ಆ್ಯಪ್ನಗರ

ವಸತಿ ಶಾಲೆಗಳ ಘೋಷವಾಕ್ಯ ಬದಲಿಸಿದ್ದು ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿಗೆ ಸಾಕ್ಷಿ: ವಿಜಯೇಂದ್ರ ಟೀಕೆ

ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿರುವ ವಸತಿ ಶಾಲೆಗಳಲ್ಲಿ ಬರೆಯಲಾಗಿದ್ದ `ಜ್ಞಾನದೇಗುಲವಿದು ಕೈ ಮುಗಿದು ಬಾ' ಎಂಬ ಘೋಷವಾಕ್ಯವನ್ನು `ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು'' ಎಂದು ಬದಲಾಯಿಸಿದ್ದಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ್ದ ಅವರು ಎಕ್ಸ್ ಖಾತೆಯಲ್ಲೂ ಬರೆದಿದ್ದಾರೆ. ಇದು ಸರ್ಕಾರದ ಹಿಂದೂ ವಿರೋಧಿ ನೀತಿಯಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಾಕ್ಯ ಯಾವ ಧರ್ಮೀಯರನ್ನು ನೋಯಿಸುತ್ತದೆ ಎಂದು ಸರ್ಕಾರವೇ ಹೇಳಲಿ ಎಂದು ಸವಾಲು ಹಾಕಿದ್ದಾರೆ.

Authored byಗಣೇಶ್ ಪ್ರಸಾದ್ ಕುಂಬ್ಳೆ | Vijaya Karnataka Web 19 Feb 2024, 4:25 pm

ಹೈಲೈಟ್ಸ್‌:

  • ವಸತಿ ಶಾಲೆಯ ಘೋಷ ವಾಕ್ಯ ಬದಲಾಯಿಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ
  • ಶಾಲೆ ಪವಿತ್ರ ತಾಣ ಎಂಬುದ ಅರ್ಥೈಸದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿ
  • ವಿದ್ಯಾರ್ಥಿಗಳನ್ನು ಶಿಕ್ಷಕರ ವಿರುದ್ಧ ಎತ್ತಿಕಟ್ಟಲು ಪ್ರಚೋದನೆ ನೀಡುವಂತಿದೆ ಎಂದು ಆರೋಪ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web vijayendra
ಬಿವೈ ವಿಜಯೇಂದ್ರ(ಸಂಗ್ರಹ ಚಿತ್ರ)
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಘೋಷ ವಾಕ್ಯ ಬದಲಾಯಿಸಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿಗೆ ಸಾಕ್ಷಿಯಾಗಿದ್ದು ವಿದ್ಯಾರ್ಥಿಗಳನ್ನು ಶಿಕ್ಷಕರ ವಿರುದ್ಧ ಎತ್ತಿಕಟ್ಟಲು ಈ ಸಾಲುಗಳು ಪ್ರಚೋದನೆ ನೀಡುವಂತಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ವಿಧಾನಸಭೆಯೊಳಗೂ ಈ ಪ್ರಶ್ನೆಯನ್ನು ಎತ್ತಿದ ಅವರು ತಮ್ಮ ಎಕ್ಸ್ ಖಾತೆಯಲ್ಲೂ ಸರ್ಕಾರದ ನೀತಿಯನ್ನು ವಿರೋಧಿಸಿದರು. ಶಾಲೆಗಳೆಂದರೆ ಪವಿತ್ರ ತಾಣ. ಇದನ್ನು ಅರ್ಥೈಸಿಕೊಳ್ಳದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿ, ಇಲಾಖೆಯ ಹಿರಿಯ IAS ಅಧಿಕಾರಿಯ ಮೂಲಕ ಸರ್ಕಾರಿ ವಸತಿ ಶಾಲೆಗಳ ದ್ವಾರದಲ್ಲಿ ಬರೆಸಲಾಗಿದ್ದ "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂಬ ಘೋಷವಾಕ್ಯವನ್ನು ಬದಲಿಸಿ “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ" ಎಂದು ಬರೆಸಲು ಪ್ರಾರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸತಿ ಶಾಲೆಗಳಲ್ಲಿ `ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ' ಘೋಷವಾಕ್ಯ: ಪ್ರಿಯಾಂಕ್ ಖರ್ಗೆ ಸಮರ್ಥನೆ
ಮೊನ್ನೆಯಷ್ಟೇ ಇದೇ ಶಾಲೆಗಳಲ್ಲಿ ಧಾರ್ಮಿಕ ಹಬ್ಬ , ಪೂಜೆಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿ ಇದರಿಂದ ‘ಕೈ’ಸುಡಲು ಆರಂಭವಾದ ಬೆನ್ನಲ್ಲೇ ಆದೇಶ ಹಿಂಪಡೆದು ತನ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಅದುಮಿಟ್ಟುಕೊಂಡಿದ್ದ ಸರ್ಕಾರ ಇದೀಗ ಮತ್ತೊಂದು ಮತಿಗೇಡಿತನಕ್ಕೆ ‘ಕೈ’ಹಾಕಿ ವಿಕೃತಿ ಮೆರೆದಿದೆ, ಜತೆಗೇ ವಿದ್ಯಾರ್ಥಿಗಳನ್ನು ಶಿಕ್ಷಕರ ವಿರುದ್ಧ ಎತ್ತಿಕಟ್ಟಲು ಈ ಸಾಲುಗಳು ಪ್ರಚೋದನೆ ನೀಡುವಂತಿದೆ ಎಂದು ದೂರಿದ್ದಾರೆ.

