ರವಿ ಪೂಜಾರಿ ಎಲ್ಲಿಯವನು?
ರವಿ ಪೂಜಾರಿ ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಕಲ್ಮಾಡಿ ಬಪ್ಪುತೋಟದ ನಿವಾಸಿಯಾಗಿ ಜನಿಸಿದ್ದ. ಚಿಕ್ಕವಯಸ್ಸಿನಲ್ಲೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಈತ ತಂದೆಯ ಜತೆ ಮುಂಬೈಗೆ ಹೋಗಿ ಅಲ್ಲೇ ಕೆಲಸ ಮಾಡಿಕೊಂಡು, ಭೂಗತ ಜಗತ್ತಿಗೆ ಕಾಲಿಟ್ಟ. ಇಂಗ್ಲೀಷ್, ಹಿಂದಿ ಮತ್ತು ಕನ್ನಡ ಸೇರಿ ಹಲವು ಭಾಷೆಗಳನ್ನು ಈತ ಬಲ್ಲವನಾಗಿದ್ದು, ಈತನಿಗೆ ಪತ್ನಿ ಪದ್ಮಾ ಪೂಜಾರಿ, ಓರ್ವ ಮಗ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಮಗನಿಗೆ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಅದ್ಧೂರಿ ವಿವಾಹವಾಗಿದೆ.
ರವಿ ಪೂಜಾರಿ ಕುಟುಂಬ, ಸಂಬಂಧಿಗಳು ಎಲ್ಲಿದ್ದಾರೆ?
ತಂದೆ ಸೂರ್ಯ ಪೂಜಾರಿ, ತಾಯಿ ಸುಶೀಲ ಪೂಜಾರಿ ಅವರಿಗೆ 2 ಹೆಣ್ಣು ಹಾಗೂ 3 ಗಂಡು ಮಕ್ಕಳಿದ್ದು, ರವಿ ಪೂಜಾರಿ ಎರಡನೇಯವನು. ಸೂರ್ಯ ಪೂಜಾರಿ ಮುಂಬೈಯಲ್ಲಿ ಕಂಪನಿ ಕೆಲಸಕ್ಕಿದ್ದು, ಕುಟುಂಬ ಅಲ್ಲೇ ಬೆಳೆದಿದ್ದು, ನಿವೃತ್ತಿ ಬಳಿಕ ಸೂರ್ಯ ಪೂಜಾರಿ ಊರಿನಲ್ಲಿ ನೆಲೆಸಿದ್ದರು. ಮಲ್ಪೆಯಲ್ಲಿ 1990, 92 ರಲ್ಲಿ ರವಿ ಪೂಜಾರಿಯ ಸಹೋದರಿಯ ಮದುವೆ ನಡೆದಿದ್ದು, ಮದುವೆಗೆ ಬಂದಿದ್ದೇ ಆತನ ಕೊನೆ ಭೇಟಿ. ಆ ಬಳಿಕ ಭೂಗತ ಪಾತಕಿಯಾಗಿ ಗುರುತಿಸಿಕೊಂಡಿದ್ದು, ಊರಿಗೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯರು. ರವಿ ಪೂಜಾರಿ ತಮ್ಮ ಮಧು ಕೂಡಾ ಇತ್ತೀಚೆಗೆ ಮೃತರಾಗಿದ್ದಾರೆ. ಮಲ್ಪೆ ವಡಭಾಂಡೇಶ್ವರ ನೆರ್ಗಿ ಸರಸ್ವತಿ ಭಜನಾ ಮಂದಿರ ಬಳಿ ರವಿ ಪೂಜಾರಿ ಮೂಲ ಮನೆ ಇದೆ. ಪದೇ ಪದೇ ರವಿ ಪೂಜಾರಿ ವಿಚಾರಣೆಗೆ ಪೊಲೀಸರು ಬರುತ್ತಿದ್ದು, ಈ ಕಿರಿಕಿರಿ ತಪ್ಪಿಸಿಕೊಳ್ಳಲು ಸಲುವಾಗಿ 16 ವರ್ಷದ ಹಿಂದೆಯೇ ಮನೆ ಮಾರಾಟ ಮಾಡಿ ಊರು ಬಿಟ್ಟಿದ್ದಾರೆ ಎನ್ನಲಾಗಿದೆ. ತಂದೆ ಕೂಡಾ ಆಸ್ಪತ್ರೆಯಲ್ಲಿ 6 ವರ್ಷದ ಹಿಂದೆ ಮೃತಪಟ್ಟಿದ್ದು ಈ ಬಗ್ಗೆ ಕುಟುಂಬಕ್ಕೂ ಮಾಹಿತಿ ನೀಡಿರಲಿಲ್ಲ ಎನ್ನಲಾಗುತ್ತಿದೆ. ರವಿ ಪೂಜಾರಿ ಅವರ ತಾಯಿ ಸದ್ಯ ಮಗಳೊಂದಿಗೆ ದೆಹಲಿಯಲ್ಲಿ ವಾಸವಿದ್ದಾರೆ. ಸುಶೀಲ ಪೂಜಾರಿ (ತಾಯಿ) ಸಹೋದರಿಯ ಸಂಬಂಧಿಗಳು ಮಾತ್ರವೇ ಉಡುಪಿ ಆಸುಪಾಸಿನಲ್ಲಿದ್ದು, ಯಾವ ಸಂಪರ್ಕವೂ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗ್ಯಾಂಗ್ ಸ್ಟರ್ ಆಗಿದ್ದೇಗೆ?
