ಮನೋಜ ವಿ.ಕಟಗೇರಿ, ಚಡಚಣ(ವಿಜಯಪುರ): ವರ್ಷದ ಹಿಂದೆಯೇ ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದ ಅರಣ್ಯ ಇಲಾಖೆ, 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ' ನೀಡಲು ಮುಂದಾಗಿದ್ದರಿಂದ ತರಬೇತಿಯಲ್ಲಿ ಇರಬೇಕಾದ 29 ಅಭ್ಯರ್ಥಿಗಳು ಇಲಾಖೆಯನ್ನು ಶಪಿಸುತ್ತ ದಿನಗಳೆಯುತ್ತಿದ್ದಾರೆ.
2016ರ ಮಾಚ್ 23ರಂದು ರಾಜ್ಯದ ವಿವಿಧ ಅರಣ್ಯ ವಿಭಾಗಗಳಿಗೆ ಒಟ್ಟು 555 ಹುದ್ದೆಗಳಿಗೆ ಪಿಯುಸಿ ಅರ್ಹತೆ ಮೇಲೆ ಆನ್ಲೈನ್ ಅರ್ಜಿ ಆಹ್ವಾನಿಸಿ, ಒಟ್ಟು 77,180 ಅರ್ಜಿಗಳನ್ನು ಇಲಾಖೆ ಸ್ವೀಕರಿಸಿತ್ತು. ದೈಹಿಕ ತಾಳ್ವಿಕ ಪರೀಕ್ಷೆ, ದೈಹಿಕ ಕಾರ್ಯಕ್ಷ ಮತೆ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳಲ್ಲಿ ಅರ್ಹರಾದ ಅಭ್ಯರ್ಥಿಗಳ 1:20(ಹುದ್ದೆ-ಅಭ್ಯರ್ಥಿ) ಪಟ್ಟಿಯನ್ನು ಮೆರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ತಯಾರಿಸಿ 2016 ಅಕ್ಟೋಬರ್ 7ರಂದು ಪ್ರಕಟಿಸಿದೆ. ಇದಾದ ಮೇಲೆ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಿ 2017 ಜನವರಿ 25ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಮಾಡಿದೆ. ನಂತರ ಒಟ್ಟು 416 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದೆ. ಅದರಂತೆ ಈ ಅಭ್ಯರ್ಥಿಗಳು ಕಳೆದ ಸುಮಾರು ಒಂದೂವರೆ ತಿಂಗಳಿಂದ ತರಬೇತಿ ಪಡೆಯುತ್ತಿದ್ದಾರೆ.
ತ್ರಿಶಂಕು ಸ್ಥಿತಿಯಲ್ಲಿ 29 ಅಭ್ಯರ್ಥಿಗಳು
ವಿಚಿತ್ರ ಎಂದರೆ, ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿ, ಒಂದು ಬಾರಿ ಇಲಾಖೆ ವೈದ್ಯಕೀಯ ಪರೀಕ್ಷೆಗೆ ಹಾಜರಾದರೂ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸುವ ಕಾರಣವೊಡ್ಡಿ 29 ಅಭ್ಯರ್ಥಿಗಳನ್ನು ಇಲಾಖೆ ತ್ರಿಶಂಕು ಸ್ಥಿತಿಯಲ್ಲಿ ನಿಲ್ಲಿಸಿದ್ದು!
ಬೆಳಗಾವಿಯಲ್ಲಿ ನಡೆಸಿದ ನಾನಾ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಇಲಾಖೆ 210 ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ತಿಳಿಸಿತ್ತು. ಈ ಪೈಕಿ 65 ಜನ ಗೈರು ಹಾಜರಾದರು. ಇನ್ನುಳಿದ 145 ಅಭ್ಯರ್ಥಿಗಳ ಪೈಕಿ 45 ಜನರನ್ನು ವಿವಿಧ ಕಾರಣಗಳನ್ನು ಅನರ್ಹಗೊಳಿಸಿ, ಒಟ್ಟು 100 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, 71 ಅಭ್ಯರ್ಥಿಗಳಿಗಷ್ಟೇ ನೇಮಕಾತಿ ಆದೇಶ ಪತ್ರ ನೀಡಿ ತರಬೇತಿಗೆ ಆಯ್ಕೆ ಮಾಡಿದೆ.
