ಪ್ರಾದೇಶಿಕ ಪಕ್ಷ ಜೆಡಿಎಸ್ ಪರಿಸ್ಥಿತಿ ಹೇಳಿಕೊಳ್ಳುವಂತೆ ಇಲ್ಲ. ಚುನಾವಣೆಯಿಂದ ಚುನಾವಣೆಗೆ ಅದರ ಪ್ರಾಬಲ್ಯ ಕುಸಿಯುತ್ತಿದ್ದರೆ, ಬಿಜೆಪಿಯ ಶಕ್ತಿ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಎಂಬಂತಾಗಿದ್ದು, ಹಾವು-ಏಣಿ ಆಟ ಆಡುತ್ತಲೇ ಇದೆ. ಇದುವರೆಗೂ ಒಂದು ಬಾರಿಯೂ ಬಹುಮತವನ್ನು ಪಡೆಯಲಾಗಿಲ್ಲ. ಆದರೆ, ಕಾಂಗ್ರೆಸ್ ಶಕ್ತಿ ಕರ್ನಾಟಕದಲ್ಲಿ ಹೆಚ್ಚುತ್ತಿದ್ದು, ಜಂಟಿಯಾಗಿಯೇ ಕಾಂಗ್ರೆಸ್ ಅನ್ನು ಎದುರಿಸಲು ಬಿಜೆಪಿ - ಜೆಡಿಎಸ್ ಮುಂದಾಗಿದ್ದವು.
ವಿಧಾನಸಭೆಯಲ್ಲಿ ಬಿಜೆಪಿ ನೆರವಿಗೆ ಹಲವು ಬಾರಿ ಎಚ್ಡಿ ಕುಮಾರಸ್ವಾಮಿ ಧಾವಿಸಿದ್ದರು. ಬಿಜೆಪಿ ಹೋರಾಟದಲ್ಲಿ ಎಚ್ಡಿಕೆ ಭಾಗವಹಿಸಿದ್ದರು. ಬಿಜೆಪಿಯ ಲೆಟರ್ ಹೆಡ್ನಲ್ಲಿಯೇ ಎಚ್ಡಿಕೆ ಮತ್ತು ಜೆಡಿಎಸ್ ಶಾಸಕರು ಸಹಿ ಕೂಡ ಮಾಡಿದ್ದರು. ಆದರೆ, ಎಚ್ಡಿ ದೇವೇಗೌಡ ಅವರು ಸ್ವತಂತ್ರವಾಗಿ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಇದರಿಂದ ಈಗ ಮೈತ್ರಿ ಮಾತುಕತೆಗೆ ತಡೆ ಬಿದ್ದಂತಾಗಿದೆ. ಹಾಗಾದ್ರೆ ಬಿಜೆಪಿ - ಜೆಡಿಎಸ್ ಮೈತ್ರಿ ಮಾತುಕತೆಗೆ ಬ್ರೇಕ್ ಬಿದ್ದಿದ್ದು ಏಕೆ? ಬಿಜೆಪಿ ಜೊತೆ ಹೋಗಲು ಜೆಡಿಎಸ್ ಹಿಂದೇಟು ಹಾಕುತ್ತಿರುವುದು ಏಕೆ ಎಂಬುದರ ವಿವರ ಇಲ್ಲಿದೆ.
ಮೈತ್ರಿ ಚರ್ಚೆಗೆ ಶಾಸಕರಿಂದ ವಿರೋಧ!
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಎರಡು ಪಕ್ಷಗಳಲ್ಲೂ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಬಿಜೆಪಿ ಜೊತೆ ಮೈತ್ರಿ ಬೇಡವೇ ಬೇಡ ಎಂದು ಹಲವು ಜೆಡಿಎಸ್ ಶಾಸಕರು ಎಚ್ಡಿ ಕುಮಾರಸ್ವಾಮಿ ಹಾಗೂ ಎಚ್ಡಿ ದೇವೇಗೌಡ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದರಲ್ಲೂ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಕೂಡ ಬಿಜೆಪಿ ಜೊತೆಗೆ ಹೋಗಲು ಮನಸ್ಸು ಮಾಡ್ತಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ವಿರೋಧಿ ಬಣದಲ್ಲಿಯೇ ಹೆಚ್ಚಾಗಿ ಗುರುತಿಸಿಕೊಂಡಿರುವ ದೇವೇಗೌಡರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಅದಲ್ಲದೇ ಈ ಮೈತ್ರಿಯಿಂದ ಹಲವು ಆರೋಪಗಳು ಜೆಡಿಎಸ್ ಮೇಲೆ ಬರುವ ಆತಂಕ ಅವರಿಗೆ ಕಾಡುತ್ತಿದೆ. ಬಿಜೆಪಿಯಲ್ಲಿಯೂ ಕೂಡ ಜೆಡಿಎಸ್ ಜೊತೆಗಿನ ಮೈತ್ರಿಗೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿರುವುದು ಕಂಡುಬಂದಿದೆ.
