ಆ್ಯಪ್ನಗರ

ಅವೈಜ್ಞಾನಿಕ ತಂಗುದಾಣ: ಪ್ರಯಾಣಿಕರ ಪರದಾಟ

ಇಲ್ಲಿನ ವಾಹನ ಚಾಲಕರ ಸಂಘದ ಮುಂಭಾಗದಲ್ಲಿ ನಿರ್ಮಿಸಿರುವ ಬಸ್‌ ತಂಗುದಾಣ ಮತ್ತು ಶೌಚಾಲಯ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಜನತೆ ಆರೋಪಿಸಿದ್ದಾರೆ.

Vijaya Karnataka Web 16 Jun 2017, 9:00 am

ಶಶಿಕುಮಾರ್‌ ರೈ ಸುಂಟಿಕೊಪ್ಪ

ಇಲ್ಲಿನ ವಾಹನ ಚಾಲಕರ ಸಂಘದ ಮುಂಭಾಗದಲ್ಲಿ ನಿರ್ಮಿಸಿರುವ ಬಸ್‌ ತಂಗುದಾಣ ಮತ್ತು ಶೌಚಾಲಯ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಜನತೆ ಆರೋಪಿಸಿದ್ದಾರೆ.

2012-13 ನೇ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ತಂಗುದಾಣ ಹಾಗೂ ಸಾರ್ವಜನಿಕರ ಬಳಕೆಗಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಕಾಮಗಾರಿ ಮೇಲ್ನೋಟಕ್ಕೆ ಸರಿಯಾಗಿದೆ ಎಂಬಂತೆ ಕಂಡಬಂದರೂ, ಸೂಕ್ಷ್ಮವಾಗಿ ಗಮನಿಸಿದಾಗ ಅಸಮರ್ಪಕ ಎಂಬುದು ಗೋಚರಿಸುತ್ತದೆ.

ತಂಗುದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವುದಕ್ಕೆ ಆಸನದ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಪ್ರಯಾಣಿಕರು ಬಸ್‌ ಬರುವವರೆಗೂ ನಿಂತು ಪ್ರಾಯಾಸ ಪಡಬೇಕಾದಂತಹ ಸ್ಥಿತಿ ಇದೆ. ಬಸ್‌ಗಾಗಿ ಕೆಲವೊಮ್ಮೆ ಅಕ್ಕಪಕ್ಕದ ಅಂಗಡಿಗಳ ಬಳಿ ಪ್ರಯಾಣಿಕರು ನಿಂತು ಕಾಲ ಕಳೆಯುವಂತಾಗಿದೆ.

ಶೌಚಾಲಯವನ್ನು ಹೈಟೆಕ್‌ ಎಂದು ಬಿಂಬಿಸುತ್ತಿರುವ ಇಲ್ಲಿನ ಗ್ರಾಮ ಪಂಚಾಯಿತಿ, ನಿರ್ವಹಣೆಯನ್ನು 20,100ಕ್ಕೆ ವಾರ್ಷಿಕ ಹರಾಜಿಗೆ ನೀಡಿದೆ. ಆದರೆ ಶೌಚಾಲಯವನ್ನು ಹರಾಜಿನಲ್ಲಿ ಪಡೆದ ಬಿಡ್ಡುದಾರ ಉತ್ತಮ ರೀತಿಯಲ್ಲಿ ಅದನ್ನು ನಿರ್ವಹಿಸಿಕೊಂಡು ಹೋದರೂ, ಪುರುಷರ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದೇ ಇರುವುದು ಇದರ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರನ ಕಾರ್ಯ ವೈಖರಿ ಎಷ್ಟು ಪ್ರಾಮಾಣಿಕ ಎಂದು ಗೋಚರಿಸುತ್ತದೆ. ದುರಂತ ಎಂದರೇ ತಂಗುದಾಣದ ಹೆಸರಿನಲ್ಲಿ ಅನುದಾನವನ್ನು ಪಡೆದು ಗ್ರಾ.ಪಂ. ಆದಾಯಕ್ಕಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಕಟ್ಟಡ ಗ್ರಾಮ ಪಂಚಾಯಿತಿಯ ಸುಪರ್ದಿನಲ್ಲಿದ್ದು, ಈ ಶೌಚಾಲಯದಲ್ಲಿ ಕೈ ತೊಳೆಯುವುಕ್ಕೂ ವ್ಯವಸ್ಥೆ ಮಾಡಿಲ್ಲ ಎಂದು ದೂರುವ ಪ್ರಯಾಣಿಕರು, ಸಾರ್ವಜನಿಕರು ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿ, ಅಧಿಕಾರಿಗಳು ಸಮರ್ಪಕ ವ್ಯವಸ್ಥೆಗೆ ಕಾರ್ಯೋನ್ಮಖವಾಗಲಿ ಎಂದು ಆಗ್ರಹಿಸಿದ್ದಾರೆ.

ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿರು ತಂಗುದಾಣದಲ್ಲಿ ಕುಳಿತು ಕೊಳ್ಳಲು ವ್ಯವಸ್ಥೆ ಇಲ್ಲದೆ ನಿಂತು ಕಾಲ ಕಳೆಯುವಂತಾಗಿದೆ. ಇದರಿಂದ ವೃದ್ಧರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇನ್ನಾದರೂ ಗ್ರಾ.ಪಂ. ಆಡಳಿತ ಗಮನಹರಿಸಬೇಕು.

-ಪಿ.ಪಿ. ಜೋಸೆಫ್‌, ಖಾಸಗಿ ಬಸ್‌ ಚಾಲಕ

ಬಸ್‌ ತಂಗುದಾಣದಲ್ಲಿ ಶೌಚಾಲಯವಿದ್ದರೂ ಗ್ರಾ.ಪಂ. ಪ್ರಯಾಣಿಕರಿಗೆ ಕೈ ತೊಳೆಯಲು ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಅಲ್ಲದೇ, ತಂಗುದಾಣ ಬಳಿ ಖಾಸಗಿ ವಾಹನಗಳ ನಿಲುಗಡೆ ಜಾಸ್ತಿಯಾಗಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಅಲ್ಲದೇ, ತಂಗುದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವುದಕ್ಕೆ ಸಮರ್ಪಕ ಆಸನ ವ್ಯವಸ್ಥೆಯೂ ಇಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಲಿ.

-ರಂಗಸ್ವಾಮಿ, ಶೌಚಾಲಯ ನಿರ್ವಾಹಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