ಆ್ಯಪ್ನಗರ

'ಬೌಲರ್‌ಗಳ ಮೇಲೆ ಸಂಪೂರ್ಣ ವಿಶ್ವಾಸವಿತ್ತು' : ಸೋಲಿಗೆ ಸಂಜು ಸ್ಯಾಮ್ಸನ್‌ ಬೇಸರ!

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ಕೊನೆಯ ಓವರ್‌ವರೆಗೂ ತೀವ್ರ ಹೋರಾಟ ನಡೆಸಿದ ಹೊರತಾಗಿಯೂ 4 ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದ ರಾಜಸ್ಥಾನ್‌ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ ಬೇಸರ ವ್ಯಕ್ತಪಡಿಸಿದ್ದಾರೆ. ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದ ರಾಜಸ್ಥಾನ್‌ ರಾಯಲ್ಸ್ ತಂಡ ಆರ್‌ಸಿಬಿ ವಿರುದ್ಧ ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಸೋಲು ಅನುಭವಿಸಿತು. ಸೋಲಿನ ಹೊರತಾಗಿಯೂ ರಾಜಸ್ಥಾನ್‌ ಅಗ್ರ ಸ್ಥಾನದಲ್ಲಿ ಉಳಿದಿದೆ.

Authored byರಮೇಶ ಕೋಟೆ | Vijaya Karnataka Web 6 Apr 2022, 9:00 am

ಹೈಲೈಟ್ಸ್‌:

  • ಪ್ರಸ್ತುತ ನಡೆಯುತ್ತಿರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿ.
  • ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ಗೆ 4 ವಿಕೆಟ್‌ ಸೋಲು.
  • ಆರ್‌ಸಿಬಿ ವಿರುದ್ಧ ರಾಜಸ್ಥಾನ್‌ ರಾಯಲ್ಸ್ ಸೋಲಿಗೆ ಸಂಜು ಸ್ಯಾಮ್ಸನ್‌ ಬೇಸರ ವ್ಯಕ್ತಪಡಿಸಿದ್ದಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web RCB vs RR
ಆರ್‌ಸಿಬಿ vs ಆರ್‌ (ಚಿತ್ರ: ಐಪಿಎಲ್‌)
ಮುಂಬೈ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಸೋಲು ಅನುಭವಿಸಿದ್ದಕ್ಕೆ ರಾಜಸ್ಥಾನ್‌ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್‌ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್ಸ್ ನೀಡಿದ್ದ 170 ರನ್‌ ಗುರಿ ಹಿಂಬಾಲಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಉತ್ತಮ ಆರಂಭ ಪಡೆದ ಹೊರತಾಗಿಯೂ ಮಧ್ಯಮ ಓವರ್‌ಗಳಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ ಶಹಬಾಝ್‌ ಅಹ್ಮದ್‌(45) ಹಾಗೂ ದಿನೇಶ್‌ ಕಾರ್ತಿಕ್‌(44*) ಅವರ ನಿರ್ಣಾಯಕ ಬ್ಯಾಟಿಂಗ್‌ ಸಹಾಯದಿಂದ ಆರ್‌ಸಿಬಿ 4 ವಿಕೆಟ್‌ಗಳಿಂದ ಗೆಲುವು ಖಾತ್ರಿ ಪಡೆಸಿಕೊಂಡಿತು.

ಸೋಲಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರಾಜಸ್ಥಾನ್‌ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌, "ಪಂದ್ಯದ ಸೋಲಿಗೆ ಕಾರಣವಾದ ಒಂದೇ ಒಂದು ಅಂಶವನ್ನು ನಾನು ಇಲ್ಲಿ ಉಲ್ಲೇಖಿಸುವುದಿಲ್ಲ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ನಾವು ನಿಧಾನಗತಿಯ ವಿಕೆಟಾದರೂ ಉತ್ತಮ ಮೊತ್ತವನ್ನು ಕಲೆ ಹಾಕಿದ್ದೆವು," ಎಂದು ಹೇಳಿದರು.

RR vs RCB: ರಾಯಲ್ಸ್‌ಗೆ ಸೋಲಿನ ಬರೆ ಎಳೆದ ರಾಯಲ್‌ ಚಾಲೆಂಜರ್ಸ್‌!

"ಜೋಸ್‌ ಬಟ್ಲರ್‌ ಹಾಗೂ ಶಿಮ್ರಾನ್‌ ಹೆಟ್ಮಾಯೆರ್‌ ಡೆತ್‌ ಓವರ್‌ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಇಬ್ಬನಿಯ ಹೊರತಾಗಿಯೂ ಪಂದ್ಯವನ್ನು ಕೊನೆಯ ಓವರ್‌ವರೆಗೂ ತೆಗೆದುಕೊಂಡ ಹೋದ ನಮ್ಮ ಪ್ರಯತ್ನ ಅದ್ಭುತವಾಗಿತ್ತು," ಎಂದು ತಿಳಿಸಿದರು.

ಇಬ್ಬನಿ ಜಾಸ್ತಿ ಇದ್ದಿದ್ದರಿಂದ ಚೆಂಡು ಬದಲಿಸುವಂತೆ ಅಂಪೈರ್‌ಗೆ ಕೇಳಿದ್ದೀರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ,"ಖಂಡಿತವಾಗಿಯೂ ಇಲ್ಲ. ನಮ್ಮ ಬೌಲರ್‌ಗಳ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ದಿನೇಶ್‌ ಕಾರ್ತಿಕ್‌ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡು ಫೀಲ್ಡಿಂಗ್‌ ನಿಲ್ಲಿಸುವುದು ಇಲ್ಲಿ ಪ್ರಮುಖ ಸಂಗತಿಯಾಗಿತ್ತು. ಈ ಸೋಲಿನಿಂದ ನಾವು ಸಾಕಷ್ಟು ಸಕಾರಾತ್ಮಕ ಸಂಗತಿಗಳನ್ನು ಪಡೆದುಕೊಂಡಿದ್ದೇವೆ ಹಾಗೂ ಸಾಕಷ್ಟು ಕಲಿತಿದ್ದೇವೆ," ಎಂದರು.