ಕಳೆದ ಚುನಾವಣೆ ವೇಳೆ ಮೈತ್ರಿ ಸೋಲಿನ ಪಾಠ!
ಪ್ರಮುಖವಾಗಿ ಕಳೆದ ಬಾರಿ ಲೋಕಸಭಾ ಚುನಾವಣೆಯ ಹೀನಾಯ ಸೋಲು ಜೆಡಿಎಸ್ ನಾಯಕರ ಮುಂದೆ ಈಗಲೂ ಇದೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಜೆಡಿಎಸ್ ಆ ಚುನಾವಣೆಯಲ್ಲಿ ಗೆದ್ದಿದ್ದು ಕೇವಲ ಒಂದು ಲೋಕಸಭಾ ಸ್ಥಾನವನ್ನು ಮಾತ್ರ. ಅದು ಕಾಂಗ್ರೆಸ್ ಜೊತೆಗಿನ ಮೈತ್ರಿಗಿಂತ ಸ್ವಸಾಮರ್ಥ್ಯದ ಮೂಲಕ ಹಾಸನವನ್ನು ಜೆಡಿಎಸ್ ವಶಪಡಿಸಿಕೊಂಡಿತ್ತು. ಸ್ವತಃ ಮಾಜಿ ಪ್ರಧಾನಿ ದೇವೇಗೌಡ ಅವರು ಸೋಲು ಅನುಭವಿಸಿದ್ದರು. ಆಗಿನ ಸಿಎಂ ಎಚ್ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದರು. ಈ ಕ್ಷೇತ್ರಗಳಲ್ಲೆಲ್ಲಾ ಮೈತ್ರಿ ಒಳ ಏಟು ನೀಡಿದ್ದು, ಬಿಜೆಪಿ ಗೆಲ್ಲಲು ಸಹಾಯವಾಗಿತ್ತು. ಆಗಿನಂತೆ ಈಗ ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ಗೆಲುವಿಗೆ ಸಹಾಯ ಮಾಡಿದಂತಾಗುತ್ತದೆ ಎಂಬ ಆತಂಕ ಇದ್ದು, ಮೈತ್ರಿಗೆ ಹಿಂದೇಟು ಹಾಕುತ್ತಿದ್ದಾರೆ.
‘ಎಸ್’ ಹೋಗಿ ‘ಸಿ’ - ಮುಸ್ಲಿಂ ಮತಗಳು ದೂರವಾಗುವ ಆತಂಕ!
ಜೆಡಿಎಸ್ ಹಾಗೂ ಬಿಜೆಪಿ ಸೈದ್ಧಾಂತಿಕವಾಗಿ ಬಹಳಷ್ಟು ವ್ಯತ್ಯಾಸವನ್ನು ಹೊಂದಿವೆ. ಜನತಾದಳ ಜಾತ್ಯಾತೀತ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ, ಬಿಜೆಪಿ ರಾಷ್ಟ್ರೀಯವಾದದ ಮೇಲೆ ಕೆಲಸ ಮಾಡುತ್ತಿದೆ. ಆದರೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಕೋಮುವಾದಿಗಳ ಜೊತೆ ಹೋದರು ಎಂಬ ಟ್ಯಾಗ್ಲೈನ್ ಅನ್ನು ಕಾಂಗ್ರೆಸ್ ನಾಯಕರು ನೀಡಲಿದ್ದಾರೆ. ಇದರಿಂದ ಪೂರ್ತಿಯಾಗಿ ಮುಸ್ಲಿಂ ಮತಗಳು ಕೈತಪ್ಪುವ ಆತಂಕ ಜೆಡಿಎಸ್ ನಾಯಕರಿಗೆ ಇದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭಾಗಶಃ ಮುಸ್ಲಿಂ ಮತಗಳು ಕಾಂಗ್ರೆಸ್ ಕಡೆ ವಾಲಿದ್ದು, ಉಳಿದಿರುವ ಮತಗಳನ್ನಾದರೂ ಉಳಿಸಿಕೊಳ್ಳೋಣ ಎಂಬ ಇರಾದೆಯಲ್ಲಿ ಜೆಡಿಎಸ್ ನಾಯಕರು ಇದ್ದಂಗೆ ಇದೆ.
