ವಿಜಯಪುರ: ಬಡಾವಣೆಗಳಿಗೆ ನೀರು ಸರಬರಾಜು ಮಾಡಿದ ವೇಳೆ ವೃಥಾ ರಸ್ತೆ ಮೇಲೆ ನೀರು ಹರಿ ಬಿಡುವ ಹಾಗೂ ವಾಹನ ತೊಳೆಯುವ ನಾಗರಿಕರ ನಳ ಕಡಿತಗೊಳಿಸಿ ದಂಡ ವಿಧಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ನಗರದ ಬಹುತೇಕ ನಾಗರಿಕರು ಮನೆ ನಳಕ್ಕೆ ತೋಟಿ ಹಾಗೂ ಬಾಲವಾಲ್ವ್ ಅಳವಡಿಸಿಕೊಂಡಿರುವುದಿಲ್ಲ. ಹಾಗಾಗಿ ನೀರು ಬಿಟ್ಟ ವೇಳೆ ವಿನಾಕಾರಣ ನೀರು ರಸ್ತೆ ಮೇಲೆ ಹರಿದು ಹೋಗುತ್ತಿದೆ. ಅಲ್ಲದೇ ವಾಹನ ತೊಳೆಯುವ ಮೂಲಕ ಅಮೂಲ್ಯ ಜೀವಜಲ ವ್ಯರ್ಥ ಮಾಡುತ್ತಿರುವುದು ಜಲಮಂಡಳಿ ಗಮನಕ್ಕೆ ಬಂದಿದೆ. ಮೊದಲೇ ಬೇಸಿಗೆ ದಿನಗಳಿವು. ನೀರು ವ್ಯರ್ಥ ಮಾಡಿದರೆ ಮುಂಬರುವ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ ರಸ್ತೆ ಮೇಲೆ ವೃಥಾ ಹರಿ ಬಿಡದೇ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಆದಾಗ್ಯೂ ವ್ಯರ್ಥ ನೀರು ಹರಿಸುವುದು ಹಾಗೂ ವಾಹನ ತೊಳೆಯುವುದು ಕಂಡು ಬಂದಲ್ಲಿ ಅಂಥವರ ನಳ ಕಡಿತಗೊಳಿಸಿ, ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ನೀರು ವ್ಯರ್ಥ ಪೋಲು ಮಾಡಿದರೆ ನಳ ಕಟ್, ದಂಡ
ವಿಕ ಸುದ್ದಿಲೋಕ 18 Mar 2016, 8:46 pm
Subscribe