ಕುವೆಂಪು ಸಾಲುಗಳಿಂದ ಪ್ರೇರಿತ

ಕೈ ಮುಗಿದು ಒಳೆಗೆ ಬಾ ….ಎಂಬ ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳಿಂದ ಪ್ರೇರಣೆ ಪಡೆದು ನಾಡಿನ ಅನೇಕ ಶಿಕ್ಷಣ ಸಂಸ್ಥೆಗಳು ‘"ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ" ಎಂದು ಘೋಷವಾಕ್ಯ ಬರೆಸಿವೆ, ಇದನ್ನೇ ಸರ್ಕಾರಿ ಶಾಲೆಗಳಲ್ಲೂ ಅನುಸರಿಸಲಾಗಿದೆ.

ಕಲಬುರಗಿ: 'ಇದೇನು ವಿವಿ ನಾ, ದೇವಸ್ಥಾನನಾ?' ಕೇಂದ್ರೀಯ ವಿವಿಯಲ್ಲಿ ಸರಸ್ವತಿ ಪೂಜೆಗೆ ಆಕ್ಷೇಪ!
‘ವಿದ್ಯಾ ದದಾತಿ ವಿನಯಂ….ವಿದ್ಯೆ ಎಂದರೆ ವಿನಯ, ವಿನಯ ವಿದ್ದೆಡೆ ಮಾತ್ರ ವಿದ್ಯೆ ಒಲಿಯುವುದು, ವಿದ್ಯಾಲಯವನ್ನು ದೇಗುಲದಂತೆ ಭಾವಿಸಿ "ಕೈ ಮುಗಿದು ಒಳಗೆ ಬನ್ನಿ’’ ಎಂಬ ಸದ್ವಿನಯ, ಸಂಸ್ಕಾರ, ಶ್ರದ್ಧಾಗುಣಗಳನ್ನು ನೆನಪಿಸುವ ಈ ಸಾಲು ಯಾವ ಧರ್ಮದವರನ್ನು ನೋಯಿಸುತ್ತದೋ ತಿಳಿಯದಾಗಿದೆ? ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಜನರಿಗೆ ಸ್ಪಷ್ಟನೆ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಮೈವಿವಿ ಘೋಷವಾಕ್ಯದ ಪರಿಕಲ್ಪನೆ

ದೇಶದ ಆರನೇ ಹಾಗೂ ಕರ್ನಾಟಕ ರಾಜ್ಯದ ಮೊದಲನೇ ವಿಶ್ವವಿದ್ಯಾಲಯವಾಗಿರುವ ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ ‘ನಹಿ ಜ್ಞಾನೇನ ಸದೃಶಂ’ ಅಂದರೆ ‘ಜ್ಞಾನಕ್ಕೆ ಸಮನಾದುದು ಯಾವುದು ಇಲ್ಲ’ ಎಂಬುದು, ಈ ಘೋಷವಾಕ್ಯ ವಿಶ್ವವಿದ್ಯಾಲಯದ ಕಾರ್ಯಸೌಧವನ್ನು ಅಲಂಕರಿಸಿದೆ. ಜತೆಗೇ ವಿದ್ಯೆಯ ಅಧಿದೇವತೆ ಸರಸ್ವತಿಯನ್ನೂ ಪಡಿಮೂಡಿಸಲಾಗಿದೆ. ತನ್ನ ಅಧೀನದಲ್ಲಿದೆ ಎಂಬ ಅಹಃ ನಿಂದ , ಭಗವದ್ಗೀತೆಯ ಈ ಶ್ಲೋಕ ಹಾಗೂ ಸರಸ್ವತಿಯನ್ನು ತೆಗೆಸುವ ಐತಿಹಾಸಿಕ ಪ್ರಮಾದ ಎಸಗಲೂ ಈ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುವುದಿಲ್ಲ ಎನಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.




ವಸತಿ ಶಾಲೆಗಳ ಮೇಲೆ ಬರೆಸಲಾಗಿದ್ದ ಈ ಹಿಂದಿನ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ" ಘೋಷ ವಾಕ್ಯ ಮತ್ತೆ ಬರೆಸದೇ ಹೋದರೆ ಹಾಗೂ ಈ ಆದೇಶದ ಹಿಂದಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೇ ಹೋದರೆ ಮುಂದಾಗುವ ಪರಿಣಾಮಗಳನ್ನು ಸರ್ಕಾರ ಎದುರಿಸಬೇಕಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲೇಖಕರ ಬಗ್ಗೆ
ಗಣೇಶ್ ಪ್ರಸಾದ್ ಕುಂಬ್ಳೆ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತ. ಪತ್ರಿಕೋದ್ಯಮದಲ್ಲಿ 15 ವರ್ಷಗಳ ಅನುಭವ. ಓದುವಿಕೆ, ಬರೆಯುವಿಕೆ, ಯಕ್ಷಗಾನದಲ್ಲಿ ಆಸಕ್ತಿ. ಸಮಯ ಸಿಕ್ಕಾಗ ಚೆಸ್, ಕ್ರಿಕೆಟ್, ಶಟಲ್ ಆಡುವುದು, ಪ್ರವಾಸ, ಚಾರಣ ಮಾಡುವುದು ನೆಚ್ಚಿನ ಹವ್ಯಾಸಗಳು. ಶಿವರಾಮ ಕಾರಂತ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಬರಹಳೆಂದರೆ ಅಚ್ಚಮೆಚ್ಚು. ರಾಜಕೀಯ, ಕ್ರೀಡೆ, ಮಾನವೀಯ ಸಂವೇದಿ ಲೇಖನಗಳು, ವ್ಯಕ್ತಿಚಿತ್ರ, ನುಡಿಚಿತ್ರ, ಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ಆಸಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