ಮೈತ್ರಿ ಮಾಡಿಕೊಂಡಾಗಲೆಲ್ಲಾ ಜೆಡಿಎಸ್ಗೆ ಹೀನಾಯ ಸೋಲು!
ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ರಾಜ್ಯದಲ್ಲಿ ಹೀನಾಯ ಮಟ್ಟಕ್ಕೆ ತಲುಪಿದೆ. 2004ರಿಂದಲೂ ಜೆಡಿಎಸ್ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ಮೈತ್ರಿ ಮಾಡಿಕೊಂಡಾಗಲೆಲ್ಲಾ ಹೀನಾಯ ಸೋಲು ಅನುಭವಿಸಿ, ಪಾಲುದಾರಿಕಾ ಪಕ್ಷ ಅಧಿಕಾರ ಹಿಡಿದ ಉದಾಹರಣೆಗಳಿವೆ. 2006ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ, 2008ರಲ್ಲಿ ಅಧಿಕಾರ ಹಂಚಿಕೆಯಾಗದ ಹಿನ್ನೆಲೆ ಮೈತ್ರಿ ಸರ್ಕಾರ ಪತನವಾಗಿ ಚುನಾವಣೆ ನಡೆಯಿತು. ಬಳಿಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರ ನಡೆಸಿತು. 2018ರಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಆಯ್ತು. ಆದರೆ, ಬಳಿಕ ಎರಡು ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದವು. ಇದಾದ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳನ್ನು ಮಾತ್ರ ಜೆಡಿಎಸ್ ಗೆಲ್ಲುವಲ್ಲಿ ಸಫಲವಾಗಿದೆ.
ಮೈತ್ರಿಯಿಂದ ಜೆಡಿಎಸ್ ಸಂಘಟನೆಯಲ್ಲಿ ಹಿನ್ನಡೆ!
2004 ರಿಂದಲೂ ಜೆಡಿಎಸ್ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ. 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಗೆ ಅವಕಾಶ ಇಲ್ಲದ ಕಾರಣ ಜೆಡಿಎಸ್ ಕಿಂಗ್ ಮೇಕರ್ ಆಗಿದ್ದಿಲ್ಲ. 2004ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು, ಬಳಿಕ 2006ರಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆಯ್ತು. 2004ರಲ್ಲಿ 58 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್, ಮೈತ್ರಿ ಸರ್ಕಾರದ ಪತನದ ಬಳಿಕ ನಡೆದ 2008ರ ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನಕ್ಕೆ ಇಳಿಯಿತು. 2013ರಲ್ಲಿ ಮೈತ್ರಿ ಇರದ ಕಾರಣ 40 ಸ್ಥಾನಕ್ಕೆ ಏರಿತು. ಆದರೆ, 2018ರಲ್ಲಿ 37 ಸ್ಥಾನಗಳಿಗೆ ಜೆಡಿಎಸ್ ಇಳಿಯಿತು. ಈ ವೇಳೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತು. ಇದರ ಬಳಿಕ ಮೈತ್ರಿ ಮುರಿದುಬಿದ್ದರು ಕೂಡ 2023ರಲ್ಲಿ 19 ಸ್ಥಾನಕ್ಕೆ ಜೆಡಿಎಸ್ ಕುಸಿದಿದೆ. ಮೈತ್ರಿ ಮಾಡಿಕೊಂಡ ಹಿನ್ನೆಲೆ ಹಲವು ಕಡೆ ಸಂಘಟನೆ ವಿಫಲವಾಗಿದೆ. ಹಲವು ಜೆಡಿಎಸ್ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ಗೆ ವಲಸೆ ಹೋಗಿದ್ದಾರೆ. ಆದ್ದರಿಂದ ಮೈತ್ರಿ ಸಹವಾಸವೇ ಬೇಡ ಎಂಬುದು ಜೆಡಿಎಸ್ ನಾಯಕರ ಅಭಿಪ್ರಾಯ.
