ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಿವು ಸಂಸ್ಥೆಯ ವತಿಯಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹೊಂಗೆ, ಬೇವು, ಸಪೋಟ, ಸಂಪಿಗೆ, ಅರಳೀ, ಮಾವು ಮೊದಲಾದ ಗಿಡಗಳನ್ನು ವಿತರಿಸಲಾಯಿತು. ಇದಲ್ಲದೆ ಪ್ಲಾಸ್ಟಿಕ್ ಮುಕ್ತ ಮೈಸೂರಿನ ಅಂಗವಾಗಿ ಉಚಿತವಾಗಿ ಬಟ್ಟೆ ಬ್ಯಾಗ್, ಪೇಪರ್ ಬ್ಯಾಗ್ಗಳನ್ನು ವಿತರಿಸಿ ಅರಿವು ಮೂಡಿಸುವ ಯತ್ನ ಮಾಡಲಾಯಿತು.
ಈ ಸಂದರ್ಭ ಸಾರ್ವಜನಿಕರಿಗೆ ಸುಮಾರು 200 ಗಿಡ, ಸಾವಿರದಷ್ಟು ಬಟ್ಟೆ ಬ್ಯಾಗ್, ಪೇಪರ್ ಬ್ಯಾಗ್ಗಳನ್ನು ವಿತರಿಸಲಾಯಿತು.
ಸಮಾಜಸೇವಕ ರಘುರಾಮ… ಮಾತನಾಡಿ, ''ಮನೆಯಲ್ಲಿ ಮಕ್ಕಳನ್ನು ಬೆಳಸಿದಂತೆ ಸಸಿಗಳನ್ನು ಬೆಳೆಸಬೇಕಿದೆ. ಇಂದಿನ ತಾಪಮಾನ, ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಮೈಸೂರು ನಗರದ ಹಸಿರೀಕರಣ ಆಗಬೇಕಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ'' ಎಂದು ತಿಳಿಸಿದರು.
ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್ ಮಾತನಾಡಿ, ''ಕಳೆದ ಹತ್ತು ವರ್ಷಗಳಿಂದ ಉಚಿತವಾಗಿ ಸಸಿ ನೀಡುವ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಒಂದು ಮರವನ್ನು ಪೋಷಿಸಿದರೇ ಒಂದು ಕುಟುಂಬವನ್ನು ಪೋಷಿಸಿದಂತೆಯೇ ಸರಿ. ಪ್ರತಿ ಮನೆಯ ಮುಂದೆ ಕಡ್ಡಾಯವಾಗಿ ಗಿಡ ನೆಡಬೇಕು ಎಂದು ಪಾಲಿಕೆ ಆದೇಶ ಹೊರಡಿಸಬೇಕಿದೆ'' ಎಂದು ಮನವಿ ಮಾಡಿದರು.
ಮಂಜು, ವಿಕ್ರಮ…, ಜೋಗಿ ಮಂಜು, ಅಜಯ್ ಶಾಸ್ತ್ರಿ, ದುರ್ಗಾಪ್ರಸಾದ್ ಇದ್ದರು.