ಆ್ಯಪ್ನಗರ

ಮಂಡಲ ಚಿತ್ತಾರ ‘ಪ್ರವೀಣ’

'ಕೆಲವನ್ನು ನೋಡಿ ಕಲಿ, ಕೆಲವನ್ನು ಮಾಡಿ ಕಲಿ' ಎನ್ನುವುದು ಹಿರಿಯರ ವಾಣಿ. ಆ ನಿಟ್ಟಿನಲ್ಲಿ ಹೆಜ್ಜೆ ಹಾಕಿದವರು ಎಸ್‌.ಎನ್‌. ಶ್ರೀಕಾಂತ ಶರ್ಮಾ. ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದವರು. ಮೈಸೂರಿನಲ್ಲಿ ಸದ್ಯ ವಾಸ.

Vijaya Karnataka 30 Dec 2017, 5:00 am

ಎಚ್‌. ಕೆ. ನಾಗೇಶ್‌

Vijaya Karnataka Web mandal chitra proficient
ಮಂಡಲ ಚಿತ್ತಾರ ‘ಪ್ರವೀಣ’

ಮೈಸೂರು:
'ಕೆಲವನ್ನು ನೋಡಿ ಕಲಿ, ಕೆಲವನ್ನು ಮಾಡಿ ಕಲಿ' ಎನ್ನುವುದು ಹಿರಿಯರ ವಾಣಿ. ಆ ನಿಟ್ಟಿನಲ್ಲಿ ಹೆಜ್ಜೆ ಹಾಕಿದವರು ಎಸ್‌.ಎನ್‌. ಶ್ರೀಕಾಂತ ಶರ್ಮಾ. ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದವರು. ಮೈಸೂರಿನಲ್ಲಿ ಸದ್ಯ ವಾಸ.

ಬಾಲ್ಯದಿಂದಲೇ ಅಧ್ಯಾತ್ಮದ ಒಲವಿದ್ದುದರಿಂದ ನಾನಾ ಪೂಜಾ ವಿಧಿವಿಧಾನಗಳಿಗೆ ಅಗತ್ಯವಾದ ಮಂಡಲ (ರಂಗೋಲಿ) ರಚನೆ, ದೇವರ ಅಲಂಕಾರವನ್ನು ಕ್ರಮೇಣ ಕರಗತ ಮಾಡಿಕೊಂಡರು. ಈ ನಡುವೆ ಬಿಎಫ್‌ಎ ಪದವಿಯನ್ನೂ ಗಳಿಸಿದರು. ಈಗ ಗಣಪತಿ ಹೋಮ, ಶ್ರೀಚಕ್ರ ಮಂಡಲ, ಸುದರ್ಶನ ಹೋಮ, ಸರ್ವೋತಭದ್ರ ಮಂಡಲ ಸೇರಿದಂತೆ ನಾನಾ ಪೂಜೆಗಳಿಗೆ ಬೇಕಾದ 100ಕ್ಕೂ ಹೆಚ್ಚು ಮಂಡಲಗಳನ್ನು ರಚಿಸುತ್ತಾರೆ. ಅದಕ್ಕೆ ಬೇಕಾದ 'ರಂಗೋಲಿ ಕಿಟ್‌' ಅನ್ನು ಅವರೇ ಸಿದ್ಧಪಡಿಸಿಕೊಂಡಿದ್ದಾರೆ.