1990ರಲ್ಲಿ ಮುಂಬಯಿನಲ್ಲೇ ತನ್ನ ಭೂಗತ ಜಗತ್ತಿನ ಚಟುವಟಿಕೆ ಆರಂಭಿಸಿದ ರವಿಪೂಜಾರಿ ಚಿಕ್ಕಪುಟ್ಟ ಕ್ರಿಮಿನಲ್ ಚಟುವಟಿಕೆಯಿಂದ ದೊಡ್ಡ ಗ್ಯಾಂಗ್ಸ್ಟರ್ ಆದ, ತನ್ನದೇ ಭೂಗತ ಗ್ಯಾಂಗ್ ಕೂಡ ಕಟ್ಟಿಕೊಂಡಿದ್ದ. ಕ್ರಿಮಿನಲ್ ಚಟುವಟಿಕೆ , ರಿಯಲ್ ಎಸ್ಟೇಟ್ ದಂಧೆ ಈತನ ಪ್ರಮುಖ ಕೆಲಸ ಎಂದು ಪೊಲೀಸ್ ದಾಖಲೆಗಳಿಂದ ತಿಳಿದುಬಂದಿದೆ. ಸ್ಥಳೀಯ ರೌಡಿಗಳನ್ನು ಕೊಲೆ ಮಾಡಿ ಹೆಸರುವಾಸಿಯಾಗಿದ್ದ ಈತ, ಬಳಿಕ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಂಟ ಛೋಟಾ ರಾಜನ್ ಗ್ಯಾಂಗ್ ಜತೆ ಸೇರಿಕೊಂಡ. 1992ರಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಆ ನಂತರ ತಪ್ಪಿಸಿಕೊಂಡಿದ್ದ. 1995ರಲ್ಲಿ ಮುಂಬೈನ ಚೆಂಬೂರ್ ಎಂಬಲ್ಲಿ ಬಿಲ್ಡರ್ ಪ್ರಕಾಶ್ ಕುಕ್ರೇಜಾ ಎಂಬಾತನನ್ನು ಈತನ ಗ್ಯಾಂಗ್ ಕೊಲೆ ಮಾಡಿತ್ತು. ಆದಾದ ನಂತರ ದಾವೂದ್ ಇಬ್ರಾಹಿಂ ನಿಂದ ಛೋಟಾ ರಾಜನ್ ಸುಪಾರಿ ನೀಡಿದ್ದ ಹಿನ್ನೆಲೆಯಲ್ಲಿ ರವಿ ಪೂಜಾರಿ ಛೋಟಾ ರಾಜ್ ನಿಂದ ದೂರ ಉಳಿದಿದ್ದ. ಗ್ಯಾಂಗ್ ಮಧ್ಯೆ ಜಗಳವಾಗಿ 2000 ನೇ ಇಸವಿಯಲ್ಲಿ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಭೂಗತ ಲೋಕದಲ್ಲಿ ಅಕ್ರಮವಾಗಿ ಕೋಟ್ಯಂತರ ರೂ. ಸಂಪಾದಿಸಿ ಮುಂಬಯಿಯಿಂದ ದುಬೈಗೆ ಹಾರಿದ್ದ. 2003ರಲ್ಲಿ ಬಿಲ್ಡರ್ ಸುರೇಶ್ ವಾಧ್ವಾ ಹತ್ಯೆಗೆ ಪ್ರಯತ್ನಿಸಿದ್ದ . 2005ರಲ್ಲಿ ವಕೀಲ ಮಜೀದ್ ಮೆಮೊನ್ ಹತ್ಯೆ ಮಾಡಿದ ಆರೋಪ ಈತನ ಮೇಲಿದೆ.
