Please enable javascript.Ravichandran Ashwin,IPL 2022: 'ಫುಟ್ಬಾಲ್‌ ಆಟದಂತೆ,' ರಿಟೈರ್ಡ್ ಔಟ್‌ ನಿರ್ಧಾರದ ಬಗ್ಗೆ ಆರ್‌ ಅಶ್ವಿನ್‌ ಮಾತು! - ipl 2022: ravichandran ashwin explains his decision to retire out - Vijay Karnataka

IPL 2022: 'ಫುಟ್ಬಾಲ್‌ ಆಟದಂತೆ,' ರಿಟೈರ್ಡ್ ಔಟ್‌ ನಿರ್ಧಾರದ ಬಗ್ಗೆ ಆರ್‌ ಅಶ್ವಿನ್‌ ಮಾತು!

Authored byವಿಜೇತ್ ಕುಮಾರ್ | Vijaya Karnataka Web 11 Apr 2022, 10:49 pm
Subscribe

ಕ್ರಿಕೆಟ್‌ನಲ್ಲಿ ರಿಟೈರ್ಡ್‌ ಔಟ್‌ ನಿರ್ಧಾರ ಹೊಸದೇನಲ್ಲ. ಸಾಮಾನ್ಯವಾಗಿ ಅಭ್ಯಾಸ ಪಂದ್ಯಗಳಲ್ಲಿ ಶತಕ ಅಥವಾ ಅರ್ಧಶತಕ ಬಾರಿಸಿದ ಬಳಿಕ ಬ್ಯಾಟ್ಸ್‌ಮನ್‌ಗಳು ಮುಂದಿನ ಬ್ಯಾಟರ್‌ಗಳಿಗೆ ಆಡುವ ಅವಕಾಶ ಮಾಡಿಕೊಡಲು ರಿಟೈರ್ಡ್‌ ಔಟ್‌ ಆಗುತ್ತಾರೆ. ಆದರೆ, ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಇಂಥದ್ದೊಂದು ಉದಾಹರಣೆ ಬಹಳಾ ಕಡಿಮೆ. ಸೂಕ್ತ ಕಾರಣ ಇಲ್ಲದ ಕಾರಣ ಬ್ಯಾಟ್ಸ್‌ಮನ್‌ಗಳು ಈ ನಿರ್ಧಾರಕ್ಕೆ ಬರಲಾರರು. ಹಾಗಾಗಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಈ ಹಿಂದಿನ 14 ಆವೃತ್ತಿಗಳಲ್ಲಿ ಒಮ್ಮೆಯೂ ಕೂಡ ರಿಟೈರ್ಡ್‌ ಔಟ್‌ ಕಾಣಲು ಸಿಕ್ಕಿಲ್ಲ. ಆದರೆ, ಈ ನಿಯಮದ ಸದ್ಬಳಕೆ ಮಾಡಿ ಆರ್‌ ಅಶ್ವಿನ್‌ ಈಗ ಭಾರಿ ಸುದ್ದಿಯಲ್ಲಿದ್ದಾರೆ.

ಹೈಲೈಟ್ಸ್‌:

  • ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ.
  • ತಮ್ಮ ರಿಟೈರ್ಡ್‌ ಔಟ್‌ ನಿರ್ಧಾರದ ಬಗ್ಗೆ ಕೊನೆಗೂ ಮೌನ ಮುರಿದ ಆರ್‌ ಅಶ್ವಿನ್‌.
  • ಲಖನೌ ವಿರುದ್ಧದ ಪಂದ್ಯದಲ್ಲಿ ಈ ನಿಯಮದ ಸದ್ಬಳಕೆ ಮಾಡಿದ್ದ ಆಫ್‌ ಸ್ಪಿನ್ನರ್‌.
Ravichandran Ashwin on Ritired Out 2022
ರಾಯಲ್ಸ್‌ ಪರ 23 ಎಸೆತಗಳಲ್ಲಿ 28 ರನ್‌ ಬಾರಿಸಿದ್ದ ಆರ್‌ ಅಶ್ವಿನ್‌ (ಚಿತ್ರ: ಬಿಸಿಸಿಐ/ಐಪಿಎಲ್).
ಬೆಂಗಳೂರು: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಜಿದ್ದಾಜಿದ್ದಿನ ಪಂದ್ಯದಲ್ಲಿ ರಿಟೈರ್ಡ್‌ ಔಟ್‌ ನಿಯಮವನ್ನು ಸದ್ಬಳಕೆ ಮಾಡಿಕೊಂಡ ರಾಜಸ್ಥಾನ್‌ ರಾಯಲ್ಸ್‌ ತಂಡ ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಈಗ ಭಾರಿ ಸುದ್ದಿಯಲ್ಲಿದ್ದಾರೆ.
ಈ ಬಗ್ಗೆ ಕೊನೆಗೂ ಪ್ರತಿಕ್ರಿಯೆ ನೀಡಿರುವ ಆರ್‌ ಅಶ್ವಿನ್‌, ಅಚ್ಚರಿಯ ನಿರ್ಧಾರದ ಬಗ್ಗೆ ವಿವರಣೆ ನೀಡಿದ್ದಾರೆ. ಕ್ರಿಕ್‌ಬಝ್‌ ಜೊತೆಗೆ ಮಾತನಾಡಿರುವ ತಮಿಳುನಾಡು ಮೂಲದ ಕ್ರಿಕೆಟಿಗ, ಇದಕ್ಕೆ ಫುಟ್ಬಾಲ್‌ ಆಟದ ಉದಾಹರಣೆಯನ್ನೂ ಕೊಟ್ಟಿದ್ದಾರೆ. "ಆ ಕ್ಷಣದಲ್ಲಿ ಬಂದ ಆಲೋಚನೆ ಅದು. ಇದೊಂದು ತಂಡದ ಆಟ ಎಂಬುದನ್ನು ನಾವು ಸಾಮಾನ್ಯವಾಗಿ ಮರೆತುಬಿಡುತ್ತೇವೆ. ಪಂದ್ಯವನ್ನು ಗಮನದಲ್ಲಿ ಇಟ್ಟು ಮಾತನಾಡುವುದಾದರೆ ಆ ನಿರ್ಧಾರ ಅತ್ಯಂತ ಮಹತ್ವದ ಸಂಗತಿ ಆಗುತ್ತದೆ," ಎಂದಿದ್ದಾರೆ.

"ಟಿ20 ಕ್ರಿಕೆಟ್‌ನಲ್ಲಿ ಒಂದು ತಂಡವಾಗಿ ಆಡಿದರಷ್ಟೇ ಯಶಸ್ಸು ಸಾಧ್ಯ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಇದು ಬಹುತೇಕ ಒಂದು ಫುಟ್ಬಾಲ್‌ ಪಂದ್ಯದಂತೆ. ಗೋಲ್‌ ಸ್ಕೋರ್‌ ಮಾಡುವವರು ಓಪನಿಂಗ್‌ ಬ್ಯಾಟ್ಸ್‌ಮನ್‌ ಅಥವಾ ವಿಕೆಟ್‌ ಟೇಕರ್‌ಗಳಂತೆ. ಆದರೆ, ನಿಮ್ಮ ವಿಕೆಟ್‌ಕೀಪರ್‌ ಮತ್ತು ಡಿಫೆಂಡರ್ಸ್‌ ರಕ್ಷಣೆ ಸಲುವಾಗಿ ಸರ್ವವನ್ನೂ ಪಣಕ್ಕಿಟ್ಟು ಆಡಿದರಷ್ಟೇ ಸ್ಟ್ರೈಕರ್‌ಗಳ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ," ಎಂದು ಅಶ್ವಿನ್‌ ವಿವರಿಸಿದ್ದಾರೆ.

'ಮಂಕಡ್‌ನಿಂದ ರಿಟೈರ್ಡ್‌ ಔಟ್‌': ಆರ್‌ ಅಶ್ವಿನ್‌ ನಡೆಗೆ ಮಿಶ್ರ ಪ್ರತಿಕ್ರಿಯೆ!

ಅಶ್ವಿನ್‌ ನಿರ್ಧಾರದ ಬಗ್ಗೆ ಕೋಚ್‌ ಸಂಗಕ್ಕಾರ ಮಾತು
"ನಾವು ರಿಟೈರ್ಡ್‌ ಔಟ್‌ ಬಗ್ಗೆ ಆಗಷ್ಟೇ ಚರ್ಚೆ ಮಾಡಿದ್ದೆವು. ಬಳಿಕ ಅಶ್ವಿನ್‌ ಅಂಗಣದಿಂದಲೇ ಈ ಬಗ್ಗೆ ಕೇಳಿದರು. 10ನೇ ಓವರ್‌ನಲ್ಲಿ ಬ್ಯಾಟ್‌ ಮಾಡಲು ಹೋದ ಅಶ್ವಿನ್‌ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದರು. ನಂತರ ರಿಟೈರ್ಡ್‌ ಔಟ್‌ ನಿರ್ಧಾರದ ಮೂಲಕ ತಮ್ಮ ವಿಕೆಟ್‌ ತ್ಯಾಗ ಮಾಡಿದರು. ಇದು ಮನಮೋಹಕ ನಿರ್ಧಾರ. ಬಳಿಕ ಅಂಗಣಕ್ಕೆ ಇಳಿದು ಅಷ್ಟೇ ಉತ್ತಮ ಬೌಲಿಂಗ್‌ ಪ್ರದರ್ಶನ ಕೂಡ ನೀಡಿದರು," ಎಂದು ರಾಯಲ್ಸ್‌ ತಂಡದ ಮುಖ್ಯ ಕೋಚ್‌ ಕುಮಾರ ಸಂಗಕ್ಕಾರ ಹೇಳಿದ್ದಾರೆ.

ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡ ಅಶ್ವಿನ್‌
ಐಪಿಎಲ್‌ 2022 ಟೂರ್ನಿಯ 20ನೇ ಲೀಗ್‌ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ ತಂಡ ಕೇವಲ 3 ರನ್‌ಗಳ ಅಂತರದಲ್ಲಿ ರೋಚಕ ಜಯ ತನ್ನದಾಗಿಸಿಕೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ್‌ ತಂಡದ ಪರ ಬ್ಯಾಟ್‌ ಮಾಡುವಾಗ ಅಶ್ವಿನ್‌ ತೆಗೆದುಕೊಂಡ ರಿಟೈರ್ಡ್‌ ಔಟ್‌ ನಿರ್ಧಾರ ಫಲಿತಾಂಶದ ಮೇಲೆ ಅತ್ಯಂತ ಮಹತ್ವದ ಪಾತ್ರ ವಹಿಸಿತ್ತು.

ಆರ್‌ ಅಶ್ವಿನ್ ರಿಟೈರ್ಡ್ ಔಟ್‌ ಆಗಿದ್ದೇಕೆ? ಇದಕ್ಕೆ ಉತ್ತರ ಕೊಟ್ಟ ಸಂಜು ಸ್ಯಾಮ್ಸನ್‌!

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ 67ಕ್ಕೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿ ಕ್ರೀಸ್‌ನಲ್ಲಿದ್ದ ಶಿಮ್ರಾನ್‌ ಹೆಟ್ಮಾಯೆರ್‌ಗೆ ಸಾಥ್‌ ಕೊಟ್ಟು ಚೇತರಿಕೆ ತಂದುಕೊಡುವ ಜವಾಬ್ದಾರಿ ಹೊತ್ತು 6ನೇ ಕ್ರಮಾಂಕದಲ್ಲಿ ಕೀಸ್‌ಗೆ ಬಂದಿದ್ದ ಆರ್ ಅಶ್ವಿನ್‌, 23 ಎಸೆತಗಳಲ್ಲಿ 2 ಸಿಕ್ಸರ್‌ಗಳನ್ನು ಒಳಗೊಂಡ 28 ರನ್‌ ಸಿಡಿಸಿದ್ದರು.

ಬಳಿಕ 19ನೇ ಓವರ್‌ನಲ್ಲಿ ರಿಟೈರ್ಡ್‌ ಔಟ್‌ ಆಗುವುದಾಗಿ ಅಂಪೈರ್‌ಗೆ ತಿಳಿಸಿ ಅಂಗಣದಿಂದ ಕೂಡಲೇ ಹೊರನಡೆದು, ಸ್ಫೋಟಕ ಬ್ಯಾಟಿಂಗ್‌ ನಡೆಸಬಲ್ಲ ರಿಯಾನ್‌ ಪರಾಗ್‌ ಕ್ರೀಸ್‌ಗೆ ಬರುವಂತೆ ಮಾಡಿದರು. ಅಶ್ವಿನ್‌ ಜಾಗದಲ್ಲಿ ಬ್ಯಾಟ್‌ ಮಾಡಲು ಬಂದ ಪರಾಗ್‌ 4 ಎಸೆತಗಳ:ಲ್ಲಿ 1 ಸಿಕ್ಸರ್‌ ಒಳಗೊಂಡ 8 ರನ್‌ ಸಿಡಿಸಿ 20ನೇ ಓವರ್‌ನ 5ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸುವ ಪ್ರಯತ್ನದಲ್ಲಿ ಔಟ್‌ ಆದರು. ಕೊನೇ ಓವರ್‌ನಲ್ಲಿ ಪರಾಗ್‌ ಸಿಡಿಸಿದ್ದ ಸಿಕ್ಸರ್‌ ರಾಯಲ್ಸ್‌ ಗೆಲುವಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿತು. ಏಕೆಂದರೆ ಕೊನೇ ಎಸೆತದವರೆಗೂ ಹೋರಾಡಿದ ಲಖನೌ ತಂಡ ಕೇವಲ 3 ರನ್‌ಗಳಿಂದ ಮಾತ್ರವೇ ಸೋಲುಂಡಿತ್ತು.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