Please enable javascript.ಡಾಕ್ಟರ್ ಆಗಿ ಎಂಡೋ ಸಂತ್ರಸ್ತರ ಕಣ್ಣೀರೊರೆಸುವೆ: ಎಂಡೋ ಸಂತ್ರಸ್ತೆ ಶ್ರುತಿ - endo santraste - Vijay Karnataka

ಡಾಕ್ಟರ್ ಆಗಿ ಎಂಡೋ ಸಂತ್ರಸ್ತರ ಕಣ್ಣೀರೊರೆಸುವೆ: ಎಂಡೋ ಸಂತ್ರಸ್ತೆ ಶ್ರುತಿ

ವಿಕ ಸುದ್ದಿಲೋಕ 18 Jul 2015, 5:09 am
Subscribe

ಎಂಡೋಸಲ್ಫಾನ್ ಮಹಾಮಾರಿಯ ಪರಿಣಾಮಗಳಿಂದ ಬದುಕು ಕಳೆದುಕೊಂಡು ಸಂಕಷ್ಟದಲ್ಲಿರುವ ನನ್ನಂತಹುದೇ ಅನೇಕಾನೇಕ ಮಂದಿಗೆ ಸಹಾಯ ಮಾಡುವುದೇ ನನ್ನ ಗುರಿ. ಡಾಕ್ಟರ್ ಆಗಿ ನನ್ನಿಂದಾಗುವ ನೊಂದ ಮನಸುಗಳಿಗೆ ಸಾಂತ್ವನ ಹೇಳುತ್ತೇನೆ.

endo santraste
ಡಾಕ್ಟರ್ ಆಗಿ ಎಂಡೋ ಸಂತ್ರಸ್ತರ ಕಣ್ಣೀರೊರೆಸುವೆ: ಎಂಡೋ ಸಂತ್ರಸ್ತೆ ಶ್ರುತಿ
-ಕೆ. ಗಂಗಾಧರ್ ಯಾದವ್, ಕಾಸರಗೋಡು ಎಂಡೋಸಲ್ಫಾನ್ ಮಹಾಮಾರಿಯ ಪರಿಣಾಮಗಳಿಂದ ಬದುಕು ಕಳೆದುಕೊಂಡು ಸಂಕಷ್ಟದಲ್ಲಿರುವ ನನ್ನಂತಹುದೇ ಅನೇಕಾನೇಕ ಮಂದಿಗೆ ಸಹಾಯ ಮಾಡುವುದೇ ನನ್ನ ಗುರಿ. ಡಾಕ್ಟರ್ ಆಗಿ ನನ್ನಿಂದಾಗುವ ನೊಂದ ಮನಸುಗಳಿಗೆ ಸಾಂತ್ವನ ಹೇಳುತ್ತೇನೆ.

ಇದು ಎಂಡೋಸಲ್ಫಾನ್ ಪರಿಣಾಮದಿಂದ ದೈಹಿಕ ಅಂಗವೈಕಲ್ಯವನ್ನು ಅನುಭವಿಸಿದರೂ, ಬಡತನದ ಸಂಕಷ್ಟದಲ್ಲಿದ್ದರೂ ಹಠ ತೊಟ್ಟು ಕಲಿತು ಇದೀಗ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅಣಿಯಾಗಿರುವ ಕಾಸರಗೋಡು ಜಿಲ್ಲೆ ಕುಂಟಾರಿನ ಶ್ರುತಿಯ ಮಾತು. ಯುಪಿಎಸ್‌ಸಿ ಫಲಿತಾಂಶದಲ್ಲಿ ಪ್ರಥಮ ರ‌್ಯಾಂಕ್ ಪಡೆದ ವಿಶಿಷ್ಟಚೇತನೆ ಇರಾ ಸಿಂಗಲ್ ಅವರಂತೆಯೇ ಉತ್ತಮ ಫಲಿತಾಂಶದೊಂದಿಗೆ ವಿಶಿಷ್ಟ ಚೇತನರಲ್ಲಿ ಆತ್ಮಸ್ಥೈರ್ಯ ತುಂಬಿದ ಶ್ರುತಿ ಇದೀಗ ವೈದ್ಯಕೀಯ ಲೋಕ ಪ್ರವೇಶದ ಮೂಲಕ ಎಂಡೋ ಸಂತ್ರಸ್ತರಲ್ಲಿ ಭರವಸೆ ಮೂಡಿಸಿದ್ದಾರೆ.