ಪಾತಕಿ ರವಿ ಪೂಜಾರಿ ಮೇಲಿರುವ ಪ್ರಕರಣಗಳೆಷ್ಟು? ಇಲ್ಲಿದೆ
Video-ಈಗ ಹೇಗಿದ್ದಾನೆ ರವಿ ಪೂಜಾರಿ? ಬೆಂಗಳೂರಿಗೆ ಬಂದ ಭೂಗತ ಪಾತಕಿ ವಿಡಿಯೋ ನೋಡಿ
ಹಫ್ತಾ ವಸೂಲಿ ಈತನ ಮುಖ್ಯ ದಂಧೆ:
ಹಫ್ತಾ ವಸೂಲಿ ಈತನ ಮುಖ್ಯ ದಂಧೆಯಾಗಿತ್ತು. ಅದರಲ್ಲೂ ಕರ್ನಾಟಕದಲ್ಲಿ ಉದ್ಯಮಿಗಳು, ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ ವಿದೇಶದಲ್ಲಿ ಇದ್ದುಕೊಂಡೇ ಭಾರತದಲ್ಲಿ ತನ್ನ ಕಾರ್ಯಚಟುವಟಿಕೆ ನಡೆಸುವಷ್ಟು ಪ್ರಬಲವಾಗಿ ತನ್ನ ಭೂಗತ ಗ್ಯಾಂಗ್ ಅನ್ನು ಬೆಳೆಸಿದ್ದ. 90ರ ದಶಕದಲ್ಲಿ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ. ಆಫ್ರಿಕಾ ದೇಶದ ಸೆನೆಗಲ್ ನಲ್ಲಿ ಉದ್ಯಮ ನಡೆಸಿ ಅಲ್ಲೆ ನೆಲೆಸಲು ನಿರ್ಧರಿಸಿದ್ದ ಪೂಜಾರಿ ಪೊಲೀಸರಿಗೆ ತನ್ನ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ರ್ಬುನೋ ಫಾಸೋ ದೇಶದಿಂದ ಆಂಟನಿ ಫರ್ನಾಂಡಿಸ್ ಹೆಸರಿನಲ್ಲಿ ಪಾಸ್ಪೋರ್ಟ್ ಪಡೆದಿದ್ದ ಎಂದು ತಿಳಿದುಬಂದಿದೆ.
ಈಗ ಹೇಗಿದ್ದಾನೆ ರವಿ ಪೂಜಾರಿ? ಬೆಂಗಳೂರಿಗೆ ಬಂದ ಭೂಗತ ಪಾತಕಿ
ರಾಜಕಾರಣಿಗಳು ಮತ್ತು ಸಿನೆಮಾ ತಾರೆಯರೇ ಈತನ ಟಾರ್ಗೆಟ್ :
2017 ಮತ್ತು 2018 ರಲ್ಲಿ ಭಾರತದ ಅನೇಕ ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ಈತನಿಂದ ಬೆದರಿಕೆ ಕರೆಗಳು ಬಂದಿದ್ದವು. 2019ರಲ್ಲಿ ಕೇರಳದ ಶಾಸಕ ಪಿಸಿ ಜಾರ್ಜ್ ಅವರು ತಮ್ಮ ಮಗನಿಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿದೆ ಎಂದು ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಕರೆ ಬಂದಿರುವುದು ಆಫ್ರಿಕಾದ ಸೆನೆಗಲ್ ನಿಂದ ಎಂದು ತಿಳಿದುಬಂತು. ಗಂಗಾವತಿ ಶಾಸಕರಾಗಿದ್ದ ಇಕ್ಬಾಲ್ ಅನ್ಸಾರಿ ಅವರಿಗೂ ಈತನಿಂದ ಬೆದರಿಕೆ ಕರೆ ಬಂದಿತ್ತು.
ಸೆನೆಗಲ್ನಿಂದ ರವಿಪೂಜಾರಿ ಪರಾರಿ: ಜಾಮೀನು ಪಡೆದ ಪಾತಕಿ
2009 ರಿಂದ 2013ರವರೆಗೆ ದೇಶದ ಅನೇಕ ಸಿನೆಮಾ ತಾರೆಯರನ್ನು ಗುರಿಯಾಗಿರಿಸಿಕೊಂಡು ರವಿಪೂಜಾರಿ ಬೆದರಿಕೆ ಹಾಕಿದ್ದ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್, ಶಾರುಖ್ ಖಾನ್, ಕರಣ್ ಜೋಹರ್, ರಾಕೇಶ್ ರೋಶನ್ ಮತ್ತು ಶಾರುಖ್ ಖಾನ್ ಜೊತೆ ಬಿಸಿನೆಸ್ ಪಾರ್ಟನರ್ ಜೊತೆಗೆ ನಿರ್ಮಾಪಕನಾಗಿರುವ ಕರೀಂ ಮೊರಾನಿ ಅವರಿಗೂ ಬೆದರಿಕೆ ಹಾಕಿದ್ದ.
