ದೇವರಹಿಪ್ಪರಗಿ: ರಾಜ್ಯ ಕಾಂಗ್ರೆಸ್ ಸರಕಾರದ ಸಚಿವರು ಜಿಲ್ಲೆಗೆ ಆಗಮಿಸಿದರೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಪಕ್ಷದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಬಿರಾದಾರ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರುಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಕುರಿತು ನ.28ರಂದು ದೇವರ ಹಿಪ್ಪರಗಿಯ ಕಲ್ಮೇಶ್ವರ ಮಂದಿರದಲ್ಲಿ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದರು. ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸುವ ವಿಷಯ ಮೋದಿ ಅವರ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಸಲುವಾಗಿ ಜಿಲ್ಲೆಯ ವಿಧಾನಸಭೆ ಮತಕ್ಷೇತ್ರಗಳಲ್ಲಿ ತಲಾ ಒಂದರಂತೆ ಕುಗ್ರಾಮಗಳನ್ನು ಆಯ್ಕೆಮಾಡಿಕೊಂಡು ತಿಂಗಳವರೆಗೆ ಸ್ವಚ್ಛತೆ ಕಾರ್ಯ ಕೈಗೊಳ್ಳುವುದು, ಈ ಬಾರಿ 75ಲಕ್ಷ ಸದಸ್ಯತ್ವ ಗುರಿ ಹೊಂದಿದ್ದು ಅದರಲ್ಲಿ ಅರ್ಧದಷ್ಟು ಸದಸ್ಯತ್ವವನ್ನು ಯುವ ಮೋರ್ಚಾದಿಂದ ಮಾಡಲು ಪಣತೊಡಲಾಗಿದೆ. ಈ ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿಲ್ಲ. ಆರು ತಿಂಗಳಲ್ಲಿ 476 ಯುವತಿಯರ ಮೇಲೆ ಅತ್ಯಾಚಾರ ನಡೆದಿವೆ. ಮತ್ತೆ ಮುಂದುವರಿಯುತ್ತಲೂ ಇವೆ. ಗೃಹ ಸಚಿವರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಗೃಹ ಸಚಿವ ಕೆ.ಜೆ. ಜಾರ್ಜ್ ಹಾಗೂ ಕಳಂಕ ಹೊತ್ತುಕೊಂಡಿರುವ ಡಿ.ಕೆ. ಶಿವಕುಮಾರ, ದಿನೇಶ್ ಗುಂಡೂರಾವ್, ಖಮರುಲ್ ಇಸ್ಲಾಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅವರು ಜಿಲ್ಲೆಗೆ ಆಗಮಿಸಿದ ವೇಳೆ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ನಡೆಸಲಾಗುವುದು ಎಂದರು. ಜಿಲ್ಲಾ ಉಪಾಧ್ಯಕ್ಷ ಚಿದಾನಂದ ಔರಂಗಬಾದ, ಪ್ರಧಾನಕಾರ್ಯದರ್ಶಿ ಬಸವರಾಜ ಬೈಚಬಾಳ, ರಾಜ್ಯ ಕಾರ್ಯಕಾರಿಣಿ ಸದಸ್ಯ ಜಗದೀಶ ಮುಚ್ಚಂಡಿ, ಸಂತೋಷ ವಾಘಮೋರೆ, ಅರ್ಜುನ ರಾಠೋಡ, ಮಂಡಲ ಅಧ್ಯಕ್ಷ ಶರಣು ಕಕ್ಕಸಗೇರಿ ಇದ್ದರು.
ಕಳಂಕಿತ ಸಚಿವರ ವಿರುದ್ಧ ಪ್ರತಿಭಟನೆ: ಬಿರಾದಾರ
Vijaya Karnataka Web 28 Nov 2014, 10:26 pm
Subscribe