'ರಂಗೋಲಿ ಶ್ರೀಕಾಂತ್‌' ಎಂದೇ ಹೆಸರಾಗಿರುವ ಇವರು ಎಲ್ಲ ರೀತಿಯ ದೇವರಿಗೆ ಆಕರ್ಷಕವಾಗಿ ಅಲಂಕಾರ ಮಾಡುತ್ತಾರೆ. ವಿಶೇಷವಾಗಿ ದೇವಿ ಅಲಂಕಾರಕ್ಕೆ ಬೇಕಾದ ಹಸ್ತ, ಪಾದ, ಮುಖ, ಬೇಕಾದ ವಾಹನ, ವಸ್ತ್ರ, ಪ್ರಭಾವಳಿಗಳನ್ನು ತಾವೇ ಸಿದ್ಧತೆ ಮಾಡಿಕೊಳ್ಳುತ್ತಾರೆ. ಹೆಣ್ಣು ದೇವತೆಗಳಿಗೆ ಕೋಶಾಪಡವೆ, ಕಚ್ಚೆ ಸೀರೆ, ಮಾಧ್ವ ಸಂಪ್ರದಾಯದಂತೆ ಸೀರೆ ಉಡಿಸುವುದು ಸೇರಿದಂತೆ 15 ತರಹದ ಸೀರೆ ಉಡಿಸುತ್ತಾರೆ.

ಸತ್ಯನಾರಾಯಣ, ಪೂಜೆ, ಗಣಪತಿ ಹೋಮ, ವರ ಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬ, ಆಷಾಢ ಶುಕ್ರವಾರಗಳಲ್ಲಿ ದೇಗುಲಗಳಲ್ಲಿ, ಮನೆಗಳಲ್ಲಿ ನಡೆಯುವ ವಿಶೇಷ ಪೂಜೆಗಳಲ್ಲಿ ದೇವರಿಗೆ ಹೂ, ಬೆಣ್ಣೆ, ವಿಭೂತಿ, ಗಂಧ ಸೇರಿದಂತೆ ನಾನಾ ಬಗೆಯ ಅಲಂಕಾರಗಳನ್ನು ಮಾಡಿಕೊಡುತ್ತಾರೆ. ಕರ್ನಾಟಕದ ಬಹುತೇಕ ಜಿಲ್ಲೆಗಳು ಸೇರಿದಂತೆ ಆಂಧ್ರ, ತಮಿಳುನಾಡು, ಜೈಪುರದ ಪ್ರಮುಖ ದೇಗುಲಗಳಲ್ಲಿ ನಡೆಯುವ ವಿಶೇಷ ಪೂಜೆಗಳಲ್ಲಿ ಮಂಡಲ ರಚನೆ ಹಾಗೂ ಅಲಂಕಾರ ಮಾಡಿರುವುದು ಇವರಲ್ಲಿರುವ ಕಲೆಗೆ ಸಾಕ್ಷಿಯಾಗಿದೆ.

ದೂರದೇಶಕ್ಕೂ ಪಯಣ: ಸಪ್ತಸಾಗರಗಳನ್ನೂ ದಾಟಿ ಶ್ರೀಲಂಕಾ, ಮಲೇಷಿಯಾ ಸೇರಿದಂತೆ ನಾಲ್ಕೈದು ದೇಶಗಳಿಗೂ ದೇವರಿಗೆ ಅಲಂಕಾರ ಮಾಡಲಿಕ್ಕಾಗಿಯೇ ಹೋಗಿ ಬಂದಿರುವ ಶ್ರೀಕಾಂತ್‌, ಶ್ರೀರಂಗಪಟ್ಟಣದ ಭಾನುಪ್ರಕಾಶ ಶರ್ಮಾ ಅವರ ಮಾರ್ಗದರ್ಶನದಲ್ಲಿ 6 ಬಾರಿ ಮಾನಸ ಸರೋವರ ಯಾತ್ರೆಯನ್ನು ಮಾಡಿದ್ದು, ಜತೆಗೆ ಬಂದ ಆಸ್ತಿಕರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಇಷ್ಟಕ್ಕೇ ನಿಲ್ಲದ ಇವರ ಆಧ್ಯಾತ್ಮಿಕ ಕಾರ್ಯ ಯುಎಸ್‌ಎನ ಫ್ಲೊರಿಡಾದಲ್ಲಿರುವ ಸಾಯಿಬಾಬಾ ಮಂದಿರ, ಕೆನಡಾದಲ್ಲಿರುವ ವೆಂಕಟರಮಣ ಸ್ವಾಮಿಗೆ ದೇಗುಲಕ್ಕೆ ಬೇಕಾದ ಪರಿಕರಗಳನ್ನು ಮೈಸೂರಿನಿಂದ ಕಳುಹಿಸಿಕೊಟ್ಟಿದ್ದಾರೆ.