ಎಚ್ಡಿ ದೇವೇಗೌಡರ ನಿಲುವು ಏನು?
ಇನ್ನು, ಮೈತ್ರಿಗೆ ದೇವೇಗೌಡರು ಹಿಂದೇಟು ಹಾಕಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್ನ ಉಳಿವಿನ ದೃಷ್ಟಿಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರಿಸಲು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಅಥವಾ 26 ಪಕ್ಷಗಳ ಐಎನ್ಡಿಐಎ ಒಕ್ಕೂಟವನ್ನು ಸೇರುವ ಪ್ರಶ್ನೆಯೇ ಇಲ್ಲ ಎಂಬುದನ್ನು ಜೆಡಿಎಸ್ ಶಾಸಕರಿಗೆ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕಿದೆ, ಒಂದು ಕಡೆ ಎನ್ಡಿಎ, ಇನ್ನೊಂದು ಕಡೆ ಐಎನ್ಡಿಐಎ ಇದೆ. ಯಾವ ದಾರಿಯಲ್ಲಿ ಹೋಗಬೇಕೆಂದು ನಮ್ಮ ಶಾಸಕರಿಗೆ ಸೂಚಿಸಿದ್ದೇನೆ. ನನಗೆ ರಾಷ್ಟ್ರ ರಾಜಕಾರಣ ಚೆನ್ನಾಗಿ ಗೊತ್ತಿದ್ದು, ಶಾಸಕರೊಂದಿಗೆ ನನ್ನ ಅನುಭವ ಹಂಚಿಕೊಂಡಿದ್ದೇನೆ. ರಾಜ್ಯದ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷ ಉಳಿಯಬೇಕು. ಜನರಿಗೆ ಆಗುತ್ತಿರುವ ಅನ್ಯಾಯವನ್ನು ಎತ್ತಿ ಹಿಡಿದು ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಎನ್ಡಿಎ ಅಥವಾ ಐಎನ್ಡಿಐಎ ಸೇರುವ ಪ್ರಶ್ನೆಯೇ ಇಲ್ಲ ಎಂದು ಎಚ್ಡಿ ದೇವೇಗೌಡ ಅವರು ತಿಳಿಸಿದರು.
ದೇವೇಗೌಡರ ಅಭಿಪ್ರಾಯ ಬೆನ್ನಲ್ಲೇ ಬಿಜೆಪಿಯಿಂದ ಜೆಡಿಎಸ್ ದೂರ!
ಇನ್ನು, ಗುರುವಾರ ಬಿಜೆಪಿ ಜೊತೆ ಜಂಟಿ ಹೋರಾಟ ನಡೆಸಿದ್ದ ಜೆಡಿಎಸ್ ಶಾಸಕರು ಶುಕ್ರವಾರ ಬಿಜೆಪಿ ಪ್ರತಿಭಟನೆಗೆ ಗೈರಾಗಿದ್ದಾರೆ. ಐಎಎಸ್ ಅಧಿಕಾರಿಗಳ ದುರ್ಬಳಕೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿತ್ತು. ಈ ವೇಳೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕರು ಕೂಡಾ ಸಾಥ್ ನೀಡಿದ್ದರು. ಅದಕ್ಕೂ ಮೊದಲು ವಿಧಾನಸೌಧದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲೂ ಕುಮಾರಸ್ವಾಮಿ ಭಾಗಿಯಾಗಿದ್ದರು. ಆದರೆ, ಶುಕ್ರವಾರ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಜೆಡಿಎಸ್ ಶಾಸಕರು ಯಾರೂ ಭಾಗಿಯಾಗಿಲ್ಲ. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಶಾಸಕರ ಜೊತೆ ಸಭೆ ನಡೆಸಿದ ಬೆನ್ನಲ್ಲಿಯೇ ಈ ಬೆಳವಣಿಗೆ ನಡೆದಿರುವುದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರ ನಾನೊಂದು ತೀರ, ನೀನೊಂದು ತೀರ ಎಂಬಂತಾಗಿದೆ.