ್ತಾರು ಪತ್ರ ಬರೆದಿದ್ದೇವೆ. ಎಲ್ಲ ಕಾಮಗಾರಿಗಳನ್ನು ಟೆಂಡರ್‌ ಮೂಲಕ ಹಂಚಿಕೆ ಮಾಡಿದರೆ ಸ್ಥಳೀಯ ಗುತ್ತಿಗೆದಾರರಿಗೆ ನ್ಯಾಯ ಸಿಗುತ್ತದೆ. ಪ್ಯಾಕೇಜ್‌ ಟೆಂಡರ್‌ಗಳನ್ನು ರದ್ದು ಮಾಡದಿದ್ದರೆ ಹೋರಾಟಕ್ಕೆ ಕರೆ ಕೊಡುತ್ತೇವೆ,'' ಎಂದು ಎಚ್ಚರಿಕೆ ನೀಡಿದರು.


ಅಶೋಕ್‌ ಭೇಟಿಯಾಗುತ್ತೇವೆ


''ಈ ಹಿಂದೆ ಬಿಜೆಪಿ ಸರಕಾರದ ವಿರುದ್ಧ ಕಮಿಷನ್‌ ಆರೋಪ ಮಾಡಿದ್ದಾಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ನನಗೆ ಕರೆ ಮಾಡಿ, ಕರೆಸಿಕೊಂಡು ಮಾಹಿತಿ ಪಡೆದಿದ್ದರು. ಎಚ್‌ ಡಿ ಕುಮಾರಸ್ವಾಮಿ ಅವರನ್ನೂ ಇತ್ತೀಚೆಗೆ ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದೇನೆ. ಒಂದೆರಡು ದಿನದಲ್ಲಿ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಅವರನ್ನು ಭೇಟಿ ಮಾಡಿ ಕಮಿಷನ್‌ ಹಾಗೂ ಪ್ಯಾಕೇಜ್‌ ಟೆಂಡರ್‌ಗಳ ಬಗ್ಗೆ ಮಾಹಿತಿ ನೀಡುತ್ತೇನೆ,'' ಎಂದು ತಿಳಿಸಿದರು.
ಗಣೇಶ್ ಪ್ರಸಾದ್ ಕುಂಬ್ಳೆ
ಲೇಖಕರ ಬಗ್ಗೆ
ಗಣೇಶ್ ಪ್ರಸಾದ್ ಕುಂಬ್ಳೆ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತ. ಪತ್ರಿಕೋದ್ಯಮದಲ್ಲಿ 15 ವರ್ಷಗಳ ಅನುಭವ. ಓದುವಿಕೆ, ಬರೆಯುವಿಕೆ, ಯಕ್ಷಗಾನದಲ್ಲಿ ಆಸಕ್ತಿ. ಸಮಯ ಸಿಕ್ಕಾಗ ಚೆಸ್, ಕ್ರಿಕೆಟ್, ಶಟಲ್ ಆಡುವುದು, ಪ್ರವಾಸ, ಚಾರಣ ಮಾಡುವುದು ನೆಚ್ಚಿನ ಹವ್ಯಾಸಗಳು. ಶಿವರಾಮ ಕಾರಂತ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಬರಹಳೆಂದರೆ ಅಚ್ಚಮೆಚ್ಚು. ರಾಜಕೀಯ, ಕ್ರೀಡೆ, ಮಾನವೀಯ ಸಂವೇದಿ ಲೇಖನಗಳು, ವ್ಯಕ್ತಿಚಿತ್ರ, ನುಡಿಚಿತ್ರ, ಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ಆಸಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