ಬೊಂಬೆಗಳ ಅಲಂಕಾರ, ಅದರ ನಿರ್ವಹಣೆ ಬಗ್ಗೆಯೂ ಆಸಕ್ತಿ ಬೆಳೆಸಿಕೊಂಡಿರುವ ಇವರು ಮೈಸೂರಿನಲ್ಲಿರುವ ಆರ್‌.ಜಿ.ಸಿಂಗ್‌ ಅವರ ಬೊಂಬೆಮನೆಯಲ್ಲಿ 10 ವರ್ಷಗಳ ಅನುಭವ ಪಡೆದು, ಪ್ರಸ್ತುತ ಈ ಬಾರಿ ಮೈಸೂರಿನಲ್ಲಿ ನಡೆಯತ್ತಿರುವ ಮಾಗಿ ಉತ್ಸವದಲ್ಲಿ ಅರಮನೆಯಲ್ಲಿ ಇಟ್ಟಿರುವ ಬೊಂಬೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಅಲ್ಲದೇ, ಮಂಗಳೂರಿನಲ್ಲಿರುವ 'ನಮ್ಮವರು' ಸಂಘಕ್ಕೆ ಪ್ರತಿ ವರ್ಷ ಒಂದೊಂದು ಧ್ಯೇಯ, ಗುರಿ ಇಟ್ಟುಕೊಂಡು ಬೊಂಬೆ ಕೂಡಿಸುವ ಕಾಯಕ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಡಿ. 30 ಮತ್ತು 31 ರಂದು ನಡೆಯಲಿರುವ ಶ್ರೀರಾಮ ತಾರಕ ಯಜ್ಞದಲ್ಲಿ ಶ್ರೀರಾಮ-ಸೀತೆ-ಲಕ್ಷ್ಮಣ-ಹನುಮಂತರಿಗೆ ವಿಶೇಷ ಅಲಂಕಾರ ಮತ್ತು ವೇದಿಕೆ ಅಲಂಕಾರವನ್ನೂ ಮಾಡಲಿದ್ದಾರೆ.

ನಮ್ಮ ಸಂಸ್ಕೃತಿಯನ್ನು ವಿದೇಶಿಗರು ಮೆಚ್ಚಿ , ಕಲಿಯುವ ಪ್ರಯತ್ನ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಸಂಸ್ಕೃತಿ ಉಳಿಯಲಿ ಎಂಬ ಉದ್ದೇಶದೊಂದಿಗೆ ಆಸಕ್ತಿಯಿಂದ ಬಂದವರಿಗೆ ತರಬೇತಿ ನೀಡುತ್ತೇನೆ. ದೇವರಿಗೆ ಭಕ್ತಿಯಿಂದ ಮಾಡುವ ಎಲ್ಲ ಕಾರ್ಯವೂ ಶ್ರೇಷ್ಠವೇ. ಸಾವಿರಾರು ಮಂದಿ ದೇವರನ್ನು ಕಣ್ತುಂಬಿಕೊಳ್ಳುವುದು ಸ್ವಾಮಿಯ ಅಲಂಕಾರದಿಂದಲೇ. ನಾವು ಎಷ್ಟು ನಿಷ್ಠೆ ಮತ್ತು ಭಕ್ತಿಯಿಂದ ಅವನಿಗೆ ಅಲಂಕಾರ ಮಾಡುತ್ತೇವೋ ಅಷ್ಟೇ ಪ್ರೀತಿಯಿಂದ ಅವನು ಭಕ್ತರಿಗೆ ಹರಸುತ್ತಾನೆ .

- ಎಸ್‌.ಎನ್‌.ಶ್ರೀಕಾಂತ್‌, ಮೈಸೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