ಆ್ಯಪ್ನಗರ

ಬೀದಿ ನಾಯಿ ಕಚ್ಚಿ ಹಸುಗೂಸು ಗಂಭೀರ ಗಾಯ

ಮಲಗಿದ್ದ ಐದು ತಿಂಗಳ ಹಸುಗೂಸಿಗೆ ಬೀದಿ ನಾಯಿ ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ಪಟ್ಟಣದಲ್ಲಿ ಶನಿವಾದ ಸಂಜೆ ನಡೆದಿದ್ದು, ಈ ಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಿಸಿದೆ.

Vijaya Karnataka 12 Mar 2018, 5:00 am

ಶಿರಾಳಕೊಪ್ಪ (ಶಿಕಾರಿಪುರ): ಮಲಗಿದ್ದ ಐದು ತಿಂಗಳ ಹಸುಗೂಸಿಗೆ ಬೀದಿ ನಾಯಿ ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ಪಟ್ಟಣದಲ್ಲಿ ಶನಿವಾದ ಸಂಜೆ ನಡೆದಿದ್ದು, ಈ ಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಿಸಿದೆ.

ಪಟ್ಟಣದ ಮಿಡ್ಲಸ್ಕೂಲ್‌ ಹಿಂಭಾಗದ ಕೇರಿಯಲ್ಲಿ ವಾಸವಾಗಿರುವ ಲಕ್ಷ್ಮಣ್‌ ಕಲಾಲ್‌, ಪೂಜಾ ದಂಪತಿಯ ಹೆಣ್ಣುಮಗು ಬೀದಿ ನಾಯಿ ದಾಳಿಯಿಂದ ಮುಖ, ಕಿವಿ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗೊಂಡಿದೆ. ನಾಯಿ ದಾಳಿ ಮಾಡಿದ ಸಮಯದಲ್ಲಿ ಮಗುವಿನ ತಾಯಿ ಹಿತ್ತಲಿನಲ್ಲಿ ಬಟ್ಟೆ ತೊಳೆಯುದ್ದರು. ಅವಿಭಕ್ತ ಕುಟುಂಬವಾದ ಇವರ ಮನೆಯ ಉಳಿದ ಇಬ್ಬರು ಮಹಿಳೆಯರು ಕುಡಿಯುವ ನೀರು ತರಲೆಂದು ಪಕ್ಕದ ಬೀದಿಗೆ ತೆರಳಿದ್ದರು. ಮನೆಯಲ್ಲಿ ಏಳೆಂಟು ಮಕ್ಕಳಿದ್ದರೂ ಅವರೆಲ್ಲ ರಜಾ ದಿನವಾದ್ದರಿಂದ ಕುಟುಂಬದ ಹಿರಿಯರ ಜತೆ ಪೇಟೆಗೆ ಹೋಗಿದ್ದರು. ಮುಂದಿನ ಗೇಟು ಮತ್ತು ಮುಂಬಾಗಿಲು ತೆರೆದಿದ್ದರಿಂದ ನಾಯಿ ಒಳಬಂದು ದಾಳಿ ಮಾಡಲು ಸಾಧ್ಯವಾಗಿದೆ.

ದಿಟ್ಟ ಬಾಲಕಿ :

ಮನೆಯಲ್ಲಿದ್ದ ಏಳು ವರ್ಷದ ಬಾಲಕಿ ಅರ್ಪಿತಾ, ತನ್ನ ಚಿಕ್ಕಮ್ಮನ ಮಗುವಿಗೆ ನಾಯಿ ಕಚ್ಚುತಿರುವುದನ್ನು ನೋಡುತ್ತಿದ್ದಂತೇ ಅದನ್ನು ಹೆದರಿಸಿ ಓಡಿಸಿದ್ದಾಳೆ. ತಕ್ಷ ಣವೇ ಮಗುವಿನ ತಾಯಿಯನ್ನು ಕರೆತಂದು ನೋಡುವಷ್ಟರಲ್ಲಿ ಕಿವಿ, ಕಣ್ಣು ರೆಪ್ಪೆ, ತುಟಿ, ಕುತ್ತಿಗೆಯ ಭಾಗ ತೀವ್ರಗಾಯವಾಗಿರುವುದು ಗೊತ್ತಾಗಿದೆ. ಕೂಡಲೇ ಪಟ್ಟಣದ ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದಾರೆ.

