ಜನಪ್ರತಿನಿಧಿಗಳು ಸಾಮೂಹಿಕ ರಾಜಿನಾಮೆ ನೀಡಿ ಯೋಜನೆ ಸ್ಥಗಿತಕ್ಕೆ ಒತ್ತಡ ಹೇರಲಿ: ಆಗ್ರಹ
ಶ್ರೀಮಂಗಲ: ಸೂಕ್ಷ್ಮ ಪರಿಸರ ತಾಣ ಯೋಜನೆ ವಿರೋಧಿಸಿ ಪಟ್ಟಣದಲ್ಲಿ ಶ್ರೀಮಂಗಲ ನಾಗರೀಕ ಹೋರಾಟ ಸಮಿತಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿತು.
ಕಳೆದ 5 ವರ್ಷಗಳಿಂದ ಸೂಕ್ಷ್ಮ ಪರಿಸರ ತಾಣ ಯೋಜನೆ ಜಾರಿಯಾಗುವ ಬಗ್ಗೆ ಜನರ ಆತಂಕವನ್ನು ಪರಿಹರಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ವೈಫಲ್ಯ ಕಂಡಿರುವ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಲಿ. ಈ ಮೂಲಕ ಸರಕಾರದ ಮೇಲೆ ಒತ್ತಡ ಹೇರಿ ಯೋಜನೆ ಜಾರಿಯಾಗುವುದನ್ನು ತಡೆಗಟ್ಟಲು ಮುಂದಾಗಲಿ ಎಂದು ಸಮಿತಿ ಅಧ್ಯಕ್ಷ ಎಂ.ಟಿ. ಕಾರ್ಯಪ್ಪ ಆಗ್ರಹಿಸಿದರು.
ವಿರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ ಮಾತನಾಡಿ, ಪರಿಸರ ತಾಣ ಯೋಜನೆ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 28 ರವರೆಗೆ ಕಾಲಾವಕಾಶವದೆ. ಆದರೆ ಈ ಕಾಲಾವಕಾಶ ಸಾಕಾಗುವುದಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿ ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಕೋರಲು ಜಿಲ್ಲಾ ಹೋರಾಟ ಸಮಿತಿ ಪ್ರಯತ್ನಿಸುತ್ತಿದೆ. ಈಗಾಗಲೆ ಈ ಯೋಜನೆಗೆ ಜಿಲ್ಲೆಯ ನಾನಾ ಸಂಘ ಸಂಸ್ಥೆ ಮತ್ತು ವೈಯಕ್ತಿಕವಾಗಿ ಸುಮಾರು 5 ಸಾವಿರ ಆಕ್ಷೇಪಣಾ ಪತ್ರಗಳನ್ನು ಸರಕಾರಕ್ಕೆ ಸಲ್ಲಿಸಿದ್ದರೂ ಈ ಯೋಜನೆ ಜಾರಿ ತಡೆಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.
ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಮಾತನಾಡಿ, ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸರಕಾರ ಹಾಗೂ ಜನಪ್ರತಿನಿಧಿಗಳು ಕನ್ನಡ ಭಾಷೆಯಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡದೆ ಜನರಲ್ಲಿ ಗೊಂದಲ ಮೂಡಿಸಿದ್ದಾರೆ. ಈ ಹಿಂದೆ ಸಂಸದರಾಗಿದ್ದ ವಿಶ್ವನಾಥ್ ಅವರು ಈ ಯೋಜನೆ ಬಗ್ಗೆ ತಮ್ಮ ಅರಿವಿಗೆ ಬಂದಿಲ್ಲ ಎಂದು ಹೇಳಿಕೊಂಡಿದ್ದರು. ಈಗಿನ ಸಂಸದ ಪ್ರತಾಪ್ ಸಿಂಹ ಅವರು ಈ ಯೋಜನೆಯನ್ನು ತನ್ನ ಹೆಗಲಿಗೆ ಹಾಕಿ ಜನರು ನಿಶ್ಚಿಂತೆಯಿಂದ ಇರಿ ಎಂದು ಹೇಳಿದ್ದರು. ಆದರೂ ಈ ಯೋಜನೆ ಬಗ್ಗೆ ಜನರು ಆತಂಕ ಎದುರಿಸುತ್ತಲೇ ಇದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಶ್ರೀಮಂಗಲ ಗ್ರಾ.ಪಂ.ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಉಪಾಧ್ಯಕ್ಷ ಕಳ್ಳಂಗಡ ರಜತ್ ಪೂವಣ್ಣ, ಶ್ರೀಮಂಗಲ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಮಾತನಾಡಿ, ಜನರಿಗೆ ಮಾರಕವಾಗುವ ಈ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ರಾ.ಪಂ.ಸದಸ್ಯರಾದ ಚೋನೀರ ಕಾಳಯ್ಯ, ಅಜ್ಜಮಾಡ ಜಯಾ, ಚೋನೀರ ಕಲ್ಪನಾ, ಶ್ರೀಮಂಗಲ ಫೆಡರೇಷನ್ ಅಧ್ಯಕ್ಷ ಅಜ್ಜಮಾಡ ಲವ ಕುಶಾಲಪ್ಪ, ಪ್ರಕಾಶ್ ಮತ್ತಿತರರು ಹಾಜರಿದ್ದರು.