ಬಸ್ ನಿರ್ವಾಹಕರೊಬ್ಬರ ಪತ್ನಿಯಾಗಿರುವ ಶ್ರುತಿ ಕರ್ನಾಟಕ ಸರಕಾರದ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬೆಂಗಳೂರಿನ ಸರಕಾರಿ ಹೋಮಿಯೋ ವೈದ್ಯಕೀಯ ಕಾಲೇಜಿನಲ್ಲಿ ಬಿಎಚ್‌ಎಂಎಸ್‌ಗೆ ಪ್ರವೇಶ ಪಡೆದಿದ್ದಾರೆ. ಇದೀಗ ಶ್ರುತಿಯ ಅಧ್ಯಯನ ವೆಚ್ಚ ಭರಿಸಲು ಹೋಮಿಯೋ ವೈದ್ಯರ ಸಂಘಟನೆ ಸೇರಿದಂತೆ ನಾನಾ ವ್ಯಕ್ತಿಗಳು, ಸಂಘಟನೆಗಳು ಮುಂದೆ ಬಂದಿದ್ದಾರೆ. ಇನ್ನು ಶ್ರುತಿಗೆ ಅಧ್ಯಯನ ಒಂದೇ ಗುರಿ. ಮತ್ತೆ ವೈದ್ಯಳಾಗಿ ನೊಂದ ಮನಸ್ಸುಗಳ ಸೇವೆ ಮಾಡುವ ದೊಡ್ಡ ಕನಸನ್ನು ಹೊಂದಿದ್ದಾರೆ. ಈ ಬಗ್ಗೆ ವಿಜಯ ಕರ್ನಾಟಕದೊಂದಿಗೆ ತಮ್ಮ ಕನಸ್ಸನ್ನು ಈ ರೀತಿಯಲ್ಲಿ ಹಂಚಿದ್ದಾರೆ.

*ಈ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ತುಂಬಾ ಖುಷಿಯಿದೆ. ಎಂಡೋ ಪೀಡಿತ ಪ್ರದೇಶವಾದ ಎಣ್ಮಕಜೆ ಪಂಚಾಯಿತಿಯ ಪಡ್ರೆಯಲ್ಲಿದ್ದುಕೊಂಡು ಡಾ. ವೈ.ಮೋಹನ್ ಕುಮಾರ್, ಶ್ರೀಪಡ್ರೆ, ಎಂ.ಎ.ರಹಮಾನ್ ಮೊದಲಾದವರ ಸಹಾಯದೊಂದಿಗೆ ಶಿಕ್ಷಣದಲ್ಲಿ ಮುಂದುವರಿಯಲು ಮತ್ತು ಇದೀಗ ವೈದ್ಯ ವೃತ್ತಿಯ ಅಧ್ಯಯನ ಮಾಡುವುದಕ್ಕೆ ಅವಕಾಶ ಲಭಿಸಿರುವುದು ನಿಜಕ್ಕೂ ಖುಷಿ ತಂದಿದೆ.

*ನಿಮ್ಮ ಮುಂದಿನ ಕನಸು? ಮುಂದೆ ಆರಂಭಗೊಳ್ಳುವ ವೈದ್ಯಕೀಯ ಅಧ್ಯಯನದಲ್ಲಿ ಸಾಕಷ್ಟು ಗಮನ ನೀಡಬೇಕು. ನನ್ನಂತೆ ಜಿಲ್ಲೆಯಲ್ಲಿ ಎಷ್ಟೋ ಎಂಡೋ ಪೀಡಿತರು ಇದ್ದಾರೆ ಅವರಿಗೆ ಮೊದಲಾಗಿ ಸಹಾಯ ಮಾಡಬೇಕು. ಬಡವರಾಗಿದ್ದು ಕಷ್ಟುಪಟ್ಟು ಜೀವನ ನಡೆಸುವವರಿಗೆ ಸಹಾಯ ಮಾಡುವ ಬಗ್ಗೆ ದೊಡ್ಡ ಕನಸಿದೆ. ಏನೇ ಆದರೂ ನನಗೆ ಸಹಾಯ ಮಾಡಿದ ರೀತಿಯಲ್ಲಿಯೇ ನಾನೂ ಸಹಾಯ ಮಾಡಬೇಕು.