ಇನ್ನುಳಿದ 29 ಅಭ್ಯರ್ಥಿಗಳಿಗೂ ಒಮ್ಮೆ ವೈದ್ಯಕೀಯ ಪರೀಕ್ಷೆ ನಡೆಸಿದರೂ, 'ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿಲ್ಲದ ಕಾರಣ ಜಿಲ್ಲಾ ಚಿಕಿತ್ಸಕರು ಬಿಮ್ಸ್ ಬೋಧಕ ಆಸ್ಪತ್ರೆ ಬೆಳಗಾವಿ ಇವರ ಕೋರಿಕೆಯ ಮೇರೆಗೆ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ಆದ್ದರಿಂದ ಈ ಅಭ್ಯರ್ಥಿಗಳು 2017 ಮಾರ್ಚ್ 30 ರಂದು ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಬೆಳಗಾವಿ ಇವರ ಸಮ್ಮುಖ ಹಾಜರಾಗಿ ಮುಂದಿನ ಸೂಕ್ತ ನಿರ್ದೇಶನ ಪಡೆಯುವದು' ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಆಯ್ಕೆ ಪ್ರಾಧಿಕಾರ ಸೂಚಿಸಿದೆ.
ಈ ಸೂಚನೆಯಂತೆ 29 ಅಭ್ಯರ್ಥಿಗಳು 2017 ಮಾರ್ಚ್ 30 ರಂದು ಬೆಳಗಾವಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮತ್ತೊಮ್ಮೆ ವೈದ್ಯಕೀಯ ಅರ್ಹತೆ ಪಡೆದಿದ್ದಾರೆ. ಇದಾಗಿ ಮೂರು ತಿಂಗಳು ಕಳೆದರೂ ನೇಮಕಾತಿ ಆದೇಶ ನೀಡಿಲ್ಲ. ಇವರ ಜತೆಗೇ ಆಯ್ಕೆಯಾದ 416 ವಿದ್ಯಾರ್ಥಿಗಳು ಈಗಾಗಲೇ ಒಂದೂವರೆ ತಿಂಗಳು ತರಬೇತಿ ಮುಗಿಸಿದ್ದಾರೆ. ಒಂದೇ ಬಾರಿ ನೇಮಕ ಪ್ರಕ್ರಿಯೆ ನಡೆದರೂ ನಮಗಿಂತ ಅವರು ಮೊದಲೇ ನೌಕರಿಗೆ ಸೇರುತ್ತಾರೆ. ಸೇವೆಯಲ್ಲೂ ಸೀನಿಯರ್ ಆಗುತ್ತಾರೆ. ನಾವು ಮಾಡದ ತಪ್ಪಿಗೆ ಇಲಾಖೆ ನಮಗೆ ಶಿಕ್ಷೆ ನೀಡುತ್ತಿದೆ ಎಂದು 'ವಿಜಯ ಕರ್ನಾಟಕ'ಕ್ಕೆ ಅಳಲು ತೋಡಿಕೊಂಡರು.
----
ಬೆಳಗಾವಿ ಬಿಮ್ಸ್ನಲ್ಲಿ ಮೊದಲು ಒಟ್ಟಿಗೆ ಮೆಡಿಕಲ್ ನಡೆಯಿತು. ಆಯ್ಕೆಯಾದವರಲ್ಲಿ ನಾವು 29 ಜನ ಬಿಟ್ಟು ಉಳಿದವರೆಲ್ಲ ತರಬೇತಿ ಪಡೆಯುತ್ತಿದ್ದಾರೆ. ಆಗ ಮೆಡಿಕಲ್ ಆದರೂ ಮತ್ತೊಮ್ಮೆ ಮಾಡಿದರು. ಆದಾಗ್ಯೂ ಇನ್ನೂ ಆದೇಶ ಪ್ರತಿ ನೀಡಿಲ್ಲ. ಇಲಾಖೆಯ ದೂರವಾಣಿಗೆ ಸಂಪರ್ಕಿಸಿದರೆ ಯಾರೂ ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ತಕ್ಷ ಣ ನೇಮಕಾತಿ ಆದೇಶ ನೀಡಿ, ಈಗಾಗಲೇ ತರಬೇತಿ ಪಡೆಯುತ್ತಿರುವವರ ಜೊತೆ ನಮ್ಮನ್ನೂ ಪರಿಗಣಿಸಬೇಕು.
- ಹೆಸರು ಹೇಳಲಿಚ್ಛಿಸದ ನೇಮಕವಾದ ಅಭ್ಯರ್ಥಿಗಳು
ಆಯ್ಕೆಯಾದ ಇನ್ನೂ 29 ಅಭ್ಯರ್ಥಿಗಳಿಗೆ ಶೀಘ್ರವೇ ತರಬೇತಿಗೆ ಕರೆಯುತ್ತೇವೆ. ಈಗಾಗಲೇ ತರಬೇತಿ ಪಡೆಯುತ್ತಿರುವ 416 ಅಭ್ಯರ್ಥಿಗಳ ಸರಿಸಮ ಸೌಲಭ್ಯ, ಸೇವೆ ಇರುವಂತೆ ಇಲಾಖೆ ನೋಡಿಕೊಳ್ಳುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ.
- ಅಜಯ್ ಮಿಶ್ರಾ, ಎಪಿಸಿಸಿಎಫ್( ನೇಮಕಾತಿ) ಬೆಂಗಳೂರು