ಮಗುವಿನ ತಂದೆ ಲಕ್ಷ ್ಮಣ ಕಲಾಲ್‌ 'ಪತ್ರಿಕೆ' ಜತೆ ಮಾತನಾಡಿ, ಮಗುವಿಗೆ ಆದ ಪರಸ್ಥಿತಿ ನೆನೆದರೆ ದಿಕ್ಕೇ ತೋಚುತ್ತಿಲ್ಲ. ಮಗುವಿಗೆ ಚಿಕಿತ್ಸೆಗೆ ಲಕ್ಷ ಗಟ್ಟಲೆ ಹಣ ಖರ್ಚಾಗುತ್ತಿದೆ. ಯಾರಾದರೂ ನೆರವಿಗೆ ಬರುತ್ತಾರಾ ಎಂದು ಕಾಯುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ಕೂಡಲೇ ಕ್ರಮಕ್ಕೆ ಆಗ್ರಹ:

ಶಿರಾಳಕೊಪ್ಪ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಇತೀಚೆಗೆ ನಾಯಿಗಳ ದಾಳಿ ಹೆಚ್ಚಾಗಿವೆ. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನವರಿಯಲ್ಲಿ 36, ಪೆಬ್ರವರಿಯಲ್ಲಿ 44, ಮಾರ್ಚ್‌ ತಿಂಗಳಲ್ಲಿ 15 ಪ್ರಕರಣಗಳು ದಾಖಲಾಗಿವೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಮೋಹನ್‌ ತಿಳಿಸಿದರು. ಅದರಲ್ಲೂ ಮಕ್ಕಳು ನಾಯಿ ಕಡಿತಕ್ಕೆ ಒಳಗಾಗುವುದು ಜನತೆಯಲ್ಲಿ ಭಯದ ವಾತವರಣ ಸೃಷ್ಟಿಸಿದೆ. ಸಂಬಂಧಿಸಿದವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಲಾಲ್‌ ಅವರ ಮನೆಯ ಸಮೀಪದಲ್ಲೆ ಮೀನು ಮಾಂಸ ಮಾರುಕಟ್ಟೆ ಇದೆ. ಅದರ ತಾಜ್ಯ ತಿನ್ನುವ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಪಟ್ಟಣ ಪಂಚಾಯಿತಿಯವರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷ ನಯಾಜ್‌ ಅಹಮದ್‌ ಆರೋಪಿಸಿದರು.

ಹಗಲು ಹೊತ್ತಿನಲ್ಲೆ ತಿರುಗಾಡುವುದಕ್ಕೆ ಭಯವಾಗುತ್ತದೆ. ನಾಯಿ ಸಾಕುವವರು ಬೀದಿಯಲ್ಲಿ ಬಿಡದೆ ತಮ್ಮ ಆವರಣದಲ್ಲೇ ಕಟ್ಟಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಿ ವಾಸುದೇವ ಕಲಪೂರ್‌ ಅವಲತ್ತುಕೊಂಡರು.

-------

ಪಟ್ಟಣದಲ್ಲಿ ಒಂದು ವರ್ಷದ ಹಿಂದೆ ನಾಯಿಗಳನ್ನು ಹಿಡಿಸಿದ್ದೇವೆ. ಮತ್ತೆ ಬೀದಿ ನಾಯಿಗಳ ಹಾವಳಿ ಕುರಿತು ದೂರುಗಳು ಬಂದಿವೆ. ಇದಕ್ಕಾಗಿ ಕೇರಳ ಮೂಲದ ನಾಯಿ ಹಿಡಿಯುವವರನ್ನು ಸಂಪರ್ಕಿಸಿದ್ದೇವೆ. ಈ ವಾರ ಬರುವುದಾಗಿ ತಿಳಿಸಿದ್ದಾರೆ. ಅಧ್ಯಕ್ಷ ರ ಆದೇಶ ಪಡೆದು ಶೀಘ್ರವೇ ನಾಯಿಗಳನ್ನು ಹಿಡಿಸಲಾಗುವುದು.

- ಎ.ಸುರೇಶ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಶಿರಾಳಕೊಪ್ಪ

------

ಮಗುವಿಗೆ ನಾಯಿಯ ಹಲ್ಲುಗಳು ತೀವ್ರವಾಗಿ ನಾಟಿದ್ದು, ನಂಜಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಜರಿ ಸಹ ಮಾಡಲಾಗುವುದು. ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಸಂಪೂರ್ಣ ಚೇತರಿಸಿಕೊಳ್ಳಲು ಕನಿಷ್ಟ ಒಂದರಿಂದ ಎರಡು ವಾರ ಬೇಕಾಗಬಹುದು.

-ಡಾ.ಎಚ್‌.ಎಸ್‌.ಸತೀಶ್‌, ಮಕ್ಕಳ ತಜ್ಞ, ಸರ್ಜಿ ಆಸ್ಪತ್ರೆ, ಶಿವಮೊಗ್ಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