*ವೈದ್ಯರಾಗಲು ತಯಾರಿ ನಡೆಸಿದ್ದೀರಿ ಯಾವಾಗ ಕಾಲೇಜು ಪ್ರವೇಶ? ಈಗಾಗಲೇ ಬೆಂಗಳೂರಿನ ಸರಕಾರಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ದಾಖಲಾತಿ ಕೆಲಸ ಮುಗಿದಿದೆ. ಮುಂದಿನ ಆಗಸ್ಟ್ ತಿಂಗಳಲ್ಲಿ ತರಗತಿ ಆರಂಭಗೊಳ್ಳಲಿದೆ. ಕರೆ ಬಂದ ಕೂಡಲೇ ಬೆಂಗಳೂರಿಗೆ ತೆರಳುವುದು.

*ನಿಮ್ಮ ಸಾಧನೆಯ ಹಿಂದೆ ಯಾರಿದ್ದಾರೆ? ಎಂಡೋ ಪೀಡಿತ ಪ್ರದೇಶವಾದ ಪಡ್ರೆಯಲ್ಲಿ ವೈದ್ಯರಾದ ಡಾ. ವೈ.ಮೋಹನ್ ಕುಮಾರ್, ಶ್ರೀಪಡ್ರೆ, ಎಂ.ಎ.ರಹಮಾನ್ ಮೊದಲಾದವರು ಸದಾ ನನ್ನ ಬೆಂಬಲಕೆ ನಿಂತಿದ್ದರು. ಅಲ್ಲದೇ ವಿವಿಧ ರೀತಿಯ ಸಹಾಯವನ್ನು ನೀಡಿದ್ದಾರೆ. ಇದೀಗ ನನ್ನ ಅತ್ತೆಯ ಮನೆಯವರು, ಪತಿ ಎಲ್ಲರ ಬೆಂಬಲದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಪ್ರೋತ್ಸಾಹವೇ ನನ್ನ ಸಾಧನೆಯ ಗುಟ್ಟು.

*ವೈಕಲ್ಯತೆ ಶಿಕ್ಷಣಕ್ಕೆ ಅಡ್ಡಿಯಾಗಿಲ್ಲ... ನಾನು ಹತ್ತನೇ ತರಗತಿ ತನಕ ವಾಣಿನಗರ ಸರಕಾರಿ ಶಾಲೆಯಲ್ಲಿ ಕಲಿತು, ಆ ಬಳಿಕ ಮುಳ್ಳೇರಿಯಾ ಹೈಯರ್‌ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ಟು ತೇರ್ಗಡೆಯಾಗಿದ್ದೇನೆ. ಶಾಲೆಗೆ ತೆರಳುವ ಸಂದರ್ಭದಲ್ಲಿ ಯಾವುದೇ ಮನೋಸ್ಥಿತಿ ಕೊರತೆ ಕಾಣಲಿಲ್ಲ. ನನಗೆ ನನ್ನ ವೈಕಲ್ಯವನ್ನು ಮರೆತು ಶಿಕ್ಷಣದ ಕಡೆಗೆ ಗಮನ ಕೊಟ್ಟಿದ್ದರಿಂದ ಆ ರೀತಿಯ ಮನೋಸ್ಥಿತಿ ಉಂಟಾಗಲಿಲ್ಲ. ನನ್ನ ಕೈ ವೈಕಲ್ಯದಿಂದ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ನಾನು ಚಿಕ್ಕಂದಿನಂದಲೇ ಎಡಕೈಯಲ್ಲಿಯೇ ಬರೆಯುತ್ತಿದೆ. ಅದ್ದರಿಂದ ಅಂತಹ ಸಮಸ್ಯೆ ಉಂಟಾಗಲಿಲ್ಲ.