IPL 2022: ಎಲ್ಲ ಲೆಕ್ಕಾಚಾರಗಳನ್ನು ಧೂಳೀಪಟ ಮಾಡುವ ಬ್ಯಾಟ್ಸ್‌ಮನ್‌ ಹೆಸರಿಸಿದ ಮೊರ್ನೆ ಮಾರ್ಕೆಲ್‌!

ಆರ್‌ಸಿಬಿಗೆ 170 ರನ್‌ ಗುರಿ ನೀಡಿದ್ದ ಆರ್‌ಆರ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ಯಶಸ್ವಿ ಜೈಸ್ವಾಲ್‌ ಅವರ ವಿಕೆಟ್‌ ಅನ್ನು ಬಹುಬೇಗ ಕಳೆದುಕೊಂಡಿತು. ಎರಡನೇ ವಿಕೆಟ್‌ಗೆ ಜೊತೆಯಾದ ಜೋಸ್‌ ಬಟ್ಲರ್‌ ಹಾಗೂ ದೇವದತ್‌ ಪಡಿಕ್ಕಲ್‌ ಜೋಡಿ 70 ರನ್‌ ಜೊತೆಯಾಟವಾಡುವ ಮೂಲಕ ರಾಜಸ್ಥಾನ್‌ ರಾಯಲ್ಸ್‌ ಕಮ್‌ಬ್ಯಾಕ್‌ಗೆ ನೆರವಾಯಿತು.

37 ರನ್‌ ಗಳಿಸಿ ದೇವದತ್ ಪಡಿಕ್ಕಲ್‌ ವಿಕೆಟ್‌ ಒಪ್ಪಿಸಿದರೆ, ಇದರ ಬೆನ್ನಲ್ಲೆ ನಾಯಕ ಸಂಜು ಸ್ಯಾಮ್ಸನ್‌(8) ಔಟ್‌ ಆದರು. ಮೂರನೇ ವಿಕೆಟ್‌ಗೆ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಜೋಸ್‌ ಬಟ್ಲರ್‌ ಹಾಗೂ ಶಿಮ್ರಾನ್‌ ಹೆಟ್ಮಾಯೆರ್‌ ಜೋಡಿ 83 ರನ್‌ ಕಲೆ ಹಾಕಿತು. ಜೋಸ್‌ ಬಟ್ಲರ್‌ 47 ಎಸೆತಗಳಲ್ಲಿ 70 ರನ್‌ ಸಿಡಿಸಿದರೆ, ಶಿಮ್ರಾನ್‌ ಹೆಟ್ಮಾಯೆರ್ 31 ಎಸೆತಗಳಲ್ಲಿ ಅಜೇಯ 42 ರನ್‌ ಸಿಡಿಸಿದರು.

ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿರುವ ಸಮಸ್ಯೆ ತಿಳಿಸಿದ ಆಕಾಶ್‌ ಚೋಪ್ರಾ!

ಆರ್‌ಸಿಬಿಗೆ ಗೆಲುವು ತಂದುಕೊಟ್ಟ ಶಹಬಾಝ್‌-ಕಾರ್ತಿಕ್‌: ಬಳಿಕ ಗುರಿ ಹಿಂಬಾಲಿಸಿದ್ದ ಆರ್‌ಸಿಬಿ ತಂಡ ಕೂಡ 87 ರನ್‌ಗಳಿಗೆ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಆರ್‌ಸಿಬಿ ಸೋಲು ಅನುಭವಿಸುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ ಶಹಬಾಝ್ ಅಹ್ಮದ್‌ ಮತ್ತು ದಿನೇಶ್‌ ಕಾರ್ತಿಕ್ ನಿರ್ಣಾಯಕ 67 ರನ್‌ ಜೊತೆಯಾಟವಾಡುವ ಮೂಲಕ ಪಂದ್ಯದ ದಿಕ್ಕನ್ನು ಸಂಪೂರ್ಣ ಬದಲಾಯಿಸಿದರು.

ಕೇವಲ 26 ಎಸೆತಗಳಲ್ಲಿ ಶಹಬಾಝ್‌ ಅಹ್ಮದ್‌ 45 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ಬಳಿಕ, ದಿನೇಶ್‌ ಕಾರ್ತಿಕ್‌ 23 ಎಸೆತಗಳಲ್ಲಿ ಅಜೇಯ 44 ರನ್‌ ಗಳಿಸುವ ಮೂಲಕ ಆರ್‌ಸಿಬಿಗೆ 4 ವಿಕೆಟ್‌ಗಳ ಗೆಲುವಿನ ಮಾಲೆ ತೊಡಸಿದರು. ಹರ್ಷಲ್‌ ಪಟೇಲ್‌ 4 ಎಸೆತಗಳಲ್ಲಿ 9 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಅಳಿಲು ಸೇವೆ ಸಲ್ಲಿಸಿದರು.

ರಾಜಸ್ಥಾನ Vs ಬೆಂಗಳೂರು ಸ್ಕೋರ್‌ಕಾರ್ಡ್
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