ಈತನ ವಿರುದ್ಧದ ಪ್ರಕರಣಗಳೆಷ್ಟು?
ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ 120ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ತಿಳಿದುಬಂದಿದೆ. ಅದರಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ 39 ಪ್ರಕರಣಗಳು, ಮಂಗಳೂರಿನಲ್ಲಿ 36, ಉಡುಪಿಯಲ್ಲಿ 11 ಸೇರಿದಂತೆ ಮೈಸೂರು, ಹುಬ್ಬಳ್ಳಿ, ಧಾರವಾಡ, ಕೋಲಾರದಲ್ಲೂ ಪ್ರಕರಣಗಳಿವೆ. 2003 ರಲ್ಲಿ ಮುಂಬೈನಲ್ಲಿ ಈತನ ಸಹಚರರು ಬಿಲ್ಡರ್ ಸುರೇಶ್ ವಾಧ್ವಾ ಹತ್ಯೆಗೆ ಯತ್ನಿಸಿದ್ದ ಕೇಸು. 2005ರಲ್ಲಿ ವಕೀಲ ಮಜೀದ್ ಮೆಮನ್ ಹತ್ಯೆ ಮಾಡಿದ ಆರೋಪ. 2007, ಫೆಬ್ರವರಿ 15ರಲ್ಲಿ ರವಿ ಪೂಜಾರಿ ಶಬ್ಮಮ್ ಬಿಲ್ಡರ್ಸ್ ಮಾಲೀಕರಾದ ಶೈಲಜಾ ಹಾಗೂ ರವಿ ಎಂಬಿಬ್ಬರನ್ನು ಹತ್ಯೆ ಮಾಡಿದ್ದ. ಹಫ್ತಾ ಬೇಡಿಕೆ ವಿಚಾರವಾಗಿ ಈ ಹತ್ಯೆ ನಡೆದಿತ್ತು. ಬೆಂಗಳೂರಿನ ಜಯನಗರ ಸಮೀಪದ ತಿಲಕ್ ನಗರದಲ್ಲಿ ನಡೆದ ಈ ಭೀಕರ ಹತ್ಯೆ ಉದ್ಯಮ ವಲಯವನ್ನು ಬೆಚ್ಚಿ ಬೀಳಿಸಿತ್ತು. 2009 ರಲ್ಲಿ ಬೆಂಗಳೂರಿನ ಇಂದಿರಾ ನಗರದಲ್ಲಿ ಖಾಸಗಿ ವಾಹಿನಿ ಒಂದರ ಮೇಲೆ ರವಿ ಪೂಜಾರಿ ದಾಳಿ ನಡೆಸಿದ್ದ. 2005 ರಲ್ಲಿ ಆರ್.ಟಿ ನಗರದಲ್ಲಿ ಉದ್ಯಮಿ ಸುಬ್ಬರಾಜು ಕೊಲೆ ಪ್ರಕರಣ, 2013 ರಲ್ಲಿ ಬಾಲಿವುಡ್ ಸಿನಿಮಾ ನಟರಿಗೂ ರವಿ ಪೂಜಾರಿ ಹಫ್ತಾ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ. ಹೀಗೆ ಹಫ್ತಾಕ್ಕಾಗಿ ಹಲವು ಕೊಲೆ ಮಾಡಿದ ಪ್ರಕರಣವಿದೆ.
ಪೂಜಾರಿ ಗ್ಯಾಂಗ್ಗಾಗಿ ರಾಜ್ಯಕ್ಕೆ ಬಂದ ಕೇರಳ ಪೊಲೀಸರು
ಬಂಧನದಲ್ಲಿ ಪತ್ನಿ
2005ರಲ್ಲಿ ಪಾಸ್ಪೋರ್ಟ್ ಪ್ರಕರಣದಲ್ಲಿ ರವಿ ಪೂಜಾರಿ ಪತ್ನಿ ಪದ್ಮಾ ಪೂಜಾರಿ ಬಂಧಿತಳಾಗಿದ್ದಳು. ಇಬ್ಬರ ವಿರುದ್ಧ ರೆಡ್ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಇತ್ತೀಚೆಗೆ ಕೇಸ್ ಒಂದರಲ್ಲಿ ಮಗನನ್ನು ಕೂಡ ಬಂಧಿಸಲಾಗಿತ್ತು. ಸದ್ಯ ಆತ ಬೇಲ್ ನಿಂದ ಹೊರ ಬಂದಿದ್ದಾನೆ.