*ಮದುವೆ ಕಲಿಕೆಗೆ ಅಡ್ಡಿಯಾಗಬಹುದೇ? ಮದುವೆಯಿಂದ ಕಲಿಕೆಗೆ ಯಾವುದೇ ಅಡ್ಡಿಯಿಲ್ಲ. ಇದೀಗ ಮದುವೆಯಾಗಿ ಎರಡು ವರ್ಷವಾಗುತ್ತದೆ. ಅದೇ ಸಂದರ್ಭದಲ್ಲಿ ನನಗೆ ವೈದ್ಯಕೀಯ ಪ್ರವೇಶ ಲಭಿಸಿರುವುದು. ಮದುವೆಯ ಬಳಿಕ ನನಗೆ ಇನ್ನಷ್ಟು ಹೆಚ್ಚಿನ ಬೆಂಬಲ ದೊರೆತಂತಾಗಿದೆ. ಅಲ್ಲದೇ ಇದೀಗ ಎಲ್ಲ ಭಾಗಗಳಿಂದಲೂ ಸಹಾಯ ಬರುತ್ತಿದೆ.

*ಸರಕಾರದಿಂದ ಯಾವುದಾದರೂ ಸೌಲಭ್ಯ ಲಭಿಸಿದೆಯೇ? ಮಾನವಹಕ್ಕು ಆಯೋಗದ ಪ್ರಕಾರ ಸರಕಾರದಿಂದ ಎಂಡೋ ಸಂತ್ರಸ್ತರಿಗೆ ಲಭಿಸುವ ಸಹಾಯಧನ ಲಭಿಸಿದೆ. ಅಲ್ಲದೇ ಸರಕಾರದಿಂದ ಪ್ರತಿ ತಿಂಗಳು ಪಿಂಚಣಿ ಲಭಿಸುತ್ತಿದೆ. ಇದೀಗ ವೈದ್ಯಕೀಯ ಅಧ್ಯಯನ ಪ್ರವೇಶ ಪಡೆದ ಬಳಿಕ ಬೇರೆ ಬೇರೆ ರೀತಿಯಲ್ಲಿ ಸಹಾಯ ಬಂದಿದೆ.

*ನಿಮ್ಮಂತೆ ಇರುವ ಇತರರಿಗೆ ಯಾವುದೇ ಸಂದೇಶ ನೀಡುತ್ತೀರಿ? ವೈಕಲ್ಯಗಳನ್ನು ಹೊಂದಿರುವವರು ಯಾವ ಕಾರಣಕ್ಕೂ ಮನೋಸ್ಥಿತಿಯನ್ನು ಕಳಕೊಳ್ಳಬಾರದು. ಪ್ರತಿಯೊಬ್ಬರಲ್ಲು ಒಂದಲ್ಲ ಒಂದು ಅಭಿರುಚಿ ಇರುತ್ತದೆ. ಆ ಅಭಿರುಚಿಯನ್ನು ಹೊರ ತರಲು ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಬೆಂಬಲ ಬೇಕು. ವೈಕಲ್ಯಗಳನ್ನು ಹೊಂದಿರುವ ವಿಕಲಚೇತನರಿಗೆ ಸಹಾಯ ಲಭಿಸಿದಾಗ ಅವರು ಮುಂದೆ ಒಳ್ಳೆಯ ಸಾಧನೆಯನ್ನು ಮಾಡುತ್ತಾರೆ. ಮನೋಸ್ಥಿತಿಯನ್ನು ಬದಲಾಯಿಸುತ್ತಾರೆ. ಅವರ ಮನಸ್ಸಿನಲ್ಲೂ ತಾನು ಎಲ್ಲರಂತೆ ಎಂಬ ಭಾವನೆ ಬರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